'ಮಾಯಾ ಬಜಾರ್' ಚಿತ್ರದಲ್ಲಿ ಪುನೀತ್ ಹೊಸ ನಿರ್ದೇಶಕನಿಗೆ ಅವಕಾಶ ಕೊಟ್ಟಿದ್ದೇಕೆ?

By Suvarna Web DeskFirst Published Jan 25, 2018, 12:24 PM IST
Highlights

ಮತ್ತೊಬ್ಬ ಇಂಜಿನಿಯರ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಇವರ ಚಿತ್ರವನ್ನು ನಿರ್ಮಿಸುತ್ತಿರುವುದು ಪುನೀತ್  ರಾಜ್‌ಕುಮಾರ್. ರಾಧಾಕೃಷ್ಣ ರೆಡ್ಡಿ  ನಿರ್ದೇಶನದ, ರಾಜ್ ಬಿ ಶೆಟ್ಟಿ, ಪ್ರಕಾಶ್ ರೈ  ಅಭಿನಯದ ‘ಮಾಯಾಬಜಾರ್’ಕ್ಕೆ  ಬುಧವಾರ ಮೂಹೂರ್ತ ನಡೆದಿದೆ. ಅಂದಹಾಗೆ ಹೊಸ ನಿರ್ದೇಶಕನಿಗೆ ಪುನೀತ್ ಅವಕಾಶ ಕೊಟ್ಟಿದ್ದು ಯಾವ ಕಾರಣಕ್ಕೆ? ಇಲ್ಲಿದೆ ನೋಡಿ

ಬೆಂಗಳೂರು (ಜ.25): ಮತ್ತೊಬ್ಬ ಇಂಜಿನಿಯರ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಇವರ ಚಿತ್ರವನ್ನು ನಿರ್ಮಿಸುತ್ತಿರುವುದು ಪುನೀತ್  ರಾಜ್‌ಕುಮಾರ್. ರಾಧಾಕೃಷ್ಣ ರೆಡ್ಡಿ

ನಿರ್ದೇಶನದ, ರಾಜ್ ಬಿ ಶೆಟ್ಟಿ, ಪ್ರಕಾಶ್ ರೈ  ಅಭಿನಯದ ‘ಮಾಯಾಬಜಾರ್’ಕ್ಕೆ  ಬುಧವಾರ ಮೂಹೂರ್ತ ನಡೆದಿದೆ. ಅಂದಹಾಗೆ ಹೊಸ ನಿರ್ದೇಶಕನಿಗೆ ಪುನೀತ್ ಅವಕಾಶ ಕೊಟ್ಟಿದ್ದು ಯಾವ ಕಾರಣಕ್ಕೆ? ಇಲ್ಲಿದೆ ನೋಡಿ

ನಿಮ್ಮ ಪರಿಚಯ ಹೇಳಿ..

ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರು. ಓದಿದ್ದು ಇಂಜಿನಿಯರಿಂಗ್ ಪದವಿ. ಓದು ಮುಗಿಸಿ ಸಿನಿಮಾದತ್ತ ಬಂದೆ.

ಸಿನಿಮಾ ಅಥವಾ ರಂಗಭೂಮಿ ನಂಟು ಇದೆಯಾ?

ಖಂಡಿತವಾಗಿಯೂ ಯಾವುದೇ ನಂಟಿಲ್ಲ. ನಮ್ಮ ಫ್ಯಾಮಿಲಿಯಲ್ಲಿ ಸಿನಿಮಾ ಜಗತ್ತಿಗೆ ಬರುತ್ತಿರುವುದು ನಾನೇ ಮೊದಲು. ಹಾಗೆ ನೋಡಿದರೆ, ಈ ಕಾಲಕ್ಕೆ ಅಂತಹ ನಂಟೇ ಬೇಕಿಲ್ಲ. ಯಾಕಂದ್ರೆ, ಸಿನಿಮಾ ಪ್ರತಿಯೊಬ್ಬರ ಆಕರ್ಷಣೆಯ ಕ್ಷೇತ್ರ. ಕಾಲೇಜು ದಿನಗಳಲ್ಲಿ ನನಗೂ ಆಕರ್ಷಣೆ ಇದ್ದೇ ಇತ್ತು. ಕಾಲೇಜು ಮುಗಿಸಿ, ಮುಂದೆ ಏನು ಮಾಡಬಹುದು ಎಂದು ಯೋಚಿಸಿದಾಗ ಮೊದಲು ಹೊಳೆದಿದ್ದೇ ಕಿರುಚಿತ್ರ ನಿರ್ಮಾಣ ಮತ್ತು ನಿರ್ದೇಶನ. ಅಂದುಕೊಂಡಂತೆ ಒಂದೆರಡು ಕಿರುಚಿತ್ರಗಳನ್ನು ನಿರ್ದೇಶಿಸಿದೆ. ಅದರ ಪ್ರಭಾವ ಗಾಢವಾಗುತ್ತಾ ಬಂತು. ಸಿನಿಮಾ ಮಾಡಬೇಕು ಅಂತ ಒಂದು ಕತೆ ಬರೆದೆ. ಅಲ್ಲಿಂದಲೇ ಈವರೆಗೂ ಬಂದು ನಿಂತಿದ್ದೇನೆ.

ಪಿಆರ್‌ಕೆ ಪ್ರೊಡಕ್ಷನ್‌ಗೆ ಸಂಪರ್ಕ ಹೇಗೆ? ಪುನೀತ್‌'ರನ್ನು ಹೇಗೆ ಒಪ್ಪಿಸಿದ್ರಿ?

ಅದಕ್ಕೆ ಮೂಲ ಕಾರಣ ನಿರ್ಮಾಪಕ ಎಂ ಗೋವಿಂದು. ಕತೆ ಬರೆಯುವಾಗ ನನಗೆ ಯಾವುದೇ ಚಿತ್ರ ನಿರ್ಮಾಣ ಸಂಸ್ಥೆಯ ಕಲ್ಪನೆ ಇರಲಿಲ್ಲ. ಒಂದೊಳ್ಳೆ ಕತೆ ಆಗ್ಬೇಕು ಅನ್ನೋದಷ್ಟೇ ತಲೆಯಲ್ಲಿತ್ತು. ಕತೆ ಬರೆದು ಮುಗಿಸಿದ ನಂತರ ಒಮ್ಮೆ ನಿರ್ಮಾಪಕ ಗೋವಿಂದು ಅವರು ಸಿಕ್ಕರು. ಕತೆ ಕೇಳಿದರು. ನಂತರ ಅವರೇ ಪಿಆರ್‌ಕೆ ಪ್ರೊಡಕ್ಷನ್ ಹೌಸ್ ಪ್ರಸ್ತಾಪ ಮಾಡಿದರು. ಪುನೀತ್ ಸರ್ ಭೇಟಿಗೂ ಟೈಮ್ ಫಿಕ್ಸ್ ಮಾಡಿದ್ರು. ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಕತೆ ಹೇಳಿದಾಗ ಅವರು ತುಂಬಾ ಇಂಪ್ರೆಸ್ ಆದ್ರು. ಆಯ್ತು ಸಿನಿಮಾ ಮಾಡೋಣ, ಸ್ಕ್ರಿಪ್ಟ್ ವರ್ಕ್ ಮುಗಿಸಿಕೊಳ್ಳಿ ಅಂತ ಆಶ್ವಾಸನೆ ಕೊಟ್ಟರು. ಅದಕ್ಕೀಗ ಮುಹೂರ್ತವೂ ಮುಗಿದು, ಚಿತ್ರೀಕರಣ ಶುರುವಾಗುತ್ತಿದೆ. ಒಂದೊಳ್ಳೆ ಸಿನಿಮಾ ಮಾಡ್ಬೇಕು ಅನ್ನೋದಷ್ಟೆ ತಲೆಯಲ್ಲಿದೆ

ಈ ಚಿತ್ರದ ವಿಶೇಷತೆ ಏನು?

ಇದೊಂದು ಪಕ್ಕಾ ಮನರಂಜನೆ ಕತೆ. ಪ್ರಕಾಶ್ ರೈ, ಸುಧಾರಾಣಿ, ಅಚ್ಯುತ್ ಕುಮಾರ್, ವಶಿಷ್ಟ ಸಿಂಹ, ರಾಜ್ ಬಿ. ಶೆಟ್ಟಿ, ಸಾಧುಕೋಕಿಲ, ಕಿರುತೆರೆ ನಟಿ ಚೈತ್ರಾ ರಾವ್ ಇದರ ಪ್ರಮುಖ ಆಕರ್ಷಣೆ. ಒಂದು ಮೊಟ್ಟೆಯ ಕತೆ ಚಿತ್ರದ ನಂತರ ಮಿದುನ್ ಮುಕುಂದನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ‘ಆಪರೇಷನ್ ಅಲುಮೇಲಮ್ಮ’ ಚಿತ್ರದ ನಂತರ ಅಭಿಷೇಕ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅವೆಲ್ಲವೂ ಚಿತ್ರದ ಹೈಲೆಟ್.

‘ಮಾಯಾ ಬಜಾರ್’ ಅಂದ್ರೆ ಏನು?

2016 ರಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಘಟನೆಯನ್ನಾಧರಿಸಿದ ಕತೆ. ಇಲ್ಲಿ ಯಾರೂ ಹೀರೋ ಇಲ್ಲ, ಹೀರೋಯಿನ್ ಕೂಡ ಇಲ್ಲ. ಪಾತ್ರಗಳಿರುತ್ತವೆ. ಈ ಪಾತ್ರಗಳ ಮೂಲಕ ಒಂದು ಗಂಭೀರವಾದ ಘಟನೆಯನ್ನು ಕಾಮಿಡಿ ಮೂಲಕ ಹೇಳಲು ಹೊರಟಿದ್ದೇವೆ. ಆ ಮೂಲಕ ಮಾಯಾಬಜಾರ್ ಎನ್ನುವ ಟೈಟಲ್‌'ಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇವೆ.

ಪುನೀತ್ ರಾಜ್‌ಕುಮಾರ್ ಅವರಿಗೆ ಕತೆಯಲ್ಲಿ ಒಪ್ಪಿಗೆಯಾದ ಅಂಶ ಯಾವುದು?

ಮೊದಲ ಭೇಟಿಯಲ್ಲಿ ನಾನು ಅವರಿಗೆ ಹೇಳಿದ್ದು ಕತೆಯ ಒಂದೆಳೆ ಮಾತ್ರ. ಹೆಚ್ಚೇನು ಚರ್ಚೆ ಮಾಡಿರಲಿಲ್ಲ. ಇಂಥದ್ದೊಂದು ಘಟನೆ, ಹೀಗೆಲ್ಲ ಬರುತ್ತೆ ಅಂತ ವಿವರಿಸಿದೆ. ಆ ಘಟನೆ ಹೇಳುತ್ತಾ ಹೋದಾಗಲೇ ಅವರು ಇಂಪ್ರೆಸ್ ಆದ್ರು. ಫಸ್ಟ್‌'ಹಾಫ್‌'ಗೆ ಬಂದಾಗಲೇ ಸಾಕು, ನೀವು ಕತೆ ಚಿತ್ರಕತೆ ಬರೆದು ಮುಗಿಸಿ ಅಂದ್ರು.

ಕಲಾವಿದರ ಪಾತ್ರಗಳ ಬಗ್ಗೆ ಹೇಳೋದಾದ್ರೆ...?

ಕತೆಗೆ ತಕ್ಕಂತೆ ನಾನು ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವಾಗಲೇ ಇದೇನೋ ಕುತೂಹಲವಾಗಿದೆ ಅಂತ ಪುನೀತ್ ಅವರೇ ಹೇಳಿದ್ದರು. ಅದು ಸತ್ಯವೂ ಹೌದು. ಪ್ರಕಾಶ್ ರೈ ಅಂದಾಕ್ಷಣ ನೆಗೆಟಿವ್ ಪಾತ್ರಗಳೇ ನಮ್ಮ ಕಣ್ಮುಂದೆ ಬರುತ್ತವೆ. ಆದರೆ  ಈ ಚಿತ್ರದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ವಶಿಷ್ಟ ಸಿಂಹ ಕಾಮಿಡಿ  ಪಾತ್ರದಲ್ಲಿ ಬರುತ್ತಿದ್ದಾರೆ. ಸಾಧು ಕೋಕಿಲ ಅವರ ಪಾತ್ರವನ್ನು ನೀವು ಈ ತನಕ ನೋಡಲು ಸಾಧ್ಯವಿಲ್ಲ.

ಸಂದರ್ಶನ: ದೇಶಾದ್ರಿ ಹೊಸ್ಮನೆ

click me!