ಬಡವಾದರೇನು ಪ್ರಿಯೆ, ಕೈ ತುತ್ತು ನೀಡುವೆ...

First Published Jun 14, 2018, 4:37 PM IST
Highlights

ಪರಸ್ಪರ ಹೊಂದಾಣಿಕೆ ಇದ್ದು, ಯಾವುದೇ ಮುಚ್ಚು ಮರೆಯಿಲ್ಲದ ಸಂಬಂಧ ಗಟ್ಟಿಯಾಗಿರುತ್ತದೆ. ಗಂಡಾಗಲಿ, ಹೆಣ್ಣಾಗಲಿ ಮನಸ್ತಾಪಗಳನ್ನು ನಾಲ್ಕು ಗೊಡೆಗಳ ನಡುವೆ ಚರ್ಚಿಸಬೇಕು. ಸಂಬಂಧದಲ್ಲಿ ಎಂದಿಗೂ ಮೂರನೇ ವ್ಯಕ್ತಿ ಮೂಗು ತೂರಿಸದಂತೆ ಎಚ್ಚರವಹಿಸಬೇಕು.

ಬಾಂಧವ್ಯಕ್ಕೆ ಅರ್ಥವಿರದಿದ್ದರೆ, ಬದುಕೇ ಬರಡಾಗುತ್ತದೆ. ಇದನ್ನು ನಾವೇ ಸರಿಪಡಿಸಿಕೊಳ್ಳಬೇಕು.  ಬೇರೆಯವರು ಏನೂ ಮಾಡಲಿಕ್ಕೂ ಸಾಧ್ಯವಿಲ್ಲ. ಸಂಬಂಧದಲ್ಲಿ ಮನಸ್ಸಿಗೆ ಮಣೆ ಹಾಕಬೇಕೇ ಹೊರತು, ಮೆದುಳಿನ ಮಾತು ಕೇಳಿದರೆ ಜೀವನ ವ್ಯರ್ಥವಾಗುತ್ತದೆ. ಪದೆ ಪದೇ ಬ್ರೇಕ್ ಅಪ್ ಆಗುತ್ತಿದೆಯಾ? ಎಲ್ಲಿ ತಪ್ಪಾಗುತ್ತಿದೆ ಎನ್ನುವುದೂ ಅರಿವಿಗೆ ಬರುತ್ತಿಲ್ಲವೇ? 

ನೀವೆಷ್ಟೇ ಕಾಳಜಿ ವಹಿಸಿದರೂ ಸಂಬಂಧ ಮುರಿಯುತ್ತಿದೆ ಎಂದರೆ, ಎಲ್ಲಿಯೋ ಎಡವಟ್ಟಾಗುತ್ತಿದೆ ಎಂದರ್ಥ. ನಿಮ್ಮಲ್ಲಿರುವ ಕೆಲವೊಂದು ಅಭ್ಯಾಸಗಳಿಗೆ ನೀವು ಬ್ರೇಕ್ ಹಾಕಲೇಬೇಕು. ಸಾಮಾನ್ಯವಾಗಿ ನಮ್ಮ ಕೆಲವು ನಡವಳಿಕೆ ನಮ್ಮ ಸಂಬಂಧ ಮುರಿಯಲು ಕಾರಣವಾಗುತ್ತದೆ. ಹಾಗಾದರೆ ಈ ವಿಚಾರಗಳು ಯಾವುದು ಅಂತೀರಾ? ಇಲ್ಲಿವೆ ಓದಿ...

ಫೋನ್ ಎತ್ತದಿರುವುದು...

ನಮ್ಮ ಮೂಡ್ ಸರಿ ಇಲ್ಲದಿದ್ದರೆ , ಮೀಟಿಂಗ್‌ನಲ್ಲಿದ್ದರೆ, ಇಲ್ಲವೇ ಯಾವುದೋ ಕೆಲಸದಲ್ಲಿ ವ್ಯಸ್ತರಾದರೆ ಸಂಗಾತಿ ಕರೆ ಬಂದರೆ ಸ್ವೀಕರಿಸುವುದೇ ಇಲ್ಲ. ಇಲ್ಲವೇ ಕಟ್ ಮಾಡುತ್ತೀರಿ. ಆದರೂ, ಸಂಗಾತಿ ಮತ್ತೆ ಮತ್ತೆ ಕರೆ ಮಾಡಲು ಯತ್ನಿಸಿದರೆ ಕಟ್ ಮಾಡಬೇಡಿ. ಇದರಿಂದ ನಿಮ್ಮವರು ಸಿಟ್ಟಾಗಬಹುದು. ನಿಮ್ಮೊಂದಿಗೆ ಯಾವುದೋ ತುರ್ತು ವಿಷಯವನ್ನು ಶೇರ್ ಮಾಡಿಕೊಳ್ಳಲು ಆ ಕಡೆಯಿಂದ ಹವಣಿಸುತ್ತಿರಬಹುದು. ಆಗ ಕರೆ ಸ್ವೀಕರಿಸದೇ ಹೋದಲ್ಲಿ, ನೀವು ಅವರನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದರ್ಥ. ಸಂದೇಶ ರವಾನಿಸಿಯಾದರೂ, ಅವರಿಗೆ ಪ್ರತಿಕ್ರಿಯೆ ನೀಡಿ. ನಿಮ್ಮ ಕರೆ ಕಟ್ ಆದರೆ, ತೀರಾ ಅರ್ಜೆಂಟ್ ಅಲ್ಲವೆಂದರ ಮಾತ್ರ ಮತ್ತೆ ಮತ್ತೆ ಕಾಲ್ ಮಾಡಿ. ಇಲ್ಲವೇ ತುಸು ಹೊತ್ತು ಬಿಟ್ಟು ಯತ್ನಿಸಿ.

ಹೊರ ಹೋಗುವಾಗ ಸಂಗಾತಿಗೆ ತಿಳಿಸಿ.....

ನಿಮ್ಮ ಪ್ಲ್ಯಾನ್ ಅದರಲ್ಲಿಯೂ ಔಟಿಂಗ್ ಹೋಗುವುದಾದರೆ ಸಂಗಾತಿಗೆ ತಿಳಿಸಿ. ಅಕಸ್ಮಾತ್ ಹೇಳದೇ ಹೋದ ದಿನವೇ ಅವರು ಬೇಗ ಮನೆಗೆ ಬಂದು ಕಾಯುವಂತಾದರೆ ಸಂಬಂಧದಲ್ಲಿ ಎಲ್ಲಿಯೋ ಮಿಸ್ ಹೊಡೀತಿದೆ ಎಂದರ್ಥ. ಸಾಧ್ಯವಾದಷ್ಟು ಸಂಬಂಧದಲ್ಲಿ ಪಾರದರ್ಶಕತೆ ಇರಲಿ. ಹೇಳಿ ಹೋದರೆ ಸ್ವಾತಂತ್ರ್ಯಹರಣವೆಂಬಂತೆ ಯೋಚಿಸಬೇಡಿ. ಒಬ್ಬರಿಗೊಬ್ಬರು ಗೌರವ ಕೊಟ್ಟು, ಪಡೆದರೆ ಇನ್ನೇನು ಬೇಕು ಹೇಳಿ?

ನಿರ್ಧಾರ ನಿಶ್ಚಿತವಾಗಿರಲಿ

ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಗಾತಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇದು ಆತ್ಮವಿಶ್ವಾಸ ಹೆಚ್ಚಿಸಿ, ಮನಸ್ಸಿನ ಸ್ವಾಸ್ಥ್ಯದೊಂದಿಗೆ ದೈಹಿಕ ಸೌಂದರ್ಯ ಹೆಚ್ಚಿಸುವಷ್ಟು ಶಕ್ತಿಶಾಲಿಯಾದದ್ದು. ಆದ್ದರಿಂದ ದೃಢ ನಿರ್ಧಾರಗಳು ನಿಮ್ಮದಾಗಲಿ.

ಕಷ್ಟದಲ್ಲಿ ಕೈ ಹಿಡಿಯರಿ

ಮನ ನೊಂದಾಗ ಸಂಗಾತಿಯಿಂದ ಬಯಸುವ ಸಾಂತ್ವಾನವನ್ನೇ ಎಲ್ಲರೂ ಬಯಸುವುದು. ನಮ್ಮವರ ಭಾವನೆಗಳಿಗೆ ಸ್ಪಂದಿಸಲು ಮುಂದಾಗಿ. ನೊಂದಾಗ ಹೆಗಲ ನೀಡಿ. ಆಗೊಮ್ಮೆ, ಈಗೊಮ್ಮೆ ಪತ್ನಿಗೆ ಅಡುಗೆ ಮಾಡಿ ಹಾಕಿ. ಊಟಕ್ಕೆ ಒಬ್ಬರು ತಟ್ಟೆ ಇಟ್ಟರೆ, ಮತ್ತೊಬ್ಬರು ನೀರಿಡಬೇಕು. ಹೊದಿಕೆ ಮಡಿಸಿದರೆ, ಮತ್ತೊಬ್ಬರು ಹಾಸಿಗೆ ಮಡಿಸಬೇಕು. ಸಣ್ಣ ಪುಟ್ಟ ಕೆಲಸಗಳೂ ಸಂಬಂಧದಲ್ಲಿ ಬೀರುವ ಪ್ರಭಾವ ಅಷ್ಟಿಷ್ಟಲ್ಲ. ಬಡವರಾದರೇನು, ಪ್ರೀತಿ, ವಿಶ್ವಾಸಕ್ಕೆ ಆಗದಿರಲಿ ಕೊರತೆ. 

click me!