ಬಲವಂತದ ಮತಾಂತರ ದೇಶಕ್ಕೆ ಅಪಾಯ: ಸುಪ್ರೀಂ

By Kannadaprabha NewsFirst Published Nov 15, 2022, 3:35 AM IST
Highlights
  • ಬಲವಂತದ ಮತಾಂತರದೇಶಕ್ಕೆ ಅಪಾಯ: ಸುಪ್ರೀಂ
  •  ಹತ್ತಿಕ್ಕದಿದ್ದರೆ ಭವಿಷ್ಯದಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿ ಬರುತ್ತೆ
  •  ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ನಿಲ್ಲಿಸಬೇಕು:ಕೋರ್ಟ್

ಪಿಟಿಐ ನವದೆಹಲಿ ಬಲವಂತ ಹಾಗೂ ಆಮಿಷದ ಮತಾಂತರ ಬಹಳ ಗಂಭೀರ ವಿಚಾರ. ಇದರಿಂದ ರಾಷ್ಟ್ರೀಯ ಭದ್ರತೆಗೆ ಆತಂಕವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಅದನ್ನು ತಡೆಯಲು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೆ ನ.22ರೊಳಗೆ ಈ ಕುರಿತು ಪ್ರತಿಕ್ರಿಯೆ ನೀಡಬೇಕೆಂದು ತಾಕೀತು ಮಾಡಿದೆ.

‘ಮೋಸ, ಆಮಿಷ ಹಾಗೂ ಬಲವಂತದಿಂದ ಮಾಡುವ ಧಾರ್ಮಿಕ ಮತಾಂತರವನ್ನು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತಡೆಯಲೇಬೇಕು. ಇಂತಹ ಮತಾಂತರಗಳು ಮುಂದೆ ರಾಷ್ಟ್ರೀಯ ಭದ್ರತೆ ಹಾಗೂ ಜನರ ಧಾರ್ಮಿಕ ಹಕ್ಕಿಗೆ ಧಕ್ಕೆ ತರುತ್ತವೆ. ಇವುಗಳನ್ನು ತಡೆಯದಿದ್ದರೆ ಭವಿಷ್ಯದಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿ ಉದ್ಭವಿಸಲಿದೆ’ ಎಂದು ಸುಪ್ರೀಂ ಕೋರ್ಟ್ನ ಎಂ.ಆರ್‌.ಶಾ ಹಾಗೂ ಹಿಮಾ ಕೊಹ್ಲಿ ಅವರ ಪೀಠ ತೀಕ್ಷ$್ಣವಾಗಿ ಹೇಳಿದೆ.

ಮತಾಂತರ ನಿಷೇಧ ಕಾನೂನು ಜಾರಿಗೆ ಬಂದಿದ್ರೂ, ಮರ್ಮಾಂಗದ ತುದಿ ಕತ್ತರಿಸಿ ಬಲವಂತದ ಮತಾಂತರ!

ಕೋರ್ಟ್ ಹೇಳಿದ್ದೇನು?

  • ಬಲವಂತ ಹಾಗೂ ಆಮಿಷದ ಮತಾಂತರ ಬಹಳ ಗಂಭೀರ ವಿಚಾರಗಳು
  • ಇಂತಹ ಮತಾಂತರ ನಡೆಸುವುದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ
  • ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇದೆ, ಬಲವಂತದ ಮತಾಂತರವಲ್ಲ
  • ಸರ್ಕಾರ ಈ ವಿಷಯದಲ್ಲಿ ಏನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಬೇಕು
  • ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಚ್‌ನಿಂದ ಸೂಚನೆ
  • ದೇಶದಲ್ಲಿ ಬಲವಂತದ ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ
  •  ಅದನ್ನು ತಡೆಯಬೇಕು ಎಂದು ಕೋರಿದ್ದ ಅರ್ಜಿದಾರ ಅಶ್ವಿನಿಕುಮಾರ್‌

 

ದೇಶದಲ್ಲಿ ಬಲವಂತ ಹಾಗೂ ಆಮಿಷದ ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದನ್ನು ತಡೆಯಬೇಕು ಎಂದು ನ್ಯಾಯವಾದಿ ಅಶ್ವಿನಿಕುಮಾರ್‌ ಉಪಾಧ್ಯಾಯ ಎಂಬುವರು ಸುಪ್ರೀಂಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಪೀಠ, ಕೇಂದ್ರ ಸರ್ಕಾರ ಈ ಕುರಿತು ಯಾವ ಕ್ರಮ ಕೈಗೊಳ್ಳಲಿದೆ ಎಂಬ ಮಾಹಿತಿ ಬಯಸಿ, ಮುಂದಿನ ವಿಚಾರಣೆ ನ.28ಕ್ಕೆ ನಿಗದಿಪಡಿಸಿತು

