ಮಡಿಕೇರಿಯ ಗಾಂಧಿ ಮೈದಾನದಲ್ಲಿ 7 ದಿನಗಳ ಕಾಲ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ

By Suvarna NewsFirst Published Jan 5, 2024, 8:24 PM IST
Highlights

ಜವಳಿ ಅಭಿವೃದ್ಧಿ ಆಯುಕ್ತಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಡಿಕೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ 1 ವಾರ ನಡೆಯಲಿದೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.5): ಜವಳಿ ಅಭಿವೃದ್ಧಿ ಆಯುಕ್ತಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಡಿಕೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ‘ಕಾವೇರಿ ವಸ್ತ್ರಸಿರಿ’ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಚರಕದಲ್ಲಿ ಕಣಿಕೆ ಸುತ್ತುವ ಮೂಲಕ ಚಾಲನೆ ನೀಡಿದರು.

Latest Videos

ನಗರದ ಗಾಂಧಿ ಮೈದಾನದಲ್ಲಿ ಒಂದು ವಾರಗಳ ಕಾಲ ಏರ್ಪಡಿಸಿರುವ ‘ಕಾವೇರಿ ವಸ್ತ್ರಸಿರಿ’ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ವತಃ ಕೈಮಗ್ಗ ನೇಕಾರಿಕೆ ಮಾಡುವ ಮೂಲಕ ಅನಿತಾ ಪೂವಯ್ಯ ಅವರು ಚಾಲನೆ ನಿಡಿದರು. ಬಳಿಕ ಮಾತನಾಡಿದ ಅವರು ಆಧುನಿಕತೆ ಬೆಳೆದಂತೆ ಕೈಮಗ್ಗ ನೇಕಾರರು ಸಂಕಷ್ಟವನ್ನು ಎದುರಿಸುತ್ತಿದ್ದು, ಕೈಮಗ್ಗ ನೇಕಾರರಿಗೆ ಸರ್ಕಾರದಿಂದ ಹಲವು ಸಹಾಯಧನ ಕಲ್ಪಿಸಲಾಗುತ್ತಿದೆ ಎಂದರು.

ವಿಪ್ರೋ ಮಾಜಿ ಸಿಎಫ್‌ಒ ವಿರುದ್ಧ 25ಕೋಟಿ ಪರಿಹಾರ ಕೇಳಿ ಬೆಂಗಳೂರಿನಲ್ಲಿ ಕೇಸ್‌ ಹಾಕಿದ ಅಜೀಂ ಪ್ರೇಮ್‌ಜಿ

ಪಿ.ಎಂ.ವಿಶ್ವಕರ್ಮ ಯೋಜನೆಯಡಿ ನೇಕಾರರಿಗೆ ಸಹಾಯಧನದ ಅಡಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಕೈಮಗ್ಗ ಉತ್ಪನ್ನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ಇಂದಿನ ಕೂಲಿಯನ್ನು ಗಮನಿಸಿದರೂ ಸಹ ಕನಿಷ್ಠ 500 ರೂ. ಸಿಗುತ್ತದೆ. ಅಂತಹದ್ದಲ್ಲಿ ಒಂದು ಸೀರೆ ನೇಯಲು ಕನಿಷ್ಠ ಎರಡು ದಿನ ಬೇಕಾಗುತ್ತದೆ. ಆದ್ದರಿಂದ ನೇಕಾರರಿಗೆ ಮತ್ತಷ್ಟು ಸಹಾಯಧನ ದೊರೆಯಬೇಕಿದೆ ಎಂದು ನಗರಸಭೆ ಅಧ್ಯಕ್ಷರು ಹೇಳಿದರು.

ಕರಕುಶಲ ಕರ್ಮಿಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿಯೊಂದಿಗೆ ಮಾನ್ಯತೆ ನೀಡಲಾಗುತ್ತದೆ. ಕೌಶಲ್ಯ, ಉನ್ನತೀಕರಣ, ಟೂಲ್ ಕಿಟ್ ಪ್ರೋತ್ಸಾಹ, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸುತ್ತದೆ. ಕ್ರೆಡಿಟ್ ಬೆಂಬಲವನ್ನು ಶೇ.5 ರಷ್ಟು ರಿಯಾಯಿತಿ ಬಡ್ಡಿಯ ದರದಲ್ಲಿ ಒಂದನೇ ಕಂತಿನಲ್ಲಿ 1 ಲಕ್ಷ ಮತ್ತು 2 ಎರಡನೇ ಕಂತಿನಲ್ಲಿ 2ಲಕ್ಷ ಪ್ರೋತ್ಸಾಹವನ್ನು ಒದಗಿಸಲಾಗುತ್ತದೆ ಎಂದು ಅನಿತಾ ಪೂವಯ್ಯ ಅವರು ತಿಳಿಸಿದರು. 

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸತೀಶ್ ಅವರು ಮಾತನಾಡಿ ಆಧುನಿಕತೆಗೆ ಹೊಂದಿಕೊಂಡು ಕೈಮಗ್ಗವನ್ನು ಉಳಿಸಿಕೊಂಡು ಆಧುನಿಕತೆಗೆ ಒಗ್ಗಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ಮಾತನಾಡಿ ಸರ್ಕಾರದಿಂದ ಪ್ರತಿವರ್ಷ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗುತ್ತಿದೆ. ಶೇ.20 ರಷ್ಟು ರಿಯಾಯಿತಿ ದರದಲ್ಲಿ ಕೈಮಗ್ಗ ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿವೆ ಎಂದು ಮಾಹಿತಿ ನೀಡಿದರು.

ಕೆಂಗೇರಿ ಬಳಿ ಎಕ್ಸ್‌ಪ್ರೆಸ್‌ ರೈಲು ಮುಕ್ಕಾಲು ಗಂಟೆ ನಿಲುಗಡೆ, ಜ್ಞಾನಭಾರತಿ ಮೆಟ್ರೋ ಬಳಿ ನಿಲ್ಲಿಸುವಂತೆ ಒತ್ತಾಯ

ಚಿಕ್ಕಬಳ್ಳಾಪುರ, ಬೆಂಗಳೂರು, ತುಮಕೂರು, ಚಾಮರಾಜನಗರ, ಹಾಸನ, ಗುಬ್ಬಿ, ಶಿವಮೊಗ್ಗ, ಬಾಗಲಕೋಟೆ, ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಕೊಡಗು ಜಿಲ್ಲೆಯ ಕುಶಾಲನಗರ, ಪೊನ್ನಂಪೇಟೆ, ಹೀಗೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಕೈಮಗ್ಗ ನೇಕಾರರು ಆಗಮಿಸಿ 20 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ ಎಂದು ಗುರುಸ್ವಾಮಿ ಮಾಹಿತಿ ನೀಡಿದರು. ಜಿ.ಪಂ.ಮುಖ್ಯ ಯೋಜನಾಧಿಕಾರಿ ಝೀವಲ್‍ಖಾನ್, ಪೊನ್ನಂಪೇಟೆ ನೇಕಾರರ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಕೆ.ದೇವಾನಂದ, ಕುಶಾಲನಗರ ನೇಕಾರರ ಸಹಕಾರ ಸಂಘದ ಕಾರ್ಯದರ್ಶಿ ಸವಿತಾ, ಇತರರು ಇದ್ದರು.

click me!