ಈ ಕಷ್ಟಕಾಲ ನಿಮ್ಮ ಜನ್ಮರಾಶಿಗೆ ಯಾವಾಗ ಮುಗಿಯುತ್ತೆ?

By Suvarna NewsFirst Published May 15, 2021, 6:34 PM IST
Highlights

ಇದೀಗ ಎಲ್ಲರಿಗೂ ಕಷ್ಟಕಾಲ. ಕೆಲವರಿಗೆ ಕಾಯಿಲೆ, ಇನ್ನು ಕೆಲವರಿಗೆ ಉದ್ಯೋಗವಿಲ್ಲ. ನಿಮಗೆ ಈ ಸಂಕಷ್ಟಕಾಲದಲ್ಲಿ ಗ್ರಹಗತಿ ಹೇಗಿದೆ, ಯಾವಾಗ ಇದೆಲ್ಲ ಮುಗಿದು ಒಳ್ಳೆಯದಾಗಲಿದೆ?
 

ಮೇಷ
ನಿಮಗೆ ಇನ್ನೂ ಒಂದು ತಿಂಗಳು ಸೂರ್ಯನ ಕೃಪೆಯಿಲ್ಲ. ಚಂದ್ರನಿಂದಾಗಿ ಸೃಷ್ಟಿಯಾಗುವ ತಂಪು ವಾತಾವರಣ ನಿಮಗೆ ಶೀತಕಾರಿಯಾಗಲಿದೆ. ತಣ್ಣನೆಯ ಪದಾರ್ಥ ಸೇವಿಸಬೇಡಿ. ಇನ್ನೊಂದು ತಿಂಗಳಿನಲ್ಲಿ ಆರೋಗ್ಯ ಸಂಬಂಧಿತ ಕಷ್ಟಗಳು ಮುಗಿದು ಮೈ ಮನಸ್ಸು ಹಗುರವಾಗುತ್ತದೆ. ಕೆಂಪು ಬಟ್ಟೆಯನ್ನು ಯಾರಿಗಾದರೂ ದಾನ ಮಾಡಿ.

ವೃಷಭ
ಕುಜ ರಾಹುಗಳು ನಿಮಗೆ ವಕ್ರಗತಿಯಲ್ಲಿ ಇರುವುದರಿಂದ ಆರೋಗ್ಯ ನಿಮಿತ್ತವಾಗಿ ಅನೇಕ ತೊಂದರೆಗಳು ಮುಂದಿನ ಎರಡು ತಿಂಗಳಲ್ಲಿ ನಿಮಗೆ ಎದುರಾಗಲಿವೆ. ಇದರಿಂದ ಪಾರಾಗಲು ಮನೆಯಲ್ಲಿಯೇ ಶಿವ ಪಂಚಾಕ್ಷರಿ ತಪ ಮಾಡಿ. ಹೊರಗೆ ಹೆಚ್ಚು ಓಡಾಡಬೇಡಿ. ಮುಂಜಾನೆ ಬಿಸಿಲಿನಲ್ಲಿಯೇ ಸೂರ್ಯ ನಮಸ್ಕಾರ ಮಾಡಿದರೆ ಹೆಚ್ಚು ಆರೋಗ್ಯ.

ಮಿಥುನ
ನಿಮಗೆ ಗುರುವಿನ ಅನುಗ್ರಹ ಇರುವುದರಿಂದ, ಆರೋಗ್ಯ ಸಂಬಂಧಿಯಾಗಿ ಬರಲಿರುವ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ. ಸಮತೋಲಿತವಾದ, ಬೆಚ್ಚನೆಯ ಆಹಾರವನ್ನು ಸೇವಿಸಿ. ಫ್ರಿಜ್ಜಿನಲ್ಲಿಟ್ಟ ಅಹಾರ ಬೇಡ. ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಸಂಜೆಯ ಹೊತ್ತಿನಲ್ಲಿ ಹೊಸ ಸಂಚಾರ ಬೇಡ. ಆಂಜನೇಯನನ್ನು ಧ್ಯಾನಿಸಿದರೆ ಇಷ್ಟಸಿದ್ಧಿ.

ಕಟಕ
ಸರ್ವ ಕಂಟಕ ನಿವಾರಕನೂ, ಕಂಟಕಪ್ರದಾಯಕನೂ ಆದ ಶನಿದೇವರು ನಿಮ್ಮ ರಾಶೀಯ ಮೇಲೆ ಕಣ್ಣು ಇರಿಸಿದ್ದಾನೆ. ಆದರೆ ಆತನ ಬಾಧೆಯ ಮಳೆ ಇನ್ನು ಒಂದುವರೆ ತಿಂಗಳಿನಲ್ಲಿ ನೀಗಿ ನಂತರ ಶುಭವೇ ಆಗಲಿದೆ. ಅಲ್ಲಿಯವರೆಗೂ ಆಂಜನೇಯನ ಜಪ ಮಾಡಿ. ಶ್ರೀ ರಾಘವೇಂದ್ರರ ಮಂತ್ರಜಪದಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಲಿದೆ.

ಸಿಂಹ
ಇನ್ನೂ ಎರಡು ತಿಂಗಳ ಕಾಲ ನಿಮಗೆ ಅನಾರೋಗ್ಯದ ಭಾಗ್ಯವೇ ಇರಲಿದೆ. ಹಿಂದಿನ ಬದುಕಿನಲ್ಲಿ ಮಾಡಿದ ಅನೇಕ ಕರ್ಮಗಳು ನಿಮ್ಮನ್ನು ಬಾಧಿಸಲಿವೆ. ಆದರೆ ಇದೆಲ್ಲದರಿಂದ ಪಾರಾಗಲು ಗಣಪತಿ ಹಾಗೂ ಈಶ್ವರನ ಸ್ತೋತ್ರದಿಂದ ಸಾಧ್ಯ. ನಿತ್ಯ ಶಿವಪಂಚಾಕ್ಷರಿ ಮಂತ್ರದ ಧ್ಯಾನದಿಂದ ಆರೋಗ್ಯ ಭಾಗ್ಯ.


 

ಕನ್ಯಾ 
ನಿಮಗೆ ವೃತ್ತಿ ಕೇತ್ರದಲ್ಲಿ ಅನೇಕ ತೊಂದರೆಗಳು ಎದುರಾಗಿವೆ ಎಂದು ಕಾಣಿಸುತ್ತಿದೆ. ಕೆಲಸವೇ ಇಲ್ಲವಾಗಿರಲೂಬಹುದು. ಈ ಪರಿಸ್ಥಿತಿ ಇನ್ನೂ ಎರಡು ತಿಂಗಳು ಇರಲಿದೆ. ನಂತರ ಸನ್ನಿವೇಶ ಮೊದಲಿನ ಹಾಗೆ ಆಗಲಿದ್ದು, ನಿಮಗೂ ಕೈತುಂಬ ಕೆಲಸ ಸಿಗಲಿದೆ. ಅಲ್ಲಿಯವರೆಗೂ ಕಷ್ಟದಿಂದಲಾದರೂ ಸಂಸಾರದ ಬಂಡಿಯನ್ನು ಎಳೆಯಲೇಬೇಕು.

ತುಲಾ
ಧೈರ್ಯವೇ ಸರ್ವತ್ರ ಸಾಧನ ಎಂಬುದು ನಿಮಗೆ ಚೆನ್ನಾಗಿ ಒಪ್ಪುತ್ತದೆ. ಎಂಥದೇ ಕಷ್ಟದಲ್ಲಾದರೂ ಧೈರ್ಯವನ್ನು ಕಳೆದುಕೊಳ್ಳದ ನಿಮ್ಮ ಗುಣವೇ ನಿಮ್ಮನ್ನ ಕಾಪಾಡಲಿದೆ. ಆದರೂ ಕುಟುಂಬದಲ್ಲಿ, ಬಂಧುಗಳಿಗೆ ಕಾಡಿದ ಅನಾರೋಗ್ಯ ನಿಮ್ಮನ್ನು ಕಂಗೆಡಿಸಬಹುದು. ದೇವರ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಎಂಬುದನ್ನು ಮರೆಯದಿರಿ. 

ವೃಶ್ಚಿಕ
ತೀರಾ ಹತ್ತಿರದವರೊಬ್ಬರ ಅನಾರೋಗ್ಯ ನಿಮ್ಮನ್ನು ಅಲ್ಲೋಲಕಲ್ಲೋಲಗೊಳಿಸಬಹುದು. ಆದರೆ ನಿಮಗೆ ಆಂಜನೇಯನ ಅನುಗ್ರಹ ಇರುವುದರಿಂದ ಇದೆಲ್ಲವನ್ನೂ ದಾಟಿಕೊಂಡು ಪಾರಾಗುವಿರಿ. ದೇವರು ನಿಮ್ಮನ್ನು ಹಲವು ವಿಧದಿಂದ ಪರೀಕ್ಷಿಸಲಿದ್ದಾನೆ. ಇನ್ನೊಂದು ತಿಂಗಳ ಬಳಿಕ ನೀವು ಉನ್ನತ ಹುದ್ದೆಗೆ ಏರುವ ಯೋಗವೂ ಬರಬಹುದು. 

ಧನುಸ್ಸು
ಔದ್ಯೋಗಿಕ ವಾತಾವರಣ ಚೆನ್ನಾಗಿಲ್ಲ ಎಂಬುದು ನಮಗೆ ಗೊತ್ತು. ಇದರಿಂದಾಗಿ ನೀವು ಮನೆಯಲ್ಲಿ ಇರಬೇಕಾಗಿ ಬಂದಿದೆ. ಉತ್ಪಾದನೆ ಇಲ್ಲ. ಈ ಪರಿಸ್ಥಿತಿಯಿಂದಾಗಿ ಉಮಟಾಗಿರುವ ಮನಸ್ಸಿನ ಒತ್ತಡವೇ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಪ್ರಶಾಂತ ಮನಸ್ಸಿನಿಂದ ನರಸಿಂಹನ ಧ್ಯಾನ ಮಾಡಿ. ಒಂದು ತಿಂಗಳಲ್ಲಿ ಎಲ್ಲ ಕಷ್ಟಗಳೂ ಕರಗಿ ಮೊದಲಿನಂತಾಗುತ್ತೀರಿ.



ಮಕರ
ನೀವು ಅಳ್ಳೆದೆಯವರಲ್ಲ ಎಂಬುದು ನಿಜವೇ. ಆದರೆ ಕೆಲವೊಮ್ಮೆ ಆರೋಗ್ಯ ಹಾಗೂ ಉದ್ಯೋಗದ ಸಮಸ್ಯೆಗಳು ಒಟ್ಟಾಗಿ ಬಂದಾಗ ಧೃತಿಗೆಡಿಸುವುದೂ ನಿಜ. ಇನ್ನು ಎರಡು- ಮೂರು ತಿಂಗಳ ಕಾಲ ಈ ಸಂಕಷ್ಟ ಮುಮದುವರಿಯಲಿದೆ. ಆಮೇಲೆ ದೈವಕೃಪೆಯಿಂದ ಎಲ್ಲವೂ ಪರಿಹಾರ ಆಗುತ್ತದೆ. 

ಕುಂಭ
ನೀವು ಈ ಸಂಕಷ್ಟದ ಕಾಲದಲ್ಲಿ ತುಂಬಾ ಕಷ್ಟಪಟ್ಟಿದ್ದೀರಿ. ಆರೋಗ್ಯವೂ ಕೈ ಕೊಟ್ಟಿದೆ. ಆರ್ಥಿಕ ವಿಚಾರದಲ್ಲಿಯೂ ಬಳಲಿದ್ದೀರಿ. ಇನ್ನು ಒಂದೇ ತಿಂಗಳು ಸಹಿಸಿಕೊಳ್ಳಿ. ಇದೆಲ್ಲವೂ ಪರಿಹಾರವಾಗಿ ಮುಂಜಾನೆಯ ಬೆಳ್ಳಿ ಬೆಳಕು ಮೂಡಲಿದೆ. ನೀವು ಹೊಸ ಬದುಕನ್ನು ಕಾಣಲಿದ್ದೀರಿ. ಶನೀಶ್ವರನಿಗೆ ಎಳ್ಳಿನ ಎಣ್ಣೆಯ ದೀಪ ಹಚ್ಚಿರಿ.
 
ಮೀನ
ನೀವು ದೈವವನ್ನು ಮರೆತಿಲ್ಲ, ಆದರೂ ದೇವರು ಯಾಕೆ ಕೋಪಿಸಿಕೊಂಡಿದ್ದಾನೆ ಎಂದು ಕೇಳುತ್ತಿದ್ದೀರಾ? ದೇವರು ನಿಮಗೆ ಇನ್ನಷ್ಟು ಮತ್ತಷ್ಟು ಕಷ್ಟಗಳನ್ನು ಕೊಟ್ಟು, ನಿಮ್ಮನ್ನು ಜೀವನದಲ್ಲಿ ಗಟ್ಟಿಗೊಳಿಸಿ ನಂತರ ಮತ್ತಷ್ಟು ಸೌಭಾಗ್ಯ ಕೊಡಲೆಂದೇ ಆಗಿದೆ. ಮೃತ್ಯುಂಜಯ ಮಂತ್ರ, ಆದಿತ್ಯ ಕವಚ ಪಠನದಿಂದ ಒಂದು ತಿಂಗಳಿನಲ್ಲಿ ನಿಮ್ಮ ಕಷ್ಟಗಳು ದೂರವಾಗಲಿದೆ.


 

click me!