ಕಿಚನ್ ಎಂಬ ಮೆಡಿಕಲ್‌ನಲ್ಲಿ ಸಿಗುತ್ತೆ ಪೇಯಿನ್ ಕಿಲ್ಲರ್

By Suvarna NewsFirst Published Apr 24, 2020, 5:32 PM IST
Highlights

ಈ ಲಾಕ್‍ಡೌನ್‍ನಲ್ಲಿ ಸ್ವಲ್ಪ ಹಲ್ಲುನೋವು ಕಾಣಿಸಿಕೊಂಡ್ರೋ ಟೆನ್ಷನ್ ಆಗೋದು ಸಹಜ. ಮಾತ್ರೆಯಿಲ್ಲ,ವೈದ್ಯರ ಹತ್ರ ಹೋಗೋಕೆ ಆಗಲ್ಲ ಎಂಬ ಟೆನ್ಷನ್ ಬಿಡಿ. ಅಡುಗೆಮನೆಯಲ್ಲೇ ನೋವು ನಿವಾರಿಸುವ ಎಷ್ಟೊಂದು ವಸ್ತುಗಳಿವೆ, ಅವನ್ನೇ ಬಳಸಿ.

ಲಾಕ್‍ಡೌನ್ ಪರಿಣಾಮವಾಗಿ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ದಿನದ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಹೊರಗೆ ಹೋಗಲು ಅವಕಾಶವಿದೆ. ಇಂಥ ಸಮಯದಲ್ಲಿ ದೇಹದಲ್ಲಿ ಏನಾದ್ರೂ ನೋವು ಕಾಣಿಸಿಕೊಂಡ್ರೆ ಟೆನ್ಷನ್ ಆಗೋದು ಗ್ಯಾರಂಟಿ. ನೋವು ಶಮನಕ್ಕಾಗಿ ಮನೆಯೆಲ್ಲ ಹುಡುಕಿದ್ರೂ ಪೆಯಿನ್ ಕಿಲ್ಲರ್ ಮಾತ್ರೆ ಸಿಕ್ಕಿಲ್ಲವೆಂದ್ರೆ ತಲೆಕೆಡಿಸಿಕೊಳ್ಳಬೇಡಿ, ಅಡುಗೆಮನೆಯೆಂಬ ಮೆಡಿಕಲ್ ಶಾಪ್ ಇದ್ದೇಇದೆ.ಇಲ್ಲಿ ಸಿಗುವ ನೈಸರ್ಗಿಕ ಮದ್ದುಗಳನ್ನೇ ಟ್ರೈ ಮಾಡಿ.ಚಿಕ್ಕಪುಟ್ಟ ನೋವುಗಳಿಗೆ ಮಾತ್ರೆ ತೆಗೆದುಕೊಳ್ಳೋದ್ರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತವೆ. ಅದೇ ಮನೆ ಮದ್ದುಗಳನ್ನು ಟ್ರೈ ಮಾಡೋದ್ರಿಂದ ನೋವು ದೂರವಾಗುವ ಜೊತೆಗೆ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳುಂಟಾಗೋದಿಲ್ಲ. 

ತೂಕ ಇಳಿಸಲು ಸಹಕಾರಿ ಈ ಟೀ ವೆರೈಟಿ

ಮಜ್ಜಿಗೆ
ಅಜೀರ್ಣ ಸೇರಿದಂತೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಹೊಟ್ಟೆನೋವಿಗೆ ಮಜ್ಜಿಗೆ ರಾಮಬಾಣ. ಮಜ್ಜಿಗೆಯನ್ನು ಸ್ವಲ್ಪ ಮೆಂತೆ ಪುಡಿ ಸೇರಿಸಿ ಕುಡಿಯೋದು ಅಥವಾ ಮಜ್ಜಿಗೆ ಜೊತೆ ಮೆಂತೆಯನ್ನು ಜಗಿದು ತಿನ್ನೋದ್ರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಹೊಟ್ಟೆಯುಬ್ಬರ ಕಾಣಿಸಿಕೊಂಡಾಗ ಮಜ್ಜಿಗೆಗೆ ಇಂಗು ಹಾಕಿ ಕುಡಿಯೋದ್ರಿಂದ ಸಮಸ್ಯೆ ಪರಿಹಾರವಾಗುತ್ತೆ. ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವನ್ನು ಮೊಸರು ಸೇವನೆಯಿಂದ ಕಡಿಮೆ ಮಾಡಬಹುದು.

