ಸರ್ಪಸುತ್ತು ಬರಲು ಕಾರಣ ನಾಗದೋಷವಲ್ಲ ಈ ವೈರಸ್!

By Web DeskFirst Published Sep 24, 2018, 4:20 PM IST
Highlights

ಸರ್ಪಸುತ್ತು ಎಂದರೆ ಒಂದು ಆರೋಗ್ಯ ಸಮಸ್ಯೆ ಎಂಬುದಾಗಿ ನಾವು ಭಾವಿಸುವುದೇ ಇಲ್ಲ. ನಮ್ಮ ಆಪ್ತೇಷ್ಟರಲ್ಲಿ ಯಾರಿಗಾದರೂ ಇದು ಕಾಣಿಸಿಕೊಂಡರೆ ತಕ್ಷಣದಲ್ಲಿ ಅಂದುಕೊಳ್ಳುವುದು- ಇವರಿಗೇನೋ ಸರ್ಪದೋಷವಿದೆ!

ಪಾಪ, ಅವರು ಸಹಿಸಲು ಅಸಾಧ್ಯವಾದ ನೋವಿನಿಂದ ಬಳಲುತ್ತಿರುತ್ತಾರೆ, ಸಾಂತ್ವನದ ನುಡಿಗಳ ಮೂಲಕ ನೋವನ್ನು ಕೊಂಚವಾದರೂ ಕಡಿಮೆ ಮಾಡುವ ಬದಲು, ‘ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹರಕೆ ಹೊತ್ತುಕೊಳ್ಳಿ’ ಎಂದು ಪುಕ್ಕಟೆ ಸಲಹೆ ನೀಡುತ್ತೇವೆ. ಸರ್ಪಸುತ್ತಿಗಿಂತ ನರಕಯಾತನೆ ಅನುಭವ ನೀಡುವುದು ಬೇರೊಂದಿಲ್ಲ ಎನ್ನುವುದು ಈ ಸಮಸ್ಯೆಗೆ ಒಳಗಾದವರ ಅಂಬೋಣ. ಸಣ್ಣಸಣ್ಣ ಗುಳ್ಳೆಗಳು ಹಾವಿನ ಆಕಾರದಂತೆ ಮತ್ತು ಹಾವಿನ ಚಲನೆ ಮಾದರಿಯಲ್ಲೇ ಏಳುವುದರಿಂದ ಇದಕ್ಕೆ ಸರ್ಪಸುತ್ತು ಎಂದು ಹೇಳಲಾಗುತ್ತದೆ.

ಹರ್ಪಿಸ್ ಸಿಂಪ್ಲೆಕ್ಸ್ ವೈರಸ್‌ನಿಂದ ಹರಡುವ ಕಾಯಿಲೆ ಇದು. ಎಲ್ಲೆಲ್ಲಿ ಗುಳ್ಳೆಗಳು ಏಳುತ್ತವೆ ಹೇಳುವುದು ಅಸಾಧ್ಯ. ಕತ್ತು, ಕೈ, ಕಾಲು, ಬೆನ್ನು, ಹೊಟ್ಟೆ ಎಲ್ಲ ಕಡೆಗಳಲ್ಲಿಯೂ ಏಳುತ್ತವೆ. ಬಾಯಿ ಮತ್ತು ಜನನಾಂಗದಲ್ಲಿ ಉಂಟಾಗುವ ಸರ್ಪಸುತ್ತು ನೀಡುವ ಯಾತನೆ ಭೀಕರ. ಕೂರುವಂತಿಲ್ಲ, ಏಳುವಂತಿಲ್ಲ, ಮಲಗುವಂತಿಲ್ಲ. ಎಲ್ಲಿ ನೋವಾಗುತ್ತಿದೆ ಎನ್ನುವುದನ್ನು ತಿಳಿಯಲೂ ಸಾಧ್ಯವಾಗದಷ್ಟು ನೋವು. 2 ರಿಂದ 21 ದಿನಗಳವರೆಗೆ ಸೋಂಕಿನ ತೀವ್ರತೆ ಇರುತ್ತದೆ. ಸೋಂಕು ಕಾಯಿಲೆ ಬೇರೆ. ಇದರ ಇನ್ನೊಂದು ಅಪಾಯ ಎಂದರೆ, ಒಮ್ಮೆ ತಗುಲಿದ ಸೋಂಕು ಜೀವಮಾನವಿಡೀ ಶರೀರದಲ್ಲಿಯೇ ಇರುತ್ತದೆ, ಅದನ್ನು ಸಂಪೂರ್ಣವಾಗಿ ನಾಶಗೊಳಿಸುವುದು ಸಾಧ್ಯವಿಲ್ಲ. ವೈದ್ಯರು ನೀಡುವ ಆ್ಯಂಟಿವೈರಲ್‌ಗಳು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಬಲ್ಲವು, ಸೋಂಕು ಒಂದು ಭಾಗ ದಿಂದ ಮತ್ತೊಂದು ಭಾಗಕ್ಕೆ ಹರಡದಂತೆ ತಡೆಯಬಲ್ಲವು. ಆದರೆ ಶರೀರವನ್ನು ಈ ವೈರಸ್‌ನಿಂದ ಮುಕ್ತಗೊಳಿಸಲು ಸಾಧ್ಯವೇ ಇಲ್ಲ. ಹಾಗೆಂದು ಹೇಳುತ್ತದೆ ವೈದ್ಯಕೀಯ ಲೋಕ.

ಆ್ಯಂಟಿವೈರಲ್‌ಗಳು ಈಗೀಗ ಲಭ್ಯವಾಗುತ್ತಿವೆ. ನಮ್ಮ ಹಿಂದಿನವರು ಏನು ಮಾಡುತ್ತಿದ್ದರು? ಆಹಾರ ಕ್ರಮದ ಮೂಲಕವೇ ಕಾಯಿಲೆ ನಿಯಂತ್ರಿಸುತ್ತಿದ್ದರು! ಪ್ರಮುಖವಾಗಿ ಪಥ್ಯ. ಆಮೇಲೆ ನಿರ್ದಿಷ್ಟ ಆಹಾರ. ಇವೇ ಸರ್ಪ ಸುತ್ತು ಕಡಿಮೆ ಮಾಡುವ ಮುಖ್ಯ ಅಸಉಗಳಾಗಿದ್ದವು. ದೇವರು-ದಿಂಡಿರು-ಹರಕೆ ಇತ್ಯಾದಿಗಳೆಲ್ಲ ರೋಗಿಯ ಗಮನ ಬೇರೆಡೆ ಸೆಳೆಯುವ, ಅವರಲ್ಲಿ ಆತ್ಮವಿಶ್ವಾಸ ಮೂಡಿ ಸುವ ಕ್ರಮವಾಗಿತ್ತು ಎನ್ನುವುದು ನನ್ನ ಭಾವನೆ. ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ನಮ್ಮ ಹಿರಿಯರು ಕಂಡುಕೊಂಡಿದ್ದ ಪರಿಹಾರ ಎಂದರೆ ಅದು ಆಹಾರವೇ. 

click me!