ಕೊರೋನಾ ರೋಗಿಯನ್ನು ಕೊಲ್ಲಿಸಿದನೇ ತಿಕ್ಕಲು ಸರ್ವಾಧಿಕಾರಿ!

Suvarna News   | Asianet News
Published : Mar 03, 2020, 04:06 PM ISTUpdated : Mar 04, 2020, 01:06 PM IST
ಕೊರೋನಾ ರೋಗಿಯನ್ನು ಕೊಲ್ಲಿಸಿದನೇ ತಿಕ್ಕಲು ಸರ್ವಾಧಿಕಾರಿ!

ಸಾರಾಂಶ

ಉತ್ತರ ಕೊರಿಯಾದಲ್ಲಿ ಕೊರೊನಾ ವೈರಸ್‌ ಹಬ್ಬುವ ಭೀತಿಯಲ್ಲಿರುವ ಅಲ್ಲಿನ ಡಿಕ್ಟೇಟರ್‌ ಕಿಮ್‌ ಜಾಂಗ್‌ ಉನ್‌, ರೋಗಿಯೊಬ್ಬನನ್ನು ಕೊಲ್ಲಿಸಿದ್ದಾನೆ ಅಂತ ಸುದ್ದಿ.

ಉತ್ತರ ಕೊರಿಯಾದ ತಿಕ್ಕಲ ಸರ್ವಾಧಿಕಾರಿ ಕಿಮ್‌ನ ಬಗ್ಗೆ ನಿಮಗೆ ಗೊತ್ತಿಲ್ಲದ್ದೇನಲ್ಲ. ಮೊದಲೇ ತಿಕ್ಕಲ, ಇನ್ನು ಅವನ ದೇಶಕ್ಕೆ ಕೊರೊನೊವೈರಸ್ ಜ್ವರ ಅಟ್ಯಾಕ್ ಆಗಬಹುದು ಎಂಬ ಭೀತಿ ಉದ್ಭವಿಸಿದರೆ ಬೇರೆ ಕೇಳಬೇಕೆ!

ದೇಶದೊಳಗೆ ಕೊರೊನಾ ವೈರಸ್ ಕಾಲಿಡಲೇಬಾರದು ಎಂಬುದು ಅವನ ತಾಕೀತು. ಒಂದೊಮ್ಮೆ ಎಲ್ಲಿಯಾದರೂ ಕೊರೊನಾ ಕೇಸು ಕಂಡುಬಂದರೆ ಉಗ್ರ ಕ್ರಮಗಳನ್ನು ಕೈಗೊಳ್ಳಲೂ ತಾನು ಹಿಂಜರಿಯೊಲ್ಲ ಎಂದು ಗುಟುರು ಹಾಕಿದ. ಆದರೆ ಅವನ ಮಾತು ಕೇಳಿ ಸುಮ್ಮನಿರೋಕೆ ಕೊರೊನಾ ವೈರಸ್ ಏನು ಅವನು‌ ಸಾಕಿದ ನಾಯಿಯೇ? ಒಬ್ಬ ಕೊರೊನಾ ಜ್ವರಪೀಡಿತ ಪತ್ತೆಯಾಗಿದ್ದಾನೆ. ಅದು ಗೊತ್ತಾದ ಕೂಡಲೇ ಕಿಮ್ ಏನು ಮಾಡಿದ ಗೊತ್ತೆ?

ರೋಗಿಯನ್ನು ಗುಂಡಿಕ್ಕಿ ಸಾಯಿಸಿಬಿಡಿ ಎಂದು ಆಜ್ಞೆ ಮಾಡಿದ!

ಟ್ರಂಪ್ ಜೊತೆಗಿನ ಮಾತುಕತೆ ವಿಫಲ: ರಾಯಭಾರಿಯನ್ನು ಗಲ್ಲಿಗೇರಿಸಿದ ಉ.ಕೊರಿಯಾ!

