
ರಾಂಚಿ: ಜಾರ್ಖಂಡದ ಪಲಾಮು ಹುಲಿ ಸಂರಕ್ಷಿತಾರಣ್ಯದಲ್ಲಿ (ಪಿಟಿಆರ್) ವ್ಯಾಘ್ರಗಳಿಗೆ ಆಹಾರ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಿಂದ ಕಾಡೆಮ್ಮೆ, ಜಿಂಕೆ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಸ್ತುತ ಪಿಟಿಆರ್ನಲ್ಲಿ 1.5ರಿಂದ 4 ವರ್ಷದ ಒಳಗಿನ 33 ಹೆಣ್ಣು, 25 ಗಂಡು ಹಾಗೂ 10 ಮರಿ ಸೇರಿ 68 ಎಮ್ಮೆಗಳಿವೆ.
ಹುಲಿಗಳ ಹೊಟ್ಟೆತಿಂಬಿಸಲು ಅವು ಸಾಕಾಗದ ಹಿನ್ನೆಲೆಯಲ್ಲಿ, 50 ಕಾಡು ಕೋಣಗಳನ್ನು ಮಧ್ಯಪ್ರದೇಶದಿಂದ ಕರೆತರಲು ಯೋಜಿಸಲಾಗಿದೆ. 1974ರಲ್ಲಿ ಈ ಪ್ರದೇಶದಲ್ಲಿ 1500 ಕಾಡೆಮ್ಮೆಗಳಿದ್ದವು. ಆದರೆ ವರ್ಷಗಳು ಉರುಳಿದಂತೆ ಅವುಗಳ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ.
ಅತ್ತ ಹುಲಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳಿಗೆ ಆಹಾರವಾಗಿ ನೀಡಲು ಕಾಡುಕೋಣ ಮತ್ತು ಜಿಂಕೆಗಳನ್ನು ರಫ್ತು ಮಾಡಲು ಮಧ್ಯ ಪ್ರದೇಶದ ಅಧಿಕಾರಿಗಳು ಒಪ್ಪಿದ್ದಾರೆ. ಆದರೆ ಕೇಂದ್ರ ಸರ್ಕಾರದ ಅನುಮತಿಯೂ ಬೇಕಿದ್ದು, ಅದಕ್ಕಾಗಿ ಮನವಿ ಸಲ್ಲಿಸಲಾಗಿದೆ. ಪ್ರಸ್ತುತ ಸಂರಕ್ಷಿತ ಪ್ರದೇಶದಲ್ಲಿ 7 ಹುಲಿಗಳು ಇವೆ ಎನ್ನಲಾಗಿದೆ.
ಇದನ್ನೂ ಓದಿ: ವಿವಾದಕ್ಕೆ ಕಾರಣವಾದ ಕೇಂದ್ರ ಸರ್ಕಾರದ ನಿರ್ಧಾರ; ಅಗ್ನಿವೀರರ ಭವಿಷ್ಯ ಮುಂದೇನು?
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆ ದಿನಗಳು ಬಾಕಿ ಉಳಿದಿರುವ ಹೊತ್ತಿನಲ್ಲಿಯೇ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೆಸರು ಎರಡು ರಾಜ್ಯಗಳ ಮತಪಟ್ಟಿಯಲ್ಲಿದೆ ಎಂಬ ಆರೋಪ ಕೇಳಿಬಂದಿದೆ. ಬಿಹಾರದ ಕಾರ್ಗಹಾರ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಶಾಂತ್ ಮತದಾರರಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮತ್ತೊಂದೆಡೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಕ್ಷೇತ್ರವಾದ ಭಬಾನಿಪುರದಲ್ಲೂ ಪಿಕೆ ಹೆಸರಿದೆ.
ಈ ಬಗ್ಗೆ ಪ್ರಶಾಂತ್ ಕಿಶೋರ್ ಪ್ರತಿಕ್ರಿಯಿಸಿದ್ದು, ‘ ಎರಡು ಕ್ಷೇತ್ರಗಳ ಪಟ್ಟಿಯಲ್ಲಿ ಹೆಸರಿರುವುದು ಸತ್ಯ. ಇದು ಚುನಾವಣಾ ಆಯೋಗದ ನಿರ್ಲಕ್ಷ್ಯದಿಂದ ನಡೆದಿದೆ’ ಎಂದಿದ್ದಾರೆ, ಆದರೆ ಇತ್ತ ಚುನಾವಣಾ ಆಯೋಗ, ‘ಎರಡು ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಹೆಸರು ಹೇಗೆ ನೋಂದಣಿ ಆಯಿತು’ ಎಂದು ಸ್ಪಷ್ಟನೆ ಕೇಳಿ ಪಿಕೆಗೆ ನೋಟಿಸ್ ನೀಡಿದೆ.
