ಲಕ್ಷ್ಮೀ , ಕೀರ್ತಿ ಅರ್ಭಟಕ್ಕೆ ಉಳಿದ ಸೀರಿಯಲ್ ಟಿಆರ್’ಪಿ ಉಡೀಸ್… ದಾಖಲೆಯ ರೇಟಿಂಗ್ ಪಡೆದ ಲಕ್ಷ್ಮೀ ಬಾರಮ್ಮ

First Published Sep 6, 2024, 10:50 AM IST

ಲಕ್ಷ್ಮೀ ಬಾರಮ್ಮ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ಲಕ್ಷ್ಮೀ ಮತ್ತು ಕೀರ್ತಿ ಆರ್ಭಟ ವೀಕ್ಷಕರಿಗೆ ಸಖತ್ ಥ್ರಿಲ್ ನೀಡಿದ್ದು, ಭರ್ಜರಿ ಟಿ ಆರ್ ಪಿ ಪಡೆದುಕೊಂಡಿದೆ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರವಾಹಿ ಕೆಲವು ದಿನಗಳಿಂದ ಥ್ರಿಲ್ಲರ್ ಸೀರಿಯಲ್ ಆಗಿದ್ದು, ಕೀರ್ತಿ ಮತ್ತು ಲಕ್ಷ್ಮಿಯ ಅದ್ಭುತ ಅಭಿನಯಕ್ಕೆ ಹಾಗೂ ಕುತೂಹಲಕಾರಿ ಟ್ವಿಸ್ಟ್ ಮತ್ತು ಟರ್ನ್ ನಿಂದಾಗಿ ವೀಕ್ಷಕರು ತುದಿಗಾಲಲ್ಲಿ ನಿಂತು ಸೀರಿಯಲ್ ನೋಡುವ ಹಾಗಾಗಿದೆ. 
 

ಕೀರ್ತಿಯನ್ನು ಬೆಟ್ಟದ ಮೇಲಿಂದ ನೂಕಿ ಸಾವಿನ ದವಡೆಗೆ ನೂಕಿರುವ ಕಾವೇರಿ, ಎಲ್ಲರೆದುರು ತಾನೇನು ಮಾಡಿಯೇ ಇಲ್ಲ, ತಾನು ಒಳ್ಳೆಯವರು ಎಂದು ಬಿಲ್ಡಪ್ ಕೊಡುತ್ತಿದ್ದಾರೆ. ಇದೀಗ ಲಕ್ಷ್ಮೀ ಮೈಮೇಲೆ ಕೀರ್ತಿ ಆತ್ಮ ಸೇರಿಕೊಂಡಿದ್ದು, ಕಾವೇರಿಗೆ ತುಂಬಾನೆ ತೊಂದರೆ ಕೊಡುತ್ತಿದೆ. ಇದರಿಂದ ಹೆದರಿದ ಕಾವೇರಿ, ಲಕ್ಷ್ಮಿಯನ್ನು ಕರೆದುಕೊಂಡು ಆಶ್ರಮಕ್ಕೆ ಬಂದಿದ್ದಾರೆ. 
 

Latest Videos


ಆಶ್ರಮದಲ್ಲಿ ಲಕ್ಷ್ಮೀ ದೇಹದಿಂದ ಕೀರ್ತಿಯ ಆತ್ಮವನ್ನು ಬಿಡಿಸುವ ಎಲ್ಲಾ ತಯಾರಿ ನಡೆಯುತ್ತಿದೆ. ಮೊದಲಿಗೆ ಕೋಪಗೊಂಡ ಲಕ್ಷ್ಮೀ ಕಾವೇರಿಗೆ ಬೈದು, ಇದನ್ನೆಲ್ಲಾ ನೀವು ನಂಬುತ್ತಿರಾ, ನಾನು ಇಲ್ಲಿ ನಿಲ್ಲಲ್ಲ ಎಂದು ಹೋಗ್ತಾಳೆ, ಆದ್ರೆ ಅರ್ಧಕ್ಕೆ ಹೋದೋಳು ಮತ್ತೆ ನಿಂತು ನನ್ನನ್ನೇ ಓಡಿಸ್ತ್ಯಾ, ಎಂದು ಕೀರ್ತಿಯಾಗಿ ಬದಲಾಗುತ್ತಾಳೆ, ಇದೀಗ ಲಕ್ಷ್ಮೀಯನ್ನು ಮಂಡಲದ ಮಧ್ಯೆ ಕೂರಿಸಿ, ಸ್ವಾಮಿಗಳು, ಲಕ್ಷ್ಮೀ ದೇಹದಿಂದ ಕೀರ್ತಿ ಹೋಗೋದಕ್ಕೆ ಲಕ್ಷ್ಮೀ ಹೇಳಿರೋದನ್ನ ಮಾಡಬೇಕು ಎನ್ನುತ್ತಾರೆ ಕಾವೇರಿಗೆ. 
 

