ಸೆಪ್ಟೆಂಬರ್ ಟ್ರಿಪ್‌ಗೆ ಈ ತಾಣಗಳು ಬೆಸ್ಟ್!

By Web DeskFirst Published Sep 2, 2019, 12:10 PM IST
Highlights

ವರುಣರಾಯ ಬದಿಗೆ ಸರಿಯುತ್ತಾ ಚಳಿರಾಯನಿಗೆ ದಾರಿ ಮಾಡಿಕೊಡುತ್ತಿರುವ ಈ ತಿಂಗಳ ತಿರುಗಾಟಕ್ಕೆ ದೇಶದಲ್ಲಿ ಒಂದಿಷ್ಟು ತಾಣಗಳು ಹೇಳಿ ಮಾಡಿಸಿದಂತಿವೆ. 

ಮಳೆಗಾಲ ಮುಗಿಯುತ್ತಾ ಬಂದಿದೆ. ಚಳಿಗಾಲ ಇನ್ನೂ ಆರಂಭವಾಗಬೇಕಷ್ಟೇ. ಮಳೆಯೂ ಕಡಿಮೆ ಇರುವ, ಬಿಸಿಲೂ ಕಡಿಮೆ ಇರುವ ಹಾಗೂ ಚಳಿಯೂ ಅತಿಯಲ್ಲದ ಸೆಪ್ಟೆಂಬರ್ ತಿಂಗಳು ಟ್ರಾವೆಲ್ ಮಾಡಲು ಬೆಸ್ಟ್ ಟೈಂ. ಇದು ಆಫ್ ಸೀಸನ್ ಆಗಿರುವುದರಿಂದ ಪ್ಯಾಕೇಜ್ ಟ್ರಿಪ್ ಆದರೆ, ವಿಮಾನ ಟಿಕೆಟ್‌ನಲ್ಲಿ ಅಥವಾ ಹೋಟೆಲ್ ಮೊತ್ತದಲ್ಲಿ ಹೆಚ್ಚಿನ ಡಿಸ್ಕೌಂಟ್ ಸಿಗುತ್ತದೆ. ಇಲ್ಲದಿದ್ದಲ್ಲಿ ಕೇಳಿ ಪಡೆಯಬಹುದು. ಹೊಸ ಆಫರ್‌ಗಳು ಕೂಡಾ ಇರುತ್ತವೆ. ಜನರೂ ಕಡಿಮೆ ಇರುವುದರಿಂದ ಹೆಚ್ಚು ರಿಲ್ಯಾಕ್ಸಿಂಗ್ ಆಗಿ ಹಾಲಿಡೇ ಕಳೆಯಬಹುದು. ಸೆಪ್ಟೆಂಬರ್‌ನ ತಿರುಗಾಟಕ್ಕೆ ಯಾವ ಸ್ಥಳಗಳು ಉತ್ತಮ ಗೊತ್ತಾ? 

ವಿಭಿನ್ನ ಅನುಭವಕ್ಕೆ ಗುಜರಾತಿನ ಈ ತಾಣಗಳಿಗೆ ಮಿಸ್‌ ಮಾಡದೆ ವಿಸಿಟ್ ಮಾಡಿ!

1. ಗ್ಯಾಂಗ್ಟಕ್

ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ನ ರಸ್ತೆಗಳ ಒಂದು ಭಾಗದಲ್ಲಿ ಹಸಿರು ಹಾಸಿದ ಎತ್ತರದ ಮರಗಳು ಬೆಟ್ಟದ ಮೇಲೆ ಉದ್ದಕೆ ಚಾಚಿದ್ದರೆ, ಇನ್ನೊಂದೆಡೆ ಆಳ ಕಣಿವೆಗಳು ನಿಮ್ಮ ಪ್ರಯಾಣವನ್ನು ಸಾಹಸಮಯವಾಗಿಸುತ್ತವೆ. ಇಲ್ಲಿ ಆಗಾಗ ಎದುರಾಗುವ ಪನೋರಮಾ ವ್ಯೂ ಪಾಯಿಂಟ್‌ಗಳು ರಿಫ್ರೆಶಿಂಗ್ ಫೀಲಿಂಗ್ ನೀಡುತ್ತವೆ. ದೂರದಲ್ಲಿ ಕಾಂಚನಜುಂಗ ಪರ್ವತವನ್ನೂ ಕಾಣಬಹುದು. ಗ್ಯಾಂಗ್ಟಕ್ ಮನಸ್ಸಿಗೆ ಶಾಂತಿ ನೀಡುವ ತಂಪಾದ ತಾಣ.

2. ಕೊಡೈಕೆನಾಲ್

ಮಧುರೈನಿಂದ 120 ಕಿಲೋಮೀಟರ್ ದೂರದಲ್ಲಿರುವ ಈ ಮಂಜು ಕವಿದ ಹಿಲ್ ಸ್ಟೇಶನ್, ತನ್ನ ಸೋದರಿ ಊಟಿಗಿಂತ ಹೆಚ್ಚು ರಿಲ್ಯಾಕ್ಸಿಂಗ್ ಅನುಭವ ನೀಡಬಲ್ಲದು. ಈ ತಿಂಗಳಲ್ಲಿ ತಡೆದುಕೊಳ್ಳಲಾರದಷ್ಟು ಚಳಿಯೂ ಅಲ್ಲದೆ ಹಿತವಾದ ತಂಪು ವಾತಾವರಣದೊಂದಿಗೆ ಕೈ ಬೀಸಿ ಕರೆವ ಕೊಡೈಕೆನಾಲ್ ಮಧ್ಯದಲ್ಲಿ ಕೊಡೈ ಎಂಬ ಸುಂದರವಾದ ನಕ್ಷತ್ರದಾಕಾರದ ಸರೋವರವಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹರಿವ ಸರೋವರದ ಸೊಬಗು ಮತ್ತಷ್ಟು ಮುದ ನೀಡುತ್ತದೆ.

ಚೆನ್ನೈ ಸಾಗರದಲ್ಲಿ ಕಂಡ ನೀಲಿ ಅಲೆಗಳ ರಹಸ್ಯ!

3. ಲೋನಾವಾಲಾ

ಮುಂಬೈಯಿಂದ 106 ಕಿಲೋಮೀಟರ್ ದೂರದಲ್ಲಿ ಇರುವ ಈ ರೆಸಾರ್ಟ್‌ಗಳ ಪಟ್ಟಣ, ಪುಟ್ಟ ಪುಟ್ಟ ಸುಂದರವಾದ ಜಲಪಾತಗಳಿಂದ ತುಂಬಿದೆ. ಇಲ್ಲಿ ಚಿಕ್ಕಿ ಫೇಮಸ್. ಪುಟ್ಟ ಪುಟ್ಟ ಅಂಗಡಿಗಳೂ ಚಿಕ್ಕಿಯನ್ನು ಮಾರುತ್ತವೆ. ಇನ್ನು ವ್ಯಾಕ್ಸ್ ಮ್ಯೂಸಿಯಂ, ಗೋ ಕಾರ್ಟ್, ದೊಡ್ಡ ವಾಟರ್ ಪಾರ್ಕ್ ಕೂಡಾ ನಿಮ್ಮ ಸಂತಸ ಹೆಚ್ಚಿಸಲು ಇಲ್ಲಿ ಸದಾ ಸಿದ್ಧವಿರುತ್ತವೆ. ಮಹಾರಾಷ್ಟ್ರದಲ್ಲಿ ಅಜಂತಾ ಎಲ್ಲೋರಾ ಬಿಟ್ಟರೆ ಇಲ್ಲಿನ ಕಾರ್ಲಾ ಹಾಗೂ ಭಜಾ ಗುಹೆಗಳು ನೀವು ಭೇಟಿ ನೀಡಲೇಬೇಕಾದಂತವು.

4. ಮಹಾಬಲೇಶ್ವರ

ಮಹಾಬಲೇಶ್ವರದ ಬೆಟ್ಟಗುಡ್ಡಗಳ ಸೌಂದರ್ಯವನ್ನು ನೋಡಿಯೇ ಸವಿಯಬೇಕು. ಇಲ್ಲಿನ ವ್ಯೂ ಪಾಯಿಂಟ್ಸ್ ಹಾಗೂ ಜಲಪಾತಗಳು ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತವೆ. ಇಲ್ಲೇ ಹತ್ತಿರದಲ್ಲಿ ಪ್ರತಾಪಗಢ ಕೋಟೆ, ಖಾಸ್ ಪ್ಲ್ಯಾಟ್ಯೂ ಆಫ್ ಫ್ಲವರ್ಸ್ ಇದ್ದು, ಪ್ರವಾಸಕ್ಕೆ ಮತ್ತಷ್ಟು ಬಣ್ಣ ತುಂಬುತ್ತವೆ.

ಆಹಾ... ಏನ್ ಸ್ವಾದ, ಭೌಗೋಳಿಕ ಮಾನ್ಯತೆ ಪಡೆಯಿತು ನಮ್ಮ ಪ್ರಸಾದ!

5. ಉದಯ್‌ಪುರ್

ಅರಾವಲಿ ಪರ್ವತರಾಶಿಯ ನಡುವೆ ನಿಂತಿರುವ ಉದಯಪುರ ಕೆರೆಗಳ ನಗರ ಎಂದೇ ಖ್ಯಾತಿ. ಇಲ್ಲಿ ಪ್ರಮುಖವಾಗಿ ಐದು ಕೆರೆಗಳಿದ್ದು, ಅವೆಂದರೆ, ಫತೇಹ್ ಸಾಗರ್ ಲೇಕ್, ಲೇಕ್ ಪಿಚೇಲಾ, ಸ್ವರೂಪ್ ಸಾಗರ್ ಲೇಕ್, ರಂಗಸಾಗರ್ ಹಾಗೂ ದೂಧ್ ತಲೈ ಲೇಕ್. ನಗರದಲ್ಲಿ 16ನೇ ಶತಮಾನಕ್ಕೆ ಸೇರಿದ ಹಲವಾರು ಅರಮನೆಗಳು, ಕೋಟೆಗಳು, ದೇವಾಲಯಗಳು ಹಾಗೂ ಉದ್ಯಾನಗಳನ್ನು ಕಾಣಬಹುದು.

6. ಪುದುಚೆರಿ

ಪಾಂಡಿಚೆರಿ ಎಂದೂ ಕರೆಸಿಕೊಳ್ಳುವ ಈ ಕೇಂದ್ರಾಡಳಿತ ಪ್ರದೇಶ ಬೆಂಗಳೂರಿಗರಿಗೆ ಅಂಥ ದೂರವೇನಲ್ಲ. ಸುಂದರ ಬೀಚ್‌ಗಳು, ಭವ್ಯ ಪರಂಪರೆ, ಸಾಹಸ ಹಾಗೂ ಸಾಂಸ್ಕೃತಿಕ ಅನುಭವಗಳ ಪ್ಯಾಕೇಜ್ ಪುದುಚೆರಿ. ಇಲ್ಲಿ ಸಮಯ ನಿಂತಂಥ ಅನುಭವ ನಿಮ್ಮದಾಗುವುದು. ಬೋರಾಗಲು ಕಾರಣಗಳೇ ಇಲ್ಲದ ಸ್ಥಳವಿದು. 

click me!