ಇದನ್ನೂ ಓದಿ: ಸುಳ್ಳು ಕೇಸಲ್ಲಿ ಶಿಕ್ಷೆಯಾಗಿ ಗುರಿಯಾದವರಿಗೆ ಪರಿಹಾರ ನೀಡಲು ಸಾಧ್ಯವೇ? ಸುಪ್ರೀಂ ಕೋರ್ಟ್
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಅವರ ಮಾಜಿ ಅಳಿಯ, ನಟ ಧನುಷ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಬೆದರಿಕೆ ಸಂದೇಶವನ್ನು ಅಪರಿಚಿತರು ಇಮೇಲ್ ಮೂಲಕ ತಮಿಳುನಾಡು ಪೊಲೀಸ್ ಮಹಾ ನಿರ್ದೇಶಕರಿಗೆ ಕಳುಹಿಸಿರುವ ಘಟನೆ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತೇನಾಂಪೇಟೆ ಪೊಲೀಸರು, ‘ಅ.27 ರಂದು ಬೆಳಗ್ಗೆ 8.30ರ ಸುಮಾರಿಗೆ ಅಪರಿಚಿತರು ಮೊದಲು ರಜನೀಕಾಂತ್ ನಿವಾಸಕ್ಕೆ ಬಾಂಬ್ ಇಡಲಾಗಿದೆ ಎನ್ನುವ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಅದೇ ದಿನ ಸಂಜೆ 6.30 ಸುಮಾರಿಗೆ ರಜನಿ ಮನೆಗೆ ಮತ್ತೆ ಬೆದರಿಕೆ ಬಂದಿದೆ. ಆ ಬಳಿಕ ಧನುಷ್ ಅವರ ಮನೆಯಲ್ಲಿಯೂ ಬಾಂಬ್ ಇಡಲಾಗಿದೆ ಎನ್ನುವ ಸಂದೇಶ ಬಂದಿದೆ. ಆದರೆ ಇಬ್ಬರೂ ಪೊಲೀಸರ ನೆರವನ್ನು ನಿರಾಕರಿಸಿದರು’ ಎಂದರು.
ಇದನ್ನೂ ಓದಿ: ಆಗಸಕ್ಕೆ ಭಾರತದ ರೆಕ್ಕೆ: ಬೆಂಗಳೂರಿನಎಚ್ಎಎಲ್ನಿಂದ ರಷ್ಯಾ ಜೊತೆ ಐತಿಹಾಸಿಕ ಮಹತ್ವದ ಒಪ್ಪಂದ
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ಭಾರತದ ದೆಹಲಿಯನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿ ಗಳಿಸಿದೆ. ಇಲ್ಲಿನ ವಾಯುಗುಣಮಟ್ಟವು 312 ಎಕ್ಯುಐ ಇದ್ದು, ಇದು ವಿಪರೀತ ಅಪಾಯದ ಗಡಿ ದಾಟಿದೆ ಎಂದು ಐಕ್ಯೂ ಏರ್ ಎಂಬ ಖಾಸಗಿ ಹವಾಮಾನ ಸಂಸ್ಥೆಯು ತಿಳಿಸಿದೆ.
ಕಳೆದ ವಾರ ಅ.22ರಿಂದ 25ರವರೆಗೆ 412ರಲ್ಲಿದ್ದ ವಾಯುಗುಣಮಟ್ಟವು ಕೊಂಚ ಸುಧಾರಿಸಿತಾದರೂ, ಮತ್ತೆ ಹದಗೆಟ್ಟಿದೆ. ವಾಹನಗಳ ಸಂಚಾರ, ಕಾರ್ಖಾನೆ ಹೊಗೆ, ಹೂಳು ಸುಡಿವಿಕೆಯು ಗುಣಮಟ್ಟ ಕುಗ್ಗುವಿಕೆಗೆ ಕಾರಣವಾಗಿದೆ. ಪಿಎಂ 2.5 ಎಂಬ ಅಂಶವು ಪ್ರತಿ ಕ್ಯೂಬಿಕ್ ಮೀಟರ್ಗೆ 19.5 ಮೈಕ್ರೋಗ್ರಾಂ ಇದ್ದು, ಇದು ಭಾರಿ ಅಪಾಯ ಎಂದು ಸಂಸ್ಥೆ ಎಚ್ಚರಿಸಿದೆ.
ಇದನ್ನೂ ಓದಿ: ಮೋಂಥಾ ಚಂಡಮಾರುತ: ಕರಾವಳಿ ಭಾಗದಲ್ಲಿ ಕರಾಳ ರಾತ್ರಿ, 90 ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ರಫೇಲ್ ಯುದ್ಧ ವಿಮಾನದಲ್ಲಿ ಸಂಚಾರ ನಡೆಸಲಿದ್ದಾರೆ. ಹರ್ಯಾಣದ ಅಂಬಾಲದಲ್ಲಿರುವ ವಾಯುನೆಲೆಯಿಂದ ಮುರ್ಮು ಅವರು ಈ ಸಂಚಾರ ನಡೆಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. 2023ರ ಏ.8ರಂದು ರಾಷ್ಟ್ರಪತಿ ಮುರ್ಮು ಅವರು ಅಸ್ಸಾಂನ ತೇಜ್ಪುರ ವಾಯುನೆಲೆಯಿಂದ ಸುಖೋಯ್ 30 ಎಂಕೆಐ ಯುದ್ಧವಿಮಾನದಲ್ಲಿ ಸವಾರಿ ಮಾಡಿದ್ದರು. ಈ ಮೂಲಕ ಈ ವಿಮಾನ ಏರಿದ 2ನೇ ಮಹಿಳಾ ಮತ್ತು 3ನೇ ರಾಷ್ಟ್ರಪತಿಯಾಗಿದ್ದರು. ಬುಧವಾರ ರಫೇಲ್ ಯುದ್ಧವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಮೊದಲ ರಾಷ್ಟ್ರಪತಿಯಾಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