ಕಾವೇರಿ ತಪ್ಪು ಒಪ್ಪಿಕೊಳ್ಳಬೇಕು, ಜಗತ್ತಿಗೆ ಸತ್ಯ ಗೊತ್ತಾಗಬೇಕು. ಅನ್ಯಾಯ ಮಾಡಿರೋದು ನನಗೆ ನನ್ನ ಮುಂದೆ ಸತ್ಯ ಹೇಳಬೇಕು, ನನ್ನ ಬಳಿ ಕ್ಷಮೆ ಕೇಳಬೇಕು ಎನ್ನುತ್ತಾಳೆ ಲಕ್ಷ್ಮೀ. ಮಗನಿಗಾಗಿ ಕಾವೇರಿ ಎಲ್ಲರ ಮುಂದೆ ಸತ್ಯ ಹೇಳಲೇಬೇಕಾದ ಪರಿಸ್ಥಿತಿ ಬಂದಿದೆ. ಲಕ್ಷ್ಮೀಯ ಮೈಯಿಂದ ಕೀರ್ತಿಯ ದೆವ್ವವನ್ನು ಓಡಿಸಲು ಬಂದಿದ್ದ ಕಾವೇರಿಗೆ, ಲಕ್ಷ್ಮೀಯ ಈ ಹೊಸ ಆಟ ನಡುಕ ಹುಟ್ಟಿಸಿದೆ. 
 

ಅಷ್ಟರಲ್ಲಿ ವೈಷ್ಣವ್, ಸುಪ್ರೀತಾ, ಕೃಷ್ಣ ಎಲ್ಲರೂ ಅಲ್ಲಿ ಬಂದಿರುತ್ತಾರೆ. ಮಂಡಲದ ಮಧ್ಯೆ ಕುಳಿತ ಲಕ್ಷ್ಮೀ ಆವೇಷದಿಂದ “ನನಗೆ, ನನ್ನ ತಾಯಿಗೆ ಮೋಸ ಮಾಡಿದ್ರಿ. ನನ್ನನ್ನು ಹಿಂದಿನಿಂದ ಬಂದು ನೀವು ಕೊಂದ್ರಿ. ಈ ಸತ್ಯ ವೈಷ್‌ಗೂ ಗೊತ್ತಾಗಬೇಕು” ಅಂತ ಕಾವೇರಿ ಮುಂದೆ ಕೂಗಾಡಿದ್ದಾಳೆ ಲಕ್ಷ್ಮೀ. ಲಕ್ಷ್ಮೀ ಹೇಳಿದ್ದು ಕೇಳಿ ಸುಪ್ರೀತಾ, ವೈಷ್ಣವ್ ಎಲ್ಲರೂ ನಡುಗಿ ಹೋಗಿದ್ದಾರೆ.
 

ಲಕ್ಷ್ಮೀ ಮತ್ತು ಕೀರ್ತಿಯ (Laskhmi and Keerthi) ಅಭಿನಯ ಆಪ್ತಮಿತ್ರ ಸಿನಿಮಾದ ಸೌಂದರ್ಯ ನಟನೆಗೆ ಹೋಲಿಕೆಯಾಗುತ್ತಿದ್ದು, ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ನಟಿಸಿ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದು, ಇಬ್ಬರ ನಟನೆಯನ್ನು ವೀಕ್ಷಕರು ಹೊಗಳುತ್ತಿದ್ದಾರೆ. ಅಲ್ಲದೇ ಕಥೆ ಎಷ್ಟು ಥ್ರಿಲ್ ಆಗಿದೆಯೆಂದರೆ ವೀಕ್ಷಕರ ಸಂಖ್ಯೆಯೂ ಅಧಿಕವಾಗಿದ್ದು, ಯಾವಾಗ ಕಾವೇರಿ ಎಲ್ಲವನ್ನೂ ಬಾಯಿ ಬಿಡುತ್ತಾರೆ ಎಂದು ಕಾಯುವವರೇ ಹೆಚ್ಚಾಗಿದ್ದಾರೆ. 
 

ಕಥೆಯಲ್ಲಿನ ಈ ಥ್ರಿಲ್ಲರ್ ಲೈನ್ ನಿಂದಾಗಿ ಎಲ್ಲಾ ಸೀರಿಯಲ್ ಗಳ ದಾಖಲೆಗಳನ್ನು ಮುರಿದು, ಲಕ್ಷ್ಮೀ ಬಾರಮ್ಮ ಧಾರಾವಾಹಿ ದಾಖಲೆಯ 7.2 ರೇಟಿಂಗ್ ಪಡೆದುಕೊಂಡಿದೆ. ನಿಜವಾಗ್ಲೂ ಭಯಂಕರವಾಗಿತ್ತು ಇವತ್ತಿನ ಎಪಿಸೋಡ್ ಅದ್ರಲ್ಲೂ ಲಕ್ಷ್ಮಿ ಮತ್ತು ಕೀರ್ತಿ ಆಕ್ಟಿಂಗ್ ಅಂತೂ ಬೆಂಕಿಯಾಗಿತ್ತು ಎಂದಿದ್ದಾರೆ ಜನ. ಅಷ್ಟೇ ಅಲ್ಲ ಇವತ್ತಿನ ಸಂಚಿಕೆ ನೋಡಿ ಆಪ್ತಮಿತ್ರ ಸಿನಿಮಾ ಕ್ಲೈಮಾಕ್ಸ್ ನಲ್ಲಿ ಸೌಂದರ್ಯ ಅವರ ನಾಗವಲ್ಲಿ ಸೀನ್ ಹಾಗೆ ನೆನಪಾಯ್ತು. ವರ್ಷಗಳ ನಂತರ ಹಾರರ್ ಕಥೆ ನಮ್ಮ ಕನ್ನಡ ಸೀರಿಯಲ್ ನಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ, ಈ ಸೀರಿಯಲ್ ತಂಡಕ್ಕೆ ಚಪ್ಪಾಳೆ ಎಂದಿದ್ದಾರೆ ವೀಕ್ಷಕರು. 
 

click me!