Chenab Rail Bridge ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ!

Published : Feb 20, 2024, 06:36 PM IST
Chenab Rail Bridge ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ!

ಸಾರಾಂಶ

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ, ಚೆನಾಬ್‌ ರೈಲ್ವೆ ಬ್ರಿಜ್‌ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದ್ದಾರೆ. ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ಗಿಂತ ಎತ್ತರದಲ್ಲಿ ಈ ಬ್ರಿಜ್‌ ಇದೆ.  

ನವದೆಹಲಿ (ಫೆ.20): ಭವ್ಯವಾದ ಹಿಮಾಲಯದ ಬೆಟ್ಟಗಳ ನಡುವೆ ಇರುವ, ಆಧುನಿಕ ಇಂಜಿನಿಯರಿಂಗ್‌ ಅಚ್ಚರಿ ಎನಿಸಿಕೊಂಡಿರುವ ಸಾಧನೆ ಮಂಗಳವಾರ ಅನಾವರಣಗಿಂದಿದೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ನಿರ್ಮಾಣ ಮಾಡಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇರುವ ಚೆನಾಬ್ ರೈಲು ಸೇತುವೆಗೆ ಮೋದಿ ಮಂಗಳವಾರ ಚಾಲನೆ ನೀಡಿದರು. ಇದು ಚೆನಾಬ್‌ ನದಿಯಿಂದ ಬರೋಬ್ಬರಿ 359 ಮೀಟರ್‌ ಎತ್ತರದಲ್ಲಿದೆ. ಐಫೆಲ್ ಟವರ್‌ಗಿಂತಲೂ ಎತ್ತರವಾಗಿ ನಿಂತಿರುವ ಚೆನಾಬ್ ಸೇತುವೆಯು ಉಕ್ಕಿನ ಕಮಾನಿನ ವಿನ್ಯಾಸವನ್ನು ಹೊಂದಿದೆ. ಇದು ಐಫೆಲ್‌ ಟವರ್‌ಗಿಂತ 35 ಮೀಟರ್‌ ಎತ್ತರವಾಗಿದೆ. ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ಕಮಾನು-ಆಕಾರದ ಉಕ್ಕಿನ ರಚನೆಯು ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶದ ವಿಭಾಗಗಳನ್ನು ಸಂಪರ್ಕಿಸುತ್ತದೆ. ಈ ಸೇತುವೆಯು ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಚೆನಾಬ್ ಸೇತುವೆಯ ನಿರ್ಮಾಣವು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ (USBRL) ಯೋಜನೆಯ ಭಾಗವಾಗಿ 2002 ರಲ್ಲಿ ಪ್ರಾರಂಭವಾಯಿತು ಮತ್ತು ಆಗಸ್ಟ್ 2022 ರಲ್ಲಿ ಪೂರ್ಣಗೊಂಡಿತು.

ಭಾರತೀಯ ರೈಲ್ವೆಯ ವೀಡಿಯೊ ಪ್ರಕಾರ, ಹೊಸದಾಗಿ ಉದ್ಘಾಟನೆಗೊಂಡ ರೈಲು ಮಾರ್ಗವು ಈ ಆಯಕಟ್ಟಿನ ಮಹತ್ವದ ಪ್ರದೇಶದಲ್ಲಿ ನೆಲೆಸಿರುವ ಸಶಸ್ತ್ರ ಪಡೆಗಳಿಗೆ ಪ್ರಯೋಜನಕಾರಿಯಾಗಿದೆ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೆ ಕೊಡುಗೆ ನೀಡುತ್ತದೆ. ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯು ಸಂಪೂರ್ಣವಾಗಿ ಕಾರ್ಯಾರಂಭಿಸಿದ ನಂತರ, ವಂದೇ ಭಾರತ್ ಮೆಟ್ರೋ ರೈಲು ಜಮ್ಮು ಮತ್ತು ಶ್ರೀನಗರ ನಡುವೆ ಕಾರ್ಯನಿರ್ವಹಿಸಲು ಸಿದ್ಧವಾಗಿದೆ.

