ಬಿಸಿಲಿನ ಝಳ: ಮಕ್ಕಳು,ವೃದ್ಧರಿಗೆ ಒಂದಷ್ಟು ಟಿಪ್ಸ್

By Suvarna Web DeskFirst Published Apr 15, 2017, 5:14 AM IST
Highlights

ಬೌರಿಂಗ್ಮತ್ತುಲೇಡಿಕರ್ಜನ್ಆಸ್ಪತ್ರೆಯಮಕ್ಕಳವಿಭಾಗವೂಇದರಿಂದಹೊರತಾಗಿಲ್ಲ. ಆಸ್ಪತ್ರೆಗೆಬರುವ 100 ರೋಗಿಗಳಲ್ಲಿಶೇ. 30 ಜನರಲ್ಲಿಜ್ವರ, ವಾಂತಿ, ಭೇದಿಸೇರಿದಂತೆಕಲುಷಿತಆಹಾರಮತ್ತುನೀರಿನಿಂದಹರಡುವಂತಹಕಾಯಿಲೆಗಳು, ಸೋಂಕುಪ್ರಕರಣಗಳುಕಂಡುಬಂದಿವೆ. ಬಿಸಿಲಿನಧಗೆನವಜಾತಶಿಶುಗಳಮೇಲೆಪರಿಣಾಮಬೀರದಿರಲುಮಕ್ಕಳವಿಭಾಗಗಳಲ್ಲಿಫ್ಯಾನ್ಗಾಳಿಯನ್ನುಅವಲಂಬಿಸಲಾಗಿದೆ.

ಬೆಂಗಳೂರು(ಏ.15): ಏರುತ್ತಿರುವ ಬೇಸಿಗೆಯ ಝಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಮಕ್ಕಳು, ಹಿರಿಯ ನಾಗರಿಕರು ವಿವಿಧ ಸಾಂಕ್ರಾಮಿಕ ಸೋಂಕು, ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಈಗಾಗಲೇ ತಾಪಮಾನ 37 ಡಿಗ್ರಿ ಸೆಲ್ಸಿಯಷ್ಟಿದ್ದು, ಇನ್ನೂ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ನಗರದ ಆಸ್ಪತ್ರೆಗಳಲ್ಲಿ ತಾಪಮಾನದ ವೈಪರೀತ್ಯ ಹಾಗೂ ಬದಲಾದ ಆಹಾರ ಶೈಲಿಯಿಂದ ಭೇದಿ, ವಾಂತಿ, ಅತಿಸಾರ, ನಿರ್ಜಲೀಕರಣ, ಜಠರ ಮತ್ತು ಜಾಂಡೀಸ್‌ ಕಾಯಿಲೆಗಳ ಪ್ರಕರಣಗಳು ದೃಢಪಡುತ್ತಿವೆ. ರೋಗ ನಿರೋಧಕ ಶಕ್ತಿ ಕಡಿಮೆಯಿರುವ ವಯೋವೃದ್ಧರು ಹಾಗೂ 5ರಿಂದ 10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.
ತಾಪಮಾನ ಏರಿಕೆಯಿಂದ ಉಂಟಾಗುತ್ತಿರುವ ದೇಹದಲ್ಲಿನ ನಿರ್ಜಲೀಕರಣ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಹೋದಲ್ಲಿ ಇನ್ನಿತರೆ ಕಾಯಿಲೆಗಳಿಗೆ ತುತ್ತಾಗಬಹುದು. ಜನರು ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಬೇಕು. ರಸ್ತೆಯ ಬದಿಯ ತಿಂಡಿ ತಿನಿಸು ಸೇವಿಸುವುದನ್ನು ವರ್ಜಿಸಬೇಕು ಎನ್ನುತ್ತಾರೆ ವೈದ್ಯರು.
ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯ ಮಕ್ಕಳ ವಿಭಾಗವೂ ಇದರಿಂದ ಹೊರತಾಗಿಲ್ಲ. ಆಸ್ಪತ್ರೆಗೆ ಬರುವ 100 ರೋಗಿಗಳಲ್ಲಿ ಶೇ. 30 ಜನರಲ್ಲಿ ಜ್ವರ, ವಾಂತಿ, ಭೇದಿ ಸೇರಿದಂತೆ ಕಲುಷಿತ ಆಹಾರ ಮತ್ತು ನೀರಿನಿಂದ ಹರಡುವಂತಹ ಕಾಯಿಲೆಗಳು, ಸೋಂಕು ಪ್ರಕರಣಗಳು ಕಂಡು ಬಂದಿವೆ. ಬಿಸಿಲಿನ ಧಗೆ ನವಜಾತ ಶಿಶುಗಳ ಮೇಲೆ ಪರಿಣಾಮ ಬೀರದಿರಲು ಮಕ್ಕಳ ವಿಭಾಗಗಳಲ್ಲಿ ಫ್ಯಾನ್‌ ಗಾಳಿಯನ್ನು ಅವಲಂಬಿಸಲಾಗಿದೆ.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಫೆಬ್ರವರಿ ತಿಂಗಳಿನಿಂದ ಇಲ್ಲಿಯವರೆಗೂ 10,638 ರೋಗಿಗಳು ತಪಾಸಣೆಗೆ ಒಳಪಟ್ಟಿದ್ದಾರೆ. ಈ ಪೈಕಿ 1212 ರೋಗಿಗಳಲ್ಲಿ ಜಾಂಡೀಸ್‌, ಟೈಫಾಯಿಡ್‌, ಚಿಕೂನ್‌ಗುನ್ಯಾ, ದಡಾರ, ಎಚ್‌1ಎನ್‌1 (20 ಮಂದಿ), ವಾಂತಿ, ಭೇದಿ ಸಾಂಕ್ರಾಮಿಕ ರೋಗಗಳು ದೃಢಪಟ್ಟಿವೆ. ಅಲ್ಲದೆ ಆಸ್ಪತ್ರೆಗೆ ಪ್ರತಿದಿನ ತಪಾಸಣೆಗೆ ಬರುವ 500ರಿಂದ 600 ರೋಗಿಗಳಲ್ಲಿ ವೈರಾಣು ಜ್ವರ, ಜಾಂಡೀಸ್‌ ಎ, ದಡಾರ, ಟೈಫಾಯಿಡ್‌, ಸಾಂಕ್ರಾಮಿಕ ರೋಗಗಳೇ ಹೆಚ್ಚು ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

