ಬಿಜೆಪಿ ಟಿಕೆಟ್‌ಗಾಗಿ ಮೂವರ ನಡುವೆ ತೀವ್ರ ಪೈಪೋಟಿ : ಯಾರಿಗೆ ಮಣೆ..?

By Kannadaprabha NewsFirst Published Nov 19, 2021, 2:20 PM IST
Highlights
  •  ಬಿಜೆಪಿ ಟಿಕೆಟ್‌ಗಾಗಿ ಮೂವರ ನಡುವೆ ತೀವ್ರ ಪೈಪೋಟಿ : ಯಾರಿಗೆ ಮಣೆ..?
  •   ಜೆಡಿಎಸ್‌ನಿಂದ ಬಂದವರಿಗೆ ‘ಮಣೆ’ ಹಾಕಿದರೆ ಸಂದೇಶ್‌ಗೆ ಅವಕಾಶ
  • ಕಳೆದ ಬಾರಿ ‘ಸೋತವರಿಗೆ’ ಮತ್ತೊಂದು ಅವಕಾಶ ನೀಡಿದರೆ ರಘುಗೆ ಛಾನ್ಸ್‌
  • ‘ಹೊಸಬರಿಗೆ’ ಎಂದಾದರೆ ಸಿ. ಬಸವೇಗೌಡರಿಗೆ ಲಾಟರಿ

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ನ.19):  ಮೈಸೂರು- ಚಾಮರಾಜನಗರ (Mysuru - chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ (MLC Election) ಡಿ.10 ರಂದು ನಡೆಯುವ ಚುನಾವಣೆಗೆ ಬಿಜೆಪಿ (BJP) ಟಿಕೆಟ್‌ಗಾಗಿ ಮೂವರ ನಡುವೆ ತೀವ್ರ ಪೈಪೋಟಿ ಇದೆ.

2010 ಹಾಗೂ 2016ರ ಚುನಾವಣೆಯಲ್ಲಿ ಜೆಡಿಎಸ್‌ (JDS) ಟಿಕೆಟ್‌ ಮೇಲೆ ಸತತ ಎರಡು ಬಾರಿ ಗೆದ್ದಿರುವ ಸಂದೇಶ್‌ ನಾಗರಾಜ್‌ (sandesh nagaraj), ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸೋತ, ಹಾಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಆರ್‌. ರಘು ಕೌಟಿಲ್ಯ, ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಪರಮಾಪ್ತರೂ ಆದ ಎಂಡಿಎ (MDA), ಮೈಮುಲ್‌ (MYMUL) ಹಾಗೂ ಡಿಸಿಸಿ ಬ್ಯಾಂಕ್‌ (DCC Bank) ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರು ಪ್ರಮುಖ ಆಕಾಂಕ್ಷಿಗಳು.

ಇನ್ನೂ ಬಿಜೆಪಿಯನ್ನೇ ಸೇರದ ಸಂದೇಶ್‌ ನಾಗರಾಜ್‌ ನಾನು ಪಕ್ಷದ ಮುಖಂಡರನ್ನೆಲ್ಲಾ ಭೇಟಿ ಮಾಡಿದ್ದೇನೆ. ಹೀಗಾಗಿ ನನಗೆ ಟಿಕೆಟ್‌ (Ticket) ಖಚಿತ ಎಂದು ಹೇಳುತ್ತಿದ್ದಾರೆ. ರಘು ಕೌಟಿಲ್ಯ ಅವರಂತೂ ಮಲೆ ಮಹದೇಶ್ವರ ಬೆಟ್ಟದಿಂದ ಚುನಾವಣಾ ಪ್ರಚಾರವನ್ನೇ ಆರಂಭಿಸಿದ್ದಾರೆ. ಬಸವೇಗೌಡರು ವರಿಷ್ಠರ ತೀರ್ಮಾನಕ್ಕೆ ಕಾದು ಕುಳಿತ್ತಿದ್ದಾರೆ.

2010 ರಲ್ಲಿ ಬಿಜೆಪಿ ಗೆದ್ದಿದ್ದು, 2016 ರಲ್ಲಿ ಗಣನೀಯ ಮತ ಪಡೆದಿದ್ದನ್ನು ಹೊರತುಪಡಿಸಿದರೆ ಉಳಿದ ಚುನಾವಣೆಗಳಲ್ಲಿ (election) ಲೆಕ್ಕಕ್ಕೆ ಇರಲಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಚುನಾವಣಾ ವೆಚ್ಚಕ್ಕೆ ಅನುಕೂಲವಾಗವುದು, ಚಾಮರಾಜನಗರ ಲೋಕಸಭಾ (Loksabha) ಕ್ಷೇತ್ರದಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್‌, ಶಾಸಕರಾದ ಬಿ. ಹರ್ಷವರ್ಧನ್‌, ಸಿ.ಎಸ್‌. ನಿರಂಜನಕುಮಾರ್‌, ಎನ್‌. ಮಹೇಶ್‌ ಅವರಿಂದಾಗಿ ಬಿಜೆಪಿ ಪ್ರಬಲವಾಗಿರುವುದು, ಮೈಸೂರು  (mysuru)ಜಿಲ್ಲೆಯಲ್ಲಿ ಕೂಡ ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ನೆಲೆ ಕಂಡುಕೊಂಡಿರುವುದರಿಂದ ಟಿಕೆಟ್‌ಗೆ ಬೇಡಿಕೆ ಹೆಚ್ಚಿದೆ.

