ದಕ್ಷಿಣ ಭಾರತದ ಕೊನೆಯ ರಸ್ತೆ: ಧನುಷ್ಕೋಡಿಯ ವೈಮಾನಿಕ ನೋಟದ ವೀಡಿಯೋ ವೈರಲ್

By Anusha KbFirst Published Feb 7, 2024, 2:34 PM IST
Highlights

ಧನುಷ್ಕೋಡಿ ಭಾರತದ ದಕ್ಷಿಣ ಭಾಗದ ಕೊನೆಯ ನಗರವಾಗಿದ್ದು, ಇಲ್ಲಿನ ಕೊನೆಯ ರಸ್ತೆಯ ಡ್ರೋನ್ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. 

ಧನುಷ್ಕೋಡಿ ಭಾರತದ ದಕ್ಷಿಣ ಭಾಗದ ಕೊನೆಯ ನಗರವಾಗಿದ್ದು, ಇಲ್ಲಿನ ಕೊನೆಯ ರಸ್ತೆಯ ಡ್ರೋನ್ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಧನುಷ್ಕೋಡಿಗೂ ನಮ್ಮ ಹಿಂದೂ ಪುರಾಣ ರಾಮಾಯಣಕ್ಕೂ ಅವಿನಾಭಾವವಾದ ಸಂಬಧವಿದೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಈ ಪುರಾಣ ಪ್ರಸಿದ್ಧ ಧನುಷ್ಕೋಡಿಗೆ ಭೇಟಿ ನೀಡಿ ಸಮುದ್ರ ಪೂಜೆ ಮಾಡಿದ್ದರು. 

ತಮಿಳುನಾಡಿನ ಕೆಳಭಾಗದಲ್ಲಿರುವ ಈ ಧನುಷ್ಕೋಡಿಯ ಹಾಗೂ ಭಾರತದಲ್ಲಿ ಈ ಭಾಗದ ಕೊನೆಯ ರಸ್ತೆಯ ವೈಮಾನಿಕ ನೋಟವನ್ನು ಈಗ ಭಾರತ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆ @mygovindia ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, 12 ಸೆಕೆಂಡ್‌ಗಳ ಈ ಅದ್ಭುತ ವೀಡಿಯೋ ಪ್ರಕೃತಿ, ಸಮುದ್ರ, ನಿಸರ್ಗವನ್ನು ಪ್ರೀತಿಸುವವರ ಕಣ್ಣಿಗೆ ಹಬ್ಬದೂಟ ನೀಡುತ್ತಿದೆ. 

ಈ ವೀಡಿಯೋ ಶೇರ್ ಮಾಡಿದ  @mygovindia ಪೇಜ್‌ ಮೈನವಿರೇಳಿಸುವ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ, ತಮಿಳುನಾಡಿನ ಧನುಷ್ಕೋಡಿಯ ಭಾರತದ ಈ ಕೊನೆಯ ರಸ್ತೆಯ ನೋಟ ಎಂದು ಬರೆಯಲಾಗಿದೆ. ಜೊತೆಗೆ ತಿರುಮಲ ಸಂಚಾರಿ ಎಂಬುವವರು ಈ ವೀಡಿಯೋ ಸೆರೆ ಹಿಡಿದಿದ್ದು, ಅವರಿಗೆ ವೀಡಿಯೋ ಕ್ರೆಡಿಟ್ ನೀಡಲಾಗಿದೆ.  ಅರಿಚಲ್ ಮುನೈ ಎಂದು ಕರೆಯುವ ಈ ರಸ್ತೆ ದಕ್ಷಿಣ ಭಾಗದಲ್ಲಿ ಭಾರತದ ಕೊನೆಯ ರಸ್ತೆಯೆನಿಸಿದೆ. 

ರಾಮ ಮಂದಿರ ಆಯ್ತು, ಈಗ ನೂತನ ರಾಮ ಸೇತುಗೆ ಪ್ಲ್ಯಾನ್: ಭಾರತ - ಶ್ರೀಲಂಕಾ ನಡುವೆ ಶೀಘ್ರ 23 ಕಿ.ಮೀ. ಉದ್ದದ ಸಮುದ್ರ ಸೇತುವೆ!

