Latest Videos

ಬೊಮ್ಮನಹಳ್ಳಿ ಜಂಗಮ ಜಿ.ಟಿ., ಹಳ್ಳಿಯಲ್ಲಿ ನಿಂತು ಸಾಂಸ್ಕೃತಿಕ ಬದುಕನ್ನು ಕಟ್ಟಿದವರು

By Nirupama K SFirst Published May 12, 2024, 11:35 AM IST
Highlights

ಮಂಚಿಕೇರಿ, ಹಾಸಣಗಿ, ಬೊಮ್ಮನಹಳ್ಳಿ ಇಲ್ಲೆಲ್ಲ ಒಂದು ಸಾಂಸ್ಕ್ರತಿಕ ವಾತಾವರಣ ಅನಾದಿ ಕಾಲದಿಂದ ಬೆಳೆದು ಬಂದಿದೆ ಎಂದು ಹಿರಿಯರ ಬಾಯಲ್ಲಿ ಕೇಳಿದ್ದೇನೆ. ಹಿಂದೆ ಬಹಳ ಸಮರ್ಥ ಯಕ್ಷಗಾನ ಕಲಾವಿದರು ಈ ಭಾಗದಲ್ಲಿ ಆಗಿ ಹೋಗಿದ್ದಾರೆ. ನನ್ನ ಅಜ್ಜ ಕೆರೆಮನೆ ಶಿವರಾಮ ಹೆಗಡೆಯವರ ಕಾಲದಲ್ಲೇ ಈ ಭಾಗದಲ್ಲಿ ಯಕ್ಷಗಾನ ಪ್ರದರ್ಶನ ಮಾಡುವದು ಒಂದು ಮಹತ್ವದ ಸವಾಲಿನ ಸಂಗತಿಯೇ ಆಗಿತ್ತು. 

-ಕೆರೆಮನೆ ಶಿವಾನಂದ ಹೆಗಡೆ

ಮಂಚಿಕೇರಿ, ಹಾಸಣಗಿ, ಬೊಮ್ಮನಹಳ್ಳಿ ಇಲ್ಲೆಲ್ಲ ಒಂದು ಸಾಂಸ್ಕ್ರತಿಕ ವಾತಾವರಣ ಅನಾದಿ ಕಾಲದಿಂದ ಬೆಳೆದು ಬಂದಿದೆ ಎಂದು ಹಿರಿಯರ ಬಾಯಲ್ಲಿ ಕೇಳಿದ್ದೇನೆ. ಹಿಂದೆ ಬಹಳ ಸಮರ್ಥ ಯಕ್ಷಗಾನ ಕಲಾವಿದರು ಈ ಭಾಗದಲ್ಲಿ ಆಗಿ ಹೋಗಿದ್ದಾರೆ. ನನ್ನ ಅಜ್ಜ ಕೆರೆಮನೆ ಶಿವರಾಮ ಹೆಗಡೆಯವರ ಕಾಲದಲ್ಲೇ ಈ ಭಾಗದಲ್ಲಿ ಯಕ್ಷಗಾನ ಪ್ರದರ್ಶನ ಮಾಡುವದು ಒಂದು ಮಹತ್ವದ ಸವಾಲಿನ ಸಂಗತಿಯೇ ಆಗಿತ್ತು. 

ಕಾರಣ ಈ ಭಾಗದಲ್ಲಿ ದಟ್ಟವಾಗಿ ಬೆಳೆದ ಕಾಡಿನ ಮಧ್ಯೆ ಸಂಗೀತ, ಸಾಹಿತ್ಯ, ಯಕ್ಷಗಾನ ತಾಳಮದ್ದಲೆ ಮುಂತಾದ ಕಲಾಪ್ರಕಾರಗಳು ಸಮೃದ್ಧವಾಗಿ ಬೆಳೆದಿದ್ದವು. ಇಲ್ಲಿನ ಅಕ್ಕ ಪಕ್ಕದ ಊರುಗಳಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ತೊಡಗಿಸಿಕೊಂಡ ಆಡ್ಯಸ್ತರು, ಆಸಕ್ತರು ಮೆರೆದ ಕಾಲದ ಬಗ್ಗೆ ಕೂಡಾ ನಾನು ಕೇಳಿದ್ದೆ. ನನ್ನ ಅಜ್ಜ ಶಿವರಾಮ ಹೆಗಡೆ ಆಥವಾ ನನ್ನ ತಂದೆ ಶಂಭು ಹೆಗಡೆಯವರ ಅನೇಕ ಅಪೂರ್ವ ಯಕ್ಷಗಾನ ಪ್ರದರ್ಶನ ನಡೆದ್ದದ್ದು ಈ ಸ್ಥಳಗಳಲ್ಲಿ. ಇಂಥ ಊರು ನಮ್ಮ ಕರ್ನಾಟಕದ ಒಂದು ಸಾಂಸ್ಕೃತಿಕ ಕೇಂದ್ರದಂತೆ ಕಂಡರೆ ವಿಸ್ಮಯವೇನೂ ಅಲ್ಲ. ಇಂಥಾ ಊರಲ್ಲಿ ಕೆಲವು ವರುಷಗಳ ಹಿಂದೆ ನಮ್ಮ ಈಗಿನ ಮಂಡಳಿಯ ಆಟವಾಗಿತ್ತು. ಆಟವನ್ನು ಆಡಿಸಿದವರು ಮತ್ಯಾರಲ್ಲ, ರಾಯಸಂ ಸಂಸ್ಥಾಪಕ , ಕಲಾವಿದ ಬೊಮ್ಮನಹಳ್ಳಿಯ ಜಿ. ಟಿ. ಭಟ್ಟರು.

ಔತ್ತಮ್ಯದ ಗೀಳಿನಲ್ಲಿ

ಜಿ.ಟಿ ಭಟ್ಟರು ಎಂದ ತಕ್ಷಣ ನನಗೆ ಅವರ ತುಂಬು ನಗುವಿನ ಮುಖವೇ ಕಾಣಿಸುತ್ತದೆ. ಅವರದ್ದು ಒಂಥರಾ ಮಗುವಿನ ಮುಗ್ಧ ಮುಖವೂ ಹೌದು. ಈ ಹಿರಿಯರ ವೈವಿಧ್ಯಪೂರ್ಣ ಬದುಕನ್ನು, ಸಾಧನೆಯ ಕಷ್ಟವನ್ನೆಲ್ಲಾ ಕಂಡಾಗ ಅವರ ಸಣಕಲು ಶರೀರ ಇಂಥಾ ಕಠಿಣ ಹೊರೆಯನ್ನ ಹೊತ್ತುಕೊಂಡು ಬಾಳಿಕೊಂಡಿದೆ ಎಂದೆನಿಸದಿರದು! ಎಂತೆಂಥದ್ದೋ ಆಸಕ್ತಿ, ನಿರಂತರ ಕೆಲಸ, ಆಲೋಚನೆ ಹೀಗೇ ಜಿ.ಟಿ ಸರ್ ಅನೇಕವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬಾಳಿದ ರೀತಿ ಅಚ್ಚರಿಯದು! ಅವರ ಒಂದೊಂದೇ ಆಸಕ್ತಿಯನ್ನು ಮತ್ತು ಆ ಕುರಿತ ಸಾಧನೆಯನ್ನು ಬಿಡಿಬಿಡಿಯಾಗಿ ನೋಡಿದರೂ ಸಾಕು, ನಾವು ಅವರನ್ನು ಅಭಿನಂದಿಸಲು ಉಳಿದ ಉಪಾದಿಗಳ ಅಗತ್ಯವಿಲ್ಲ ಎನಿಸುತ್ತದೆ!

ರಾಯಸಂ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ ಅವರು ಆ ಮೂಲಕ ತುಂಬಾ ಗಮನೀಯ ಕೆಲಸಕ್ಕೆ ಕೈ ಹಾಕಿದವರು. ಅದೇ ಸಂಸ್ಥೆಯ ಅಡಿಯಲ್ಲಿ ನಮ್ಮ ಯಕ್ಷಗಾನವಾಗಿ ಇಂದಿಗೆ 8 - 10 ವರ್ಷ ಸಂದಿದೆ. ಆದರೆ ಅಂದು ಅವರು ತೋರಿದ ಆ ಪ್ರೀತಿ, ಆದರಾತಿಥ್ಯ ಎಂದೂ ಮರೆಯದು. ಕಲಾ ಸಂಘಟನೆಯನ್ನು ಗೌರವಿಸುವ, ಕಲಾವಿದರನ್ನು ಆಧರಿಸುವ ಅವರ ಮನೆ; ಬಂಧು ಬಾಂಧವ್ಯದ ಘನತೆಯನ್ನು, ಪ್ರೀತಿಯನ್ನು ಲೋಕಕ್ಕೆ ಸಾರುವುದಕ್ಕೊಂದು ರೂಪಕವೋ ಎಂಬಂತೆ ಇತ್ತು ಮತ್ತು ಇಂದೂ ಇದೆ! ಒಂದು ಹಳ್ಳಿಯಲ್ಲಿ ನಿಂತು ಸಾಂಸ್ಕೃತಿಕ ಬದುಕನ್ನು ಹೊಸದಾಗಿ ಕಟ್ಟುವುದು ತುಂಬಾ ಕಷ್ಟದ ಸಂಗತಿ. 

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಬಹಳ ಸಮೃದ್ಧವಾದ ಸಾಂಸ್ಕೃತಿಕ ಹಿನ್ನೆಲೆ ಇದ್ದರೆ ಆ ಊರಲ್ಲಿ ಇನ್ನೂ ಸಂಕೀರ್ಣ ಪರಿಸ್ಥಿತಿ ಇರುತ್ತದೆ. ‘ಹೊಸತನ್ನು ಮಾಡಿದರೆ ಅನುಮಾನ ಹಳೆಯದನ್ನು ತಂದರೆ ದುಮ್ಮಾನ’ ಎನ್ನುವ ಸ್ಥಿತಿ ಇರುತ್ತದೆ. ಇಂಥ ಪರಿಸ್ಥಿತಿ ಹಾಸಣಗಿ, ಬೊಮ್ಮನಹಳ್ಳಿ, ಮಂಚಿಕೇರಿ ಊರಲ್ಲಿ ಕೂಡಾ ಇರುತ್ತದೆ. ಅಂತಲ್ಲಿ ಜಿ ಟಿ ಭಟ್ಟರ ಹೆಸರು ಜನಜನಿತವಾಗಿ ಇರಬೇಕೆಂದರೆ ಅವರ ಪ್ರತಿಭೆ ಸಾಹಸ ಸಾಮಾನ್ಯವಲ್ಲ. ನಾಟಕ ಕಲಾವಿದರಾಗಿ, ಸಂಘಟಕರಾಗಿ ಯಕ್ಷಗಾನದ ಕಲಾವಿದ ಹಾಗೂ ಶಿಕ್ಷಣ ಕ್ಷೇತ್ರದ ಕ್ರಿಯಾಶೀಲತೆಯನ್ನು ಉಳಿಸಿಕೊಂಡವರಾಗಿ ಜಿ.ಟಿ ಭಟ್ಟರು ನಮ್ಮ ಕಲಾವಾಹಿನಿಯ ಮುಖ್ಯ ಸಾಧಕರಾಗಿದ್ದಾರೆ. 

ಜಿ.ಟಿ.ಭಟ್ಟರಂತವರನ್ನು ಬೆಂಗಳೂರಿನಂತಲ್ಲಿ ಇಟ್ಟು ನೋಡಿದರೆ; ಅಲ್ಲಿನ ನಾಮಾಂಕಿತ ಕಲಾವಿದರ ಅಥವಾ ಕಲಾಸಂಘಟಕರ ಈ ಎರಡು ಮಗ್ಗಲಿನಲ್ಲಿ ಎತ್ತರದ ಸ್ಥಾನದಲ್ಲೇ ಅವರು ಇರುತ್ತಿದ್ದರು. ಆದರೆ ನಮ್ಮ ಹಳ್ಳಿಗಳಲ್ಲಿ ಸಾಧನೆ ಮತ್ತು ಸಾಧಕರಿಗೆ ಬರಗಾಲ ಇಲ್ಲದಿದ್ದರೂ ನಮಗೆ ಬರಿಗಾಲೇ ಗತಿ! ಅದನ್ನು ಗುರುತಿಸುವ ಕಣ್ಣಿಗೆ ಬರಗಾಲವೇ. ತಾನು ಕೈಗೊಂಡ ಪ್ರತಿ ಕೆಲಸದಲ್ಲೂ ಪ್ರಥಮ ದರ್ಜೆಯನ್ನೇ ಕಾಣಿಸುವ ಜಿಟಿ ಭಟ್ ಅವರು ನಮ್ಮ ಸಂಪನ್ಮೂಲ ಎಂದು ಸಮಾಜ, ಸರಕಾರ ಗುರುತಿಸದಿರುವುದು ಖಂಡಿತಾ ವಿಷಾದನೀಯ. ಮನಸ್ಸು ಕಾಡುವ ಪ್ರಶ್ನೆ. 