ಚೆನಾಬ್ ಸೇತುವೆಯನ್ನು ಗಂಟೆಗೆ 266 ಕಿಲೋಮೀಟರ್‌ ವೇಗದಲ್ಲಿ ಬೀಸುವ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಹೆಚ್ಚಿನ ತೀವ್ರತೆಯ ವಲಯದ ಭೂಕಂಪನ ಸಹಿಸಿಕೊಳ್ಳುತ್ತದೆ. ಅದಕ್ಕಿಂತ ಹೆಚ್ಚಾಗಿ, ಇದು 120 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಚೆನಾಬ್‌ನ ಎರಡೂ ದಡಗಳಾದ ಕೌರಿ ಎಂಡ್‌ ಮತ್ತು ಬಕ್ಕಲ್‌ ಎಂಡ್‌ನಲ್ಲಿ ಬೃಹತ್‌ ಕೇಬಲ್‌ ಕ್ರೇನ್‌ಗಳನ್ನು ಸ್ಥಾಪನೆ ಮಾಡಲಾಗಿದ್ದು, ಸೇತುವೆಯ ಸುಂದರ ನೋಟವನ್ನು ನೀಡಿದೆ.

ಫೆಬ್ರವರಿ 20 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಬನಿಹಾಲ್-ಸಂಗಲ್ದನ್ ರೈಲ್ವೆ ಮಾರ್ಗವನ್ನು ಉದ್ಘಾಟಿಸಿದರು ಮತ್ತು ಬಾರಾಮುಲ್ಲಾ ನಿಲ್ದಾಣದಿಂದ ಕಾಶ್ಮೀರ ಕಣಿವೆಯಲ್ಲಿ ಮೊದಲ ವಿದ್ಯುತ್ ರೈಲಿಗೆ ಚಾಲನೆ ನೀಡಿದರು. 15,863 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ಮಾರ್ಗವು ಪ್ರಾದೇಶಿಕ ಸಾರಿಗೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. 48 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಈ ರೈಲುಮಾರ್ಗವು ರಾಂಬನ್ ಜಿಲ್ಲೆಯ ಬನಿಹಾಲ್‌ನಿಂದ ದೋಡಾ ಜಿಲ್ಲೆಯ ಸಂಗಲ್ದಾನ್‌ಗೆ ಸಂಪರ್ಕ ಕಲ್ಪಿಸುತ್ತದೆ.

ಚೆನಾಬ್ ಸೇತುವೆಯ ಬಗ್ಗೆ ತಿಳಿದುಕೊಳ್ಳಬೇಕಾದ 9 ವಿಷಯಗಳು

  1. ಎತ್ತರ: ಚೆನಾಬ್ ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ. ಇದು ಚೆನಾಬ್ ನದಿಯ ಮೇಲೆ ಸುಮಾರು 359 ಮೀಟರ್ (1,178 ಅಡಿ) ಎತ್ತರದಲ್ಲಿದೆ.
     
  2. ಉದ್ದ: ಸೇತುವೆ 1.3-ಕಿಮೀ ಉದ್ದವಿದೆ. ಇದು ಕತ್ರಾದಿಂದ ಬನಿಹಾಲ್‌ವರೆಗಿನ 111-ಕಿಮೀ ವ್ಯಾಪ್ತಿಯಲ್ಲಿ ನಿರ್ಣಾಯಕ ಸಂಪರ್ಕವನ್ನು ರೂಪಿಸುತ್ತದೆ, ಇದು ರೂ 21,653-ಕೋಟಿಯ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಭಾಗವಾಗಿದೆ.
     
  3. ಸ್ಥಳ: ಇದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿದೆ.
     