ಅಧಿಕಾರಿಗಳು ಹಾಗೇ ಮಾಡಿದರು. ಆ ನತದೃಷ್ಟ ರೋಗಿ, ಸರಿಯಾದ ಆರೈಕೆ ಸಿಕ್ಕಿದ್ದರೆ ಬದುಕಿಕೊಳ್ಳುತ್ತಿದ್ದನೋ ಏನೋ. ಆದರೆ ಅದಕ್ಕೆ ಕಿಮ್ ಆಸ್ಪದ ಕೊಡಲಿಲ್ಲ. ಅಂಥಾ ತಿಕ್ಕಲುತನ, ಆತಂಕ, ಭೀತಿ ಅವನದು. ಮಹಾ ಪುಕ್ಕಲು ಆಸಾಮಿ ಈತ.

ಈತನ ಪುಕ್ಕಲುತನ ಕೊರೊನಾ ಜ್ವರ ಪತ್ತೆಯಾದಾಗಲೇ ಜಗಜ್ಜಾಹೀರಾಗಿದೆ. ಚೀನಾದಲ್ಲಿ ಜ್ವರ ಹಬ್ಬಿದ ಕೂಡಲೇ ಈತ ಗಾಯಬ್. ಎರಡು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಲೇ ಇಲ್ಲ. ಭೂಗತ ಬಂಕರ್‌ನಲ್ಲಿ ಇದ್ದಾನೆ ಎಂದು ಹೇಳಲಾಗುತ್ತಿದೆ. ಅವನಿಗೆ ಅಮೆರಿಕ, ಇಸ್ರೇಲ್‌ನ ಭೂಗತ ಕಾರ್ಯಾಚರಣೆಗಳ ಬಗ್ಗೆ ಯಾವಾಗಲೂ ಭಯ. ಕೊರೊನಾ ಜ್ವರ ಕೂಡ ಅಮೆರಿಕದ ಕೈವಾಡದಿಂದ ಚೀನಾದಲ್ಲಿ ಹಬ್ಬಿದ ಜೈವಿಕ ಅಸ್ತ್ರ ಇರಬಹುದು ಎಂಬುದು ಅವನ ಭಯಕ್ಕೆ ಕಾರಣ. ಕೊರಿಯಾದಲ್ಲೂ ಅಮೆರಿಕ ಹಾಗೂ ಇಸ್ರೇಲ್ ಏಜೆಂಟರು ಕಿಮ್‌ನನ್ನು ಮುಗಿಸಲು ಸಾಕಷ್ಟು ಸಲ ಪ್ರಯತ್ನಿಸಿದ್ದಾರೆ. ಆದರೆ ಈ ಕ್ಷಣದಂತೆ ಇನ್ನೊಮ್ಮೆ ಇರದ ಕಿಮ್‌ನನ್ನು ಕಾಣುವುದೇ ಕಷ್ಟ.

ಕಿಮ್‌ನ ತಿಕ್ಕಲುತನಗಳಿಂದಾಗಿ ಉ.ಕೊರಿಯಾದ ನಿವಾಸಿಗಳಿಗೆ ಸದಾ ಕಾಲ ಗಡಗಡ. ಈಗ ಯಾರೂ ಜ್ವರ ಅಂತ ಆಸ್ಪತ್ರೆಗೆ ಬರುವಂತೆಯೇ ಇಲ್ಲ! ಬಂದರೆ ಆತನನ್ನು ವೈದ್ಯರ ಜೊತೆಗೆ ಪೊಲೀಸರೂ ಸುತ್ತುವರಿಯುತ್ತಾರೆ. ಒಬ್ನ ಟೆರರಿಸ್ಟ್‌ನನ್ನು ಕಾಣುವಂತೆ ಕಾಣುತ್ತಾರೆ. ಅಲ್ಪಸ್ವಲ್ಪ ಕೊರೊನಾದ ಲಕ್ಷಣಗಳು ಕಂಡರೂ ಸಾಕು ಎಳೆದೊಯ್ದು ಕ್ವಾರಂಟೈನ್‌ನಲ್ಲಿಡುತ್ತಾರೆ.

ಉ.ಕೊರಿಯಾಗೆ ಈಗ ಪ್ರವಾಸಿಗಳು ಹೋಗುವಂತೆಯೇ ಇಲ್ಲ. ವಿಮಾನ, ಹಡಗು, ಬಸ್ಸು ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಬೇರೆ ಕಡೆ ಹೋದ ಕೊರಿಯನ್ನರು ಕೂಡ ವಾಪಾಸ್ ಬರಲು ಸುಲಭವಿಲ್ಲ. ಸಾವಿರಾರು ವಿದೇಶೀಯರು ಕ್ವಾರಂಟೈನ್‌ಗಳಲ್ಲಿದ್ದಾರೆ.