ಜೆಡಿಎಸ್‌ನಿಂದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ (GT Devegowda) ದೂರ ಇರುವುದು ಕೂಡ ಬಿಜೆಪಿಯ ಟಿಕೆಟ್‌ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ. ಒಂದು ಸ್ಥಾನ ಕಾಂಗ್ರೆಸ್‌ ಪಡೆದರೆ ಮತ್ತೊಂದು ಸ್ಥಾನವನ್ನು ಜೆಡಿಎಸ್‌ ಬದಲು ನಾವು ಗೆಲ್ಲಬಹುದು ಎಂಬುದು ಆಕಾಂಕ್ಷಿಗಳ ಲೆಕ್ಕಾಚಾರ.

ಸಂದೇಶ್‌ ನಾಗರಾಜ್‌, ರಘು ಕೌಟಿಲ್ಯ, ಬಸವೇಗೌಡ- ಈ ಮೂವರಲ್ಲಿ ಯಾರಿಗೆ ಅದೃಷ್ಟಖುಲಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಟಿಕೆಟ್‌ ಸಿಕ್ಕರೂ ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ಅವರಂತೆ ಗೆಲ್ಲುತ್ತಾರಾ? ಎಂಬುದು ಕುತೂಹಲ ಕೆರಳಿಸಿದೆ.

14 ನಿಗಮ ಮಂಡಳಿಯ ಅಧ್ಯಕ್ಷರು!

ಇದೇ ಮೊದಲ ಬಾರಿಗೆ ಅವಿಭಜಿತ ಮೈಸೂರು ಜಿಲ್ಲೆಯ 14 ಮಂದಿಗೆ ನಿಗಮ- ಮಂಡಳಿಯ ಅಧ್ಯಕ್ಷತೆ ಸಿಕ್ಕಿದೆ. ಹಿಂದಿನ Üಕಾಂಗ್ಸೆಸ್‌, ಜನತಾ ಪರಿವಾರ ಅಧಿಕಾರ ಇದ್ದಾಗಲೂ ಒಮ್ಮೆಲೆ ಇಷ್ಟೊಂದು ಮಂದಿಗೆ ಅವಕಾಶ ಸಿಕ್ಕಿರಲಿಲ್ಲ.

ಎಚ್‌.ವಿ. ರಾಜೀವ್‌- ಎಂಡಿಎ, ಎಂ. ಶಿವಣ್ಣ- ರಾಜ್ಯ ಸಫಾಯಿ ಕರ್ಮಚಾರಿ ಆಯೋಗ, ಆರ್‌. ರಘು ಕೌಟಿಲ್ಯ- ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ, ಎನ್‌. ಶಿವಲಿಂಗಯ್ಯ- ಕಾಡಾ, ಎಲ್‌.ಆರ್‌. ಮಹದೇವಸ್ವಾಮಿ- ಮೃಗಾಲಯ ಪ್ರಾಧಿಕಾರ, ಎ. ಹೇಮಂತಕುಮಾರ್‌ ಗೌಡ- ವಸ್ತು ಪ್ರದರ್ಶನ ಪ್ರಾಧಿಕಾರ, ಎಸ್‌. ಮಹದೇವಯ್ಯ- ಕಾಂಪೋಸ್ಟ್‌ ಅಭಿವೃದ್ಧಿ ಮಂಡಳಿ, ಎನ್‌.ಆರ್‌. ಕೃಷ್ಣಪ್ಪಗೌಡ- ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಎನ್‌.ವಿ. ಫಣೀಶ್‌- ಮೈಲ್ಯಾಕ್‌, ಎಂ. ಅಪ್ಪಣ್ಣ- ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ, ಕಾ.ಪು. ಸಿದ್ದಲಿಂಗಸ್ವಾಮಿ- ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಎಂ. ರಾಮಚಂದ್ರ- ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರೂ ಹೌದು. ಇದಲ್ಲದೇ ವಿವಿಧ ನಿಗಮ, ಮಂಡಳಿಗಳ ಅಧಿಕಾರೇತರ ಸದಸ್ಯರೂ ಇದ್ದಾರೆ.

ಇದಲ್ಲದೇ ರಾಜಕಾರಣದ ವ್ಯಾಪ್ತಿಯಿಂದ ಹೊರತಾದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಎಂ.ಎನ್‌. ನಂದೀಶ್‌ ಹಂಚೆ ಸೇವೆ ಸಲ್ಲಿಸುತ್ತಿದ್ದಾರೆ.

click me!