ಜಿಂಬಾಬ್ವೆ ಪ್ರವಾಸ.. ಬಿಸಿಸಿಐ ಆಯ್ಕೆ ಸಮಿತಿ ಮಾಡಿದ ಮೂರು ದೊಡ್ಡ ಪ್ರಮಾದಗಳು..!

Published : Jul 07, 2026, 05:14 PM IST

ಜಿಂಬಾಬ್ವೆ ಪ್ರವಾಸಕ್ಕೆ ಭಾರತೀಯ ಟಿ20 ತಂಡದ ಆಯ್ಕೆಯು ಭಾರೀ ಚರ್ಚೆಗೆ ನಾಂದಿ ಹಾಡಿದೆ. ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಗೆಲುವಿನ ಸೂತ್ರದ ಬದಲು ಪ್ರಮಾದಗಳ ಸರಮಾಲೆ ಸೃಷ್ಟಿಸಿದೆಯೇ ಎಂಬ ಅನುಮಾನ ಮೂಡುತ್ತಿದೆ. ಮೂರು ಆಟಗಾರರ ಆಯ್ಕೆಯು ತೀವ್ರ ವಿಮರ್ಶೆಗೆ ಗುರಿಯಾಗಿದ್ದು, ಅವುಗಳ ವಿಶ್ಲೇಷಣೆ ಇಲ್ಲಿದೆ.

PREV
15
ವಿವಾದ ಮೈಮೇಲೆ ಎಳೆದುಕೊಂಡ ಬಿಸಿಸಿಐ

ಜಿಂಬಾಬ್ವೆ ವಿರುದ್ಧದ ಸರಣಿಗಾಗಿ ಭಾರತ ತಂಡವನ್ನು ಘೋಷಿಸಲಾಗಿದೆ. ಸಾಮಾನ್ಯವಾಗಿ ಇಂತಹ ಸಣ್ಣ ಸರಣಿಗಳಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತದೆ. ಈ ಬಾರಿ ಆಯ್ಕೆಗಾರರು ಪ್ರತಿಭೆಗಿಂತ ಹೆಚ್ಚಾಗಿ ಕೆಲವು ಆಟಗಾರರ ಹಳೆಯ ಹೆಸರನ್ನು ನೋಡಿ ಮರುಳಾದಂತೆ ತೋರುತ್ತಿದೆ. ಪ್ರಸ್ತುತ ಫಾರ್ಮ್ ಮತ್ತು ಅಂಕಿ-ಅಂಶಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಮಾಡಲಾದ ಈ ಮೂರು ಆಯ್ಕೆಗಳು ವಿವಾದದ ಸುಳಿಗೆ ಸಿಲುಕಿವೆ.

25
ಪ್ರಮಾದ 1: ವೇಗವಿಲ್ಲದ, ವಿಕೆಟ್ ಇಲ್ಲದ ಮಯಾಂಕ್‌ಗೆ ಮಣೆ!

ವೇಗಿ ಮಯಾಂಕ್ ಯಾದವ್ ಅವರನ್ನು ಟಿ20 ತಂಡಕ್ಕೆ ಸೇರಿಸಿಕೊಂಡಿರುವುದು ಎಲ್ಲಕ್ಕಿಂತ ದೊಡ್ಡ ಅಚ್ಚರಿ. 2024ರ ಐಪಿಎಲ್‌ನಲ್ಲಿ ತಮ್ಮ ವೇಗದಿಂದ ಸೆನ್ಸೇಷನ್ ಸೃಷ್ಟಿಸಿದ್ದು ಹೌದು. ನಂತರ ಸತತ ಗಾಯಗಳಿಂದಾಗಿ ಮಯಾಂಕ್ ತಮ್ಮ ಲಯ ಕಳೆದುಕೊಂಡಿದ್ದಾರೆ. 2026ರ ಐಪಿಎಲ್‌ನಲ್ಲಿ ಮಯಾಂಕ್ ಆಡಿದ್ದು ಕೇವಲ 4 ಪಂದ್ಯಗಳನ್ನು ಮಾತ್ರ. ಅಲ್ಲಿ ಅವರು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಪ್ರತಿ ಓವರ್‌ಗೆ ಸರಾಸರಿ 11.38 ರನ್ ಬಿಟ್ಟುಕೊಟ್ಟಿರುವ ಬೌಲರ್ ಅನ್ನು ರಾಷ್ಟ್ರೀಯ ತಂಡಕ್ಕೆ ಹೇಗೆ ಆಯ್ಕೆ ಮಾಡಲಾಯಿತು? ಗಾಯದಿಂದ ಚೇತರಿಸಿಕೊಂಡ ನಂತರ ಮಯಾಂಕ್ ವೇಗವೂ ಕುಸಿದಿದೆ. ಹೀಗಿರುವಾಗ ಅವರಿಗೆ ತಂಡದಲ್ಲಿ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ತಜ್ಞರ ಪ್ರಶ್ನೆ.

