
ಬಿಗ್ಬಾಸ್ ಸೀಸನ್ 10ರಲ್ಲಿ ಭಾರಿ ಸದ್ದು ಮಾಡಿದ್ದವರ ಪೈಕಿ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಜೋಡಿ ಕೂಡ ಒಂದು. ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಬಳಿಕ ಇಬ್ಬರ ಮನಸ್ಸಲ್ಲಿ ಪ್ರೀತಿ ಅರಳಿದೆ ಎನ್ನುವ ಗಾಸಿಪ್ ಹಬ್ಬಿತ್ತು. ಇತರ ಸ್ಪರ್ಧಿಗಳು ಕೂಡ ಇವರಿಬ್ಬರ ಬಗ್ಗೆ ಸಾಕಷ್ಟು ಮಾತನಾಡಿಕೊಳ್ತಿದ್ರು.
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಈ ಜೋಡಿಯ ಮೇಲೆ ಎಲ್ಲರ ಕಣ್ಣು ಇದ್ದೇ ಇದೆ. ಇವರು ಸ್ನೇಹಿತರಾಗಿ ಮುಂದುವರೆದಿದ್ದರು. ಅನೇಕ ಬಾರಿ ಭೇಟಿ ಕೂಡ ಆಗಿದ್ದಾರೆ. ಆಗಾಗ ಇಬ್ಬರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರು. ಆದ್ದರಿಂದ ಇವರ ನಡುವಿನ ಸಂಬಂಧದ ಬಗ್ಗೆ ಹಲವಾರು ರೀತಿ ಸುದ್ದಿ ಹರಡಿಕೊಂಡದ್ದು ಇದೆ.
ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಎಲ್ಲಿಗೆ ಹೋದ್ರೂ ಇಬ್ಬರ ಮದುವೆ ಬಗ್ಗೆ ಜನರು ಕೇಳುತ್ತಲೇ ಇರ್ತಾರೆ. ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಮದುವೆ ಆಗಬೇಕು ಎಂದು ಫ್ಯಾನ್ಸ್ ಬೇಡಿಕೆ ಆಗಿದೆ. ಈ ಜೋಡಿಯ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅದರ ನಡುವೆಯೇ ವರ್ತೂರು ಸಂತೋಷ್ ಮೊದಲೇ ಮದ್ವೆಯಾಗಿದ್ದಾರೆ ಎಂಬ ಫೋಟೋ ಕೂಡ ಹರಿದಾಡಿದ್ದವು. ಪತ್ನಿಗೆ ಇವರು ಕಿರುಕುಳ ಕೊಟ್ಟಿದ್ದರಿಂದ ಅವರು ದೂರವಾಗಿದ್ದಾರೆ ಎಂಬೆಲ್ಲಾ ಆರೋಪ ಇವರ ಮೇಲೆ ಬಂದಿತ್ತು.
ಕೊನೆಗೆ ವರ್ತೂರು ಅವರು, ಕಾಲಾಯ ತಸ್ಮೈ ನಮಃ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. ಮದುವೆ ಎನ್ನುವುದು ವೈಯಕ್ತಿಕ ವಿಷಯ. ನಾನು ಎಲ್ಲಿಯೂ ನನ್ನ ಮದ್ವೆಯಾಗಿಲ್ಲ ಎಂದು ಹೇಳಿಲ್ಲ. ಈಗಲೂ ನನ್ನ ಮಾತು ಒಪ್ಪಿ ಬಂದರೆ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ. ಎಲ್ಲೂ ಯಾರ ಮೇಲೂ ನಾನು ಆರೋಪ ಹೊರಿಸುತ್ತಿಲ್ಲ ಎಂದಿದ್ದರು. ಕೊನೆಗೆ ಆ ವಿಷಯ ಅಲ್ಲಿಯೇ ತಣ್ಣಗಾಯಿತು. ಅದರ ನಡುವೆಯೇ, ವರ್ತೂರು ಮತ್ತು ತನಿಷಾ ಕುಪ್ಪಂಡ ಮಧ್ಯೆ ಕುಚ್ ಕುಚ್ ನಡೆಯುತ್ತಿದೆ ಎಂದೇ ಸದ್ದು ಮಾಡಿತ್ತು.
