
ಶೋಪಿಯಾನ್(ಅ.28): ಜಮ್ಮು ಮತ್ತು ಕಾಶ್ಮೀರದ ಮೂಲ ನಿವಾಸಿಗಳಾದ ಕಾಶ್ಮೀರಿ ಪಂಡಿತ್ ಮೇಲಿನ ಉಗ್ರ ದಾಳಿ ನಡೆಯುತ್ತಲೇ ಇದೆ. 1990ರಲ್ಲಿ ಪಂಡಿತರು, ಹಿಂದೂಗಳು ಈ ನೆಲ ಬಿಡಬೇಕು, ಇಲ್ಲ ಮತಾಂತರವಾಗಬೇಕು. ಎರಡನ್ನೂ ಒಪ್ಪದಿದ್ದರೆ ಹತ್ಯೆ ಎಂದು ಮಸೀದಿಗಳ ಮೈಕ್ ಮೂಲಕ ಎಚ್ಚರಿಕೆ ಸಂದೇಶ ನೀಡಿ ನರಮೇಧ ನಡೆಸಲಾಗಿತ್ತು. ಈಗ ಇತಿಹಾಸ. ಆದರೆ ಬಳಿಕವೂ ಪಂಡಿತರನ್ನು ಹತ್ಯೆ ಮಾಡುವ ಉಗ್ರರ ಕಾರ್ಯಕ್ಕೆ ಬ್ರೇಕ್ ಬಿದ್ದಿಲ್ಲ. ಇತ್ತೀಚೆಗೆ ಸತತವಾಗಿ ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಇದರ ಪರಿಣಾಮ ಪಂಡಿತರು ಕಣಿವೆ ರಾಜ್ಯ ತೊರೆಯುತ್ತಿದ್ದಾರೆ. ಶೋಪಿಯಾನ್ ಜಿಲ್ಲೆಯ ಚೌಧರಿಗುಂದ ಗ್ರಾಮದಲ್ಲಿ ಉಗ್ರರ ಅಟ್ಟಹಾಸಕ್ಕೆ ಹಲವು ಪಂಡಿತರು ಬಲಿಯಾಗಿದ್ದಾರೆ. ಇನ್ನುಳಿದ ಪಂಡಿತ ಕುಟಂಬಗಳು ಜೀವಭಯದಿಂದ ವಲಸೆ ಹೋಗಿತ್ತು. ಆದರೆ ಗ್ರಾಮದಲ್ಲೇ ಉಳಿದಿದ್ದ ಪಂಡಿತ್ ಮಹಿಳೆ ಡೋಲಿ ಕುಮಾರಿ ಇದೀಗ ಗ್ರಾಮ ತೊರೆದಿದ್ದಾರೆ. ತನ್ನ ಮನೆಯಲ್ಲಿ ಬದುಕುವ ಅವಕಾಶ ಮಾಡಿಕೊಡಿ ಎಂದು ಕಣ್ಣೀರಿಟ್ಟಿದ್ದಾಳೆ.
ಶೋಫಿಯಾನ್ ಜಿಲ್ಲೆಯುದ್ದಕ್ಕೂ ಉಗ್ರರ ಅಟ್ಟಹಾಸ ತುಸು ಹೆಚ್ಚು. ಅದರಲ್ಲೂ ಚೌಧರಿಗುಂದ ಗ್ರಾಮ ಸಂಪೂರ್ಣವಾಗಿ ಪಂಡಿತ್ ಕುಟುಂಬ ವಾಸಿಸುತ್ತಿದ್ದ ಗ್ರಾಮವಾಗಿತ್ತು. 1990ರ ಬಳಿಕವೂ ಇಲ್ಲಿ 100ಕ್ಕೂ ಹೆಚ್ಚು ಪಂಡಿತ್ ಕುಟಂಬ ವಾಸಿಸುತಿತ್ತು. ಆದರೆ ಪಂಡಿತ್ ಕುಟುಂಬದ ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಿದ ಉಗ್ರರು ಹತ್ಯೆ ಮಾಡುತ್ತಲೇ ಬಂದಿದೆ. ಕೊನೆಗೆ ಉಳಿದಿದ್ದು 8 ಕುಟುಂಬ ಮಾತ್ರ. ಅಕ್ಟೋಬರ್ 15 ರಂದು ಚೌಧರಿಗುಂದ ಗ್ರಾಮದ ಪಂಡಿತ್ ಪೂರನ್ ಕೃಷನ್ ಭಟ್ ಅವರನ್ನು ಉಗ್ರರು ಗಂಡಿಕ್ಕಿ ಹತ್ಯೆ ಮಾಡಿದ್ದರು. ಚೌಧರಿಗುಂದ ಗ್ರಾಮದ ಪಕ್ಕದ ಚೊಟಿಗಮ್ ಗ್ರಾಮದ ಸೇಬು ತೋಟದ ಬಳಿ ಹತ್ಯೆ ಮಾಡಲಾಗಿತ್ತು.
Kashmirದಲ್ಲಿ ನಿಲ್ಲದ ಪಂಡಿತರ ನರಮೇಧ: 2019ರ ನಂತರ 19 ಉದ್ದೇಶಿತ ಹತ್ಯೆ
ಈ ಘಟನೆಯಿಂದ ಚೌಧರಿಗುಂದ ಗ್ರಾಮದದಲ್ಲಿ ಉಳಿದ 8 ಪಂಡಿತ್ ಕುಟುಂಬದಲ್ಲಿ ಆತಂಕ ಹೆಚ್ಚಾಗಿತ್ತು. ಮುಂದಿನ ಟಾರ್ಗೆಟ್ ನಾವೇ ಅನ್ನೋದು ಅಲಿಖಿತ ದಾಖಲೆಯಾಗಿತ್ತು. ಹೀಗಾಗಿ 8 ಕುಟುಂಬಗಳ ಪೈಕಿ 7 ಕುಟುಂಬಗಳು ಕಳೆದ ವಾರ ವಲಸೆ ಹೋಗಿತ್ತು. ಈ ಗ್ರಾಮದಲ್ಲಿ ಪಂಡಿತ್ ಕುಟುಂಬದ ಡೋಲಿ ಕುಮಾರಿ ಮಾತ್ರ ವಾಸಿಸುತ್ತಿದ್ದರು. ಇವರ ಕುಟುಂಬ ಸದಸ್ಯರು ಹಲವು ವರ್ಷಗಳ ಹಿಂದೆ ಉಗ್ರರ ದಾಳಿಗೆ ಬಲಿಯಾಗಿದ್ದರು. ಇದೀಗ ಡೋಲಿ ಕುಮಾರಿ ಕೂಡ ವಲಸೆ ಹೋಗಿದ್ದಾರೆ. ಶೋಪಿಯನ್ ಜಿಲ್ಲಿಯಿಂದ ಜಮ್ಮುವಿಗೆ ಡೋಲಿ ಕುಮಾರಿ ವಲಸೆ ಹೋಗಿದ್ದಾರೆ.