  4. ವೆಚ್ಚ: ಕಮಾನು ಸೇತುವೆಯನ್ನು 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
     
  5. ನಿರ್ಮಾಣ: ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ (USBRL) ಯೋಜನೆಯ ಭಾಗವಾಗಿ 2002 ರಲ್ಲಿ ಚೆನಾಬ್ ಸೇತುವೆಯ ನಿರ್ಮಾಣ ಪ್ರಾರಂಭವಾಯಿತು. ಕಮಾನು 2021 ರಲ್ಲಿ ಪೂರ್ಣಗೊಂಡರೆ, ಸೇತುವೆಯ ಒಟ್ಟಾರೆ ನಿರ್ಮಾಣವು ಆಗಸ್ಟ್ 2022 ರಲ್ಲಿ ಪೂರ್ಣಗೊಂಡಿತು.
     
  6. ಇಂಜಿನಿಯರಿಂಗ್ ವಿಸ್ಮಯ: ಸೇತುವೆ ಆಧುನಿಕ ಎಂಜಿನಿಯರಿಂಗ್ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಗಂಟೆಗೆ 266 ಕಿಮೀ ವೇಗದ ಗಾಳಿಯ ವೇಗ, ಭೂಕಂಪಗಳು ಮತ್ತು ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
     
  7. ಕಮಾನು ವಿನ್ಯಾಸ: ಸೇತುವೆಯು ಕಮಾನಿನ ಆಕಾರದ ವಿನ್ಯಾಸವನ್ನು ಹೊಂದಿದೆ, ಇದು ವಾಸ್ತುಶಿಲ್ಪದ ಅದ್ಭುತವಾಗಿದೆ. ಕಮಾನು ಉಕ್ಕಿನಿಂದ ಮಾಡಲ್ಪಟ್ಟಿದೆ ಮತ್ತು ಸೇತುವೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

    ಕಾಶ್ಮೀರದ ಸೌಂದರ್ಯಕ್ಕೆ ಕಳಶವಿಟ್ಟ ರೈಲ್ವೆ ಬ್ರಿಡ್ಜ್‌: ಡ್ರೋಣ್‌ ಸೆರೆ ಹಿಡಿದ ಅದ್ಭುತ ಫೋಟೋಗಳು
     
  8. ಇತರ ವೈಶಿಷ್ಟ್ಯಗಳು: ಕಮಾನು ಸೇತುವೆಯು 17 ಸ್ಪ್ಯಾನ್‌ಗಳನ್ನು ಹೊಂದಿದೆ ಮತ್ತು ಮುಖ್ಯ ಕಮಾನು ವ್ಯಾಪ್ತಿಯ ರೇಖೀಯ ಉದ್ದವು 460 ಮೀಟರ್ ಮತ್ತು ಇದು ವಕ್ರರೇಖೆಯಾಗಿದೆ. ಸೇತುವೆಯ ಜೀವಿತಾವಧಿಯು 120 ವರ್ಷಗಳು ಮತ್ತು ಸೇತುವೆಯು ಮೇಲೆ ರೈಲು 100 ಕಿಲೋಮೀಟರ್‌ ವೇಗದಲ್ಲಿ ಸಾಗಬಹುದು.

    ಜಗತ್ತಿನ ಅತ್ಯಂತ ಎತ್ತರದ ರೈಲ್ವೇ ಸೇತುವೆ: ಕೆಲಸದ ಸಂಸ್ಕೃತಿ ಬದಲಾಗಿದೆ ಎಂದ ಮೋದಿ
     
  9. ವಂದೇ ಭಾರತ್ ಎಕ್ಸ್‌ಪ್ರೆಸ್: ಜಮ್ಮು ಮತ್ತು ಶ್ರೀನಗರ ನಡುವಿನ ಹೈ-ಸ್ಪೀಡ್ ವಂದೇ ಭಾರತ್ ಮೆಟ್ರೋ ರೈಲು ಒಮ್ಮೆ ಕಾರ್ಯರೂಪಕ್ಕೆ ಬಂದ ನಂತರ ಚೆನಾಬ್ ಸೇತುವೆಯ ಮೇಲೆ ಚಲಿಸುತ್ತದೆ.
     

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!