ಸರ್ಕಾರಿ ಶಾಲೆ ಉಳಿವಿಗಾಗಿ ರಿಷಬ್ ಶೆಟ್ಟಿ ಹೊಸ ಪ್ರಯತ್ನ | ರಾಜ್ಯಾದ್ಯಂತ ಸಂಚರಿಸಿ ಸರ್ಕಾರಿ ಶಾಲೆಗಳಲ್ಲಿ ಚಿತ್ರ ಪ್ರದರ್ಶನ | ಸಿಎಂ ಕುಮಾರಸ್ವಾಮಿಯವರಿಗೂ ಚಿತ್ರ ತೋರಿಸಲಿದ್ದಾರೆ ರಿಷಬ್ ಶೆಟ್ಟಿ
ಧಾರವಾಡ (ಸೆ. 12): ಕನ್ನಡ ಶಾಲೆಗಳ ಉಳಿವಿಗಾಗಿ ಕನ್ನಡ ಶಾಲೆ ಉಳಿಸಿ ತಂಡದೊಂದಿಗೆ ರಾಜ್ಯಾದ್ಯಂತ ಸಂಚರಿಸಿ ಚಿತ್ರವನ್ನು ಎಲ್ಲ ಶಾಲೆಗಳಲ್ಲಿ ಪ್ರದರ್ಶಿಸುವ ಯೋಜನೆ ಹಾಕಿಕೊಂಡಿರುವುದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದ್ದಾರೆ.
ಈ ಚಿತ್ರವನ್ನು ಶೀಘ್ರದಲ್ಲಿ ಮುಖ್ಯಮಂತ್ರಿಗಳಿಗೂ ತೋರಿಸಲಾಗುವುದು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಕೇರಳ ಗಡಿನಾಡು ಕಾಸರಗೋಡಿನ ಮಲಯಾಳಿ ನೆಲದಲ್ಲಿ ಕನ್ನಡ ಭಾಷೆಯನ್ನು ಮೇಲಿನ ದಬ್ಬಾಳಿಕೆಯನ್ನು ತೆರೆಯ ಮೇಲೆ ತಂದಿರುವ ರಿಷಬ್ ಶೆಟ್ಟಿ ನಿರ್ದೇಶನದ ‘ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಕನ್ನಡ ಚಿತ್ರಕ್ಕೆ ಕಾಸರಗೋಡಿನಲ್ಲಿ ಭರ್ಜರಿ ಬೆಂಬಲವೂ ಸಿಗ್ತಿದೆ. ಅಲ್ಲಿನ ಥಿಯೇಟರ್ ಗಳಲ್ಲಿ ಸಿನಿಮಾ ಮುನ್ನುಗ್ಗುತ್ತಿದೆ.
ರಿಷಬ್ ಶೆಟ್ಟಿ ನಿರ್ದೇಶನ, ಅನಂತ್ ನಾಗ್ ಅಭಿನಯಕ್ಕೆ ಮಾತ್ರ ಚಿತ್ರ ಸೀಮಿತವಾಗಿಲ್ಲ. ಚಿತ್ರದ ಬಗ್ಗೆ, ಚಿತ್ರ ನೋಡಿದ್ದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೂ ಪ್ರತಿಯೊಬ್ಬರೂ ಬರೆದುಕೊಳ್ಳುತ್ತಿದ್ದಾರೆ. ವಿವಿಧ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕುವ ಕಾಸರಗೋಡಿನ ನಮ್ಮದೆ ಕನ್ನಡಿಗರ ಬಗ್ಗೆ, ಅವರ ಸಮಸ್ಯೆ ನಿವಾರಣೆ ಬಗ್ಗೆ ಈ ಸಿನಿಮಾ ಪರಿಹಾರ ಸೂತ್ರವೊಂದನ್ನು ತರಲು ಪ್ರಯತ್ನಿಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ!