ಈ ತಾಳೆ ಮರ ಬೆಳೆಯುವುದು ಯಾಕಾಗಿ ಹಾಗೂ ಅದರಿಂದ ಆಗುವ ಉಪಯೋಗವಾದರೂ ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಕರಾವಳಿ ಹಾಗೂ ಕೇರಳದಂತಹ ಪ್ರದೇಶದಲ್ಲಿ ನೀರಾ ತೆಗೆಯುವುದು ಇದರಿಂದಲೇ. ಗೊಂಚಲು ಗೊಂಚಲು ಕಾಯಿಬಿಡುವ ಜಾಗದಲ್ಲಿ ಒಂದು ಮಡಿಕೆಯನ್ನು ಕಟ್ಟಿ ತಿಂಗಳುಗಟ್ಟಲೆ ಹಾಲನ್ನು ಸಂಗ್ರಹಿಸುತ್ತಾರೆ.
ಇದರಿಂದ ಬರೀ ನೀರಾ ಒಂದೇ ಅಲ್ಲ ಬೆಲ್ಲವನ್ನೂ ತಯಾರಿಸುತ್ತಾರೆ ಎಂದರೆ ಆಶ್ಚರ್ಯವಾಗುವುದು ಸಹಜ. ಕಬ್ಬನ್ನು ಹಿಂಡಿ ಅದರಿಂದ ಹೊರಬರುವ ಹಾಲನ್ನು ಬಿಸಿ ಬಾಣಲೆಗೆ ಹಾಕಿ ತಯಾರಿಸುವ ಬೆಲ್ಲ ಇದಲ್ಲ. ನಮ್ಮಲ್ಲಿ ಬೆಲ್ಲ ಮಾಡುವಂತೆಯೇ ಗಾಣಕ್ಕೆ ಹಾಕಿ ತಾಳೆ ಬೆಲ್ಲವನ್ನು ತಯಾರಿಸಲಾಗುತ್ತದೆ. ಆದರೆ ಒಂದು ವ್ಯತ್ಯಾಸ ಎಂದರೆ ಇದು ಜೋನಿ ಬೆಲ್ಲದಂತೆ ಅಥವಾ ಜೇನಿನ ಬಣ್ಣವನ್ನು ಹೊಂದಿರುವ ಬೆಲ್ಲ ಇದು. ಹಿಂಡಿ ಸಿಪ್ಪೆ ಮಾಡಿ ಅದರಲ್ಲಿನ ಹಾಲನ್ನು ಗಾಣಕ್ಕೆ ಬಿಟ್ಟು ಧಗಧಗನೆ ಉರಿಯುವ ಬೆಂಕಿಗೆ ಬಾಣಲೆಯನ್ನಿಟ್ಟು ಉದ್ದನೆಯ ಸವಟಿನಲ್ಲಿ ತಿರುಗಿಸುವ ಗಾಣಿಗ. ಕೊತ ಕೊತ ಕುದಿಯುತ್ತಲೇ ನೊರೆನೊರೆಯಾದ, ರವೆರವೆಯಾದ ಬೆಲ್ಲ... ಅಬ್ಬಾ! ಎಂಥ ರುಚಿ, ಸವಿದಷ್ಟು ಜೇನಿಗಿಂತ ರುಚಿ, ತಿಂದಷ್ಟು ಇನ್ನೂ ಬೇಕೆನ್ನುವ ನಾಲಗೆ. ಶುದ್ಧ ಜೋನಿ ಬೆಲ್ಲ... ಅಲ್ಲ ಅಲ್ಲ ಶುದ್ಧ ತಾಳೆ ಬೆಲ್ಲ ಇದು. ಜೋನಿ ಬೆಲ್ಲದಂತೆ ಈ ತಾಳೆ ಬೆಲ್ಲದಿಂದ ಹಲವು ಪದಾರ್ಥಗಳನ್ನು ತಯಾರಿಸಲಾಗುತ್ತದೆ. ದೋಸೆ, ಚಪಾತಿ, ಕಡಬು ಹೀಗೆ ಹಲವು ಖಾದ್ಯಗಳನ್ನು ಈ ತಾಳೆ ಬೆಲ್ಲದಲ್ಲಿ ತಯಾರಿಸುತ್ತಾರೆ. ಅಷ್ಟಕ್ಕೂ ಈ ಬೆಲ್ಲದಲ್ಲಿ ಅಂತಹದ್ದೇನಿದೆ. ಅದರಿಂದ ಏನು ಉಪಯೋಗ. ಮಾಹಿತಿ ಇಲ್ಲಿದೆ.