ಉ.ಕೊರಿಯಾಗೆ ಕೊರೊನಾ ಜ್ವರ ಬಂದರೆ ಪರಿಣಾಮ ಭೀಕರವಾಗಿರಲಿದೆ ಎಂದು ತಜ್ಞರು ಹೇಳಿದ್ದಾರೆ. ಯಾಕೆಂದರೆ ಉತ್ತರ ಕೊರಿಯಾದ ವೈದ್ಯಕೀಯ ಸೇವೆ, ಆರೋಗ್ಯ ಸೇವೆ ಸಂಪೂರ್ಣ ಮಟಾಶ್‌ ಆಗಿದೆ. ಅಲ್ಲಿ ಸೇವೆಗಾಗಿ ಸರಿಯಾಗಿ ವೈದ್ಯಕೀಯ ಮಾಡುವವರು ಒಬ್ಬನೂ ಇಲ್ಲ. ಎಲ್ಲವೂ ಕಮ್ಯುನಿಸ್ಟ್ ಸರ್ವಾಧಿಕಾರಿ ಕಿಮ್‌ನ ಕೈಕೆಳಗೆ ಇವೆ. ಸರಿಯಾದ ಔಷಧಗಳ ಪೂರೈಕೆ ಇಲ್ಲ. ಮಿಲಿಟರಿ ಮಾತ್ರ ಸರ್ವಶಕ್ತವಾಗಿದೆ. ಉಳಿದ ಎಲ್ಲ ಆರೋಗ್ಯ, ಶಿಕ್ಷಣ, ಸಾರ್ವಜನಿಕ ಆಹಾರ ಪೂರೈಕೆ ಮುಂತಾದ ಎಲ್ಲ ಅಂಗಗಳೂ ನೆಲಕಚ್ಚಿವೆ. ಎಲ್ಲದರಲ್ಲೂ ಒಂದು ರೀತಿಯ ಅಭದ್ರತಾ ಭಾವ.

ಮಲವೇ ಗೊಬ್ಬರ, ನೀಲಿ ಜೀನ್ಸ್ ಹಾಕಂಗಿಲ್ಲ..ಈ ದೇಶದ ಕತೆ ನೋಡ್ರಣ್ಣೊ 

ಸಣ್ಣ ಆರೋಗ್ಯ ಸಮಸ್ಯೆ ಬಂದರೂ ಇಲ್ಲಿನ ಪ್ರಜೆ ಗದಗುಟ್ಟಿ ನಡುಗುತ್ತಾನೆ. ಬೇಕೋ ಬೇಡವೋ ಆತ ಸರಕಾರದಿಂದ ನಿಯಂತ್ರಿತವಾದ ಆಸ್ಪತ್ರೆಗಳಿಗೇ ಹೋಗಬೇಕು. ಅಲ್ಲಿನ ವೈದ್ಯರ ಮರ್ಜಿಗೆ ಅನುಗುಣವಾಗಿ ಕಾಯಿಲೆಗೆ ಟ್ರೀಟ್‌ಮೆಂಟ್‌. ಔಷಧ ಕೊಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವವರೂ ಅವರೇ. ಕೆಲವೊಮ್ಮೆ ವೈದ್ಯರ ಸೋಗಿನಲ್ಲಿರುವ ಕಮ್ಯುನಿಸ್ಟ್ ಅಧಿಕಾರಿಗಳು. ರೋಗಿಯ ಕೈಯಲ್ಲಿ ಯಾವುದೂ ಇಲ್ಲ. ಹೀಗಾಗಿ ಕೊರೊನಾ ಇಲ್ಲಿ ಹರಡಲು ಆರಂಭಿಸಿದರೆ, ನಿಸ್ಸಂಶಯವಾಗಿಯೂ ಅದು ಕಿಮ್‌ನನ್ನು ಕಂಗೆಡಿಸಲಿದೆ. ಅದಕ್ಕಾಗಿಯೇ ಆತ ಮತ್ತಷ್ಟು ಆತಂಕಿತನಾಗಿದ್ದಾನೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