35
ಪ್ರಮಾದ 2: ಟಿ20 ಶೈಲಿಗೆ ಹೊಂದದ ಹರ್ಷ್ ದುಬೆ

ಎಡಗೈ ಸ್ಪಿನ್ನರ್ ಹರ್ಷ್ ದುಬೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರಬಹುದು. ಆದರೆ ಟಿ20 ಎಂಬುದು ಸಂಪೂರ್ಣವಾಗಿ ಭಿನ್ನವಾದ ಸ್ವರೂಪ. ಇಲ್ಲಿ ರಕ್ಷಣಾತ್ಮಕ ಬೌಲಿಂಗ್‌ಗಿಂತ ಆಕ್ರಮಣಕಾರಿ ವಿಕೆಟ್ ಟೇಕಿಂಗ್ ಸಾಮರ್ಥ್ಯ ಮುಖ್ಯ.

ಎಸ್‌ಆರ್‌ಹೆಚ್ ಪರ 2026ರ ಐಪಿಎಲ್‌ನಲ್ಲಿ ಆಡಿದ್ದ ದುಬೆ, 8 ಪಂದ್ಯಗಳಲ್ಲಿ ಕೇವಲ 8 ವಿಕೆಟ್ ಪಡೆದರು. ಇವರ ಎಕಾನಮಿ ರೇಟ್ 10.36 ರಷ್ಟಿದೆ. ಇವರ ಸ್ಥಾನದಲ್ಲಿ ಅನುಭವಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದರೆ ತಂಡಕ್ಕೆ ಹೆಚ್ಚಿನ ಬಲ ಸಿಗುತ್ತಿತ್ತು. ಆದರೆ ಅಜಿತ್ ಅಗರ್ಕರ್ ಸಮಿತಿಯು ಕೃನಾಲ್ ಅವರನ್ನು ಕಡೆಗಣಿಸಿ ಕೇವಲ ರಕ್ಷಣಾತ್ಮಕ ಶೈಲಿಯ ದುಬೆ ಅವರಿಗೆ ಮಣೆ ಹಾಕಿರುವುದು ತರ್ಕಕ್ಕೆ ನಿಲುಕದ ವಿಚಾರ.

45
ಪ್ರಮಾದ 3: ಯಶ್ ಠಾಕೂರ್‌ಗೆ ಜಾಕ್‌ಪಾಟ್!

ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಯಶ್ ಠಾಕೂರ್ ಆಯ್ಕೆಯಂತೂ ಅತ್ಯಂತ ವಿಲಕ್ಷಣವಾಗಿದೆ. ಐಪಿಎಲ್ ಫ್ರಾಂಚೈಸಿಯೇ ತಮ್ಮ ಅಂತಿಮ ತಂಡದಲ್ಲಿ ಆಡಿಸಲು ವಿಶ್ವಾಸ ಹೊಂದಿಲ್ಲದ ಆಟಗಾರನಿಗೆ ಭಾರತೀಯ ತಂಡದ ಬಾಗಿಲು ಹೇಗೆ ತೆರೆಯಿತು?

ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಯಶ್ ಠಾಕೂರ್ ಆಡಿದ್ದು ಕೇವಲ 3 ಪಂದ್ಯಗಳನ್ನು ಮಾತ್ರ! ಆರ್‌ಸಿಬಿ ತಂಡವು ಚಾಂಪಿಯನ್ ಆಗುವಲ್ಲಿ ಮತ್ತು ಸತತ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ರಸಿಕ್ ಸಲಾಂ ದಾರ್. ಅಂತಹ ಪ್ರತಿಭಾನ್ವಿತ ಬೌಲರ್ ಅನ್ನು ಕೈಬಿಟ್ಟು, ಸದಾ ಬೆಂಚ್ ಮೇಲೆ ಕುಳಿತುಕೊಳ್ಳುವ ಯಶ್ ಠಾಕೂರ್ ಅವರನ್ನು ಆಯ್ಕೆ ಮಾಡಿರುವುದು ಅನ್ಯಾಯದ ಪರಮಾವಧಿ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

55
ಟೀಂ ಇಂಡಿಯಾಗೆ ಲಾಭ ಆಗುತ್ತಾ?

ಆಯ್ಕೆ ಸಮಿತಿಯು ಕೇವಲ ಹೆಸರನ್ನು ನೋಡಿ ಆಟಗಾರರನ್ನು ಆರಿಸುತ್ತಿದೆಯೇ ಅಥವಾ ನಿಜವಾದ ಪ್ರತಿಭೆಗೆ ಅವಕಾಶ ನೀಡುತ್ತಿದೆಯೇ ಎಂಬ ಅನುಮಾನ ಈ ಸರಣಿಯ ಆಯ್ಕೆಯ ಮೂಲಕ ಮೂಡಿದೆ. ಪ್ರತಿಭಾವಂತ ಆಟಗಾರರು ಕಾಯುತ್ತಿರುವಾಗ, ಫಾರ್ಮ್ ಇಲ್ಲದ ಮತ್ತು ಗಾಯದ ಸಮಸ್ಯೆಯುಳ್ಳ ಆಟಗಾರರಿಗೆ ಮಣೆ ಹಾಕಿರುವುದು ಜಿಂಬಾಬ್ವೆ ಪ್ರವಾಸದಲ್ಲಿ ಭಾರತಕ್ಕೆ ಮುಳುವಾಗುವ ಸಾಧ್ಯತೆಯೂ ಇದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories