
ನವದೆಹಲಿ (ಜೂ.15): ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಇಬ್ಬರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗಗನಯಾತ್ರಿಗಳ ಪೈಕಿ ಒಬ್ಬರಾದ ಸುಲ್ತಾನ್ ಅಲ್ ನೆಯ್ಯದಿ, ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಭೀಕರ ಬಿಪರ್ಜಾಯ್ ಚಂಡಮಾರುತದ ರುದ್ರ ಚಿತ್ರಗಳನ್ನು ಬಾಹ್ಯಾಕಾಶದಿಂದ ತೆಗೆದಿದ್ದು ಇದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳನ್ನು ನೋಡಿದವರೆಲ್ಲರೂ ಚಂಡಮಾರುತ ಎಷ್ಟು ಭೀಕರವಾಗಿರಲಿದೆ ಎನ್ನುವ ಸೂಚನೆ ಸಿಕ್ಕಿದೆ ಎಂದಿದ್ದಾರೆ. ಸುಲ್ತಾನ್ ಅಲ್ ನೆಯ್ಯದಿ ಕೂಡ ಚಂಡಮಾರುತದ ಕುರಿತು ಎಚ್ಚರವಾಗಿರಿ ಎಂದೂ ಟ್ವೀಟ್ ಮಾಡಿದ್ದಾರೆ. ಚಂಡಮಾರುತದ ರುದ್ರ ರಮಣೀಯ ಚಿತ್ರಗಳನ್ನು ಹಂಚಿಕೊಂಡು ಟ್ವಿಟರ್ನಲ್ಲಿ ಬರೆದುಕೊಂಡಿರುವ ಅಲ್ ನೆಯ್ಯದಿ, 'ನಾನು ನನ್ನ ಕಳೆದ ವಿಡಿಯೋದಲ್ಲಿ ಹೇಳಿದಂತೆ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪರ್ಜಾಯ್ ಚಂಡಮಾರುತದ ಚಿತ್ರಗಳನ್ನು ಇಲ್ಲಿ ಪೋಸ್ಟ್ ಮಾಡಿದ್ದೇನೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಎರಡು ದಿನಗಳ ಅವಧಿಯಲ್ಲಿ ಈ ಚಿತ್ರಗಳನ್ನು ತೆಗೆದಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಯುಎಇ ಗಗನಯಾತ್ರಿ ಅಲ್ ನೆಯ್ಯದಿ, ಬಿಪರ್ಜೋಯ್ ಚಂಡಮಾರುತದ ವೀಡಿಯೊವನ್ನು ಹಂಚಿಕೊಂಡ ಒಂದು ದಿನದ ನಂತರ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಂಡಮಾರುತವು ಗುರುವಾರ ಸಿಂಧ್ನ ಥಟ್ಟಾ ಜಿಲ್ಲೆಯ ಕೇತಿ ಬಂದರ್ ಬಂದರು ಮತ್ತು ಭಾರತದ ಕಚ್ ಜಿಲ್ಲೆಯ ನಡುವೆ ಭಾರೀ ಪ್ರಮಾಣದ ಹಾನಿ ಉಂಟುಮಾಡುವ ಸಾಧ್ಯತೆ ಇದೆ. 4 ನಿಮಿಷದ ವಿಡಿಯೋದಲ್ಲಿ ಅಲ್ ನೆಯ್ಯದಿ, ಬಿಪರ್ಜಾಯ್ ಚಂಡಮಾರುತದ ಕೇಂದ್ರವನ್ನು ಸೆರೆ ಮಾಡಿದ್ದು, ಅದರೊಂದಿಗೆ ಚಂಡಮಾರುತ ಎಷ್ಟು ದೂರದವರೆಗೆ ಹರಡಿದೆ ಎನ್ನುವ ಅಂಶವನ್ನೂ ಶೂಟ್ ಮಾಡಿದ್ದಾರೆ.
ವಿಡಿಯೋವನ್ನು ಹಂಚಿಕೊಳ್ಳುವ ವೇಳೆ ಬರೆದುಕೊಂಡಿರುವ ಅಲ್ ನೆಯ್ಯದಿ, 'ನಾನು ಸೆರೆಹಿಡಿದಿರುವ ಈ ವಿಡಿಯೋಗಳಿಂದ ಅರಬ್ಬಿ ಸಮುದ್ರದ ಮೇಳೆ ಚಂಡಮಾರುತಗಳು ರೂಪುಗೊಳ್ಳುತ್ತಿರುವುದನ್ನು ವೀಕ್ಷಿಸಬಹುದು. ಐಎಸ್ಎಸ್ ಹಲವಾರು ನೈಸರ್ಗಿಕ ವಿದ್ಯಮಾನಗಳ ಮೇಲೆ ಒಂದು ಅನನ್ಯ ದೃಷ್ಟಿಕೋನವನ್ನು ಒದಗಿಸುತ್ತದೆ. ಅದರೊಂದಿಗೆ ಭೂಮಿಯಲ್ಲಿ ಕುಳಿತು ಹವಮಾನ ಮೇಲ್ವಿಚಾರಣೆ ಮಾಡುವ ತಜ್ಞರಿಗೂ ಸಹಾಯ ಮಾಡುತ್ತದೆ' ಎಲ್ಲರೂ ಸುರಕ್ಷಿತವಾಗಿರಿ!' ಎಂದು ಅವರು ಬರೆದುಕೊಂಡಿದ್ದರು.
ಬಿಪರ್ಜಾಯ್ ಚಂಡಮಾರುತವು ಈಗ ತೀವ್ರರೂಪದ ಚಂಡಮಾರುತ ಎಂದು ವರ್ಗೀಕೃತವಾಗಿತ್ತು. ಅರಬ್ಬಿ ಸಮುದ್ರದಲ್ಲಿ ರಚಿತವಾಗಿರುವ ಈ ಸೈಕ್ಲೋನ್ ಭಾರತ ಹಾಗೂ ಪಾಕಿಸ್ತಾನದತ್ತ ನುಗ್ಗುತ್ತಿದೆ. ಎರಡೂ ದೇಶಗಳಲ್ಲಿ ದೊಡ್ಡ ಪ್ರಮಾಣದ ಹಾನಿಯನ್ನೂ ಉಂಟು ಮಾಡುವ ಸಾಧ್ಯತದೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಪರ್ಜಾಯ್ಗೆ 'ಹಾನಿಕಾರಕ ಸಾಮರ್ಥ್ಯ' ಇದೆ ಎಂದು ತಿಳಿಸಿದೆ.
Cyclone biparjoy: ಕರಾವಳಿಯಲ್ಲಿ ಇಂದಿನಿಂದ ಹೈ ವೇವ್ ಎಚ್ಚರಿಕೆ!
ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಗುರುವಾರ ಈ ಬಗ್ಗೆ ಮಾತನಾಡಿದ್ದು, ಬಿಪರ್ಜಾಯ್ ಅತ್ಯಂತ ತೀವ್ರವಾದ ಸೈಕ್ಲೋನಿಕ್ ಚಂಡಮಾರುತವಾಗಿದ್ದು, ಹಾನಿಯನ್ನುಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕಚ್ನಲ್ಲಿ 2-3ಮೀ ಎತ್ತರದ ಉಬ್ಬರವಿಳಿತದ ಅಲೆಗಳು ಮತ್ತು ಪೋರಬಂದರ್ ಮತ್ತು ದ್ವಾರಕಾ ಜಿಲ್ಲೆಗಳಲ್ಲಿ ಹೆಚ್ಚಿನ ಗಾಳಿಯ ವೇಗದೊಂದಿಗೆ ಅತ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದೆ' ಎಂದಿದ್ದಾರೆ.
ನಾಳೆ ಅಪ್ಪಳಿಸಲಿದೆ ಬಿಪೊರ್ಜೊಯ್ ಚಂಡಮಾರುತ: ಗುಜರಾತ್ಗೆ ಗಂಡಾಂತರ; 90 ರೈಲು ಸಂಚಾರ ರದ್ದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