ಇಂತಿದ್ದರೂ ಒಬ್ಬ ನಾಟಕದ ನಟನಾಗಿ, ಒಳ್ಳೆಯ ಕೃಷಿಕನಾಗಿ ಸ್ವಾವಲಂಬಿಯಾಗಿ, ಸಮಾಜದ ಎಲ್ಲಾ ಸ್ತರದ ಕೆಲಸದಲ್ಲೂ ಆಸಕ್ತಿ ಮತ್ತು ಶ್ರಮವನ್ನು ಯಥೇಚ್ಛ ಖರ್ಚು ಮಾಡುವ ಜಿ ಟಿ ಸರ್ ಮುಖದಲ್ಲಿ ಸದಾ ಮಂದಹಾಸ ಮಿನುಗುವುದು ನಮ್ಮ ಪುಣ್ಯ. ಅವರ ವಿದಾಯಕ ಕೆಲಸ ಮತ್ತು ಕಾಯಕ ಯೋಗಿಯಂತೆ ದುಡಿವ ಸೃಜನಶೀಲ ಮನಸ್ಸಿನ ಬಗ್ಗೆ ತಿಳಿದಿದ್ದೇನೆ. ಅವರನ್ನು ಹತ್ತಿರದಿಂದ ಬಲ್ಲವರಿಂದ ತಿಳಿದಂತೆ ಅವರು ಅತ್ಯಂತ ಸ್ನೇಹಜೀವಿ.

 ಅವರ ಒಡನಾಟ ನನಗಿಲ್ಲ. ಆದರೆ ಸಂಪರ್ಕ ಇದೆ. ಅವರ ಮಕ್ಕಳಿಗೆ, ನನಗೆ ಆತ್ಮೀಯ ಸ್ನೇಹವಿದೆ. ವಿದ್ಯಾ, ಜ್ಯೋತಿ, ಡಾ ಶೀಲಾ ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಜಿಟಿ ಭಟ್ಟರ ಪ್ರತಿಬಿಂಬದಂತೆ ಕಾಣುತ್ತಾರೆ. ತಂದೆಯಾಗಿ ಅವರು ನೀಡಿದ ಸಂಸ್ಕಾರಗಳೆಲ್ಲ ಈ ಮಕ್ಕಳಲ್ಲಿ ಒಡಮೂಡಿದೆ. ಜಿಟಿ ಯವರ ವ್ಯಕ್ತಿತ್ವವನ್ನು ಸಮನಾಗಿ ಹಂಚಿಕೊಂಡ ಇವರೆಲ್ಲಾ ಒಟ್ಟಿಗೆ ಒಂದೇ ಕಡೆ ಸೇರಿದರೆ ಅಲ್ಲಿ ಜಿಟಿ ಭಟ್ಟರೇ ವಿವಿಧ ಶರೀರದಲ್ಲಿ ಅವತಾರಗೊಂಡಂತೆ ಭಾಸವಾಗುತ್ತದೆ. ಜೀವನದುದ್ದಕ್ಕೂ ಕಲೆಯನ್ನು ಕಾಯಕ ಮಾಡಿಕೊಂಡು ಬದುಕನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡ ಜಿಟಿಯವರು ನಮ್ಮ ನಡುವಿನ ಸ್ಫೂರ್ತಿ. ಅವರ ಶ್ರೀಮತಿಯವರ ತ್ಯಾಗ, ಸಹನೆ, ನಿರ್ಮಲ ಮನಸ್ಸು ಕೂಡಾ ವಿರಳವೇ. ಇಂಥ ಒಂದು ಸಂಸಾರದ ಸಾರಥಿಯಾಗಿದ್ದು ಅವರ ಭಾಗ್ಯವೂ ಹೌದು.

click me!