ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿ ಚಿನ್ನ ಇಟ್ಟಿದ್ದ ದಂಪತಿಗೆ ಆಘಾತ: 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆ

Published : Feb 15, 2026, 03:01 PM IST

ಗುಜರಾತ್‌ನ ವಡೋದರಾದಲ್ಲಿ, ಮಗಳ ಮದುವೆಗೆಂದು ಎನ್‌ಆರ್‌ಐ ಕುಟುಂಬವೊಂದು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆಯಾಗಿದೆ. ಮದುವೆಗೆ ಕೆಲವೇ ದಿನಗಳಿರುವಾಗ ಈ ಘಟನೆ ಬೆಳಕಿಗೆ ಬಂದಿದೆ. 

PREV
19
ಮಗಳ ಮದುವೆಗಿಟ್ಟಿದ್ದ ಚಿನ್ನ ನಾಪತ್ತೆ

ಕಷ್ಟಕಾಲಕ್ಕೆಂದು ಬ್ಯಾಂಕ್‌ನಲ್ಲಿ ಇಡುವ ನಿಮ್ಮ ಚಿನ್ನ ಎಷ್ಟು ಸುರಕ್ಷಿತ ಇಂತಹದೊಂದು ಪ್ರಶ್ನೆಯನ್ನು ಈಗ ಬ್ಯಾಂಕ್‌ಗಳಲ್ಲಿ ಹಣ ಚಿನ್ನ ಇಡುವ ಪ್ರತಿಯೊಬ್ಬರು ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು ಕೆಲ ದಿನಗಳ ಹಿಂದಷ್ಟೇ ಗ್ರಾಹಕರೊಬ್ಬರು ಎಸ್‌ಬಿಐ ಬ್ಯಾಂಕ್‌ನ ಲಾಕರ್‌ನಲ್ಲಿ ಇಟ್ಟಿದ್ದ ಸುಮಾರು 2 ಕೋಟಿ ಮೌಲ್ಯದ ಚಿನ್ನಾಭರಣಗಳಿದ್ದ ಲಾಕರ್ ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಗುಜರಾತ್‌ನ ವಡೋದರಾದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ.

29
ಬ್ಯಾಂಕ್‌ನಲ್ಲಿಟ್ಟ ನಿಮ್ಮ ಚಿನ್ನ ಎಷ್ಟು ಸುರಕ್ಷಿತ

ಮಗಳ ಮದುವೆಗೆಂದು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆಯಾಗಿದೆ. ಮದುವೆಗೆ ಇನ್ನೇನು ಕೆಲ ದಿನಗಳಿರುವಾಗ ಬ್ಯಾಂಕಿಗೆ ಹೋಗಿ ಲಾಕರ್ ತೆಗೆದ ತಂದೆಗೆ ಆಘಾತ ಕಾದಿದೆ. ಕಳೆದ ಗುರುವಾರ ಈ ಘಟನೆ ನಡೆದಿದೆ. ಅಮೆರಿಕದಲ್ಲಿ ನೆಲೆಸಿರುವ ಗುಜರಾತ್‌ನ ವಡೋದರಾ ಮೂಲದ ಕುಟುಂಬವೊಂದು ತಮ್ಮ ಮಗಳ ಮದುವೆಗಾಗಿ ಬ್ಯಾಂಕಿನ ಲಾಕರ್‌ನಲ್ಲಿ ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಇರಿಸಿತ್ತು. ಮದುವೆ ನಿಗದಿಯಾದ ಹಿನ್ನೆಲೆ ಕುಟುಂಬದವರು ಬ್ಯಾಂಕ್‌ನ ಸೇಫ್ ಡಿಪಾಸಿಟ್ ಲಾಕರ್‌ನಿಂದ ಚಿನ್ನಾಭರಣಗಳನ್ನು ತೆಗೆದುಕೊಳ್ಳಲು ಬ್ಯಾಂಕ್‌ಗೆ ಬಂದಾಗ ಅಲ್ಲಿನ ಲಾಕರ್ ಖಾಲಿ ಆಗಿರುವುದು ನೋಡಿ ಆಘಾತಗೊಂಡಿದ್ದಾರೆ.

39
ನರೇಂದ್ರ ಶಾ ಎಂಬುವವರು ಇಟ್ಟಿದ್ದ ಚಿನ್ನ

ನರೇಂದ್ರ ಶಾ ಎಂಬುವವರು ವಡೋದರಾದ ವಾಘೋಡಿಯಾ ರಸ್ತೆಯಲ್ಲಿರುವ ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್‌ ಸೇಫ್ ಡಿಪಾಸಿಟ್ ಲಾಕರ್‌ನಲ್ಲಿ ಸುಮಾರು 35 ತೊಲ(408 ಗ್ರಾಂ) ಚಿನ್ನ ಇರಿಸಿದ್ದರು. ಫೆಬ್ರವರಿ 18 ರಂದು ತಮ್ಮ ಮಗಳ ಮದುವೆ ನಿಗದಿಯಾಗಿದ್ದರಿಂದ ಚಿನ್ನವನ್ನು ಮನೆಗೆ ತರುವ ಉದ್ದೇಶದಿಂದ ಅವರು ಮತ್ತು ಅವರ ಪತ್ನಿ ಬ್ಯಾಂಕಿಗೆ ಹೋಗಿ ಲಾಕರ್ ತೆಗೆದಾಗ ಅದರ ಅಲ್ಯೂಮಿನಿಯಂ ಬಾಕ್ಸ್‌ನ ಬೀಗ ಮುರಿದಿದ್ದು, ಅದರಲ್ಲಿದ್ದ 65 ಗ್ರಾಂ ಚಿನ್ನ ಕಾಣೆಯಾಗಿರುವುದು ಕಂಡುಬಂದಿದೆ ಎಂದು ಶಾ ಹೇಳಿದ್ದಾರೆ.

49
ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್‌ ಸೇಫ್ ಡಿಪಾಸಿಟ್ ಲಾಕರ್‌ನಿಂದ ಚಿನ್ನ ಮಿಸ್ಸಿಂಗ್

ನಾವು ಅಮೆರಿಕದಲ್ಲಿ ವಾಸಿಸುತ್ತಿದ್ದು, ನಮ್ಮ ಮಗಳ ಮದುವೆಗಾಗಿ ವಡೋದರಾಕ್ಕೆ ಬಂದಿದ್ದೇವೆ. ನಾವು ಲಾಕರ್ ಅನ್ನು ನಿರ್ವಹಿಸಲು ಬ್ಯಾಂಕ್‌ಗೆ ಭೇಟಿ ನೀಡಿದ್ದೆವು. ಈ ವೇಳೆ ಲಾಕರ್‌ನ ಅಲ್ಯೂಮಿನಿಯಂ ಪೆಟ್ಟಿಗೆಯ ಬೀಗ ಮುರಿದಿರುವುದು ಕಂಡು ಅನುಮಾನಗೊಂಡು ಪೆಟ್ಟಿಗೆ ತೆರೆದು ನೋಡಿದಾಗ ಕೆಲವು ಚಿನ್ನದ ಆಭರಣಗಳು ಕಾಣೆಯಾಗಿದ್ದವು. ನಮ್ಮಅನುಮಾನ ನಿಜವಾಯಿತು. ನಾವು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟ ನಮ್ಮ ವಸ್ತುಗಳ ಪಟ್ಟಿ ನಮ್ಮಲ್ಲಿದೆ. ಬಳೆಗಳು, ಬ್ರೇಸ್‌ಲೇಟ್, ಹಾರ ಮತ್ತು ಹತ್ತು ಚಿನ್ನದ ನಾಣ್ಯಗಳು ಸೇರಿದಂತೆ ಒಟ್ಟು 30ರಿಂದ 35 ತೊಲ (408 ಗ್ರಾಂ) ಚಿನ್ನ ಹಾಗೂ ಚಿನ್ನವನ್ನು ತಯಾರಿಸುವ ಇತರ ಆಭರಣಗಳಿವೆ. ಸೇಫ್ ಡಿಪಾಸಿಟ್ ಲಾಕರ್‌ನಲ್ಲಿ ಇಟ್ಟಿದ್ದ ಬೆಳ್ಳಿ ಆಭರಣಗಳು ಮತ್ತು ವಸ್ತುಗಳು ಕಳವಾಗದೇ ಹಾಗೆ ಇವೆ.

