
ಮಲಪ್ಪುರಂ(ಜೂ.02): ಮಾನವ ಕಾಡನ್ನು ಆಕ್ರಮಿಸಿ ನೆಲಸಮ ಮಾಡಿದ್ದು ಮಾತ್ರವಲ್ಲ, ಇರುವ ಕಾಡಿನ ಸಂಪತ್ತನ್ನು ದೋಚುತ್ತಿದ್ದಾನೆ. ಅಳಿದುಳಿದಿರುವ ಕಾಡಿನಲ್ಲಿ ವಾಸಿಸುತ್ತಿರುವ ವನ್ಯ ಜೀವಿಗಳು ಮನುಷ್ಯನ ಕ್ರೂರತೆಗೆ ಆಹಾರವಿಲ್ಲದೆ ಪರದಾಡುತ್ತಿದೆ. ಹೀಗಾಗಿ ಪ್ರತಿ ಬಾರಿ ಆನೆಗಳ ದಾಳಿ, ಚಿರತೆ ಪ್ರತ್ಯಕ್ಷ, ನರಕ್ಷಭಕ್ಷಕ ಹುಲಿ ಸೇರಿದಂತೆ ಹಲವು ರೀತಿಯಲ್ಲಿ ಸುದ್ದಿಗಳು ಬಿತ್ತರವಾಗುತ್ತಿರುವುದನ್ನು ನಾವು ಗಮಿಸಿದ್ದೇವೆ. ಹೀಗೆ ಆಹಾರ ಹುಡುಕಿ ನಾಡಿಗೆ ಬಂದ ಗರ್ಭಿಣಿ ಆನೆಯನ್ನು ದುರುಳರು ಕೊಂದೇ ಬಿಟ್ಟಿದ್ದಾರೆ.
ಕಾಡಿನಿಂದ ಕೆಟ್ಟ ವಾಸನೆ, ನೋಡಲು ಹೋದವರಿಗೆ ಕಂಡಿದ್ದು 110 ಆನೆಗಳ ಕೊಳೆತ ಶವ!
ಮಲಪ್ಪರುಂ ಜಿಲ್ಲೆಯ ಉತ್ತರ ಭಾಗದಲ್ಲಿ ಗರ್ಭಿಣಿ ಹೆಣ್ಣಾನೆ ಆಹಾರವಿಲ್ಲದೆ ನಾಡಿಗೆ ಆಗಮಿಸಿದೆ. ಈ ಗರ್ಭಿಣಿ ಆನೆ ಒಬ್ಬರನ್ನೂ ಗದರಿಸಿಲ್ಲ, ಯಾರ ತೋಟಕ್ಕೂ ದಾಳಿ ಮಾಡಿಲ್ಲ. ಒಂಟಿ ಹೆಣ್ಣಾನೆ ಊರಿಡಿ ಅಲೆದಾಡಿದರೂ ಸೂಕ್ತ ಆಹಾರ ಸಿಕ್ಕಿಲ್ಲ. ಇದೇ ವೇಳೆ ಗ್ರಾಮದ ದುರುಳರು ಅನಾನಸುವಿನ ಒಳಗೆ ಸ್ಫೋಟಕವಿಟ್ಟು ನೀಡಿದ್ದಾರೆ. ಹೊಟ್ಟೆಯಲ್ಲಿ ಕಂದಮ್ಮನ ಹೊತ್ತು ಆಹಾರವಿಲ್ಲದೆ ಅಲೆದಾಡಿದ ಆನೆ, ಏನನ್ನೂ ಯೋಚಿಸದೆ ಅನಾನಸನ್ನು ಸೊಂಡಿಲಿನಿಂದ ಎತ್ತಿ ಬಾಯಿಗಿಟ್ಟು ಜಗಿದಿದೆ.
ಆನೆ ಮರಿ ರಕ್ಷಿಸಲು ಕಾಲುವೆಗಿಳಿದಾತ ತನ್ನದೇ ಪ್ರಾಣ ಕಳೆದುಕೊಂಡ! .
ಸ್ಫೋಟಕವಿದ್ದ ಕಾರಣ ಆನೆಯ ದವಡೆಯಲ್ಲೇ ಪೈನಾಪಲ್ ಸ್ಫೋಟಗೊಂಡಿದೆ. ಸ್ಫೋಟಕದ ತೀವ್ರತೆಗೆ ಆನೆಯ ದವಡೆ, ಬಾಯಿ ಸಂಪೂರ್ಣ ಪುಡಿ ಪುಡಿಯಾಗಿದೆ. ನೋವಿನಿಂದ ನರಳಾಡಿದ ಆನೆ, ಗ್ರಾಮದಲ್ಲಿ ಅಲೆದಾಡಿದೆ. ಆದರೆ ಸಿಟ್ಟಿನಿಂದ ಯಾರ ಮೇಲೂ ದಾಳಿ ಮಾಡಿಲ್ಲ. ಅತ್ತ ಆಹಾರ ಜಗಿಯಲು ದವಡೆಯೇ ಇಲ್ಲದಾಗಿದೆ. ಕೊನೆಗೆ ನೋವು ತಾಳಲಾರದೆ ನದಿಯಲ್ಲಿ ಕಳೆದೊಂದು ವಾರದಿಂದಿಂದ ನಿಂತುಕೊಂಡೆ ನರಕವೇದನೆ ಅನುಭವಿಸಿ ಪ್ರಾಣಬಿಟ್ಟಿದೆ ಎಂದು ಅರಣ್ಯಾಧಿಕಾರಿ ಮೋಹನ್ ಕುಮಾರ್ ನೋವಿನಿಂದ ಹೇಳಿದ್ದಾರೆ.
ಆಹಾರಕ್ಕಾಗಿ ಬಂದ ಮೂಕ ಪ್ರಾಣಿಗೆ ಈ ರೀತಿ ಮಾಡುವುದು ಕೇರಳಕ್ಕೆ ಶೋಭೆಯಲ್ಲ. ಆನೆ ನಮ್ಮ ರಾಜ್ಯದ ಲಾಂಛನ. ಆನೆಗೆ ನಮ್ಮ ರಾಜ್ಯದಲ್ಲಿ ವಿಶೇಷ ಸ್ಥಾನಮಾನವಿದೆ. ಆದರೆ ದುರುಳರು ಮೂಕ ಪ್ರಾಣಿಗೆ ನರಕವೇದನೆ ನೀಡಿ ಕೊಂದೇ ಬಿಟ್ಟಿದ್ದಾರೆ ಎಂದರು. ವನ್ಯ ಜೀವಿಗಳ ತುರ್ತು ರಕ್ಷಣಾ ತಂಡದಲ್ಲಿರುವ ಅರಣ್ಯಾಧಿಕಾರಿ ಮೋಹನ್ ಕುಮಾರ್ಗೆ, ಈ ರೀತಿ ದವಡೆ ಸ್ಫೋಟಗೊಂಡ ಅನೆ ನದಿಯಲ್ಲಿ ನಿಂತಿದೆ ಅನ್ನೋ ಮಾಹಿತಿ ತಡವಾಗಿ ತಿಳಿದಿದೆ. ತಕ್ಷಣವೇ ರಕ್ಷಣಗೆ ಆಗಮಿಸಿದ ಮೋಹನ್ ಕುಮಾರ್ಗೆ ಆನೆಯನ್ನು ಉಳಿಸಲು ಸಾಧ್ಯವಾಗಿಲ್ಲ.
ಕೃಷಿಹೊಂಡಕ್ಕೆ ಬಿದ್ದ ಆನೆಯನ್ನು ರಕ್ಷಣೆ ಮಾಡುವ ವಿಡಿಯೋ ವೈರಲ್
ಆನೆಯ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಆನೆ ಗರ್ಭಿಣಿ ಅನ್ನೋ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ವೇಳೆ ಮೋಹನ್ ಕುಮಾರು ಹಾಗೂ ವೈದ್ಯರ ಕಣ್ಣುಗಳು ಒದ್ದೆಯಾಗಿತ್ತು. ಬಳಿಕ ಮೋಹನ್ ಕುಮಾರ್, ಆನೆಗೆ ಭಾವಪೂರ್ಣ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಲಾರಿ ಮೂಲಕ ಪ್ರಾಣಬಿಟ್ಟ ಆನೆಯನ್ನು ಮತ್ತೆ ಕಾಡಿಗೆ ಕರೆದೊಯ್ಯಿದ್ದಾರೆ. ಆನೆ ಹುಟ್ಟಿ ಬೆಳೆದ, ಆಡಿದ ಇದೇ ಕಾಡಿನಲ್ಲಿ ವಿದಾಯ ಹೇಳುವುದು ಸೂಕ್ತ ಎನಿಸಿತು. ಇದಕ್ಕಾಗಿ ಕಾಡಿನಲ್ಲಿ ಆನೆಯನ್ನು ಮಣ್ಣುಮಾಡಿದ್ದೇವೆ ಎಂದು ಮೋಹನ್ ಕುಮಾರ್ ಹೇಳಿದ್ದಾರೆ.
ಕಾಡಿನಿಂದ ಆಹಾರ ಹುಡುಕುತ್ತಾ ಅಥವಾ ಅಚಾನಕಕ್ಕಾಗಿ ನಾಡಿಗೆ ಬರುವ ಯಾವುದೇ ವನ್ಯಜೀವಿಗಳನ್ನು ಹಿಂಸಿಸಬೇಡಿ. ವನ್ಯ ಪ್ರಾಣಿಗಳು ಮಾನವರ ಭಯದಿಂದ ರಕ್ಷಣೆಗಾಗಿ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ. ಆದರೆ ಯಾವುದೇ ಕಾರಣಕ್ಕೂ ವನ್ಯ ಜೀವಿಗಳಿಗೆ ಹಿಂಸೆ ನೀಡಬೇಡಿ ಎಂದು ಮೋಹನ್ ಕುಮಾರ್ ಕೈಮುಗಿದು ಗ್ರಾಮದ ಜನರನ್ನು ಬೇಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