
ಸ್ವರ್ಗಲೋಕದ ವೃಕ್ಷ ಎಂದೇ ಹೇಳಲಾಗುವ ಪಾರಿಜಾತ ವೃಕ್ಷವು ಸನಾತನ ಧರ್ಮದ ಜೊತೆ ಬೆಸುಗೆ ಹೊಂದಿದೆ. ಈ ಗಿಡದ ಹೂವು, ಎಲೆಗಳು ಆರೋಗ್ಯದ ಆಗರವಾಗಿದೆ. ಚಿಕುನ್ ಗುನ್ಯಾ, ಯಾವುದೇ ರೀತಿಯ ಜ್ವರ, ಕೀಲು ನೋವು, ಫಂಗಲ್ ಇನ್ಫೆಕ್ಷನ್ , ಸಣ್ಣ ಕರುಳಿನಲ್ಲಿ ಆಗುವ ಸೋಂಕುಗಳು, ಮಲಬದ್ಧತೆ, ಅಜೀರ್ಣ, ಉಸಿರಾಟ, ಆಸ್ತಮಾ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಇದರಲ್ಲಿ ಇದೆ.
ಅಷ್ಟಕ್ಕೂ ಪಾರಿಜಾತ ವೃಕ್ಷವನ್ನು ಸ್ವರ್ಗದ ವೃಕ್ಷ ಎಂದೇ ಕರೆಯಲಾಗುತ್ತದೆ. ಇದು ಸಮುದ್ರ ಮಂಥನದಲ್ಲಿ ದೊರೆತ ದೈವಿಕ ಶಕ್ತಿಯುಳ್ಳ ಮರವಾಗಿದೆ. ಮೂತಃ ಇದು ಸ್ವರ್ಗದಲ್ಲಿರುವ ಮರವಾಗಿದ್ದು, ಇದನ್ನು ಭೂಮಿಗೆ ತಂದಿರುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇದರ ವಿಶೇಷತೆ ಎಂದರೆ, ಇದು ರಾತ್ರಿ ಅರಳಿ ನೆಲದ ಮೇಲೆ ಬೀಳುತ್ತವೆ. ಆದರೆ, ನೆಲದ ಮೇಲೆಯೇ ಬಿದ್ದ ಹೂವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಇದು ಪಾರಿಜಾತ ಹೂವಿಗೆ ಮಾತ್ರ ಇರುವ ಶಕ್ತಿ. ಸಾಮಾನ್ಯವಾಗಿ ನೆಲದ ಮೇಲೆ ಬಿದ್ದ ಹೂವುಗಳನ್ನು ದೇವರಿಗೆ ಮುಡಿಸುವುದಿಲ್ಲ. ಆದರೆ ಪಾರಿಜಾತ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಇದಕ್ಕೆ ಕೆಲವು ಪೌರಾಣಿಕ ಕಥೆಗಳೂ ಇವೆ.
ಆದರೆ ಇಲ್ಲಿ ಹೇಳಹೊರಟಿರುವುದು ಇದರ ಪ್ರಯೋಜನಗಳ ಬಗ್ಗೆ. ಅದರ ವಿವರಗಳನ್ನು ಖ್ಯಾತ ವೈದ್ಯೆ ಸೌಶ್ರೀ ರಾವ್ ಅವರು ಈ ಕೆಳಗಿನ ವಿಡಿಯೋದಲ್ಲಿ ವಿವರಿಸಿದ್ದಾರೆ.
ಪಾರಿಜಾತ ಎಲೆಗಳು ಜ್ವರವನ್ನು ಕಡಿಮೆ ಮಾಡಲು ಮತ್ತು ಶೀತದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಹೂವಿನ ಕಷಾಯ ಮಾಡಿ ಕುಡಿಯುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. ಪಾರಿಜಾತದ ಎಲೆಗಳನ್ನು ಅರೆದು ಚರ್ಮದ ಮೇಲೆ ಹಚ್ಚುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ವೈದ್ಯೆ ಹೇಳಿದ್ದಾರೆ.
ಪಾರಿಜಾತವು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ಆಂಟಿಹೆಲ್ಮಿಂಟಿಕ್ ಗುಣಗಳನ್ನು ಹೊಂದಿದೆ. ಪಾರಿಜಾತದ ಎಣ್ಣೆಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾರಿಜಾತವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ಇದು ಸಹಕಾರಿ.
ಇಷ್ಟೇ ಅಲ್ಲದೇ ವೈದ್ಯರ ಪ್ರಕಾರ, ಇದರ ತೊಗಟೆಯಿಂದಲೂ ಪ್ರಯೋಜನಗಳಿವೆ. ಪಾರಿಜಾತ ಹೂವುಗಳನ್ನು ಅಥವಾ ಅಅದರ ರಸವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ತಕ್ಕಮಟ್ಟಗೆ ಪರಿಹಾರ ದೊರೆಯುತ್ತದೆ. ಈ ಹೂವುಗಳ ಸುವಾಸನೆಯನ್ನು ತೆಗೆದುಕೊಂಡರೆ ಒತ್ತಡವು ದೂರಾಗುತ್ತದೆ. ಇಂಥ ಅಪಾರ ಗುಣ ಇರುವುದರಿಂದಲೇ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮ ಮಂದಿರದ ಭೂಮಿ ಭೂಜೆಯನ್ನು 2020 ರ ಆಗಸ್ಟ್ 5 ರಂದು ಮಾಡಲು ಬಂದಾಗ ಅಲ್ಲಿ ಪಾರಿಜಾತ ಹೂವಿನ ಗಿಡ ನೆಟ್ಟಿದ್ದರು.
ಪಾರಿಜಾತದ ಎಲೆಗಳನ್ನು, ತೊಗಟೆಯನ್ನು ಕುದಿಸಿ ಸೇವಿಸುವುದರಿಂದ ಶೀತ, ಜ್ವರ, ಶೀತದಿಂದುಂಟಾಗುವ ಇತರ ಸಮಸ್ಯೆಗಳು ನಿವಾರಣೆಯಾಗುತ್ತದೆ. ಉದರ ಸಂಬಂಧಿ ಸಮಸ್ಯೆಗಳಿಗೆ ಸೇರಿದಂತೆ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಪಾರಿಜಾತಕ್ಕಿದೆಯೆಂದು ಆಯುರ್ವೇದ ತಜ್ಞರು ಹೇಳುತ್ತಾರೆ.