ಶುಂಠಿ
ಪ್ರತಿ ಮನೆಯ ಅಡುಗೆಮನೆಯಲ್ಲಿ ಕಂಡುಬರುವ ಶುಂಠಿಯಲ್ಲಿ ಹತ್ತು ಹಲವು ಆರೋಗ್ಯಕಾರಿ ಗುಣಗಳಿವೆ. ಗ್ಯಾಸ್ಟ್ರಿಕ್ ಸಮಸ್ಯೆಯುಂಟಾದಾಗ ಶುಂಠಿಯ ತುಂಡನ್ನು ಬಾಯಿಗೆ ಹಾಕಿಕೊಂಡು ಜಗಿದರೆ ಶಮನವಾಗುತ್ತೆ. ಹೊಟ್ಟೆನೋವು, ಗ್ಯಾಸ್ಟ್ರಿಕ್‍ನಿಂದ ಉಂಟಾದ ಎದೆನೋವು ಕೂಡ ಶುಂಠಿ ತಿನ್ನೋದ್ರಿಂದ ಕಡಿಮೆಯಾಗುತ್ತೆ. ಕೆಮ್ಮು ಹಾಗೂ ಗಂಟಲುನೋವು ನಿವಾರಿಸುವಲ್ಲಿಯೂ ಶುಂಠಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. 

ಬೆಳ್ಳುಳ್ಳಿ
ನೋವು ನಿವಾರಕಗಳಲ್ಲಿ ಬೆಳ್ಳುಳ್ಳಿ ಕೂಡ ಒಂದು. ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಫಂಗಲ್ ಗುಣಗಳಿವೆ. ಹಲ್ಲು ನೋವು, ಕಿವಿನೋವು ಹಾಗೂ ಗಂಟುಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ಬೆಳ್ಳುಳ್ಳಿ ನಿವಾರಿಸಬಲ್ಲದು. ಆದ್ರೆ ಬೆಳ್ಳುಳ್ಳಿಯನ್ನು ಹಸಿಯಾಗಿಯೇ ಬಳಸಬೇಕು. ನೋವಿರುವ ಸಂಧಿಗಳಿಗೆ ಬೆಳ್ಳುಳ್ಳಿಯನ್ನು ತೆಂಗಿನಎಣ್ಣೆಯೊಂದಿಗೆ ಬಳಸೋದ್ರಿಂದ ನೋವು ಕಡಿಮೆಯಾಗುತ್ತೆ. ಬೆಳ್ಳುಳ್ಳಿಯನ್ನು ಜಜ್ಜಿ ಚಿಟಿಕೆ ಉಪ್ಪಿನೊಂದಿಗೆ ಸೇರಿಸಿ ನೋವಿರುವ ಹಲ್ಲಿಗೆ ಹಚ್ಚೋದ್ರಿಂದ ನೋವು ಮಾಯವಾಗುತ್ತೆ. 

ಬೇಸಿಗೆಯಲ್ಲಿ ಡೆಂಗೆ ಕೂಡಾ ಬರಬಹುದು ಹುಷಾರು!

ಲವಂಗ
ಹಲ್ಲುನೋವು ಪ್ರಾರಂಭವಾದ ತಕ್ಷಣ ಮೊದಲು ನೆನಪಿಗೆ ಬರೋದು ಲವಂಗ. ಇದನ್ನು ನೋವಿರುವ ಹಲ್ಲಿನ ಮೇಲಿಟ್ಟುಕೊಂಡ್ರೆ ಸ್ವಲ್ಪ ಸಮಯದಲ್ಲೇ ನೋವು ಕಡಿಮೆಯಾಗುತ್ತೆ. ದಂತವೈದ್ಯರ ಬಳಿ ಈಗ ಹೋಗಲು ಸಾಧ್ಯವಿಲ್ಲದ ಕಾರಣ ಮನೆಯಲ್ಲೇ ಇಂಥ ಮದ್ದುಗಳನ್ನು ಮಾಡೋದು ಬೆಸ್ಟ್. ಲವಂಗವನ್ನು ಪುಡಿ ಮಾಡಿ ಆಲಿವ್ ಆಯಿಲ್ ಜೊತೆಗೆ ಸೇರಿಸಿ ಬಾಯಿಯಲ್ಲಿ ನೋವಿರುವ ಜಾಗಕ್ಕೆ ಲೇಪಿಸಿದರೆ ನೋವು ಮಾಯವಾಗುತ್ತೆ. 

