ಹುಟ್ಟಿದಬ್ಬದ ಸಂಭ್ರಮ ಅಂತ ಎಣ್ಣೆ ಪಾರ್ಟಿ ಮಾಡೋ ಮುನ್ನ ಓದಿ..

By Suvarna NewsFirst Published Apr 10, 2020, 6:05 PM IST
Highlights

ಹುಟ್ಟುಹಬ್ಬ ನೀವು ಹುಟ್ಟಿದ ದಿನ ಮಾತ್ರವೇ ಅಲ್ಲ. ಅದು ನಿಮ್ಮೊಬ್ಬರ ಸಂಭ್ರಮವೂ ಅಲ್ಲ. ನಿಮ್ಮ ಪ್ರೀತಿಪಾತ್ರರಿಗೂ ಖುಷಿ ಕೊಡುವ ದಿನ ಅದು. ಹೀಗಾಗಿ ಅಂದು ನಿಮ್ಮದೇ ದಿನ ಎಂದು ಮನಸ್ಸಿಗೆ ಬಂದಂತೆ ವರ್ತಿಸಬೇಡಿ. ಕೆಲವು ವಿಷಯಗಳಲ್ಲಂತೂ ಜಾಗ್ರತೆಯಿಂದ ಇದ್ದು, ಅವುಗಳನ್ನು ಮಾಡಲೇಬೇಡಿ. ಜ್ಯೋತಿಷ್ಯವು ಇಂಥ ಕೆಲವು ಸಂಗತಿಗಳನ್ನು ಮಾಡದಿರುವಂತೆ ಸಲಹೆ ಕೊಡುತ್ತದೆ. ಹಾಗಾದರೆ, ಏನಿವು..? ನೋಡೋಣ ಬನ್ನಿ.

ಹುಟ್ಟಿದ ದಿನ ಎಂದರೆ ಅದು ಅವರಿಗೆ ಅಂದು ಹಬ್ಬದಂತೆ. ಅದಕ್ಕೇ ಅದನ್ನು ಹುಟ್ಟುಹಬ್ಬ ಎನ್ನುತ್ತೇವೆ. ಅವತ್ತು ಮನೆಯಲ್ಲಿ ಸಿಹಿ ಮಾಡಿ, ಸ್ನೇಹಿತರಿಗೆ ಸಿಹಿ ಹಂಚಿ, ಕೇಕ್ ಗಳನ್ನು ಕತ್ತರಿಸಿ, ಶುಭಾಶಯಗಳನ್ನು ಸ್ವೀಕರಸಿ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೊಸ ಬಟ್ಟೆ, ಒಳ್ಳೊಳ್ಳೆ ಗಿಫ್ಟ್ ಗಳು, ಹಿರಿಯರ ಹಾರೈಕೆಗಳಿಂದ ಮನಸ್ಸು ಖುಷಿಯಿಂದ ತೇಲುತ್ತಿರುತ್ತದೆ. ಆದರೆ, ಇಂಥ ದಿನ ಕೆಲವರು ಪಾರ್ಟಿಗಳು ಎಂದು ಮೋಜು ಮಸ್ತಿ ಮಾಡುವವರೂ ಇದ್ದಾರೆ. ಆದರೆ, ನೆನಪಿರಲಿ... ನಿಮ್ಮ ಬರ್ತ್ ಡೇ ದಿನ ಇಂಥವುಗಳ ಮಾಡಲೇಬೇಡಿ.

ಅಂದು ಶುಭ ಕೆಲಸಗಳನ್ನು ಮಾಡಿದರೆ ಎಲ್ಲ ಕೆಲಸವೂ ಶುಭಕರವಾಗಿಯೇ ಇರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಕೆಲವು ದಿನ ಬರ್ತ್ ಡೇ ಸಂದರ್ಭದಲ್ಲಿ ಕೆಲವು ಕೆಲಸಗಳನ್ನು ಮಾಡಿಬಿಟ್ಟಿರುತ್ತೇವೆ. ಇಂಥ ಕೆಲಸಗಳನ್ನು ಮಾಡುವುದು ಒಳ್ಳೆಯದಲ್ಲ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ.

ಮಾಂಸಾಹಾರ ಸೇವನೆ ಬೇಡ
ಹುಟ್ಟುಹಬ್ಬ ಸಂದರ್ಭದಲ್ಲಿ ಮಾಂಸಾಹಾರ ಸೇವನೆ ಒಳ್ಳೆಯದಲ್ಲ ಎಂದು ಜ್ಯೋತಿಷ್ಯ ಹೇಳುತ್ತದೆ. ಕಾರಣ, ತಾಮಸ ಬುದ್ಧಿಯನ್ನು ಹೆಚ್ಚು ಮಾಡುವುದಲ್ಲದೆ, ನಕಾರಾತ್ಮಕ ಭಾವನೆಗಳೇ ಮನಸ್ಸಿನಲ್ಲಿ ಮೂಡತೊಡಗುತ್ತದೆ. ಇದರಿಂದ ಕೆಟ್ಟ ಕೆಲಸಗಳತ್ತ ಮನ ವಾಲುತ್ತದೆ. ಮತ್ತೆ ಪೂರ್ತಿ ವರ್ಷ ರೋಗಗಳಿಂದಲೇ ಬಳಲುವ ಸಾಧ್ಯತೆಗಳು ಇವೆ. ಯಾವಾಗಲೂ ವಿವಾದಗಳಲ್ಲೇ ಇರುವಂತೆ ದುಷ್ಟ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತಿರುತ್ತವೆ. ಇದು ನೆಗಟಿವ್ ಎನರ್ಜಿಯನ್ನು ಹೆಚ್ಚು ಮಾಡುತ್ತದೆ. 

ಇದನ್ನೂ ಓದಿ: ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಬೇಡ ಅಪಮಾನ
ಹುಟ್ಟಿದ ದಿನ ಮನೆಯ ಹಿರಿಯರ ಆಶೀರ್ವಾದ ಪಡೆಯಿರಿ. ಹೆಚ್ಚೆಚ್ಚು ದಾನಗಳನ್ನು ಮಾಡಿ, ಮತ್ತು ಈ ದಿನ ನಿಮ್ಮ ಮನೆ ಬಳಿ ಯಾರಾದರೂ ಸಹಾಯ ಕೇಳಿ ಬಂದರೆ ಅಂಥವರಿಗೆ ಅವಮಾನ ಮಾಡದೇ ಕೈಲಾದಷ್ಟು ಸಹಾಯ ಮಾಡಿ, ಅಂಥವರ ಹಾರೈಕೆಗಳು ನಿಮ್ಮನ್ನು ಬಹಳಷ್ಟು ಕಾಲ ಕಾಪಾಡುತ್ತದೆ. ಒಂದೊಮ್ಮೆ ಅಂಥವರಿಗೆ ಅವಮಾನ ಮಾಡಿದರೆ, ಇಡೀ ವರ್ಷ ಸಮಸ್ಯೆ ಎದುರಿಸುವುದರ ಜೊತೆಗೆ ಅವಹೇಳನಗಳನ್ನು ತಡೆದುಕೊಳ್ಳುವ ಸಂದರ್ಭ ಬಂದೊದಗುತ್ತದೆ. 

ಅಂದು ಜಗಳ ಬೇಡವೇ ಬೇಡ
ಬರ್ತ್ ಡೇ ದಿನ ನಿಮಗೆ ಸಂತೋಷ ತರುವಂಥದ್ದು, ಹೀಗಾಗಿ ಆದಷ್ಟು ಈ ದಿನ ತಾಳ್ಮೆ ವಹಿಸಿಕೊಳ್ಳಿ, ಯಾರೊಂದಿಗೂ ಜಗಳ ಮಾಡಿಕೊಳ್ಳುವುದು ಬೇಡ. ಒಂದು ವೇಳೇ ನೀವು ತಾಳ್ಮೆಗೆಟ್ಟು ಮನಸ್ಥಾಪಗಳನ್ನು ಮಾಡಿಕೊಂಡರೆ ಆ ವರ್ಷವಿಡೀ ಇಂಥದ್ದೇ ಒಂದಿಲ್ಲೊಂದು ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ದಾಂಪತ್ಯ ಜೀವನದಲ್ಲೂ ಅನೇಕ ಸಂಕಷ್ಟಗಳು ಬಿಗಡಾಯಿಸುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಮೇಲೂ ಪರಿಣಾಮ ಬೀರಿ ಸಂತೋಷದಿಂದ ಇರಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

