
ಇಟಾನಗರ (ಏಪ್ರಿಲ್ 11, 2023): ಅರುಣಾಚಲ ಪ್ರದೇಶದ 11 ಪ್ರದೇಶಗಳ ಹೆಸರನ್ನು ಚೀನಾ ಬದಲಾಯಿಸಿ ಉದ್ಧಟತನ ಮೆರೆದ ವಾರದಲ್ಲೇ, ಆ ಗಡಿ ರಾಜ್ಯಕ್ಕೆ ಸೋಮವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ನಮ್ಮ ಭೂಮಿಯ ಒಂದು ಸೂಜಿಮೊನೆಯಷ್ಟು ಭಾಗವನ್ನೂ ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲ’ ಎಂದು ಗುಡುಗಿದ್ದಾರೆ.
ಅರುಣಾಚಲ ಪ್ರದೇಶ (Arunachal Pradesh) ತನ್ನದು ಎಂಬ ಹಟ ಮುಂದುವರಿಸಿರುವ ಚೀನಾ (China) , ‘ಅಮಿತ್ ಶಾ (Amit Shah) ಭೇಟಿಯಿಂದ ಪ್ರಾದೇಶಿಕ ಶಾಂತಿಗೆ ಭಂಗ ಬರುತ್ತದೆ’ ಎಂದು ಸೋಮವಾರ ಬೆಳಗ್ಗೆಯಷ್ಟೇ ಹೇಳಿತ್ತು. ಇದಕ್ಕೆ ಅರುಣಾಚಲದ ಗಡಿ ಗ್ರಾಮ ಕಿಬಿತೂದಲ್ಲಿ ‘ವೈಬ್ರಂಟ್ ವಿಲೇಜಸ್’ (Vibrant Villages) ಯೋಜನೆ ಪ್ರಾರಂಭಿಸಿ ಮಾತನಾಡಿದ ಅಮಿತ್ ಶಾ ತಿರುಗೇಟು ನೀಡಿ, ‘ಯಾರೂ ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಪ್ರಶ್ನಿಸುವಂತಿಲ್ಲ. ನಮ್ಮ ಭೂಮಿಯನ್ನು (Land) ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ’ ಎಂದರು.
ಇದನ್ನು ಓದಿ: ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರು ನಾಮಕರಣ ಮಾಡಿದ ಚೀನಾ: ಮತ್ತೆ ನರಿ ಬುದ್ಧಿ ಪ್ರದರ್ಶಿಸಿದ ಜಿನ್ಪಿಂಗ್
2014ರ ಮೊದಲು, ಇಡೀ ಈಶಾನ್ಯ (North East) ಪ್ರದೇಶವನ್ನು ತೊಂದರೆಗೊಳಗಾದ ಪ್ರದೇಶವೆಂದು ಕರೆಯಲಾಗುತ್ತಿತ್ತು. ಆದರೆ ಕಳೆದ 9 ವರ್ಷಗಳಲ್ಲಿ, ಪ್ರಧಾನಿ ಮೋದಿ (PM Narendra Modi) ಅವರ ನೀತಿಗಳಿಂದ ಈಶಾನ್ಯ ಅಭಿವೃದ್ಧಿ ಹೊಂದಿದೆ. ಈಶಾನ್ಯವನ್ನು ಈಗ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರದೇಶವೆಂದು ಪರಿಗಣಿಸಲಾಗಿದೆ’ ಎಂದು ಅಮಿತ್ ಶಾ ಹೇಳಿದರು.
‘ಅಂದು ಕಿಬಿತೂವನ್ನು ದೇಶದ ಕೊನೆಯ ಗ್ರಾಮ ಎನ್ನಲಾಗುತ್ತಿತ್ತು. ಇಂದು ದೇಶದ ಮೊದಲ ಗ್ರಾಮ ಎಂದು ಕರೆಯುತ್ತೇವೆ. ಇದು ಮೋದಿ ಕೈಗೊಂಡ ಅಭಿವೃದ್ಧಿ ಕೆಲಸಗಳ ದ್ಯೋತಕ’ ಎಂದು ಅಮಿತ್ ಶಾ ಶ್ಲಾಘಿಸಿದರು.
ಸೇನೆ (Army) ಮತ್ತು ಗಡಿ ಪೊಲೀಸರನ್ನು (Border POlice) ಶ್ಲಾಘಿಸಿದ ಅವರು, ‘ನಮ್ಮ ಐಟಿಬಿಪಿ ಯೋಧರು (ITBP Soldiers) ಮತ್ತು ಸೇನೆಯು ನಮ್ಮ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾರಣ ಇಂದು ಇಡೀ ದೇಶದ ಜನರು, ಅವರವರ ಮನೆಗಳಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗಿದೆ. ಯಾರು ಬೇಕಾದರೂ ಭಾರತದ ಭೂಮಿಯನ್ನು ಅತಿಕ್ರಮಿಸುವ ದಿನಗಳು ಕಳೆದುಹೋಗಿವೆ. ಇನ್ನು ನಮ್ಮ ಭೂಮಿಯನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ, ಏಕೆಂದರೆ ಐಟಿಬಿಪಿ ಮತ್ತು ಭಾರತೀಯ ಸೇನೆ ನಮ್ಮ ಬಳಿ ಇದೆ. ಗಡಿಗಳು, ಎಲ್ಲ ಯೋಧರ ತ್ಯಾಗ ಬಲಿದಾನಗಳಿಗೆ ನಾನು ನಮಸ್ಕರಿಸುತ್ತೇನೆ. 1962ರಲ್ಲಿ ಇಲ್ಲಿ ಭೂಮಿಯನ್ನು ಅತಿಕ್ರಮಿಸಲು ಬಂದವರು ನಿಮ್ಮ ದೇಶಪ್ರೇಮದಿಂದಾಗಿ ಹಿಂತಿರುಗಬೇಕಾಯಿತು’ ಎಂದು ಕೊಂಡಾಡಿದರು.
ಇದನ್ನೂ ಓದಿ: Cordecyps Fungus: ನೈಸರ್ಗಿಕ ವಯಾಗ್ರಾ ಕಳ್ಳತನಕ್ಕಾಗಿ ಅರುಣಾಚಲ ಗಡಿಗೆ ನುಗ್ಗಿದ್ದ ಚೀನಾ ಸೈನಿಕರು..!
ಇದನ್ನೂ ಓದಿ: ಅರುಣಾಚಲ ಪ್ರದೇಶದ ಯಾಂಗ್ಟ್ಸೆ ಪ್ರದೇಶದ ಮೇಲೆ ಚೀನಾ ಕಣ್ಣು ಹಾಕಿರುವುದಕ್ಕೆ ಇದೇ ಕಾರಣ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