ರೈತರೇ ಭೂಮಿಯ ಕಳೆ ತೆಗೆಯಲು ಇನ್ನು ಬೇರೆ ಮಾರ್ಗ ಬಳಸಿ, ಪ್ರಖ್ಯಾತ Paraquat Dichloride ಶೀಘ್ರದಲ್ಲೇ ಬ್ಯಾನ್‌!

Published : Jul 15, 2026, 05:26 PM IST

ತೀವ್ರ ವಿಷಕಾರಿ 'ಪ್ಯಾರಾಕ್ವಾಟ್ ಡೈಕ್ಲೋರೈಡ್' ಕಳೆನಾಶಕವನ್ನು ಕೇಂದ್ರ ಸರ್ಕಾರ ನಿಷೇಧಿಸಲು ಮುಂದಾಗಿದೆ. ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲಿನ ಗಂಭೀರ ಅಪಾಯಗಳನ್ನು ಪರಿಗಣಿಸಿ, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಈ ಕರಡು ಆದೇಶ ಹೊರಡಿಸಲಾಗಿದೆ.

PREV
16
ಪ್ಯಾರಾಕ್ವಾಟ್ ಡೈಕ್ಲೋರೈಡ್ ಬ್ಯಾನ್‌ಗೆ ಮುಂದಾದ ಕೇಂದ್ರ

ದೇಶದ ಕೃಷಿ ಭೂಮಿಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ತೀವ್ರ ವಿಷಕಾರಿ ‘ಪ್ಯಾರಾಕ್ವಾಟ್ ಡೈಕ್ಲೋರೈಡ್’ (Paraquat Dichloride) ಕಳೆನಾಶಕದ ಮೇಲೆ ಸಂಪೂರ್ಣ ನಿಷೇಧ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಮಾನವರು ಮತ್ತು ಪ್ರಾಣಿಗಳಿಗೆ ಇದರಿಂದ ಉಂಟಾಗುತ್ತಿರುವ ಗಂಭೀರ ಆರೋಗ್ಯದ ಅಪಾಯಗಳನ್ನು ಪರಿಗಣಿಸಿ, ಇಂಧನ ಹಾಗೂ ಕೃಷಿ ಸಚಿವಾಲಯವು ಇದರ ಉತ್ಪಾದನೆ, ಆಮದು, ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಕರಡು ಆದೇಶವನ್ನು (Draft Order) ಹೊರಡಿಸಿದೆ. ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದ್ದು, ಆಗಸ್ಟ್ 12ರ ನಂತರ ಅಂತಿಮ ಆದೇಶ ಹೊರಬೀಳುವ ಸಾಧ್ಯತೆಯಿದೆ.

26
70 ಕ್ಕೂ ಹೆಚ್ಚು ದೇಶಗಳಲ್ಲಿ ನಿಷೇಧಿತ ಕಳೆನಾಶಕದ ಭೀಕರ ಪರಿಣಾಮ

ವಿಶ್ವದ 70ಕ್ಕೂ ಹೆಚ್ಚು ಪ್ರಮುಖ ದೇಶಗಳಲ್ಲಿ ಈಗಾಗಲೇ ನಿಷೇಧಕ್ಕೊಳಗಾಗಿರುವ ಪ್ಯಾರಾಕ್ವಾಟ್ ಕಳೆನಾಶಕವು ತೀವ್ರ ಪ್ರಮಾಣದ ಮಾರಣಾಂತಿಕ ವಿಷದ ಅಂಶವನ್ನು ಹೊಂದಿದೆ. ಇದು ಮನುಷ್ಯರಲ್ಲಿ ಮೂತ್ರಪಿಂಡ ವೈಫಲ್ಯ (Kidney Failure), ಶ್ವಾಸಕೋಶದ ಫೈಬ್ರೋಸಿಸ್ (Lung Fibrosis) ಮತ್ತು ಪಾರ್ಕಿನ್ಸನ್ ಕಾಯಿಲೆಗೆ (Parkinson's Disease) ನೇರ ಕಾರಣವಾಗುತ್ತದೆ ಎಂದು ಸಾಬೀತಾಗಿದೆ. ಭಾರತದಲ್ಲಿ ಈ ರಾಸಾಯನಿಕದ ಬಳಕೆಗೆ ಲೈಸೆನ್ಸ್ ಹೊಂದಿರುವ ಸುಮಾರು 1,500 ಕ್ಕೂ ಹೆಚ್ಚು ತಯಾರಕರಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಇದು ಭಾರಿ ವಾಣಿಜ್ಯ ಜಾಲವನ್ನು ಹೊಂದಿದೆ.

