ಮೋದಿ ಹಿಂಬದಿ ಮಿರರ್‌ ಮಾತ್ರ ನೋಡೋದ್ರಿಂದ ಕಾರು ಅಪಘಾತವಾಗಿದೆ: ಒಡಿಶಾ ರೈಲು ದುರಂತದ ಬಗ್ಗೆ ರಾಹುಲ್‌ ಗಾಂಧಿ ವ್ಯಾಖ್ಯಾನ..

By BK AshwinFirst Published Jun 5, 2023, 10:50 AM IST
Highlights

ರೈಲು ಅಪಘಾತ ಏಕೆ ಸಂಭವಿಸಿತು ಎಂದು ಬಿಜೆಪಿಯವರನ್ನು ಕೇಳಿ, ಮತ್ತು ಅವರು ಇದನ್ನು 50 ವರ್ಷಗಳ ಹಿಂದೆ ಕಾಂಗ್ರೆಸ್ ಮಾಡಿದೆ ಎಂದು ಹೇಳುತ್ತಾರೆ ಎಂದು ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

ನವದೆಹಲಿ (ಜೂನ್ 5, 2023): ಅಮೆರಿಕ ಪ್ರವಾಸದಲ್ಲಿರೋ ಮಾಜಿ ಸಂಸದ ರಾಹುಲ್‌ ಗಾಂಧಿ ಒಡಿಶಾ ರೈಲು ದುರಂತದ ಬಗ್ಗೆ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕನಿಷ್ಠ 275 ಜನರನ್ನು ಬಲಿತೆಗೆದುಕೊಂಡ ಒಡಿಶಾ ತ್ರಿವಳಿ ರೈಲು ಅಪಘಾತದ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ನಾಯಕ, ಬಿಜೆಪಿ ಯಾವಾಗಲೂ ಹಿಂತಿರುಗಿ ನೋಡುತ್ತದೆ ಮತ್ತು ಆಪಾದನೆಯನ್ನು ಬೇರೆಯವರ ಮೇಲೆ ಹಾಕುತ್ತದೆ ಎಂದು ನ್ಯೂಯಾರ್ಕ್‌ನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ರೀತಿ ಹೇಳಿದ್ದಾರೆ. 

"ನೀವು ಅವರನ್ನು (ಬಿಜೆಪಿ) ಏನು ಕೇಳಿದರೂ, ಅವರು ಹಿಂತಿರುಗಿ ನೋಡುತ್ತಾರೆ ಮತ್ತು ಆರೋಪವನ್ನು ಬೇರೆಯವರ ಮೇಲೆ ಹೊರಿಸುತ್ತಾರೆ. ರೈಲು ಅಪಘಾತ ಏಕೆ ಸಂಭವಿಸಿತು ಎಂದು ಅವರನ್ನು ಕೇಳಿ, ಮತ್ತು ಅವರು ಇದನ್ನು 50 ವರ್ಷಗಳ ಹಿಂದೆ ಕಾಂಗ್ರೆಸ್ ಮಾಡಿದೆ ಎಂದು ಹೇಳುತ್ತಾರೆ ಎಂದು ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಸಹ ಕೇವಲ ಹಿಂದಿನದನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಿದರು.

ಇದನ್ನು ಓದಿ: ವಿಧ್ವಂಸಕ ಕೃತ್ಯವೋ? ಅಪಘಾತವೋ?: ಒಡಿಶಾ ರೈಲು ದುರಂತದ ಹಿಂದಿನ ಸತ್ಯವೇನು..

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ರೈಲು ದುರಂತದ ಬಗ್ಗೆಯೂ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ಆ ವೇಳೆ ಅಂದಿನ ರೈಲ್ವೆ ಸಚಿವರು ನೈತಿಕ ಹೊಣೆ ಹೊತ್ತು ಕಚೇರಿಯಿಂದ ಕೆಳಗಿಳಿದಿದ್ದರು. ಈ ಮೂಲಕ ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಆಗ್ರಹಿಸಿರುವ ಸುಳಿವು ನೀಡಿದ್ದಾರೆ. ತಮ್ಮ ಪಕ್ಷವು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದೂ ಅವರು ಹೇಳಿದರು.

"ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈಲು ಅಪಘಾತ ಸಂಭವಿಸಿದಾಗ, ಕಾಂಗ್ರೆಸ್ ಎದ್ದುನಿಂತು "ಈಗ ರೈಲು ಅಪಘಾತಕ್ಕೀಡಾಗಲು ಬ್ರಿಟಿಷರು ಕಾರಣ ಎಂದು ಹೇಳಲಿಲ್ಲ.  ಕಾಂಗ್ರೆಸ್ ಸಚಿವರು "ಇದು ನನ್ನ ಜವಾಬ್ದಾರಿ ಮತ್ತು ನಾನು ರಾಜೀನಾಮೆ ನೀಡುತ್ತೇನೆ" ಎಂದು ಹೇಳಿದರು. ಇದು ನನಗೆ ನೆನಪಿದೆ’’ ಎಂದು ಕಾಂಗ್ರೆಸ್ ಸಚಿವರನ್ನು ಹೆಸರಿಸದೆ ರಾಹುಲ್‌ ಗಾಂಧಿ ಹೇಳಿದರು.

ಇದನ್ನೂ ಓದಿ: ರೈಲು ಹಳಿ ಮೇಲೆ ಟೈರ್‌ ಇಟ್ಟ ಕಿಡಿಗೇಡಿಗಳು: ತಮಿಳುನಾಡಲ್ಲಿ ತಪ್ಪಿದ ಮತ್ತೊಂದು ಭೀಕರ ರೈಲು ದುರಂತ!

ಬಳಿಕ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಾಜಿ ಕಾಂಗ್ರೆಸ್ ಸಂಸದ, "ಪ್ರಧಾನಿ ಭಾರತೀಯ ಕಾರನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರು ಹಿಂಬದಿಯ ಕನ್ನಡಿಯನ್ನು ಮಾತ್ರ ನೋಡುತ್ತಾರೆ" ಎಂದು ಹೇಳಿದರು. "ಅವರು (ಪ್ರಧಾನಿ ನರೇಂದ್ರ ಮೋದಿ) ಕಾರನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ ... ಭಾರತೀಯ ಕಾರು ಮತ್ತು ಅವರು ಹಿಂಬದಿಯ ಕನ್ನಡಿಯಲ್ಲಿ ನೋಡುತ್ತಾರೆ. ನಂತರ ಈ ಕಾರು ಏಕೆ ಕ್ರ್ಯಾಶ್ ಆಗುತ್ತಿದೆ, ಮುಂದಕ್ಕೆ ಚಲಿಸುತ್ತಿಲ್ಲ ಎಂದು ಅವರಿಗೆ ಅರ್ಥವಾಗುತ್ತಿಲ್ಲ’’ ಎಂದು ವ್ಯಂಗ್ಯವಾಡಿದ್ದಾರೆ.

ಹಾಗೆ, ಬಿಜೆಪಿ, ಆರ್‌ಎಸ್‌ಎಸ್‌ ಎರಡರದೂ ಅದೇ ಕಲ್ಪನೆ. ನೀವು ಮಂತ್ರಿಗಳ ಮಾತುಗಳನ್ನು ಕೇಳಿ. ನೀವು ಪ್ರಧಾನಿಯ ಮಾತುಗಳನ್ನು ಕೇಳಿ. ಅವರು ಭವಿಷ್ಯದ ಬಗ್ಗೆ ಮಾತನಾಡುವುದನ್ನು ನೀವು ಎಂದಿಗೂ ಕಾಣುವುದಿಲ್ಲ, ಅವರು ಭೂತಕಾಲದ ಬಗ್ಗೆ ಮಾತ್ರ ಮಾತನಾಡುತ್ತಾರೆ’’ ಮತ್ತು ಅವರು ಯಾವಾಗಲೂ ಬೇರೆಯವರನ್ನು ದೂಷಿಸುತ್ತಾರೆ" ಎಂದೂ ರಾಹುಲ್‌ ಗಂಧಿ ಹೇಳಿದರು.

ಇದನ್ನೂ ಓದಿ: ಒಡಿಶಾ ರೈಲು ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ವಿಶ್ವದ ದೊಡ್ಡಣ್ಣ ಜೋ ಬೈಡೆನ್‌, ಕ್ಸಿ ಜಿನ್‌ಪಿಂಗ್‌

ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಒಳಗೊಂಡ ರೈಲು ಡಿಕ್ಕಿಯನ್ನು ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ರೈಲು ದುರಂತ ಎಂದು ಪರಿಗಣಿಸಲಾಗಿದೆ. ತ್ರಿವಳಿ ರೈಲು ಅಪಘಾತದಲ್ಲಿ ಕನಿಷ್ಠ 275 ಜನರು ಮೃತಪಟ್ಟಿದ್ದು, 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..

click me!