ನನ್ನ ಪಕ್ಕದ ಮನೆಯ ಪಂಡಿತ್ ಕುಟುಂಬದ ಮೇಲೆ ದಾಳಿ ನಡೆದಿದೆ. ಮುಂದಿನ ಸರದಿ ನಾವು. ಪರಿಸ್ಥಿತಿ ಹೀಗಿರುವಾಗ ಪ್ರತಿ ದಿನ ಜೀವಭಯದಿಂದ ಬದುಕುವುದು ಹೇಗೆ? ಅಧಿಕಾರಿಗಳು, ಸರ್ಕಾರ ನನ್ನ ಮನೆಯಲ್ಲಿ ಬದುಕುವ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಕಣ್ಣಿರಿಟ್ಟಿದ್ದಾರೆ. ಇಲ್ಲಿನ ಪರಿಸ್ಥಿತಿ ಕೆಟ್ಟದಾಗಿದೆ. ಯಾರು ತಾನೆ ಮನೆ ತೊರದು ಹೋಗಲು ಇಷ್ಟಪಡುತ್ತಾರೆ. ಹುಟ್ಟಿ ಬೆಳೆದ ಮನೆ, ಪರಿಸರ ತೊರೆದು ಹೋಗಬೇಕು. ಆದರೆ ಇಲ್ಲಿ ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ಬರುತ್ತೇನೆ. ಆ ವೇಳೆ ಈ ಮನೆ ಇರುತ್ತೋ ಗೊತ್ತಿಲ್ಲ. ಈ ಮನೆಯನ್ನು ಉಗ್ರರು ಧ್ವಂಸ ಮಾಡಿದರೂ ಅಚ್ಚರಿಯಿಲ್ಲ. ಸರ್ಕಾರ ಪಂಡಿತರ ಕುಟುಂಬಕ್ಕೆ ನೆರವು ನೀಡಬೇಕು. ನಾವು ಶಾಂತಿಯುತ ಬದುಕು ಬಾಳುತ್ತಿದ್ದೇವೆ. ನಮ್ಮ ಮೇಲೆ ಉಗ್ರರು ಸತತ ದಾಳಿ ಮಾಡುತ್ತಿದ್ದಾರೆ. ಆದರೂ ನಾವು ತಾಳ್ಮೆ ಕಳೆದುಕೊಂಡಿಲ್ಲ.ಈ ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಆದರೆ ಪಂಡಿತ್ ಕುಟುಂಬದಲ್ಲಿ ಹುಟ್ಟಿದ ಕಾರಣಕ್ಕೆ ನಮಗೆ ಯಾಕಿಲ್ಲ. ಈ ಕುರಿತು ನಮ್ಮ ನೆರವಿಗೆ ಬನ್ನಿ ಎಂದು ಡೋಲಿ ಕುಮಾರಿ ಕಣ್ಣೀರಿಟ್ಟಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮತ್ತೊಬ್ಬ Kashmiri Pandit ಹತ್ಯೆ: ಉಗ್ರರಿಂದ ದುಷ್ಕೃತ್ಯ
ಚೌಧರಿಗುಂದ ಹಾಗೂ ಚೋಟಿಪುರ ಗ್ರಾಮದ ಎಲ್ಲಾ 11 ಪಂಡಿತ್ ಕುಟುಂಬಗಳು ಜಮ್ಮುವಿಗೆ ಸ್ಥಳಾಂತರಗೊಂಡಿದೆ. ಇದೀಗ ಶೋಪಿಯಾನ್ ಜಿಲ್ಲೆಯಲ್ಲಿ ಮುಸ್ಲಿಮ್ ಕುಟುಂಬಗಳು ಮಾತ್ರ ಇದೆ. ಡೋಲಿ ಕುಮಾರಿ ತಮ್ಮ ಸಹೋದರನ ಒತ್ತಾಯಕ್ಕೆ ಮಣಿದು ಜಮ್ಮುವಿಗೆ ಸ್ಥಳಾಂತರವಾಗಿದ್ದಾರೆ. ಡೋಲಿ ಕುಮಾರ್ ಚೌಧರಿಗುಂದ್ ಗ್ರಾಮದಲ್ಲಿ ಮನೆ ಹಾಗೂ ಕೃಷಿ ಭೂಮಿ ಹೊಂದಿದ್ದಾರೆ. ಸೇಬು ಕೃಷಿ ಮೂಲಕ ಉತ್ತಮ ಆದಾಯಗಳಿಸುತ್ತಿದ್ದಾರೆ. ಇದೀಗ ಈ ಕೃಷಿ ನಿರ್ನಾಮವಾಗಲಿದೆ. ನನ್ನ ಮನೆ ಇದ್ದರೂ ನಾನು ಬಾಡಿಗೆ ಮನೆಯಲ್ಲಿರುವಂತಾಗಿದೆ. ಜೀವನಕ್ಕೆ ಕೂಲಿ ಕೆಲಸ ಮಾಡುವಂತಾಗಿದೆ ಎಂದು ಡೋಲಿ ಕುಮಾರ್ ಅಲವತ್ತುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