ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ. ಜೆ ಎಂ ಪ್ರಹ್ಲಾದ್ ಮಾತನಾಡಿ, “ಹದಿನೈದು ವರ್ಷದ ಹಿಂದೆ ಹೆಳವನಕಟ್ಟೆ ಗಿರಿಯಮ್ಮ ಧಾರಾವಾಹಿಗಾಗಿ ಬರೆದಿದ್ದೆ. ಆ ಧಾರಾವಾಹಿ ಜನರ ಮೆಚ್ಚುಗೆ ಪಡೆದುಕೊಂಡಿತ್ತು. ಆಗ ನನಗೆ ಜನರಿಗೆ ದಾಸ ಸಾಹಿತ್ಯದ ಬಗ್ಗೆ ಒಲವಿದೆ ಎನ್ನುವುದು ತಿಳಿಯಿತು. ದಾಸ ಸಾಹಿತ್ಯದ ಬಗ್ಗೆ ನಟಿ ಪದ್ಮ ಕಲಾ ಅವರಿಗೆ ಒಲವಿತ್ತು. ನಾವೆಲ್ಲಾ ಸೇರಿ ವಾಹಿನಿಯೊಂದಕ್ಕೆ ಧಾರಾವಾಹಿ ಮಾಡಲು ಚರ್ಚೆ ಕೂಡ ನಡೆಸಿದ್ದೆವು. ಆದರೆ ಕಾರಣಾಂತರದಿಂದ ಅದು ಆಗಲಿಲ್ಲ. ನಂತರ ಸಿನಿಮಾ ಮಾಡಲು ನಿರ್ಧರಿಸಿದೆವು.
ಇದು ಹದಿನಾರನೇ ಶತಮಾನದಲ್ಲಿ ವಿಜಯ ನಗರ ಸಾಮ್ರಾಜ್ಯದಲ್ಲಿದ್ದ ಸಂತರ ಹಾಗೂ ಹರಿದಾಸರನ್ನು ಕುರಿತಾದ ಚಿತ್ರ. ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು, ವೈಕುಂಠದಾಸರು, ಪುರಂದರದಾಸರು, ಕನಕದಾಸರೆ ಮೊದಲಾದ ಜ್ಞಾನಿವರೇಣ್ಯರ ಕುರಿತು ತಿಳಿಸುವ ಪ್ರಯತ್ನವನ್ನು ‘ಸಂಕೀರ್ತನ’ ಸಿನಿಮಾದಲ್ಲಿ ಮಾಡಿದ್ದೇವೆ. ನನಗೆ ಈ ಚಿತ್ರದ ಕಥೆ ಬರೆಯಲು ಬೋಲೂರು ಕೇಶವದಾಸರ "ಕರ್ನಾಟಕ ಭಕ್ತ ವಿಜಯ" ಪುಸ್ತಕ ಸಾಕಷ್ಟು ಸಹಕಾರಿಯಾಯಿತು. ನವರಾತ್ರಿಗೆ ಹಂಪಿಗೆ ಬರುವ ವ್ಯಾಪಾರಿಗಳಿಂದ ಈ ಚಿತ್ರದ ಕಥೆ ಪ್ರಾರಂಭವಾಗುತ್ತದೆ. ಚಿತ್ರದಲ್ಲಿ ಹದಿನೈದು ಹಾಡುಗಳಿದ್ದು, ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದಾರೆ ಎಂದು ಹೇಳಿದರು.