- ಆಹಾರ ಪದಾರ್ಥಗಳಲ್ಲಿ ಸಕ್ಕರೆ ಬದಲಿಗೆ ತಾಳೆ ಬೆಲ್ಲವನ್ನು ಬಳಸಿದರೆ ಆರೋಗ್ಯಕ್ಕೆ ಉತ್ತಮ. ಈ ಬೆಲ್ಲ ನಿಮ್ಮ ದೇಹಕ್ಕೆ ಎನರ್ಜಿ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ. ಇದರಲ್ಲಿ ಅತಿ ಹೆಚ್ಚಾಗಿರುವ ಮಿನರಲ್ ಹಾಗೂ ವಿಟಮಿನ್ಸ್ಗಳು ದೇಹಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಜೊತೆಗೆ ಯಾವುದೇ ರಾಸಾಯನಿಕ ಅಂಶಗಳೂ ಇದರಲ್ಲಿ ಇಲ್ಲದಿರುವುದರಿಂದ ಶೀತ ಮತ್ತು ಕಫ ಆಗುವುದನ್ನು ತಡೆಯುತ್ತದೆ ಹಾಗೂ ದೇಹವನ್ನು ಬೆಚ್ಚಗಿಡುತ್ತದೆ.
- ತಾಳೆ ಬೆಲ್ಲದಲ್ಲಿ ಸಂಯೋಜಿತ ಕಾರ್ಬೋಹೈಡ್ರೇಟ್ಸ್ಗಳು ಹೆಚ್ಚಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಪ್ರತಿ ದಿನ ಒಂದು ಸಣ್ಣ ತುಂಡು ತಾಳೆ ಬೆಲ್ಲ ಸೇವಿಸುವುದರಿಂದ ದೇಹದ ಶಕ್ತಿ ಕಾಯ್ದುಕೊಳ್ಳುತ್ತದೆ ಹಾಗೂ ತಾಜವಾಗಿಡುತ್ತದೆ.
- ಅಜೀರ್ಣ, ಮಲಬದ್ಧತೆ, ಇಂತಹ ಸಮಸ್ಯೆಗಳಿಗೆ ಔಷಧವಾಗಿದೆ. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಕರುಳಿಗೆ, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ದೇಹದಲ್ಲಿನ ಬೇಡದ ಅಂಶಗಳನ್ನು ಹಾಗೂ ಕರುಳಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
- ಈ ಬೆಲ್ಲದಲ್ಲಿನ ಔಷಧಾಂಶಗಳು ಮೈಗ್ರೇನ್ನಂತಹ ಸಮಸ್ಯೆ ದೂರಾಗಿಸುವಲ್ಲಿ ಸಹಕಾರಿಯಾಗಿದೆ. ಇದು ವೈದ್ಯಕೀಯ ಪರೀಕ್ಷೆಯಲ್ಲೂ ಸಾಬೀತಾಗಿದೆ. ಅಲ್ಲದೆ ಪ್ರತಿ ದಿನದ ಡಯೆಟ್ನಲ್ಲಿ ಈ ಬೆಲ್ಲ ಸೇವಿಸುವುದರಿಂದ ಬಹುಬೇಗ ಉತ್ತಮ ಫಲಿತಾಂಶ ಪಡೆಯಬಹುದು.
- ತಾಳೆ ಬೆಲ್ಲವನ್ನು ಒಂದು ಔಷಧವೆಂದೇ ಪರಿಗಣಿಸಲಾಗುತ್ತದೆ. ಒಣ ಕೆಮ್ಮು, ಶೀತ, ಅಸ್ತಮಾ, ಉಸಿರಾಟದ ತೊಂದರೆ ಹೀಗೆ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿ ಇದು ಕೆಲಸ ಮಾಡುತ್ತದೆ.
- ತೂಕ ನಿಯಂತ್ರಿಸಲು ಪರಿತಪಿಸುತ್ತಿದ್ದರೆ ಈ ತಾಳೆ ಬೆಲ್ಲ ಸೇವಿಸಿ. ಇದು ದೇಹದಲ್ಲಿ ನೀರಿನ ಧಾರಣ ಮತ್ತು ದಪ್ಪಗಾಗುವುದನ್ನು ಕಡಿಮೆ ಮಾಡುತ್ತದೆ. ಇದರಿಂದ ಎಲೆಕ್ಟ್ರೋಲೈಟಿಕ್ ಅಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
- ತಾಳೆ ಬೆಲ್ಲದಲ್ಲಿ ಅತಿ ಹೆಚ್ಚಿನ ಪೌಷ್ಠಿಕಾಂಶಗಳಿವೆ. ಕಬ್ಬಿಣದ ಅಂಶ ಇರುವುದರಿಂದ ಅನಿಮಿಯಾ ಬರುವುದನ್ನು ತಡೆಯುವುದರ ಜೊತೆಗೆ ಹಿಮೊಗ್ಲೋಬಿನ್ ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿ ಮೆಗ್ನೀಷಿಯಂ ಅಂಶ ಹೆಚ್ಚಿದ್ದು, ನರಗಳಿಗೆ ಸಹಕಾರಿಯಾಗಿದೆ. ಅಂತೆಯೇ ಕ್ಯಾಲ್ಶಿಯಂ, ಫಾಸ್ಪರಸ್ ಮತ್ತು ಪೊಟ್ಯಾಷಿಯಂ ಅಂಶವೂ ಇದರಲ್ಲಿ ಹೇರಳವಾಗಿ ಸಿಗುತ್ತದೆ.
- ದೇಹವನ್ನು ಆರೋಗ್ಯವಾಗಿ, ಉಸಿರಾಟದ ನಾಳವನ್ನು, ಆಹಾರ ನಾಳ, ಶ್ವಾಸಕೋಶ, ಹೊಟ್ಟೆ ಮತ್ತು ಕರುಳನ್ನು ಆರೋಗ್ಯ ಹಾಗೂ ಶುಚಿಯಾಗಿಡಲು ನೆರವಾಗುತ್ತದೆ. ಊಟದ ನಂತರ ಪ್ರತಿ ದಿನ ಒಂದು ಸಣ್ಣ ಬೆಲ್ಲ ತಿನ್ನುವುದರಿಂದ ಜೀರ್ಣಕ್ರಿಯೆಗೆ ಅನುಕೂಲಕರವಾಗಿ ಕೆಲಸ ಮಾಡುತ್ತದೆ.
- ಶುದ್ಧ ತಾಳೆ ಬೆಲ್ಲ ಸೇವನೆಯು ದೇಹದಲ್ಲಿನ ಮೂಳೆಗೆ ಬೇಕಾದ ಕ್ಯಾಲ್ಶಿಯಂನ್ನು ನೀಡುತ್ತದೆ. ಜೊತೆಗೆ ದೇಹದಲ್ಲಿನ ಸಂಧಿವಾತ ಅಥವಾ ಜಾಯಿಂಟ್ ಪೇಯಿನ್ ಅನ್ನು ನಿವಾರಿಸುವ ಶಕ್ತಿ ಹೊಂದಿದೆ.
- ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಸೆಳೆತಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಲ್ಲಿನ ಆಯುರ್ವೇದದ ಗುಣಗಳು ಈ ಸಮಸ್ಯೆಯನ್ನು ದೂರ ಮಾಡುತ್ತದೆ. ಜೊತೆಗೆ ಹೊಟ್ಟೆ ನೋವನ್ನು ದೂರಾಗಿಸಿ ದೇಹಕ್ಕೆ ವಿಶ್ರಾಂತಿ ನೀಡುತ್ತದೆ.
Last Updated Feb 19, 2019, 11:41 AM IST