ಈ ಬಗ್ಗೆ ತನಿಷಾ ಅವರಿಗೆ ಕಂಟೆಂಟ್ ಕ್ರಿಯೇಟರ್ ಒಬ್ಬರು ಪ್ರಶ್ನೆ ಕೇಳಿದ್ದಾರೆ. ವರ್ತೂರು ಸಂತೋಷ್ ಮದುವೆಯ ಬಗ್ಗೆ ಕೇಳಿದಾಗ ಗರಂ ಆದ ತನಿಷಾ, ನಾನೇನಾದ್ರೂ ಅವರನ್ನು ಮದ್ವೆಯಾಗ್ತೇನೆಂದು ಹೇಳಿದ್ನಾ, ಇಲ್ವಲ್ಲಾ ಮತ್ತೆ ಅವ್ರ ಮದುವೆಯ ಬಗ್ಗೆ ನನಗ್ಯಾಕೆ ಕೇಳ್ತೀರಿ. ಅದು ಅವರ ಬಳಿಯೇ ಕೇಳಿ ಎಂದಿದ್ದಾರೆ. ಬೇರೆಯವರ ವಿಷ್ಯ ನನಗೇನು ಎಂದು ಪ್ರಶ್ನಿಸಿದ್ದಾರೆ.
ಇದಾಗಲೇ ವರ್ತೂರು ಸಂತೋಷ್ ಅವರು ಮತ್ತೊಂದು ಮದುವೆಯ ಬಗ್ಗೆ ಇದಾಗಲೇ ಮಾತನಾಡಿದ್ದಾರೆ. ನನ್ನ ಜೀವನದಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇನೋ ಹೇಳ್ತಾರಲ್ಲ, ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ ಎಂದು. ಹಾಗೆ ಆಗಿದೆ ನನ್ನ ಜೀವನ. ಆದರೆ ನಾನು ಮುಂದಿನ ಹೆಜ್ಜೆ ಇಡುತ್ತಿದ್ದೇನೆ. ಮತ್ತೊಂದು ಮದುವೆಗೆ ಸಿದ್ಧನಾಗಿದ್ದೇನೆ. ಹುಡುಗಿಯೂ ನಮ್ಮ ಸಂಬಂಧಿಕಳೇ. ಅವಳ ಜೊತೆ ಒಡನಾಟವಿದೆ. ಶೀಘ್ರದಲ್ಲಿಯೇ ಮದುವೆಯಾಗುತ್ತೇವೆ ಎಂದಿದ್ದರು ಸಂತೋಷ್.
ಇದೇ ವೇಳೆ, ತನಿಷಾ ಕುಪ್ಪಂಡ ಅವರ ವಿಷಯವನ್ನೂ ತಿಳಿಸಿದ ವರ್ತೂರು ಅವರು, ನಾನು ಮದ್ವೆಯಾಗ್ತಿದ್ದೇನೆ ಎಂದು ಹೇಳಿದ ತಕ್ಷಣ ಮತ್ತೆ ತನಿಷಾ ಹೆಸರನ್ನು ಎಳೆದು ತರಬೇಡಿ ಪಾಪ. ಅವಳು ನನ್ನ ಫ್ರೆಂಡ್ ಅಷ್ಟೇ. ಈ ವಿಡಿಯೋ ನೋಡ್ತಿರೋರಿಗೆ ನಾನು ಸ್ಪಷ್ಟನೆ ಕೊಡುತ್ತಿದ್ದೇನೆ. ನಾನು ಮದ್ವೆಯಾಗ್ತಿರೋ ಹುಡುಗಿ ನನ್ನ ಸಂಬಂಧಿಕಳು. ಇಬ್ಬರೂ ಮೀಟ್ ಆಗ್ತಾ ಇರ್ತೇವೆ, ಮತ್ತೆ ತನಿಷಾ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದರು. ಹುಡುಗನಿಗೆ ಹುಡುಗಿ ಇರಬೇಕು, ಹುಡುಗಿಗೆ ಹುಡುಗನೊಬ್ಬ ಇರಬೇಕು. ಅಂದ್ರೆ ಮಾತ್ರ ಜೀವನ ಆಗುವುದು. ಎಲ್ಲರಿಗೂ ಒಬ್ಬೊಬ್ಬರು ಇದ್ದೇ ಇರುತ್ತಾರೆ ಎಂದೂ ಹೇಳಿದ್ದರು ವರ್ತೂರು.