
ನವದೆಹಲಿ: ಕೆನಡಾದಲ್ಲಿ ವಾಸಿಸುತ್ತಿರುವ ಖಲಿಸ್ತಾನಿ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನೂನ್ ಭಾರತವನ್ನು ಒಡೆದು ಹಲವು ದೇಶಗಳನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಭಾರತದಲ್ಲಿರುವ ಈತನ ಆಸ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಳೆದ ವಾರವಷ್ಟೇ ಜಪ್ತಿ ಮಾಡಿತ್ತು.
ಗುರ್ಪತ್ವಂತ್ ಸಿಂಗ್ ಪನ್ನೂನ್ (Gurpatwant Singh Pannoon) ‘ಸಿಖ್ ಫಾರ್ ಜಸ್ಟೀಸ್’ (Sikhs for Justice) ಸಂಘಟನೆಯ ಮುಖ್ಯಸ್ಥನಾಗಿದ್ದಾನೆ. ಈತ ಭಾರತವನ್ನು ಒಡೆದು ಸಿಖ್ಖರಿಗೆ ಪ್ರತ್ಯೇಕ ಖಲಿಸ್ತಾನ್ ದೇಶ ಕೊಡಿಸುವ ಉದ್ದೇಶಕ್ಕಾಗಿ ಕೆಲಸ ಮಾಡುವುದರ ಜೊತೆಗೆ ಜಮ್ಮು ಕಾಶ್ಮೀರದ ಮುಸ್ಲಿಮರಿಗೆ ‘ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಉರ್ದುಸ್ತಾನ್’ ಎಂಬ ದೇಶ ಸೃಷ್ಟಿಸುವುದಕ್ಕಾಗಿಯೂ ಸಂಚು ರೂಪಿಸಿದ್ದ. ಅದಕ್ಕಾಗಿ ಕಾಶ್ಮೀರದ (Jammu and Kashmir) ಮುಸ್ಲಿಂ ಯುವಕರನ್ನು ಸೆಳೆಯುತ್ತಿದ್ದ ಎಂದು ಎನ್ಐಎ ಮೂಲಗಳು ಹೇಳಿವೆ.
ಆಡಿಯೋ ಸಂದೇಶದ ಮೂಲಕ ಯುವಕರಿಗೆ ಗಾಳ:
ಪನ್ನೂನ್ ಕುರಿತು ಎನ್ಐಎ (NIA) ಸಿದ್ಧಪಡಿಸಿರುವ ದಾಖಲೆಗಳ ಪ್ರಕಾರ ಈತ ಆಡಿಯೋ ಸಂದೇಶಗಳು ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ಯುವಕರನ್ನು ತನ್ನ ಉದ್ದೇಶದತ್ತ ಆಕರ್ಷಿಸುತ್ತಿದ್ದ. ಬಳಿಕ ಭಾರತದಲ್ಲಿ ಅವರು ಭಯೋತ್ಪಾದಕ ದಾಳಿಗಳನ್ನು ನಡೆಸುವಂತೆ ಪ್ರಚೋದಿಸುತ್ತಿದ್ದ. 2020ರಲ್ಲಿ ಈತ ಭಯೋತ್ಪಾದಕ ಎಂದು ಕೇಂದ್ರ ಗೃಹ ಸಚಿವಾಲಯ (Union Home Ministry) ಘೋಷಿಸಿತ್ತು. ಬಳಿಕ ಅವನ ಬಂಧನಕ್ಕೆ ಎರಡು ಬಾರಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಭಾರತ ಮಾಡಿದ ಮನವಿಯನ್ನು ಇಂಟರ್ಪೋಲ್ ಸಂಸ್ಥೆ ‘ಮಾಹಿತಿ ಕೊರತೆಯ’ ಕಾರಣ ನೀಡಿ ತಿರಸ್ಕರಿಸಿತ್ತು.
ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ:
ಇತ್ತೀಚೆಗೆ ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್ನ (Hardeep Singh Nijhar) ಹತ್ಯೆ ವಿಷಯದಲ್ಲಿ ಭಾರತ-ಕೆನಡಾ ನಡುವೆ ಸಂಘರ್ಷ ಏರ್ಪಟ್ಟ ಬಳಿಕ ಪನ್ನೂನ್ ಕೆನಡಾದಲ್ಲಿರುವ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳಿಗೆ (Indian diplomatic officers) ಜೀವ ಬೆದರಿಕೆ ಕೂಡ ಒಡ್ಡಿದ್ದ.
ಯಾರೀತ ಗುರ್ಪತ್ವಂತ್ ಪನ್ನೂನ್?
1947ರಲ್ಲಿ ದೇಶ ವಿಭಜನೆ ವೇಳೆ ಪಾಕಿಸ್ತಾನದ ಖಾನ್ಕೋಟ್ ಎಂಬ ಹಳ್ಳಿಯಿಂದ ಪನ್ನೂನ್ನ ಕುಟುಂಬ ಅಮೃತಸರಕ್ಕೆ ಬಂದು ನೆಲೆಸಿತ್ತು. ಪನ್ನೂನ್ನ ತಂದೆ-ತಾಯಿ ಸಾವನ್ನಪ್ಪಿದ್ದು, ಒಬ್ಬ ಸೋದರ ಮಘವಂತ್ ಸಿಂಗ್ (Maghawant Singh) ವಿದೇಶದಲ್ಲಿ ನೆಲೆಸಿದ್ದಾನೆ. ಪನ್ನೂನ್ ಖಲಿಸ್ತಾನಿ ಉಗ್ರ ಸಂಘಟನೆಯಾದ ‘ಸಿಖ್ ಫಾರ್ ಜಸ್ಟೀಸ್’ಗೆ ಮುಖ್ಯಸ್ಥನಾಗಿದ್ದಾನೆ. ಈತನ ಮೇಲೆ ದೇಶದ್ರೋಹ ಸೇರಿದಂತೆ 16 ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.
ಇಂಡಿಯಾ ಗೇಟ್ನಲ್ಲಿ ಖಲಿಸ್ತಾನಿ ಧ್ವಜ ಹಾರಿಸಿದರೆ 20 ಕೋಟಿ ರು. ಬಹುಮಾನ ನೀಡುವುದಾಗಿಯೂ, 2021ರಲ್ಲಿ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸುವುದನ್ನು ತಡೆದರೆ 8 ಕೋಟಿ ರು. ನೀಡುವುದಾಗಿಯೂ ಈತ ಘೋಷಿಸಿದ್ದ. ದೆಹಲಿ, ಪಂಜಾಬ್, ಉತ್ತರಾಖಂಡ, ಹಿಮಾಚಲ, ಹರ್ಯಾಣ ಸೇರಿದಂತೆ ದೇಶದ ಅನೇಕ ಕಡೆ ಖಲಿಸ್ತಾನಿ ಪೋಸ್ಟರ್ಗಳನ್ನು ಅಂಟಿಸಿದ ಪ್ರಕರಣಗಳೂ ಇವನ ಮೇಲಿವೆ. ಕಳೆದ ವಾರ ಚಂಡೀಗಢ ಹಾಗೂ ಅಮೃತಸರದಲ್ಲಿ ಈತನ ಮನೆ, ಕೃಷಿ ಜಮೀನು ಮುಂತಾದ ಸ್ಥಳಗಳ ಮೇಲೆ ಎನ್ಐಎ ದಾಳಿ ನಡೆಸಿ ಅವುಗಳನ್ನು ಜಪ್ತಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