ರೈಲ್ವೆ ಸುರಕ್ಷತೆ ಬಗ್ಗೆ ಸಿಎಜಿ ವರದಿಯಲ್ಲಿ ಗಂಭೀರ ಆಕ್ಷೇಪ

By Anusha KbFirst Published Jun 5, 2023, 9:25 AM IST
Highlights

ಒಡಿಶಾದ ಬಾಲಸೋರ್‌ನಲ್ಲಿ ರೈಲ್ವೆ ದುರಂತ ಸಂಭವಿಸಲು ಸಿಗ್ನಲಿಂಗ್‌ ಹಾಗೂ ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ವೈಫಲ್ಯ ಕಾರಣ ಎಂಬ ಸಂಗತಿ ಹೊರಬಿದ್ದ ಬೆನ್ನಲ್ಲೇ ಕಳೆದ ವರ್ಷ ಮಹಾಲೇಖಪಾಲರು (ಸಿಎಜಿ) ಸಲ್ಲಿಸಿದ್ದ ವರದಿಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಇನ್ನೂ ಸಾಕಷ್ಟು ದೋಷಗಳನ್ನು ಪತ್ತೆಹಚ್ಚಿ ತಿಳಿಸಿರುವುದು ಬೆಳಕಿಗೆ ಬಂದಿದೆ.

ನವದೆಹಲಿ: ಒಡಿಶಾದ ಬಾಲಸೋರ್‌ನಲ್ಲಿ ರೈಲ್ವೆ ದುರಂತ ಸಂಭವಿಸಲು ಸಿಗ್ನಲಿಂಗ್‌ ಹಾಗೂ ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ವೈಫಲ್ಯ ಕಾರಣ ಎಂಬ ಸಂಗತಿ ಹೊರಬಿದ್ದ ಬೆನ್ನಲ್ಲೇ ಕಳೆದ ವರ್ಷ ಮಹಾಲೇಖಪಾಲರು (ಸಿಎಜಿ) ಸಲ್ಲಿಸಿದ್ದ ವರದಿಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಇನ್ನೂ ಸಾಕಷ್ಟು ದೋಷಗಳನ್ನು ಪತ್ತೆಹಚ್ಚಿ ತಿಳಿಸಿರುವುದು ಬೆಳಕಿಗೆ ಬಂದಿದೆ.

ರೈಲುಗಳು ಹಳಿತಪ್ಪುವುದಕ್ಕೆ ಸಂಬಂಧಿಸಿದಂತೆ 2022ರಲ್ಲಿ ಸಿಎಜಿ (CAG) ಸಲ್ಲಿಸಿದ್ದ ವರದಿಯಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿ, ವ್ಯವಸ್ಥೆಯಲ್ಲಿರುವ ಹಲವಾರು ದೋಷಗಳನ್ನು ಎತ್ತಿ ತೋರಿಸಲಾಗಿದೆ. ರೈಲು ಹಳಿ ತಪ್ಪಿದಾಗ ಸರಿಯಾಗಿ ತನಿಖೆ ನಡೆಸದೆ ಇರುವುದು, ಸರಿಯಾಗಿ ವರದಿ ಸಲ್ಲಿಸದೆ ಇರುವುದು, ರೈಲ್ವೆ ನಿಧಿಯಲ್ಲಿರುವ ಹಣವನ್ನು ಬಳಸದೆ ಇರುವುದು, ಹಳಿ ನವೀಕರಣವನ್ನು ಸರಿಯಾಗಿ ಮಾಡದಿರುವುದು, ಸುರಕ್ಷತೆಯನ್ನು ನೋಡಿಕೊಳ್ಳಲು ಸಾಕಷ್ಟು ಸಿಬ್ಬಂದಿ ಇಲ್ಲದಿರುವುದು ಹೀಗೆ ಹಲವಾರು ಸಮಸ್ಯೆಗಳನ್ನು (Problem) ತಿಳಿಸಲಾಗಿದೆ.

ರಾತ್ರಿಯೇ ರೈಲು ಸಂಚಾರ ಶುರು: ಭಾವು​ಕ​ರಾಗಿ ರೈಲಿ​ನತ್ತ ಕೈಬೀಸಿ, ಕೈಮು​ಗಿದ ಸಚಿವ ವೈಷ್ಣವ್‌

ದೇಶದಲ್ಲಿ 2017ರಿಂದ 2021ರ ನಡುವೆ 1127 ರೈಲುಗಳು ಹಳಿ ತಪ್ಪಿವೆ. ಅದರಲ್ಲಿ 422 ಪ್ರಕರಣಕ್ಕೆ ಎಂಜಿನಿಯರಿಂಗ್‌ ವಿಭಾಗ ಕಾರಣ. 171 ಪ್ರಕರಣಗಳಲ್ಲಿ ಹಳಿ ನಿರ್ವಹಣೆ ಸರಿಯಾಗಿ ಆಗಿರಲಿಲ್ಲ. 156 ಪ್ರಕರಣದಲ್ಲಿ ಸಿಬ್ಬಂದಿ ನಿಯಮ ಉಲ್ಲಂಘಿಸಿದ್ದಾರೆ. 275 ಪ್ರಕರಣಗಳಲ್ಲಿ ಆಪರೇಟಿಂಗ್‌ ವಿಭಾಗದ ತಪ್ಪು ಕಾಣಿಸಿದೆ. 289 ಪ್ರಕರಣಗಳು ಹಳಿ ನವೀಕರಣ ಕಾಮಗಾರಿಯ ಕಾರಣ ಸಂಭವಿಸಿವೆ. ಅನೇಕ ಅವಘಡಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಈ ಪೈಕಿ ಶೇ.63ರಷ್ಟುಪ್ರಕರಣದಲ್ಲಿ ಸರಿಯಾದ ಸಮಯಕ್ಕೆ ತನಿಖಾ ವರದಿಯನ್ನೇ ಸಲ್ಲಿಸಿಲ್ಲ. ಶೇ.49ರಷ್ಟುಪ್ರಕರಣದಲ್ಲಿ ತನಿಖಾ ವರದಿ ಸ್ವೀಕರಿಸುವುದು ತಡವಾಗಿದೆ. 1 ಲಕ್ಷ ಕೋಟಿ ರು. ಹಣವಿರುವ ರಾಷ್ಟ್ರೀಯ ರೇಲ್‌ ಸುರಕ್ಷಾ ಕೋಶದಿಂದ ರೈಲ್ವೆ ಸುರಕ್ಷತೆಗಾಗಿ ಹಣ ಖರ್ಚು ಮಾಡುವುದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಬಿಡುಗಡೆ ಮಾಡಿರುವ ಹಣವನ್ನು ಹಳಿ ನವೀಕರಣಕ್ಕಾಗಿ ಸರಿಯಾಗಿ ಬಳಕೆಯನ್ನೂ ಮಾಡುತ್ತಿಲ್ಲ ಎಂದು ಸಿಎಜಿ ವರದಿ ಹೇಳಿತ್ತು.

ಮುಖ್ಯವಾಗಿ ಅಪಘಾತಗಳ ತನಿಖೆಗೆ ಸಂಬಂಧಿಸಿದ ಕಾರ್ಯವಿಧಾನದಲ್ಲಿ ಲೋಪವಿದೆ ಎಂದು ಹೇಳಿದ್ದ ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಆದರೆ ಮುಂದೆ ಇದನ್ನು ಆಧರಿಸಿ ಕೈಗೊಂಡ ಕ್ರಮಗಳ ಬಗ್ಗೆ ರೈಲ್ವೆ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ.

ರೈಲು ದುರಂತದಲ್ಲಿ ಮೋದಿ ವೈಷ್ಣವ್ ಪ್ರಚಾರ ಗಿಮಿಕ್: ಖರ್ಗೆ ಆರೋಪ

click me!