
ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ದ್ರಾವಿಡರ ನಾಡಿಗೆ ಈಗ ಅಧಿಪತಿ. ಆದ್ರೆ ವಿಜಯ್ ಗೆಲುವು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ಸ್ಗೆ ನಡುಕ ಹುಟ್ಟಿಸಿದೆ. ತಮಿಳುನಾಡು ರಾಜಕೀಯದಲ್ಲಿ ವಿಜಯ್ ರಾಕ್ ಆದ್ರೆ ಅಲ್ಲಿನ ನಟ ಕಮಲ್ ಹಾಸನ್ ಹಾಗು ರಜನಿಕಾಂತ್ಗೆ ಶಾಕ್ ಆಗಿದೆ. ಇದಕ್ಕೆ ಕಾರಣ ಸ್ಟಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್. ತಮಿಳುನಾಡಿನಲ್ಲಿ ಈಗ ಟಿವಿಕೆ ಪಕ್ಷದ ಗೆಲುವಿನ ವಿಚಾರ ಭಾರೀ ಸದ್ದು ಮಾಡ್ತಿದೆ. ಸ್ವಂತ ಪಕ್ಷ ಕಟ್ಟಿ ಎರಡು ವರ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಿ ನಟ ವಿಜಯ್ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಾರೆ.
ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳು ಹೀನಾಯ ಸೋಲಿನ ಪರಿಣಾಮ ಅಷ್ಟಿಷ್ಟಲ್ಲ. ಇದು ತಮಿಳು ಚಿತ್ರರಂಗದ ಮೇಲೆ ಅದರಲ್ಲೂ ಪ್ರಭಾವಿ ಹೀರೋಗಳಿಗೆ ನಡುಕ ಹುಟ್ಟಿಸಿದೆ. ದಶಕಗಳ ಬಳಿಕ ಇವರಿಬ್ಬರು ಒಂದಾಗಿ ತೆರೆ ಹಂಚಿಕೊಳ್ಳೋ ಕನಸು ಕಂಡಿದ್ರು. ಆದ್ರೆ ಈ ಕಿಲಾಡಿ ಜೋಡಿಗೆ ಹೊಸ ಟೆನ್ಷನ್ ಶುರುವಾಗಿದೆ. ಅಷ್ಟಕ್ಕೂ ವಿಜಯ್ ಗೆದ್ದಿದ್ದಕ್ಕೆ ನಟ ಕಮಲ್ ಹಾಸನ್ ಹಾಗು ಸೂಪರ್ ಸ್ಟಾರ್ ರಜನಿಕಾಂತ್ ಶಾಕ್ ಆಗಿದ್ದೇಕೆ ಗೊತ್ತಾ..? ಅದೇ ಒಂದು ಇಂಟ್ರೆಸ್ಟಿಂಗ್ ಕಹಾನಿ. ವಿಜಯ್ರ ಟಿವಿಕೆ ಆರ್ಭಟಕ್ಕೆ ಡಿಎಂಕೆ ಪಕ್ಷ ಹೀನಾಯವಾಗಿ ಸೋತಿದೆ.
ಹಾಲಿ ಮುಖ್ಯಮಂತ್ರಿ ಎಂ. ಕೆ ಸ್ವಾಲಿನ್ ತಮ್ಮದೇ ಕ್ಷೇತ್ರದಲ್ಲಿ ಸೋತು ಮುಖಭಂಗ ಅನುಭವಿಸಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಡಿಸಿಎಂ ಆಗಿದ್ರು. ಅಷ್ಟೆ ಅಲ್ಲ ಸಿನಿಮಾ ನಿರ್ಮಾಣದಲ್ಲೂ ಇವರ ಪಾತ್ರ ತಮಿಳು ಚಿತ್ರರಂಗಕ್ಕೆ ದೊಡ್ಡದಿದೆ. ಉದಯನಿಧಿ ಸ್ಟ್ಯಾಲಿನ್ ಡಿಎಂಕೆ ರೆಡ್ ಜೈಂಟ್ ಮೂವೀಸ್ ಅನ್ನೋ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟಾಕ್ಕಿದ್ದು, ಇದೇ ಸಂಸ್ಥೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ನಟನೆಯ ಸಿನಿಮಾ ನಿರ್ಮಾಣ ಆರಂಭಿಸಿದೆ. ದಶಕಗಳ ಬಳಿಕ ನಟ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ನಲ್ಲಿ ಮಲ್ಟಿ ಸ್ಟಾರರ್ ಸಿನಿಮಾ ಸಿದ್ಧವಾಗುತ್ತಿದೆ.
ಸ್ಟಾರ್ ಡೈರೆಕ್ಟರ್ ನೆಲ್ಸನ್ ಆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದೆ. ಇತ್ತೀಚೆಗೆ ಪ್ರೋಮೊ ಸಮೇತ ಕ್ರೇಜಿ ಪ್ರಾಜೆಕ್ಟ್ ಘೋಷಣೆ ಆಗಿತ್ತು. ರಜನಿ ಹಾಗೂ ಕಮಲ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ಟೀಸರ್ ರಿಲೀಸ್ ಆಗಿತ್ತು. ಅಂದಾಜು 500 ಕೋಟಿ ಬಜೆಟ್ನ ಸಿನಿಮಾ ಇದಾಗಿದೆ. ಇಂತಾದೊಂದು ಸಾಹಸಕ್ಕೆ ಉದಯ ನಿಧಿ ಸ್ಟಾಲಿನ್ ಕೈ ಹಾಕಿದ್ದಾರೆ. ಬಹಳ ವರ್ಷಗಳ ಬಳಿಕ ದಿಗ್ಗಜ ನಟರಿಬ್ಬರನ್ನೂ ಒಟ್ಟಿಗೆ ಸೇರಿಸಿದ್ರು.
ಆದ್ರೆ ವಿಜಯ್ ತಮಿಳುನಾಡು ಸಿಎಂ ಪಟ್ಟಕ್ಕೇರುತ್ತಿರೋದು ಈ ಚಿತ್ರಕ್ಕೆ ದೊಡ್ಡ ಎಫೆಕ್ಟ್ ಆಗೋ ಹಾಗೆ ಕಾಣ್ತಾ ಇದೆ. ಯಾಕಂದ್ರೆ ಅಧಿಕಾರ ಕಳೆದುಕೊಂಡಿರೋ ಉದಯ ನಿಧಿ ಸ್ಟಾಲಿನ್ ಈ ಸಿನಿಮಾ ಶುರುಮಾಡೋದೇ ಡೌಟ್ ಅಂತ ಹೇಳಲಾಗ್ತಿದೆ. ಒಂದ್ಕಾಲದಲ್ಲಿ ರಜನಿ ಹಾಗೂ ಕಮಲ್ ಒಟ್ಟಿಗೆ ನಟಿಸುತ್ತಿದ್ರು. ಆದ್ರೆ ನಾವಿಬ್ಬರು ಜೊತೆಯಾಗಿ ನಟಿಸೋದು ಬೇಡ ಎಂದು ಇಬ್ಬರೂ ನಿರ್ಧರಿಸಿ ದೂರ ಆಗಿದ್ರು. ಬಟ್ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವಾಗ ಇಬ್ಬರನ್ನು ಒಂದೇ ಫ್ರೇಮ್ನಲ್ಲಿ ಸೇರಿಸಲು ಉದಯನಿಧಿ ಸ್ಟಾಲಿನ್ ಗಟ್ಟಿ ಮನಸ್ಸು ಮಾಡಿ ಹೆಜ್ಜೆ ಇಟ್ಟಿದ್ದಾರೆ.
ಇನ್ನೇನು ಇನ್ನೆರಡು ತಿಂಗಳಲ್ಲಿ ಸಿನಿಮಾ ಶೂಟಿಂಗ್ ಕೂಡ ಆರಂಭ ಆಗಬೇಕಿದೆ. ಇಂಟ್ರೆಸ್ಟಿಂಗ್ ಅಂದ್ರೆ ಉದಯನಿಧಿ ಸ್ಟಾಲಿನ್ ತಮ್ಮ ನಿರ್ಮಾಣ ಸಂಸ್ಥೆಯಿಂದ ಮೊದಲ ಸಿನಿಮಾ ಶುರು ಮಾಡಿದ್ದು ವಿಜಯ್ ಹಾಗೂ ತ್ರಿಷಾ ನಟನೆಯ 'ಕುರುವಿ' ಚಿತ್ರದ ಮೂಲಕ. ಈಗ ಅದೇ ವಿಜಯ್ ಸ್ಟಾಲಿನ್ ವಿರೋಧಿ ಬಣದಲ್ಲಿದ್ದಾರೆ. ಆ ಬಳಿಕ 'ಇಂಡಿಯನ್-2' ಹಾಗೂ 'ಥಗ್ ಲೈಫ್' ರೀತಿಯ ಭಾರೀ ಬಜೆಟ್ ಸಿನಿಮಾಗಳನ್ನು ನಿರ್ಮಿಸಿ ಕೈ ಸುಟ್ಟುಕೊಂಡಿದ್ದಾರೆ ಉದಯ್ ನಿಧಿ ಸ್ಟಾಲಿನ್.
ಎಂ.ಕೆ ಸ್ಟಾಲಿನ್ ನ ಡಿಎಂಕೆ ಪಕ್ಷ ಸೋತಿದ್ದೆ ತಡ. ನಟ ರಜನಿಕಾಂತ್ ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ರನ್ನ ಭೇಟಿ ಮಾಡಿದ್ದಾರೆ. ರಜನಿಕಾಂತ್ ಸ್ಟಾಲಿನ್ ಅವರಿಗೆ ತಮ್ಮ ಬೆಂಬಲ ಒಟ್ಟಿದ್ದು, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ ಅಂತ ಹೇಳಲಾಗ್ತಿದೆ. ಹೀಗಾಗಿ ಉದಯ್ ನಿಧಿ ಸ್ಟಾಲಿನ್ ನಿರ್ಮಾಣದ ಸಿನಿಮಾ ಕತೆ ಮುಂದೇನಾಗುತ್ತೆ..? ತಮಿಳು ಚಿತ್ರರಂಗವನ್ನಾಳುತ್ತಿದ್ದ ವಿಜಯ್ ಚಿತ್ರರಂಗವನ್ನ ಉಳಿಸಿ ಬೆಳೆಸುತ್ತಾರಾ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.