ತಮಿಳುನಾಡು ಸ್ವರ್ಗ, ಕರ್ನಾಟಕದಲ್ಲಿ ನರಕ! ಗಡಿ ರಸ್ತೆಗಳ ಹಕೀಕತ್ತು ಬಿಚ್ಚಿಟ್ಟ ಬ್ಲಾಗರ್; ನೆಟ್ಟಿಗರಿಂದ ಛೀಮಾರಿ!

Published : Feb 11, 2026, 08:22 PM IST

ಕರ್ನಾಟಕ-ತಮಿಳುನಾಡು ಗಡಿಯ ರಸ್ತೆಗಳ ಸ್ಥಿತಿಗತಿ ಕುರಿತ ವೈರಲ್ ವಿಡಿಯೋವೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡು ಭಾಗದಲ್ಲಿ ಸುಸಜ್ಜಿತ ರಸ್ತೆಗಳಿದ್ದರೆ, ಕರ್ನಾಟಕದ ತಾಳವಾಡಿ ಭಾಗದಲ್ಲಿ ದಶಕಗಳಿಂದ ದುರಸ್ತಿಯಾಗದ, ಗುಂಡಿ ಬಿದ್ದ ರಸ್ತೆಗಳು ಪ್ರಯಾಣಿಕರಿಗೆ ನರಕ ದರ್ಶನ ಮಾಡಿಸುತ್ತಿವೆ.

PREV
15
ಕರ್ನಾಟಕ ವರ್ಸಸ್ ತಮಿಳುನಾಡು ಗಡಿ ರಸ್ತೆಗಳು

'ಗಡಿ ದಾಟಿದ ಕೂಡಲೇ ಭಾಗ್ಯ ಬದಲಾಗುತ್ತದೆ' ಎನ್ನುವ ಮಾತು ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಅಕ್ಷರಶಃ ನಿಜವಾದಂತಿದೆ. ತಮಿಳುನಾಡಿನ ಗಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಸುಸಜ್ಜಿತ ರಸ್ತೆಗಳು ಸ್ವಾಗತಿಸಿದರೆ, ಕರ್ನಾಟಕದ ಗಡಿಯೊಳಗೆ ಕಾಲಿಟ್ಟ ಕೂಡಲೇ ಗುಂಡಿ ಬಿದ್ದ ರಸ್ತೆಗಳು ಮೈ-ಕೈ ನೋವು ತರಿಸುತ್ತಿವೆ. ಕನ್ನಡಿಗ ಬ್ಲಾಗರ್ ಒಬ್ಬರು ಚಿತ್ರೀಕರಿಸಿರುವ ಈ ರಸ್ತೆಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

25
ವೈರಲ್ ವಿಡಿಯೋದಲ್ಲಿ ಏನಿದೆ?

ಕರ್ನಾಟಕ ಮೂಲದ 'ಗಂಧದಗುಡಿ' ಹೆಸರಿನ ಬ್ಲಾಗರ್ ಒಬ್ಬರು ಕರ್ನಾಟಕ ಮತ್ತು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ತಾಳವಾಡಿಗೆ ಭೇಟಿ ನೀಡಿ ಈ ವಿಡಿಯೋ ಮಾಡಿದ್ದಾರೆ. ಆಟೋವೊಂದರಲ್ಲಿ ಪ್ರಯಾಣಿಸುತ್ತಾ ಗಡಿ ಭಾಗದ ರಸ್ತೆಗಳ ಸ್ಥಿತಿಯನ್ನು ಅವರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ತಮಿಳುನಾಡು ವ್ಯಾಪ್ತಿಗೆ ಬರುವ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟದಲ್ಲಿವೆ. 'ಇಲ್ಲಿನ ರಸ್ತೆಗಳು ಎಷ್ಟು ನುಣುಪಾಗಿವೆ ಎಂದರೆ, ರಸ್ತೆಯ ಮೇಲೆ ತುಪ್ಪ ಚೆಲ್ಲಿದರೂ ಅದನ್ನು ವಾಪಸ್ ಬಳಸಿಕೊಳ್ಳಬಹುದು' ಎಂದು ಅವರು ತಮಿಳುನಾಡು ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ಶ್ಲಾಘಿಸಿದ್ದಾರೆ.

35
ಕರ್ನಾಟಕದ ರಸ್ತೆಗಳೆಂದರೆ ಧೂಳು-ಮಣ್ಣಿನ ರಾಶಿ

ಆದರೆ, ಅದೇ ರಸ್ತೆಯ ಮುಂದುವರಿದ ಭಾಗ ಕರ್ನಾಟಕದ ಗಡಿಗೆ ಪ್ರವೇಶಿಸುತ್ತಿದ್ದಂತೆಯೇ ರಸ್ತೆಯ ಚಿತ್ರಣವೇ ಬದಲಾಗುತ್ತದೆ. ಇಲ್ಲಿ ಡಾಂಬರ್ ಕಂಡು ದಶಕಗಳೇ ಕಳೆದಿವೆ ಎನ್ನುವಷ್ಟು ಹೀನಾಯ ಸ್ಥಿತಿಯಿದೆ. ಜಲ್ಲಿಕಲ್ಲುಗಳು ಎದ್ದು ಹೋಗಿದ್ದು, ಮಣ್ಣು ಮತ್ತು ದೂಳಿನ ಹಾವಳಿ ಹೆಚ್ಚಾಗಿದೆ. ರಸ್ತೆಯಲ್ಲಿ ಬಿದ್ದಿರುವ ಬೃಹತ್ ಗುಂಡಿಗಳನ್ನು ಕಂಡು ಕನ್ನಡಿಗರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಸ್ಥಳೀಯರು ಸಂಚಾರಕ್ಕಾಗಿ ತಾವೇ ಕಲ್ಲು-ಮಣ್ಣುಗಳನ್ನು ತಂದು ಗುಂಡಿ ಮುಚ್ಚುವ ಪರಿಸ್ಥಿತಿ ಬಂದೊದಗಿದೆ.

45
ಹತ್ತು ವರ್ಷಗಳಿಂದ ಇದೇ ನರಕ

ಸ್ಥಳೀಯ ನಿವಾಸಿಗಳ ಅಳಲು ಕೇಳುವವರಿಲ್ಲದಂತಾಗಿದೆ. 'ಕಳೆದ 10 ವರ್ಷಗಳಿಂದ ಈ ರಸ್ತೆಯನ್ನು ಯಾರೂ ರಿಪೇರಿ ಮಾಡಿಲ್ಲ. ಬೇಸಿಗೆಯಲ್ಲಿ ಧೂಳಿನ ಮಜ್ಜನವಾದರೆ, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ನರಕಕ್ಕೆ ಸಮಾನ. ರಾತ್ರಿ ವೇಳೆ ವಾಹನ ಚಾಲನೆ ಮಾಡುವುದು ಜೀವ ಕೈಯಲ್ಲಿ ಹಿಡಿದು ನಡೆದಂತೆ' ಎಂದು ಸ್ಥಳೀಯರು ನೋವು ತೋಡಿಕೊಂಡಿದ್ದಾರೆ. ಇನ್ನು ಕೆಲವರು 'ನಮ್ಮ ರಾಜ್ಯದಲ್ಲಿ ರಸ್ತೆ ಮಾಡಲು ಬಜೆಟ್ ಇಲ್ಲವೇ?' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

55
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕರ್ನಾಟಕ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಕದ ರಾಜ್ಯಗಳು ಗಡಿ ಭಾಗದ ಕೊನೆಯ ಹಳ್ಳಿಯವರೆಗೂ ಉತ್ತಮ ರಸ್ತೆಗಳನ್ನು ನಿರ್ಮಿಸುತ್ತಿದ್ದರೆ, ನಮ್ಮಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಈ ರಸ್ತೆಗಳಿಗೆ ಮುಕ್ತಿ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories