ಸೈಕಲ್‌ಗೆ ಕಾರು ಡಿಕ್ಕಿ: ಈಜು ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ಸಾವು

By Anusha KbFirst Published May 18, 2022, 11:42 AM IST
Highlights
  • ಮನೆಗೆ ಮರಳುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ಕಾರು
  • 13 ವರ್ಷದ ಬಾಲಕ ಸ್ಥಳದಲ್ಲೇ ಸಾವು, ಸ್ನೇಹಿತನಿಗೆ ಗಾಯ
  • ದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗದಲ್ಲಿ ಘಟನೆ

ನವದೆಹಲಿ: ಈಜು ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿ 13 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಬಾಲಕ ವೀರ್‌ ಚೌಹಾಣ್ (Veer Chouhan) ಹಾಗೂ ಆತನ ಗೆಳೆಯ ಇಬ್ಬರು ಈಜು ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದ್ದು, ಮೃತ ಬಾಲಕನ ಗೆಳೆಯನಿಗೂ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಲಕರಿರುವ ಸೈಕಲ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕನನ್ನು ಧನಂಜಯ್ ಮಲಿಕ್ (34) ಎಂದು ಗುರುತಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕ ವೀರ್‌ನ ಚಿಕ್ಕಪ್ಪ ರಾಹುಲ್ (Rahul), ಕಾರು ಬಾಲಕರಿಗೆ ಡಿಕ್ಕಿ ಹೊಡೆದಾಗ ಬಾಲಕರು ಆಗಸ್ಟ್ ಕ್ರಾಂತಿ (Kranti Marg) ಮಾರ್ಗದಲ್ಲಿ ಇದ್ದರು. ಕಾರು ಡಿಕ್ಕಿ ಹೊಡೆದ ನಂತರ ವೀರ್‌ ಕೆಳಗೆ ಬಿದ್ದಿದ್ದು, ಕಾರಿನ ಚಾಲಕ ವೀರ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ವೀರ್‌ನನ್ನು ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ (Max Hospital) ಸ್ಥಳಾಂತರಿಸಲಾಯಿತು. ವೀರ್‌ ಬದುಕುಳಿದು ಮನೆಗೆ ಮರಳುತ್ತಾರೆ ಎಂದು ನಾವು ಭಾವಿಸಿದೆವು ಆದರೆ ಅವರು ಮಂಗಳವಾರ ನಿಧನರಾದರು. ವೀರ್‌ನ ಸಾವಿನಿಂದ ಆತನ ತಾಯಿ ಸ್ಥಿತಿ ಗಂಭೀರವಾಗಿದೆ ಎಂದು ರಾಹುಲ್ ಹೇಳಿದರು. 

ಆಟವಾಡ್ತಿದ್ದವನ ಮೇಲೆ ಬೀದಿ ನಾಯಿಗಳ ದಾಳಿ.. ಬಾಲಕ ದುರ್ಮರಣ

ನಾವು ಹಲವು ಬಾರಿ ಪೊಲೀಸರಿಗೆ ಕರೆ ಮಾಡಿದರೂ ಅವರು ಬರಲಿಲ್ಲ. ಶವ ಪರೀಕ್ಷೆಗೆ ಪೊಲೀಸರ ನೆರವು ಬೇಕಿತ್ತು ಎಂದು ವೀರ್‌ನ ಚಿಕ್ಕಮ್ಮ ಕನಿಕಾ ಆರೋಪಿಸಿದ್ದಾರೆ. ಅಪಘಾತದ ಸಂದರ್ಭದಲ್ಲಿ ಇದ್ದ ವೀರ್  ಸ್ನೇಹಿತ ದೇವ್ ಮಂಡಲ್ (18) ಅವರ ದೂರಿನ ಮೇರೆಗೆ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ವಿಳಂಬದಿಂದಾಗಿ ಮೃತದೇಹವನ್ನು ಅಂತಿಮ ವಿಧಿವಿಧಾನಕ್ಕೆ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಆದರೆ ಈ ಆರೋಪಗಳನ್ನು ತಳ್ಳಿಹಾಕಿದ ಪೊಲೀಸರು, ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಧಾವಿಸಿದೆವು ಎಂದು ಹೇಳಿದರು.

ಕಾರು ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279 (ಅತಿ ವೇಗದ ಚಾಲನೆ), 337 (ಜೀವಕ್ಕೆ ಅಪಾಯವನ್ನುಂಟು ಮಾಡುವ ಕೃತ್ಯದಿಂದ ಗಾಯಗೊಳಿಸುವುದು), 338 (ಘೋರವಾದ ಗಾಯವನ್ನು ಉಂಟುಮಾಡುವುದು) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Kalaburagi: ಟಿಪ್ಪರ್‌ ಹರಿದು ಬಾಲಕ ಸಾವು: ರೊಚ್ಚಿಗೆದ್ದ ಜನರಿಂದ ಟಿಪ್ಪರ್‌ಗೆ ಬೆಂಕಿ

ಆರೋಪಿಯನ್ನು ಸೋಮವಾರ ಅವರ ಗ್ರೇಟರ್ ಕೈಲಾಶ್ ನಿವಾಸದಿಂದ ಬಂಧಿಸಲಾಗಿದೆ. ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ (ದಕ್ಷಿಣ) ಬೆನಿಟಾ ಮೇರಿ ಜೈಕರ್ (Benita Mary Jaiker) ಹೇಳಿದ್ದಾರೆ. ಶನಿವಾರ ಸಂಜೆ  4.30 ರ ಸುಮಾರಿಗೆ ಈ ಅಪಘಾತ ಸಂಭವಿಸಿತ್ತು. ಮೃತ ಬಾಲಕ ವೀರ್ ತನ್ನ ಪೋಷಕರೊಂದಿಗೆ ಜೆಜೆ ಕಾಲೋನಿಯ(JJ colony) ಸ್ವಾಮಿ ನಗರದಲ್ಲಿರುವ ಎಂಸಿಡಿ ಫ್ಲಾಟ್ (MCD flats) ಬಳಿ ವಾಸವಾಗಿದ್ದರು. ಮೃತನ ತಂದೆ ದಕ್ಷಿಣ ದೆಹಲಿಯ ಡಿಪಾರ್ಟ್‌ಮೆಂಟಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. 

ಕಳೆದ ಮಾರ್ಚ್‌ನಲ್ಲಿ ಪಾಲಕರೊಂದಿಗೆ ರಸ್ತೆ ದಾಟುತ್ತಿದ್ದ 10 ವರ್ಷದ ಬಾಲಕನ ಮೇಲೆ ಟಿಪ್ಪರ್ ಹರಿದ ಪರಿಣಾಮ, ಬಾಲಕ ಸ್ಥಳದಲ್ಲಿಯೇ ಸಾವಿಗೀಡಾದ ದಾರುಣ ಘಟನೆ ಕಲಬುರ್ಗಿ ನಗರದ ಬಿದ್ದಾಪೂರ ಕಾಲೋನಿ ಸಮೀಪದ ಫ್ಲೈಓವರ್ ಬಳಿ ನಡೆದಿತ್ತು. ಟಿಪ್ಪರ್ ಹರಿದು ಹೋದ ಪರಿಣಾಮ ಬಾಲಕನ ದೇಹ ಛಿದ್ರವಾಗಿತ್ತು. ಇದನ್ನು ಕಂಡು ರೊಚ್ಚಿಗೆದ್ದ ಸ್ಥಳೀಯರು, ಮರಳು ಟಿಪ್ಪರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

click me!