ಮತಾಂತರ ನಡೆಯುತ್ತಿರುವುದು ನಿಜ-ಕೇಂದ್ರ:

ಬಲವಂತದ ಧಾರ್ಮಿಕ ಮತಾಂತರ ತಡೆಯಲು ಕೇಂದ್ರ ಸರ್ಕಾರ ಏನು ಮಾಡಲಿದೆ ಎಂದು ಸುಪ್ರೀಂಕೋರ್ಚ್‌ ಪ್ರಶ್ನಿಸಿದಾಗ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ದೇಶದಲ್ಲಿ ಬಲವಂತದ ಮತಾಂತರ ತಡೆಯಲು ಒಡಿಶಾ ಸರ್ಕಾರ ಹಾಗೂ ಮಧ್ಯಪ್ರದೇಶ ಸರ್ಕಾರದ ಎರಡು ಕಾಯ್ದೆಗಳಿವೆ. ಆದರೂ ಗುಡ್ಡಗಾಡು ಪ್ರದೇಶಗಳಲ್ಲಿ ಇಂತಹ ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಎಷ್ಟೋ ಸಲ ತಮ್ಮ ಧಾರ್ಮಿಕ ಹಕ್ಕಿನ ಹರಣವಾಗುತ್ತಿರುವುದು ಮತ್ತು ಇದೊಂದು ಕ್ರಿಮಿನಲ್‌ ಅಪರಾಧ ಎಂಬುದು ಮತಾಂತರವಾಗುತ್ತಿರುವವರಿಗೆ ಗೊತ್ತೇ ಇರುವುದಿಲ್ಲ’ ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕೋರ್ಚ್‌, ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆಯೇ ಹೊರತು ‘ಬಲವಂತದ ಮತಾಂತರದಿಂದ ಧಾರ್ಮಿಕ ಸ್ವಾತಂತ್ರ್ಯ’ ಎಂಬುದಿಲ್ಲ. ಬಲವಂತದ ಮತಾಂತರಗಳು ನಡೆಯುತ್ತಿರುವುದು ನಿಜವಾಗಿದ್ದರೆ ಅದು ಬಹಳ ಗಂಭೀರ ವಿಚಾರ. ಅಂತಿಮವಾಗಿ ಅದು ದೇಶದ ಭದ್ರತೆಗೆ ಹಾಗೂ ಜನರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ. ಹೀಗಾಗಿ ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಹಾಗೂ ಬಲವಂತದ ಮತಾಂತರ ತಡೆಯಲು ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ತಿಳಿಸಬೇಕು ಎಂದು ಹೇಳಿತು.

 

ತಂದೆಯ ಸಾವಿನ ಬಗ್ಗೆ ವೆಲ್ಲೂರು ಜೈಲಲ್ಲಿ ಪ್ರಿಯಾಂಕಾ ನನ್ನ ಪ್ರಶ್ನೆ ಮಾಡಿದ್ದರು: ನಳಿನಿ ಶ್ರೀಹರನ್‌!

ಇದು ಅಪರಾಧ ಅಂತ ಹಲವು ಜನರಿಗೆ ತಿಳಿದಿಲ್ಲ

ದೇಶದ ಕೆಲ ರಾಜ್ಯಗಳಲ್ಲಿ ಕಾಯ್ದೆಗಳಿದ್ದರೂ ಗುಡ್ಡಗಾಡು ಪ್ರದೇಶಗಳಲ್ಲಿ ಬಲವಂತದ, ಆಮಿಷದ ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಎಷ್ಟೋ ಸಲ ತಮ್ಮ ಧಾರ್ಮಿಕ ಹಕ್ಕಿನ ಹರಣವಾಗುತ್ತಿರುವುದು ಮತ್ತು ಇದೊಂದು ಕ್ರಿಮಿನಲ್‌ ಅಪರಾಧ ಎಂಬುದು ಮತಾಂತರವಾಗುತ್ತಿರುವವರಿಗೆ ಗೊತ್ತೇ ಇರುವುದಿಲ್ಲ.

- ಕೇಂದ್ರ ಸರ್ಕಾರ

click me!