Viral Video : ತಾಜ್ ಹೋಟೆಲ್‌ನಲ್ಲಿ ಚಿಲ್ಲರೆ ನೀಡಿ ಬಿಲ್ ಪಾವತಿಸಿದ ಮುಂಬೈ ವ್ಯಕ್ತಿ!

By Suvarna NewsFirst Published Feb 28, 2023, 5:22 PM IST
Highlights

ಇದು ಡಿಜಿಟಲ್ ಕಾಲ. ಹಾಲಿನ ಹಣವನ್ನು ಕೂಡ ಜನರು ಮೊಬೈಲ್ ಮೂಲಕ ಪಾವತಿ ಮಾಡ್ತಾರೆ. ಇನ್ನು ತಾಜ್ ಹೋಟೆಲ್ ಬಿಲ್ ಪಾವತಿ ಅಂದ್ರೆ… ಸುಮ್ಮನೇನಾ? ಕ್ರೆಡಿಟ್, ಡೆಬಿಟ್ ಕಾರ್ಡ್ ಇರ್ಲೇಬೇಕು. ಆದ್ರೆ ಈ ಪುಣ್ಯಾತ್ಮ ತಾಜ್ ಹೋಟೆಲ್ ಗೆ ಚಿಲ್ಲರೆ ಕೊಟ್ಟು ಬಂದಿದ್ದಾನೆ.
 

ಪಂಚತಾರಾ ಹೋಟೆಲ್ ಗೆ ಹೋಗ್ಬೇಕೆಂದ್ರೆ ನಾವು ಮೊದಲು ಜೇಬು ನೋಡಿಕೊಳ್ತೆವೆ. ಅದ್ರಲ್ಲಿ ಹಣವಿದ್ರೆ ಮಾತ್ರ ಅಲ್ಲಿಗೆ ಹೋಗುವ ಧೈರ್ಯ ಮಾಡ್ತೇವೆ. ಕೈನಲ್ಲಿ ಹಣವಿದ್ರೂ ಮಧ್ಯಮ ವರ್ಗದ ಜನರು ಪಂಚತಾರಾ ಹೋಟೆಲ್ ಗೆ ಹೋಗೋದು ಕಡಿಮೆ. ಯಾಕೆಂದ್ರೆ ಆ ಹೋಟೆಲ್ ಗಳಲ್ಲಿ ಅವರದೇ ಆದ ನಿಯಮಗಳಿರುತ್ತವೆ. ಟಿಪ್ ಟಾಪ್ ಡ್ರೆಸ್ ಧರಿಸಿರಬೇಕು, ಶಿಸ್ತನ್ನು ಪಾಲನೆ ಮಾಡ್ಬೇಕು, ನಿಮ್ಮ ಮನಸ್ಸಿಗೆ ಬಂದಂತೆ ಆಹಾರ ಸೇವನೆ ಮಾಡೋ ಹಾಕಿಲ್ಲ. ಅಲ್ಲಿನ ರೂಲ್ಸ್ ಪ್ರಕಾರ ನೀವು ಆಹಾರ ತಿಂದು ಬರೋಬ್ಬರಿ ಬಿಲ್ ಪಾವತಿ ಮಾಡಿ ಬರಬೇಕು. ಇದನ್ನು ಪಂಚತಾರಾ ಹೋಟೆಲ್ ಮ್ಯಾನ್ಸರ್ ಅಂತಾನೂ ಕರೆಯುತ್ತಾರೆ. ಆದ್ರೆ ಈಗ ವ್ಯಕ್ತಿಯೊಬ್ಬ ಈ ಎಲ್ಲ ನಿಯಮಗಳನ್ನು ಮುರಿದಿದ್ದಾನೆ. ಪಂಚತಾರಾ ಹೋಟೆಲ್ ಗೆ ಹೋಗಿ, ಚಿಲ್ಲರೆಯಲ್ಲಿ ಬಿಲ್ ಪಾವತಿ ಮಾಡಿ ಸುದ್ದಿಗೆ ಬಂದಿದ್ದಾರೆ. 