59
ಸರಿಯಾಗಿ ಪ್ರತಿಕ್ರಿಯಿಸದ ಬ್ಯಾಂಕ್

ಈ ಬಗ್ಗೆ ಪ್ರಶ್ನಿಸಿದರೆ ಬ್ಯಾಂಕ್ ನಿರಾಶಾದಾಯಕ ಉತ್ತರಗಳನ್ನು ನೀಡುತ್ತಿದೆ ಹೀಗಾಗಿ ಪೊಲೀಸರನ್ನು ಸ್ಥಳಕ್ಕೆ ಕರೆಸಿದೆ ಎಂದು ನರೇಂದ್ರ ಶಾ ಹೇಳಿದರು. ನಾವು ಬ್ಯಾಂಕಿನ ಅಧಿಕಾರಿಗಳನ್ನು ಚಿನ್ನದ ಬಗ್ಗೆ ಕೇಳಿದಾಗ, ಅವರು ತೃಪ್ತಿಯಾಗುವ ಉತ್ತರ ನೀಡಲಿಲ್ಲ, ಅಲ್ಲದೇ ಒಳಗೊಳಗೇ ವಿಷಯವನ್ನು ಪರಿಹರಿಸಲು ಒತ್ತಾಯಿಸಿದರು. ನನ್ನ ಮಗಳ ಮದುವೆ ನಾಳೆ ಅಲ್ಲ ನಾಡಿದು ನಿಗದಿಯಾಗಿದೆ. ಹೀಗಾಗಿ ನಮಗೆ ಪೊಲೀಸರಿಗೆ ಕರೆ ಮಾಡದೆ ಬೇರೆ ದಾರಿಯಿರಲಿಲ್ಲ.

69
ಪೊಲೀಸರಿಗೆ ಕರೆ ಮಾಡಿದ ದಂಪತಿ

2024 ರಲ್ಲಿ ನಾನು ಬ್ಯಾಂಕಿನಲ್ಲಿ ಲಾಕರ್‌ಗಾಗಿ ಅರ್ಜಿ ಸಲ್ಲಿಸಿದ್ದು, ಅದಕ್ಕಾಗಿ ಕಡ್ಡಾಯ ಸ್ಥಿರ ಠೇವಣಿಯನ್ನು ಸಹ ಮಾಡಿದ್ದೆ. ನಾವು ಎಲ್ಲಾ ಚಿನ್ನ ಮತ್ತು ಅಮೂಲ್ಯ ಆಭರಣಗಳನ್ನು ಲಾಕರ್‌ನಲ್ಲಿ ಇರಿಸಿದ್ದೇವೆ. ನಾವು ಸ್ವಲ್ಪ ಸಮಯದಿಂದ ಬ್ಯಾಂಕಿಗೆ ಭೇಟಿ ನೀಡಿರಲಿಲ್ಲ,, ಆದ್ದರಿಂದ ಮ್ಯಾನೇಜ್‌ಮೆಂಟ್‌ನವರು ನಮ್ಮ ಚಿನ್ನ ಎಲ್ಲಿದೆ ಎಂದು ಉತ್ತರಿಸಬೇಕಾಗಿದೆ ಎಂದು ನರೇಂದ್ರ ಶಾ ಹೇಳಿದರು.