ಪುದೀನಾ
ಪುದೀನಾ ಎಲೆಯಲ್ಲಿ ಕೂಡ ನೋವು ನಿವಾರಕ ಗುಣವಿದೆ. ಪುದೀನಾ ಎಲೆ ಹಾಕಿ ಕುದಿಸಿದ ನೀರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತೆ. ಪುದೀನಾ ಎಲೆಗಳನ್ನು ಜಗಿದು ತಿನ್ನೋದ್ರಿಂದ ಸ್ನಾಯುಸೆಳೆತ, ತಲೆನೋವು ಹಾಗೂ ಹಲ್ಲುನೋವು ಕಡಿಮೆಯಾಗುತ್ತೆ.

ಅರಿಶಿಣ
ಈಗಂತೂ ಎಲ್ಲೆಡೆ ಕೊರೋನಾ ಮುನ್ನೆಚ್ಚರಿಕಾ ಕ್ರಮಗಳ ಕುರಿತೇ ಚರ್ಚೆಯಾಗುತ್ತಿದೆ. ಅದ್ರಲ್ಲೂ ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿಗೆ ಅರಿಶಿಣ ಸೇರಿಸಿ ಕುಡಿಯಬೇಕು ಎಂಬುದು ಎಲ್ಲರೂ ನೀಡುವ ಸಲಹೆ. ಅರಿಶಿಣ ಹಾಲು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರಿಶಿಣ ಅನೇಕ ಚರ್ಮರೋಗಗಳನ್ನು ಕೂಡ ನಿವಾರಿಸುವ ಸಾಮಥ್ರ್ಯ ಹೊಂದಿದೆ. ತುರಿಕೆಯಿರುವ, ಕೆಂಪಾಗಿರುವ ಚರ್ಮದ ಮೇಲೆ ತೆಂಗಿನೆಣ್ಣೆಯೊಂದಿಗೆ ಅರಿಶಿಣ ಕಲಸಿ ಹಚ್ಚೋದ್ರಿಂದ ಸಮಸ್ಯೆ ಕೆಲವೇ ದಿನಗಳಲ್ಲಿ ದೂರವಾಗುತ್ತೆ. ಇನ್ನು ಬಾಯಿಯಲ್ಲಿ ಗುಳ್ಳೆ ಅಥವಾ ಹುಣ್ಣು ಆಗಿದ್ರೆ ಅದಕ್ಕೂ ತೆಂಗಿನೆಣ್ಣೆಯೊಂದಿಗೆ ಅರಿಶಿಣ ಸೇರಿಸಿ ಹಚ್ಚಿದ್ರೆ ಬೇಗ ಗುಣವಾಗುತ್ತೆ.

ಮಾನಸಿಕ ಸಮಸ್ಯೆಗಳಿಗೆ ಆನ್‌ಲೈನ್ ಥೆರಪಿ ಮದ್ದು!

ಕಲ್ಲುಪ್ಪು
ಕಲ್ಲುಪ್ಪು ಕೂಡ ನೋವು ನಿವಾರಕ. ಬಿಸಿ ನೀರಿಗೆ ಉಪ್ಪು ಬೆರೆಸಿ ಅದರಿಂದ ನೋವಿರುವ ಜಾಗಕ್ಕೆ ಶಾಖ ನೀಡಿದರೆ ನೋವು ದೂರವಾಗುತ್ತದೆ. ಗಂಟಲು ನೋವಿರುವಾಗ ಉಪ್ಪು ನೀರಿನಿಂದ ಪ್ರತಿದಿನ ಗಾರ್ಗಲಿಂಗ್ ಮಾಡಿದ್ರೆ 3-4 ದಿನಗಳಲ್ಲೇ ಸರಿಯಾಗುತ್ತೆ. ಬಾಯಿಯಲ್ಲಿ ಹುಣ್ಣಾಗಿರುವಾಗ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸೋದು ಅತ್ಯುತ್ತಮ ಪರಿಹಾರಗಳಲ್ಲೊಂದು. 

click me!