ಸಾಮಾಜಿಕ ಜಾಲತಾಣ (SocialMedia ) ದಲ್ಲಿ ಈಗ ಸಾಕಷ್ಟು ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಜನರು ಮಾಡಿದ ವಿಭಿನ್ನ ಕೆಲಸಗಳು, ತಮಾಷೆ ವಿಷ್ಯಗಳು, ಸಮಾಜ ಸೇವೆ ಹೀಗೆ ನಾನಾ ವಿಷ್ಯಗಳು ಸದ್ದು ಮಾಡ್ತವೆ. ಈಗ ಈ ವ್ಯಕ್ತಿ ಕೂಡ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದ್ದಾನೆ. ಅಷ್ಟಕ್ಕೂ ಆತ ಹೋಗಿದ್ದ ಹೋಟೆಲ್ (Hotel) ಯಾವುದು, ಆತ ಎಷ್ಟು ಹಣವನ್ನು ಚಿಲ್ಲರೆಯಲ್ಲಿ ಪಾವತಿ ಮಾಡಿದ್ದೇನೆ ಎಂಬುದನ್ನು ನಾವು ಹೇಳ್ತೇವೆ.

ತಿನ್ನೋ ಈ ಆಹಾರ ನರ ವೀಕ್‌ನೆಸ್‌ಗೆ ಆಗಬಹುದು ಕಾರಣ, ಎಚ್ಚರವಹಿಸಿ!

ತಾಜ್ ಹೋಟೆಲ್ ನಲ್ಲಿ ನಡೆದಿದೆ ಘಟನೆ : ವ್ಯಕ್ತಿ ಹೆಸರು ಸಿದ್ಧೇಶ್ ಲೋಕ್ರೆ (Siddhesh Lokre) . ಆತ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಮೊದಲು ಆತ ತನಗೆ ಹಸಿವಾಗಿದೆ ಎನ್ನುತ್ತಾನೆ. ನಂತ್ರ ಹೋಟೆಲ್ ತಾಜ್ ಗೆ ಹೋಗ್ತೇನೆ ಎನ್ನುವ ಸಿದ್ಧೇಶ್, ನಾಣ್ಯಗಳ ಗಂಟನ್ನು ತೋರಿಸ್ತಾನೆ. ಕೋಟ್ ಹಾಕಿ ಸಿದ್ಧವಾಗುವ ಸಿದ್ಧೇಶ್ ಹೋಟೆಲ್ ಒಳಗೆ ಹೋಗಿ ಒಂದಿಷ್ಟು ಆಹಾರ ಆರ್ಡರ್ ಮಾಡ್ತಾನೆ. ನಂತ್ರ ಸ್ವಲ್ಪ ನೋಟು ಮತ್ತೆ ನಾಣ್ಯಗಳನ್ನು ಬಿಲ್ ಪಾವತಿ ವೇಳೆ ನೀಡ್ತಾನೆ. ಆತ ನಾಣ್ಯಗಳನ್ನು ಲೆಕ್ಕ ಹಾಕ್ತಿದ್ದರೆ ಅಕ್ಕಪಕ್ಕದಲ್ಲಿ ಕುಳಿತಿದ್ದ ಜನರು ಆತನನ್ನೇ ನೋಡ್ತಿರುತ್ತಾರೆ. ಸಿದ್ಧೇಶ್ ಲೋಕ್ರೆ ತಮ್ಮನ್ನು ತಾವು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಎಂದು ಬರೆದುಕೊಂಡಿದ್ದಾರೆ. 