ಇನ್ನು ಈ ವೀಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಇದು ನೋಡುವುದಕ್ಕೆ ಅದ್ಭುತವಾದ ಶಿವಲಿಂಗದಂತೆ ಕಾಣಿಸುತ್ತಿದೆ ಹರ್ ಹರ್ ಮಹದೇವ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಪ್ರದೇಶದಲ್ಲಿ ಸಣ್ಣ ಪುಟ್ಟ ವಾಹನಗಳ ಹೊರತುಪಡಿಸಿ ದೊಡ್ಡ ವಾಹನಗಳನ್ನು ಬ್ಯಾನ್ ಮಾಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಮಾಡಿದವರನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ರಾಮಸೇತು ಆರಂಭದ ಬಿಂದು ಅರಿಚಲ್ ಮುನೈಗೆ ಮೋದಿ ಭೇಟಿ; ಈ ಸ್ಥಳದಲ್ಲೇ ರಾವಣನ ವಧೆಗೆ ರಾಮ ಮಾಡಿದ ಪ್ರತಿಜ್ಞೆ

ಧನುಷ್ಕೋಡಿ ದೇಶದ ಅತ್ಯಂತ ಸುಂದರವಾದ ಮತ್ತು ಅಪ್ರತಿಮ ಸ್ಥಳಗಳಲ್ಲಿ ಒಂದಾಗಿದ್ದು ವಿಶೇಷ ಸ್ಥಾನವನ್ನು ಹೊಂದಿದೆ. ಇಲ್ಲೇ ರಾಮ ರಾವಣನ ವಧೆಗೆ ಪ್ರತಿಜ್ಞೆ ಮಾಡಿದ ಎಂಬ ಪ್ರತೀತಿ ಇದೆ. ಅಲ್ಲದೇ ಇದು ರಾವಣನ ಸಂಹಾರಕ್ಕಾಗಿ ಶ್ರೀಲಂಕಾಗೆ ತೆರಳಲು ಕಪಿಸೇನೆ ನಿರ್ಮಿಸಿದ ರಾಮಸೇತುವಿನ ಆರಂಭಿಕ ಬಿಂದುವಾಗಿದೆ.

ಇಲ್ಲಿಂದ ಕೇವಲ 18 ಕಿಮೀ ದೂರದಲ್ಲಿ ಶ್ರೀಲಂಕಾ ಇರುವುದರಿಂದ ಈ ರಸ್ತೆಯು ಸಾರಿಗೆ ವಿಚಾರದಲ್ಲೂ ಮಹತ್ವವನ್ನು ಪಡೆಯುತ್ತದೆ, ಇದು ಭಾರತದ ದಕ್ಷಿಣದ ತುದಿಯನ್ನು ಗುರುತಿಸುತ್ತದೆ. ಇಲ್ಲಿಗೆ ಭೇಟಿ ನೀಡಲು ಬಯಸುವ ಪ್ರವಾಸಿಗರು ರಾಮೇಶ್ವರಂನಿಂದ ನಾಲ್ಕು ಚಕ್ರದ ವಾಹನಗಳು ಅಥವಾ ಸ್ಥಳೀಯ ಆಟೋಗಳಲ್ಲಿ ಈ ಪ್ರದೇಶಕ್ಕೆ ತೆರಳಿ ರಾಮಸೇತುವನ್ನು (ಆಡಮ್ಸ್ ಸೇತುವೆ) ತಲುಪಬಹುದು, ಇಲ್ಲೇ ಬಂಗಾಳ ಕೊಲ್ಲಿಯು ಹಿಂದೂ ಮಹಾಸಾಗರವನ್ನು ಸೇರುತ್ತದೆ. ಇದರ ಜೊತೆಗೆ  ತಮಿಳುನಾಡಿನ ಪಂಬನ್ ಸೇತುವೆಯ ಮೂಲಕ ರಾಮೇಶ್ವರಂ-ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಮೂಲಕವೂ ಇಲ್ಲಿನ ರಮಣೀಯ ನೋಟವನ್ನು ಅಸ್ವಾದಿಸಬಹುದು.

Behold the breathtaking beauty!

Feast your eyes on the mesmerizing view of India's last road at Dhanushkodi, Tamil Nadu.

📹: Thirumala Sanchari pic.twitter.com/xH5k6J6HyA

— MyGovIndia (@mygovindia)

 

click me!