ಮದ್ಯಪಾನ ಶನಿದೇವನಿಗೆ ಆಹ್ವಾನ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಜನ್ಮದಿನದಂದು ಯಾವುದೇ ಕಾರಣಕ್ಕೂ ಮರೆತೂ ಸಹ ಮದ್ಯ ಸೇವನೆಯನ್ನು ಮಾಡಬೇಡಿ ಎಂಬ ಸಲಹೆ ಕೊಡಲಾಗುತ್ತದೆ. ಕಾರಣ ಇದರಲ್ಲಿ ಶನಿದೇವ ಇರುತ್ತಾನೆ. ಇನ್ನೊಂದು ಪ್ರಮುಖ ವಿಚಾರವೆಂದರೆ ಇದನ್ನು ಅಂದು ಸೇವಿಸುವುದರಿಂದ ಶನಿದೇವನಿಗೆ ಬೇಸರವಾಗಿ ಸಾಡೇಸಾಥ್ ಸಹ ನಿಮಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಜೀವನವಿಡೀ ಸಮಸ್ಯೆಯ ಸಂಕೋಲೆಗೆ ಸಿಲುಕಿ ಕಷ್ಟಪಡುವಂತಾಗುತ್ತದೆ.

ಈ ಕೆಲಸವನ್ನು ಮಾಡಿ
ಜ್ಯೋತಿಷ್ಯ ಹೇಳುವಂತೆ ಈ ದಿನ ಸಾಧ್ಯವಾದರೆ ಆಲದ ಗಿಡವನ್ನು ನೆಡಿ. ಇದು ಬೆಳೆದು ನೆರಳು ಕೊಡುವಂತೆ ನಿಮ್ಮ ಜೀವನವದಲ್ಲೂ ದೇವರ ಆಶೀರ್ವಾದವು ನೆರಳಿನಂತೆ ಇರುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಸಾರ್ವಜನಿಕ ಪ್ರದೇಶದಲ್ಲಿ ನೆಟ್ಟರೆ ಒಳ್ಳೆಯದು. 

ಇದನ್ನೂ ಓದಿ: ಅಂದು ಕೊಂಡಿದ್ದು ಕೈ ಹಿಡಿಯಲು ವಿಷ್ಣು ಸಹಸ್ರನಾಮ ಸಹಸ್ರ ಯೋಗ!

ಇದೂ ನಿಮ್ಮ ಗಮನದಲ್ಲಿರಲಿ
- ಅಂದು ಬೆಳಗ್ಗೆ ಹೊಸ ದಿರಿಸು ಧರಿಸಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬನ್ನಿ
- ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮಲ್ಲಿರುವ ಯಾವುದಾದರೂ ಒಂದು ಗುಣ ಹಿಡಿಸದಿದ್ದರೆ ಅಂಥದ್ದನ್ನು ಈ ದಿನ ಬಿಟ್ಟು ಅವರಿಗೂ ಖುಷಿಪಡಿಸಿ.
- ಆ ದಿನ ನೀವು ಉಗುರು, ಕೂದಲು ಕತ್ತರಿಸುವಂತಹ ಕೆಲಸಕ್ಕೆ ಹೋಗಬೇಡಿ. ಹೀಗೆ ಮಾಡಿದರೆ ಜ್ಯೋತಿಷ್ಯದ ಪ್ರಕಾರ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ.

click me!