36
ತಜ್ಞರ ಸಮಿತಿ ಹಾಗೂ ನೋಂದಣಿ ಸಮಿತಿಯ ಗಂಭೀರ ಕಳವಳ

ಪ್ಯಾರಾಕ್ವಾಟ್ ಬಳಕೆಯ ಮುಂದುವರಿಕೆಯ ಕುರಿತು ಪರಿಶೀಲಿಸಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಜನವರಿಯಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಸುದೀರ್ಘ ಅಧ್ಯಯನದ ಬಳಿಕ ಈ ಸಮಿತಿಯು ಜೂನ್ 12 ರಂದು ದೇಶಾದ್ಯಂತ ಪ್ಯಾರಾಕ್ವಾಟ್ ನಿಷೇಧಿಸಲು ಸರ್ವಾನುಮತದ ವರದಿ ನೀಡಿತ್ತು. ಇದರ ಬೆನ್ನಲ್ಲೇ ಕೃಷಿ ಕಮಿಷನರ್ ಪಿ.ಕೆ. ಸಿಂಗ್ ನೇತೃತ್ವದ ನೋಂದಣಿ ಸಮಿತಿಯು (Registration Committee) ಜೂನ್ 29 ರಂದು ತನ್ನ ಅಭಿಪ್ರಾಯವನ್ನು ಸಲ್ಲಿಸಿತು. ಈ ರಾಸಾಯನಿಕಕ್ಕೆ ಯಾವುದೇ ನಿರ್ದಿಷ್ಟ ವಿಷನಿವಾರಕ (Antidote) ಇಲ್ಲದಿರುವುದು ಮತ್ತು ಸರಣಿ ಸಾವುಗಳು ಸಂಭವಿಸುತ್ತಿರುವುದನ್ನು ಸಮಿತಿ ತೀವ್ರವಾಗಿ ಖಂಡಿಸಿದ್ದು, 1968ರ ಕೀಟನಾಶಕಗಳ ಕಾಯ್ದೆಯಡಿ ಇದನ್ನು ಸಂಪೂರ್ಣ ನಿಷೇಧಿಸಲು ಶಿಫಾರಸು ಮಾಡಿದೆ.

46
ಪರವಾನಗಿ ರದ್ದು ಮತ್ತು ರಾಜ್ಯಗಳ ಒತ್ತಡ

ಕೇಂದ್ರ ಸರ್ಕಾರದ ಈ ಕರಡು ಆದೇಶವು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಆ ಬಳಿಕ ಯಾರೂ ಕೂಡ ಈ ಕಳೆನಾಶಕವನ್ನು ಆಮದು ಮಾಡಿಕೊಳ್ಳಲು, ತಯಾರಿಸಲು, ಮಾರಾಟ ಮಾಡಲು ಅಥವಾ ಸಾಗಿಸಲು ಅವಕಾಶ ಇರುವುದಿಲ್ಲ. ನೋಂದಣಿ ಸಮಿತಿಯು ಎಲ್ಲಾ ತಯಾರಕರಿಂದ ಈ ರಾಸಾಯನಿಕದ ನೋಂದಣಿ ಪ್ರಮಾಣಪತ್ರಗಳನ್ನು ಹಿಂಪಡೆಯಲಿದ್ದು, ಅವುಗಳನ್ನು ರದ್ದುಪಡಿಸಲಾಗುತ್ತದೆ. ಈ ಹಿಂದೆ ತೆಲಂಗಾಣ ಮತ್ತು ಒಡಿಶಾ ರಾಜ್ಯಗಳು ಈ ಕಳೆನಾಶಕದ ಮೇಲೆ ತಾತ್ಕಾಲಿಕ ನಿಷೇಧ ಹೇರಿ, ಕೇಂದ್ರದ ಖಾಯಂ ಹಸ್ತಕ್ಷೇಪಕ್ಕೆ ನಿರಂತರ ಒತ್ತಡ ತರುತ್ತಿದ್ದವು. ಈ ಹಿಂದೆ ಕೇರಳ ಸರ್ಕಾರ ಅನಿರ್ದಿಷ್ಟಾವಧಿ ನಿಷೇಧಕ್ಕೆ ಯತ್ನಿಸಿದಾಗ, ರಾಜ್ಯಗಳಿಗೆ ಆ ಅಧಿಕಾರವಿಲ್ಲ ಎಂದು ನ್ಯಾಯಾಲಯಗಳು ತಡೆ ನೀಡಿದ್ದವು.