 

15 ಲಕ್ಷಕ್ಕೂ ಹೆಚ್ಚು ವೀಕ್ಷಣೆ : ಸಿದ್ಧೇಶ್ ಅವರ ವಿಡಿಯೋವನ್ನು 15 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಸಿದ್ಧೇಶ್ ಲೋಕ್ರೆ ತಮ್ಮ ಅದ್ಭುತ ಪ್ರಯೋಗದ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಜನರು ತಾವಿರು ಹಾಗೆಯೇ ಇರಬೇಕು. ದುಬಾರಿ ಸ್ಥಳಕ್ಕೆ ಹೋಗಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಬಾರದು ಎಂದು ಜನರಿಗೆ ಸಿದ್ಧೇಶ್ ಲೋಕ್ರೆ ಹೇಳಿದ್ದಾರೆ.  ತಾಜ್ ಹೋಟೆಲ್ ನಲ್ಲಿ ಹಗರಣ ಮಾಡಿ ಬಂದಿದ್ದೇನೆ. ಬಿಲ್ ಪಾವತಿ ಮುಖ್ಯ. ಅದು ಡಾಲರ್ ನಲ್ಲಾಗಿರಲಿ ಇಲ್ಲ ಚಿಲ್ಲರೆಯಲ್ಲಾಗಿರಲಿ ಎಂದು ಸಿದ್ದೇಶ್ ಲೋಕ್ರೆ ಶೀರ್ಷಿಕೆ ಹಾಕಿದ್ದಾರೆ. 

ಸಾಮಾಜಿಕ ಜಾಲತಾಣ ಬಳಕೆದಾರರಿಂದ ಪ್ರತಿಕ್ರಿಯೆ : ಈ ವಿಡಿಯೋಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಿದ್ಧೇಶ್ ಲೋಕ್ರೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅವರು ಸಿಬ್ಬಂದಿಗೆ ಹೆಚ್ಚಿನ ಕೆಲಸ ನೀಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಜೀವ್ ಕಪೂರ್‌ಗೆ ಕೆಟ್ಟ ಆಹಾರ ನೀಡಿ ಇಕ್ಕಟ್ಟಿಗೆ ಸಿಲುಕಿದ ಏರ್ ಇಂಡಿಯಾ

ಐಟಿಸಿಯಲ್ಲಿ ಕೆಲಸ ಮಾಡ್ತಿರುವ ವ್ಯಕ್ತಿಯೊಬ್ಬ, ನೀವು ಚಿಲ್ಲರೆ ನೀಡಿ ಸಹಕರಿಸಿದ್ದೀರಿ. ನಮಗೆ ನೀವು ಹೇಗೆ ಪಾವತಿ ಮಾಡಿದ್ದೀರಿ ಎಂಬುದು ಮುಖ್ಯವಲ್ಲ. ಗ್ರಾಹಕ ತೃಪ್ತನಾಗಿದ್ದಾನೆಯೇ ಎಂಬುದು ಮುಖ್ಯ ಎಂದು ಬರೆದಿದ್ದಾರೆ.  ಇನ್ನೊಬ್ಬ ವ್ಯಕ್ತಿ, ನೀವು ಚಿಲ್ಲರೆ ನೀಡಿದ್ದರಿಂದ ಸಿಬ್ಬಂದಿ ಅದನ್ನು ಎಣಿಸಲು ಸಾಕಷ್ಟು ಸಮಯ ತೆಗೆದುಕೊಂಡಿರುತ್ತಾರೆ. ಅವರ ಕ್ಷಮೆಯಾಚಿಸಿದ್ದೀರಾ ಎಂದು ಕೇಳಿದ್ದಾನೆ. ಪಾವತಿ  ಒಂದು ಸಾವಿರ ರೂಪಾಯಿಗಿಂತ ಹೆಚ್ಚಾಗಿದ್ದರೆ ಚಿಲ್ಲರೆ ಮೂಲಕ ಪಾವತಿ ಮಾಡುವುದು ಭಾರತದ ಕಾನೂನು ಪ್ರಕಾರ ತಪ್ಪು ಎಂದು ಇನ್ನೊಬ್ಬ ಬರೆದಿದ್ದಾನೆ.

click me!