79
ಬಾಪೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಕುಟುಂಬ ಸಲ್ಲಿಸಿದ ದೂರಿನ ಮೇರೆಗೆ ವಡೋದರಾ ನಗರದ ಬಾಪೋಡ್ ಪೊಲೀಸ್ ಠಾಣೆ ಘಟನೆ ಬಗ್ಗೆ ತನಿಖೆ ಆರಂಭಿಸಿದೆ. ಡ್ಯುಯಲ್ ಕೀ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕಿನ ಸೇಫ್ ಡಿಪಾಸಿಟ್ ಲಾಕರ್‌ನ ಕಾರ್ಯಾಚರಣೆಯ ವಿವರಗಳನ್ನು ಪ್ರಾಥಮಿಕ ತನಿಖೆಯಲ್ಲಿ ಪರಿಶೀಲಿಸಲಾಗುವುದು ಎಂದು ಬಾಪೋಡ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

89
ತನಿಖೆ ಆರಂಭಿಸಿದ ಪೊಲೀಸರು

ಚಿನ್ನ ಕಾಣೆಯಾಗಿದೆ ಎಂದು ತಿಳಿದ ತಕ್ಷಣ ಕುಟುಂಬವು ಬ್ಯಾಂಕಿನಿಂದ ಪೊಲೀಸರಿಗೆ ಕರೆ ಮಾಡಿತ್ತು. ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ. ಲಾಕರ್ ಅನ್ನು ಡ್ಯುಯಲ್ ಕೀ ಸಿಸ್ಟಮ್ ಮೂಲಕ ನಿರ್ವಹಿಸಲಾಗುತ್ತಿತ್ತು ಮತ್ತು ಒಂದೇ ಕುಟುಂಬದ ಕೆಲವು ಸದಸ್ಯರಿಗೆ ಲಾಕರ್ ಅನ್ನು ಜಂಟಿಯಾಗಿ ಬಳಸಲು ಅಧಿಕಾರ ನೀಡಲಾಗಿದೆ ಎಂದು ನಮಗೆ ತಿಳಿದಿದೆ. ಬ್ಯಾಂಕಿನ ಸೇಫ್ ಡಿಪಾಸಿಟ್ ಲಾಕರ್ ಆಪರೇಷನ್ ರಿಜಿಸ್ಟರ್‌ನ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ, ಅದನ್ನು ಕೊನೆಯದಾಗಿ ಯಾವಾಗ ಮತ್ತು ಯಾರಿಂದ ನಿರ್ವಹಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಬ್ಯಾಂಕಿನಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

99
ಬ್ಯಾಂಕ್‌ಗೆ ಆಗಮಿಸಿದ ಇತರ ಗ್ರಾಹಕರು

ನರೇಂದ್ರ ಶಾ ದಂಪತಿಗಳ ಘಟನೆಯ ನಂತರ, ಕಾಸ್ಮೋಸ್ ಬ್ಯಾಂಕಿನಲ್ಲಿ ಹಣ ಚಿನ್ನಾಭರಣ ಡೆಪಾಸಿಟ್ ಇಟ್ಟಿರುವ ಅನೇಕರು ತಮ್ಮ ಲಾಕರ್‌ಗಳಲ್ಲಿರುವ ತಮ್ಮ ವಸ್ತುಗಳು ಸುರಕ್ಷಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಶಾಖೆಗೆ ಬಂದಿದ್ದಾರೆ. ಶಾ ನೀಡಿದ ದೂರಿನ ಮೇರೆಗೆ ಪ್ರಾಥಮಿಕ ತನಿಖೆ ನಡೆಸಲು ಪೊಲೀಸರು ಸ್ಥಳಕ್ಕೆ ಆಗಮಿಸಿದಾಗಲೂ, ಗ್ರಾಹಕರು ತಮ್ಮ ಲಾಕರ್‌ಗಳನ್ನು ಪಡೆಯಲು ಬ್ಯಾಂಕಿನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories