
ಬಾಬಾ ಗುಹೆಗೆ ತೆರಳಿ ಅಲ್ಲಿ ಧ್ಯಾನ ನಡೆಸಲಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್!
ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ (Rajinikanth) ಅವರು ಇದೀಗ ಹಿಮಾಲಯಕ್ಕೆ ತೆರಳಿದ್ದಾರೆ. 'ತಲೈವಾ' ಖ್ಯಾತಿಯ ನಟ ರಜನಿಕಾಂತ್ ಅವರು ಪ್ರತಿವರ್ಷ ಹಿಮಾಲಯಕ್ಕೆ ಹೋಗುವುದು ವಾಡಿಕೆ. ಅದೇ ರೀತಿಯಲ್ಲಿ ಈ ವರ್ಷ ಸಹ ಇದೀಗ ನಟ ರಜನಿಕಾಂತ್ ಹೊರಟಿದ್ದು, ಸದ್ಯ ಇಂದು ಬೆಳಗ್ಗೆ ಋಷಿಕೇಶದ ಆಶ್ರಮದಲ್ಲಿ ರಜನಿಕಾಂತ್ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆ ಬಳಿಕ ಅವರು ಬದರಿನಾಥಕ್ಕೆ ಭೇಟಿ ನೀಡಲಿದ್ದು, ನಂತರ ಬಾಬಾ ಗುಹೆಗೆ ತೆರಳಿ ಅಲ್ಲಿ ಧ್ಯಾನ ನಡೆಸಲಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್.
ಹೌದು, ನಟ ರಜನಿಕಾಂತ್ ಅವರು ಆಧ್ಯಾತ್ಮದ ದಾರಿಯಲ್ಲಿ ಹೋಗುತ್ತಿದ್ದು, ಅನೇಕ ವರ್ಷಗಳಿಂದ ಅವರು ಧ್ಯಾನ ಹಾಗೂ ಯೋಗದ ಮೊರೆ ಹೋಗಿದ್ದಾರೆ. ನಟ ರಜನಿಕಾಂತ್ ಅವರಿಗೆ ಸೂಪರ್ ಸ್ಟರ್ ಪಟ್ಟ ಸಿಕ್ಕಿದ ಬಳಿಕ ಇನ್ನೇನು ಅಂತ ಯೋಚಿಸಿದಾದ, ಹೊರಗಡೆ ಸಾಧನೆ ಸಾಕು, ಇನ್ನೇನಿದ್ದರೂ ಒಳಗಡೆಯ ಸಾಧನೆ ಮಾಡಬೇಕಿದೆ ಎಂಬ ಜ್ಞಾನೋದಯ ಆಗಿದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಜೊತೆಗೆ, ಅವರಿಗೆ ಹಿಮಾಲಯದಲ್ಲಿ ಬಾಬಾ ಅವರು ಗುರುಗಳಾಗಿ ಸಿಕ್ಕಿದ್ದು, ಅವರ ಮಾರ್ಗದರ್ಶನದಲ್ಲಿ ನಟ ರಜನಿಕಾಂತ್ ಅವರು ಆಧ್ಯಾತ್ಮಿಕ ಸಾಧನೆ ಮಾಡುತ್ತಿದ್ದಾರೆ.
ಪ್ರತಿವರ್ಷವೂ ನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಹೋಗಿ ಅಲ್ಲಿ 15-20 ದಿನಗಳ ಕಾಲ ಧ್ಯಾನದಲ್ಲಿ ನಿರತರಾಗುತ್ತಾರೆ. ಕೆಲವೊಮ್ಮೆ ಇನ್ನೂ ಹೆಚ್ಚಿನ ದಿನಗಳನ್ನು ಅಲ್ಲಿ ಕಳೆದಿದ್ದೂ ಇದೆ. ಬಿಳಿಯ ಬಟ್ಟೆಯಲ್ಲಿ ಅಲ್ಲಿಗೆ ಹೋಗಿ ಅಲ್ಲಿ ಬಾಬಾರ ಸಮ್ಮುಖದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡುವ ನಟ ರಜನಿಕಾಂತ್ ಅವರು ಸದ್ಯ ರಾಜಕೀಯದಿಂದ ದೂರವಿದ್ದು ಆಧ್ಯಾತ್ಮಿಕ ಸಾಧನೆಯಲ್ಲಿ ನಿರತರಾಗಿದ್ದಾರೆ. ಅವರ ಪ್ರಕಾರ, ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ದಿನ ಆಧ್ಯಾತ್ಮದ ಕಡೆ ಸಾಗಲೇಬೇಕು, ಆಂತರ್ಯದ ಕಡೆ ನೋಡಲೇಬೇಕು.
ರಜನಿಕಾಂತ್ ಅವರು ತಮ್ಮ ಹೆಣ್ಣುಮಕ್ಕಳ ಡಿವೋರ್ಸ್ ಕೇಸ್ಗಳಿಂದಲೂ ಸಾಕಷ್ಟು ನೊಂದಿದ್ದಾರೆ. ಅದಕ್ಕೂ ಮೊದಲೂ ಕೂಡ ಅವರು ನಿಧಾನವಾಗಿ ಆಧ್ಯಾತ್ಮದ ಕಡೆ ಮಾನಸಿಕವಾಗಿ ಜಾರುತ್ತಿದ್ದರು ಎನ್ನಲಾಗಿದೆ. ಅವರೇ ಒಮ್ಮೆ ಹೇಳಿರುವಂತೆ 'ನಾವು ಯಾವತ್ತಿಗೂ ಹೊರಗಡೆಯೇ ನೋಡುತ್ತಿದ್ದರೆ ಅದೊಂದು ಮುಗಿಯದ ಪ್ರಯಾಣ. ಆದ್ರೆ ನಾವು ಒಳಗಡೆ ಪ್ರಯಾಣ ಶುರುಮಾಡಿಕೊಂಡರೆ ಅದು ಹೊರಗಡೆಯ ಪ್ರಯಾಣವನ್ನೂ ಯಾವುದೇ ಪ್ರಯಾಸವಿಲ್ಲದೇ ಮಾಡಿದಂತೆಯೇ ಆಗುತ್ತದೆ'. ಇದು ನಟ ರಜನಿಕಾಂತ್ ಅವರು ಕಂಡುಕೊಂಡ ಸತ್ಯ.
ಹೌದು, ನಟ ರಜನಿಕಾಂತ್ ಅವರಿಗೀಗ 76ನೇ ವರ್ಷ ವಯಸ್ಸು. ಇತ್ತೀಚೆಗಷ್ಟೇ 'ಕೂಲಿ' ಸಿನಿಮಾ ಮಾಡುವ ಮೂಲಕ ಅವರು ತಮ್ಮಗಿನ್ನೂ ನಟಿಸುವಷ್ಟು ಎನರ್ಜಿ ಇದೆ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಡಾನ್ಸ್, ಫೈಟ್ ಹಾಗೂ ನಟನೆ ಯಾವುದರಲ್ಲೂ ನಟ ರಜನಿಕಾಂತ್ ಅವರು ದಣಿವು ಅನುಭವಸಿಲ್ಲ, ಅವರಿಗೆ ಸಾಕಾಯ್ತು ಎನ್ನುವಂತೆ ಅವರು ಯಾವತ್ತೂ ನಡೆದುಕೊಂಡಿಲ್ಲ. ಆದರೆ, ಅತ್ತ ಆಧ್ಯಾತ್ಮಿಕ ಸಾಧನೆಯನ್ನೂ ಬಿಟ್ಟಿಲ್ಲ ನಟ ರಜನಿಕಾಂತ್. ರಾಜಕೀಯದಿಂದ ದೂರವಿದ್ದು, ಆಧ್ಯಾತ್ಮಿಕ ಪ್ರಯಾಣದಲ್ಲಿ ತೊಡಗಿಸಿಕೊಂಡಿರುವನಟ ರಜನಿಕಾಂತ್ ಅವರ ಮುಂದಿನ ಜೀವನ ಹೇಗೆ ಇರಬಹುದು ಎಂಬ ಕುತೂಹಲ ಹಲವರಲ್ಲಿ ಮನೆಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.