56
ಚಹಾ, ರಬ್ಬರ್‌ ಸೇರಿದಂತೆ 10ಕ್ಕೂ ಅಧಿಕ ಬೆಳೆಗಳಿಗೆ ಬಳಕೆ

ಕಡಿಮೆ ವೆಚ್ಚ ಹಾಗೂ ಅತ್ಯಂತ ವೇಗವಾಗಿ ಕಳೆಗಳನ್ನು ನಾಶಪಡಿಸುವ ಗುಣದಿಂದಾಗಿ ಪ್ಯಾರಾಕ್ವಾಟ್ ಭಾರತೀಯ ರೈತರ ನೆಚ್ಚಿನ ಆಲ್ಟರ್ನೇಟಿವ್ ಕಳೆನಾಶಕವಾಗಿತ್ತು. ಮುಖ್ಯವಾಗಿ ಚಹಾ, ರಬ್ಬರ್, ಕಾಫಿ, ಹತ್ತಿ, ಭತ್ತ, ಗೋಧಿ, ಮೆಕ್ಕೆಜೋಳ, ಆಲೂಗಡ್ಡೆ, ದ್ರಾಕ್ಷಿ ಮತ್ತು ಸೇಬು ತೋಟಗಳಲ್ಲಿ ಹಾಗೂ ಕಾಲುವೆ ಮತ್ತು ಜಲಮೂಲಗಳ ಕಳೆ ನಿಯಂತ್ರಣಕ್ಕೆ ಇದನ್ನು ಬಳಸಲಾಗುತ್ತಿತ್ತು. ಈಗ ಇದರ ನಿಷೇಧದಿಂದಾಗಿ ಧಾನ್ಯಗಳು, ತೋಟಗಾರಿಕೆ ಬೆಳೆಗಳ ಕಳೆ ನಿರ್ವಹಣಾ ಪದ್ಧತಿಯಲ್ಲಿ ಭಾರಿ ಬದಲಾವಣೆಯಾಗಲಿದ್ದು, ರಾಸಾಯನಿಕ ಕಳೆ ನಿಯಂತ್ರಣದ ಮೇಲೆಯೇ ಅವಲಂಬಿತರಾಗಿರುವ ರೈತರ ಕೃಷಿ ವೆಚ್ಚ ಅಧಿಕವಾಗುವ ಸಾಧ್ಯತೆಯಿದೆ.

66
ಹೆಚ್ಚುತ್ತಿದ್ದ ಆಮದು ಮತ್ತು ದೇಶೀಯ ಮಾರಾಟದ ಅಂಕಿ-ಅಂಶ

ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳ ಆತಂಕದ ನಡುವೆಯೂ ಭಾರತದಲ್ಲಿ ಈ ಕಳೆನಾಶಕದ ಮೇಲಿನ ಅವಲಂಬನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿತ್ತು. ವಾಣಿಜ್ಯ ದತ್ತಾಂಶಗಳ ಪ್ರಕಾರ, ಇದರ ಆಮದು ಪ್ರಮಾಣವು 2019-20ರಲ್ಲಿದ್ದ 8,598 ಟನ್‌ಗಳಿಂದ 2022-23ರ ವೇಳೆಗೆ ಬರೋಬ್ಬರಿ 20,786 ಟನ್‌ಗಳಿಗೆ ಏರಿಕೆಯಾಗಿತ್ತು. ದೇಶೀಯ ಮಾರಾಟದ ಪ್ರಮಾಣವು 2019-20ರಲ್ಲಿ 1.13 ಲಕ್ಷ ಟನ್‌ಗಳಷ್ಟಿದ್ದು, 2020-21ರಲ್ಲಿ 74,490 ಟನ್‌ಗಳಿಗೆ ಕುಸಿದಿತ್ತು. ಆದರೆ, ನಂತರ ಚೇತರಿಸಿಕೊಂಡು 2023-24ರ ಆರ್ಥಿಕ ವರ್ಷದಲ್ಲಿ ಮತ್ತೆ 1.05 ಲಕ್ಷ ಟನ್‌ಗಳಿಗೆ ತಲುಪಿತ್ತು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories