ವೃಷಭಕ್ಕೆ ಸೂರ್ಯನ ಪ್ರವೇಶ, ಈ 5 ರಾಶಿಯವರಿಗೆ ಸಂಕಷ್ಟದ ಪ್ರವೇಶ..!

By Suvarna NewsFirst Published May 15, 2021, 6:39 PM IST
Highlights

ವೃಷಭ ರಾಶಿಗೆ ಸೂರ್ಯನ ಪ್ರವೇಶವಾಗಿದೆ. ಸೂರ್ಯನು ಈ ರಾಶಿಯಲ್ಲಿ ಒಂದು ತಿಂಗಳ ಕಾಲ ನೆಲೆಯೂರಲಿರುವ ಕಾರಣ, ಅನೇಕ ಶುಭ-ಅಶುಭ ಪ್ರಭಾವಗಳನ್ನು ಬೀರಲಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾದರೆ, ಐದು ರಾಶಿಯವರಿಗೆ ಮಾತ್ರ ಅಶುಭ ಪ್ರಭಾವ ಬೀರಲಿದೆ. ಇದರಿಂದ ಸಂಕಷ್ಟಗಳನ್ನೂ ಎದುರಿಸಬೇಕಿದೆ. ಹಾಗಂತ ಸಂಕಷ್ಟವನ್ನೇ ಎದುರಿಸಬೇಕೆಂದೇನಲ್ಲ, ಸ್ವಲ್ಪ ಶುಭ ಸಮಾಚಾರವೂ ಇರಲಿದೆ. ಹಾಗಿದ್ದರೆ ಆ 5 ರಾಶಿಯವರು ಯಾರು ಎಂಬುದನ್ನು ನೋಡೋಣ ಬನ್ನಿ…

ಸೂರ್ಯನೆಂದರೆ ಬರೀ ಬೆಳಕು ಕೊಡುವ ಗ್ರಹವಲ್ಲ. ಇದು ಗ್ರಹಗಳ ರಾಜ ಎಂದೇ ಖ್ಯಾತಿ ಪಡೆದಿದೆ. ಅಲ್ಲದೆ, ಸೂರ್ಯನ ಚಲನೆಯು ಮನುಷ್ಯನ ಗ್ರಹಗತಿಗಳ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಅದು ಶುಭವೂ ಆಗಿರಬಹುದು, ಇಲ್ಲವೇ ಅಶುಭವೂ ಆಗಿರಬಹುದು. ಆಯಾ ಸಂದರ್ಭಕ್ಕನುಸಾರವಾಗಿ ಆಯಾ ರಾಶಿಯವರಿಗೆ ಇದರ ಫಲಾಫಲ ಲಭಿಸಲಿದೆ. 
ಮೇ 14ರ ಶುಕ್ರವಾರ ರಾತ್ರಿ 11 ಗಂಟೆ 21 ನಿಮಿಷಕ್ಕೆ ವೃಷಭ ರಾಶಿಗೆ ಸೂರ್ಯನ ಪ್ರವೇಶವಾಗಿದೆ. ಈ ರಾಶಿಯಲ್ಲಿ ಸೂರ್ಯನು ಒಂದು ತಿಂಗಳ ಕಾಲ ನೆಲೆಯೂರಲಿದ್ದಾನೆ. ಅಂದರೆ, 2021ರ ಜೂನ್ 15ರ ವೃಷಭ ರಾಶಿಯಲ್ಲಿಯೇ ಸೂರ್ಯ ನೆಲೆಸಿರುತ್ತಾನೆ. ವೃಷಭ ರಾಶಿಗೆ ಸೂರ್ಯನ ಪ್ರವೇಶವಾಗಿರುವುದರಿಂದ ಕೆಲವು ರಾಶಿಯವರಿಗೆ ಶುಭವಾದರೂ, ಈ ಐದು ರಾಶಿಯವರಿಗೆ ಗೋಚಾರದ ಪ್ರಭಾವ ನಕಾರಾತ್ಮಕವಾಗಿ ಪರಿಣಾಮ ಬೀರಲಿದೆ. ಈ ಐದು ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕಿದ್ದು, ಅವುಗಳ ವಿವರ ಇಂತಿವೆ.

ಇದನ್ನು ಓದಿ: ಅಡುಗೆ ಮಾಡುವಾಗ ದಿಕ್ಕಿನ ಬಗ್ಗೆ ಇರಲಿ ಗಮನ..ಈ ದಿಕ್ಕು ಶುಭವೆನ್ನುತ್ತೆ ವಾಸ್ತು ಶಾಸ್ತ್ರ... 

ವೃಷಭ ರಾಶಿ
ಈ ಗೋಚಾರದ ಪ್ರಭಾವದಿಂದ ವೃಷಭ ರಾಶಿಯ ವ್ಯಕ್ತಿಗಳಿಗೆ ಶಾರೀರಿಕ ಕಷ್ಟ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಈ ರಾಶಿಯವರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆದರೆ, ಇಲ್ಲೊಂದು ಖುಷಿ ಪಡುವ ಸಂಗತಿಯೂ ಇದ್ದು, ಬೇರೆ ವಿಷಯಗಳಲ್ಲಿ ನಿಮಗೆ ಲಾಭವಾಗಲಿದೆ. ಜೊತೆಗೆ ಸಮಾಜದಲ್ಲಿಯೂ ಸಹ ಗೌರವಾದರಗಳು ಹೆಚ್ಚಲಿವೆ. ಸಂತಾನಕ್ಕೆ ಸಂಬಂಧಪಟ್ಟ ಚಿಂತೆಗಳು ಸಹ ದೂರವಾಗಲಿವೆ. ಹೊಸ ಅವಕಾಶಗಳೂ ಲಭಿಸಲಿದ್ದು, ನಿಮ್ಮ ನಡೆಯ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ.

ಮಿಥುನ ರಾಶಿ
ಸೂರ್ಯನು ವೃಷಭ ರಾಶಿಗೆ ಪ್ರವೇಶಿಸಿದ ಪರಿಣಾಮವಾಗಿ ಮಿಥುನ ರಾಶಿಯ ವ್ಯಕ್ತಿಗಳಿಗೆ ಆರ್ಥಿಕ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಈ ಸಮಯದಲ್ಲಿ ಹೆಚ್ಚು ಖರ್ಚು ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಎದುರಾಗಲಿದೆ. ಜಗಳಗಳಿಂದ ದೂರವಿರುವುದು ಉತ್ತಮವಾಗಿದ್ದು, ನ್ಯಾಯಾಲಯಗಳಿಗೆ ಸಂಬಂಧಿಸಿದ ವಿಷಯಗಳನ್ನು ರಾಜಿ ಮೂಲಕ ಪರಿಹರಿಸಿಕೊಳ್ಳುವುದು ಒಳ್ಳೆಯದು. ಸ್ನೇಹಿತರಿಂದ ಕೇಳಿದ ಕಹಿ ಸುದ್ದಿಯು ನಿಮ್ಮ ಮನಸ್ಸನ್ನು ಅಶಾಂತಗೊಳಿಸುವ ಸಾಧ್ಯತೆ ಇದೆ. ಕುಟುಂಬ ಕಲಹ ಹೆಚ್ಚಲು ಬಿಡದಿರಿ. ಕಣ್ಣು-ಕಿವಿ-ಗಂಟಲು ಸಂಬಂಧಿತ ರೋಗಗಳ ಬಗ್ಗೆ ಜಾಗರೂಕರಾಗಿರಿ. 

ಇದನ್ನು ಓದಿ: ಮನೆ ಸುತ್ತ ಈ ಗಿಡ-ಮರ ಬೆಳೆಸಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ... 

ತುಲಾ ರಾಶಿ
ಗೋಚಾರದ ಅಶುಭ ಪ್ರಭಾವ ಈ ರಾಶಿಯವರ ಆರೋಗ್ಯದ ಮೇಲೆ ಬೀರುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು. ಕಲಹಗಳಿಗೆ ಕಿವಿಗೊಡಬೇಡಿ, ನ್ಯಾಯಾಲಯ ಸಂಬಂಧಿ ವಿಷಯಗಳತ್ತ ತಲೆ ಹಾಕಬೇಡಿ. ಸಂಕಷ್ಟ ಪರಿಸ್ಥಿತಿಗಳು ಎದುರಾಗಬಹುದಾಗಿದ್ದು, ಅದಕ್ಕೆ ಮಾನಸಿಕವಾಗಿ ಸಿದ್ಧವಾಗಿರಿ. 



ಧನು ರಾಶಿ
ಗೋಚಾರದಿಂದ ನಿಮಗೆ ಸಂಕಷ್ಟಗಳು ಎದುರಾಗಲಿದ್ದರೂ ಸಹ ನಿಧಾನಗತಿಯಲ್ಲಿ ಅವುಗಳು ನಿಮಗೆ ಬಾಧಿಸುವಂತೆ ಮಾಡುತ್ತದೆ. ಆದರೆ, ಈ ಅವಧಿಯಲ್ಲಿ ಸ್ವಲ್ಪ ಎಚ್ಚರವಹಿಸಿ, ನಿಮ್ಮ ಕಿಸೆಯನ್ನು ಗಟ್ಟಿಯಾಗಿಟ್ಟುಕೊಳ್ಳಿ. ಈ ಸಂದರ್ಭದಲ್ಲಿ ಯಾರಿಗೂ ಸಾಲವನ್ನು ಕೊಡದಿರುವುದು ಒಳಿತು. ಕೊಟ್ಟರೆ ಆರ್ಥಿಕ ಹಾನಿ ಸಂಭವಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯ. ಅಲ್ಲದೆ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು. ಸಂಬಂಧಿಕರು ಅಥವಾ ಸ್ನೇಹಿತರಿಂದ ಅಶುಭ ಸುದ್ದಿ ಕೇಳುವ ಸಾಧ್ಯತೆ ಇದೆ.

ಇದನ್ನು ಓದಿ: ಅಮಾವಾಸ್ಯೆಯಂದು ಹುಟ್ಟಿದರೆ ಹೀಗಂತೆ...! 

ಕುಂಭ ರಾಶಿ
ಈ ಗೋಚಾರದಿಂದ ಯಾವುದಾದರೂ ಕಾರಣಕ್ಕೆ ಕುಟುಂಬ ಕಲಹ ಮತ್ತು ಮಾನಸಿಕ ಅಶಾಂತಿ ಎದುರಿಸಬೇಕಾಗುತ್ತದೆ. ಪ್ರಯಾಣ ಮಾಡುವ ಸಂದರ್ಭ ಬಂದರೆ ಜಾಗರೂಕರಾಗಿರಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಲಿವೆ. ಸಂಬಂಧಿಕರು ಅಥವಾ ಸ್ನೇಹಿತರಿಂದ ಅಶುಭ ಸುದ್ದಿ ಕೇಳುವ ಸಾಧ್ಯತೆ ಇದೆ.

click me!