--

ಹವಾಮಾನ ಬದ​ಲಾವಣೆ ನವಜಾತ ಶಿಶುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೇಹ​ದಲ್ಲಿನ ನಿರ್ಜಲೀಕರಣದಿಂದ ಮಕ್ಕಳು ಬಳಲುವಂತಾಗಿದೆ. ಮಕ್ಕಳ ದೇಹದಲ್ಲಿ ನೀರಿನಾಂಶ ಕಡಿಮೆಯಾದಷ್ಟುಅಪಾಯ ಎದುರಿಸಬೇಕಾಗುತ್ತದೆ.ಜನರು ರಸ್ತೆ ಬದಿಯ ಆಹಾರ ಪದಾರ್ಥಗಳಿಂದ ದೂರವಿರಬೇಕು. ಹೆಚ್ಚೆಚ್ಚು ಶುದ್ಧ ನೀರನ್ನು ಕುಡಿಯಬೇಕು.
ಡಾ ಚಿಕ್ಕಣ್ಣ ನರಸರೆಡ್ಡಿ ಮಕ್ಕಳ ತಜ್ಞ, ಬೌರಿಂಗ್‌ ಮತ್ತು ಕರ್ಜನ್‌ ಆಸ್ಪತ್ರೆ


ತಾಪಮಾನ ಏರಿಕೆಯಿಂದ ಮಕ್ಕಳು, ವಯೋವೃದ್ಧರು, ವಯಸ್ಕರಲ್ಲಿ ಸುಸ್ತಾಗುವುದು, ರಕ್ತದೊತ್ತಡ ಕಡಿಮೆಯಾಗುವಿಕೆ, ನಿಶ್ಯಕ್ತಿ ಕಾಣಿಸಿಕೊಳ್ಳುತ್ತಿದೆ. ಹೊರರೋಗಿ ವಿಭಾಗದಲ್ಲಿ ತಪಾಸಣೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ 10-20 ಜನರಲ್ಲಿ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ದೃಢಪಡುತ್ತಿವೆ. 
ಡಾ ಸುರೇಶ್‌ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆ


ಆಸ್ಪತ್ರೆಗೆ ಬರುವ 5 ವರ್ಷದೊಳಗಿನ ಮಕ್ಕಳಲ್ಲಿ ಜಾಂಡೀಸ್‌, ವಾಂತಿ, ಭೇದಿ ಸೇರಿದಂತೆ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು ಕಂಡುಬರುತ್ತಿವೆ. ಪೋಷಕರು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮಕ್ಕಳನ್ನು ಬಿಸಿಲಿಗೆ ಬಿಡಬಾರದು. ಅವರಲ್ಲಿ ನೀರಿನಾಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು.
ಡಾ ಆಶಾ ಬೆನಕಪ್ಪ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕಿ
--

click me!