ರಾಜ್‌ಕುಮಾರ್ ಸಿನಿಮಾಗಳ ಟೈಟಲ್ ಬಳಸಿದರೆ ಜೋಕೆ!

By Kannadaprabha NewsFirst Published Dec 24, 2018, 9:02 AM IST
Highlights

ಕನ್ನಡ ಚಿತ್ರರಂಗದ ದಿಗ್ಗಜರ ಹೆಸರುಗಳನ್ನೋ ಅಥವಾ ಅವರ ಹಳೆಯ ಸಿನಿಮಾಗಳ ಟೈಟಲ್‌ಗಳನ್ನೋ ಬಳಸಿಕೊಂಡು ಹೊಸಬರು ಸಿನಿಮಾ ಮಾಡುತ್ತಿರುವುದು ಹೊಸದೇನು ಅಲ್ಲ. 

ಆದರೆ, ಹೀಗೆ ಮರು ಬಳಕೆಯಾಗಿರುವ ಟೈಟಲ್‌ಗಳು ಕೇವಲ ಪ್ರಚಾರದ ದೃಷ್ಟಿಯಿಂದಲೇ ಹೊರತು, ಯಾವುದೇ ಅಭಿಮಾನದಿಂದಲ್ಲ ಎಂಬುದು ಡಾ ರಾಜ್‌ಕುಮಾರ್ ಅಭಿಮಾನಿಗಳ ಬೇಸರ. ಅಭಿಮಾನಿಗಳ ಈ ಬೇರಸ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ತಲುಪಿದೆ. 

ಅರಾಧ್ಯ ದೈವ ಮುತ್ತುರಾಜ್ ಅಭಿಮಾನಿ ಬಳಗದ ಕಾರ್ಯಕರ್ತರು ರಾಘಣ್ಣ ಅವರನ್ನು ಭೇಟಿ ಮಾಡಿ, ‘ಡಾ ರಾಜ್‌ಕುಮಾರ್ ಕುಟುಂಬದವರು ಅಣ್ಣಾವ್ರ ಚಿತ್ರಗಳ ಹೆಸರುಗಳನ್ನು ಬಳಸಿಕೊಳ್ಳಲಿ. ಆದರೆ, ಬೇರೆಯವರು ಆ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅವರ ಚಿತ್ರಗಳ ಹೆಸರುಗಳಿಗೆ ಇರುವ ಮಹತ್ವವನ್ನು ಹಾಳು ಮಾಡುತ್ತಿದ್ದಾರೆ. ಪ್ರಚಾರದ ದೃಷ್ಟಿಯಿಂದ ಮಾತ್ರ ಹೀಗೆ ಹೆಸರುಗಳನ್ನು ಬಳಸುತ್ತಿದ್ದಾರೆ. ಇಂಟರ್‌ನೆಟ್‌ನಲ್ಲಿ ‘ಶ್ರೀನಿವಾಸ ಕಲ್ಯಾಣ’ ಎಂದು ಹುಡುಕಿದರೆ ರಾಜ್ ಚಿತ್ರದ ಹೆಸರಿಗೆ ಬದಲಾಗಿ ಹೊಸಬರ ಚಿತ್ರದ ಮಾಹಿತಿ ತೋರಿಸುತ್ತಿದೆ. ಆ ಮೂಲಕ ಅಣ್ಣಾವ್ರ ಚಿತ್ರಗಳ ಹೆಸರುಗಳನ್ನೇ ಮರೆ ಮಾಚುತ್ತಿದ್ದಾರೆ. ಹೀಗಾಗಿ ರಾಜ್ ಅವರ ಚಿತ್ರಗಳ ಶೀರ್ಷಿಕೆಗಳನ್ನು ಹೊರಗಿನವರು ಬಳಸಬಾರದು’ ಎಂಬುದು ಅಭಿಮಾನಿಗಳ ಒತ್ತಾಯ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿವರೆಗೂ ಈ ಬಗ್ಗೆ ಯಾವುದೇ ರೀತಿಯ ಮನವಿ ಬಂದಿಲ್ಲ. ಡಾ ರಾಜ್‌ಕುಮಾರ್ ಅವರ ಹೆಸರುಗಳನ್ನು ಮರು ಬಳಕೆ ಮಾಡಿಕೊಂಡು ಅವರ ಹೆಸರಿಕ್ಕೆ ದಕ್ಕೆ ತರುತ್ತಿರುವ ಬಗ್ಗೆ ಸೂಕ್ತವಾದ ಮಾಹಿತಿಯನ್ನು ಅಭಿಮಾನಿಗಳು ನೀಡಿದರೆ ಖಂಡಿತ ನಾವು ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಇಲ್ಲಿವರೆಗೂ ಆ ರೀತಿ ಆಗಿಲ್ಲ ಎಂಬುದು ನನ್ನ ಭಾವನೆ. ಆದರೂ ಅಭಿಮಾನಿಗಳ ಮನಸ್ಸಿಗೆ ನೋವಾಗಿರುವುದು ಕಂಡು ಬಂದರೆ ವಾಣಿಜ್ಯ ಮಂಡಳಿ ಈ ಕುರಿತು ಗಮನ ಕೊಡಲಿದೆ. ಲೆಜೆಂಡ್ ಕಲಾವಿದರ ಹೆಸರಿಗೆ ಕಳಂಕ ತರಬಾರದು ಎಂಬುದು ಎಲ್ಲರ ಕಳಕಳಿ. - ಚಿನ್ನೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು

ಅಭಿಮಾನಿಗಳ ಮನವಿಗೆ ಸ್ಪಂದಿಸಿದ ರಾಘವೇಂದ್ರ ರಾಜ್‌ಕುಮಾರ್ ಅವರು, ರಾಜ್‌ಕುಮಾರ್ ಅವರು ಅಭಿಮಾನಿಗಳಿಗೆ ಅರಾಧ್ಯ ದೈವ. ಹಾಗೆ ಅಭಿಮಾನಿಗಳನ್ನೂ ಸಹ ಕೂಡ ಅಪ್ಪಾಜಿ ದೇವರಂತೆ ನೋಡುತ್ತಿದ್ದರು. ಹೀಗಾಗಿ ಅಭಿಮಾನಿಗಳಿಗೆ ನೋವಾಗುವಂತಹ ಬೆಳವಣಿಗೆಗಳು ನಡೆದರೆ ಆ ಬಗ್ಗೆ ನಾವು ಮಾತನಾಡುತ್ತೇವೆ. ಈಗ ಅವರ ಯಶಸ್ವಿ ಚಿತ್ರಗಳ ಟೈಟಲ್‌ಗಳನ್ನು ಮರು ಬಳಕೆ ಮಾಡಬಾರದು ಎಂಬುದರ ಬಗ್ಗೆ ಅಭಿಮಾನಿಗಳೇ ಸಹಿ ಸಂಗ್ರಹ ಅಭಿಯಾನ ಮಾಡಿಕೊಂಡು ಬರಲಿ.ನಾನೂ ಕೂಡ ಗಮನ ಕೊಡುತ್ತೇನೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಮನವಿ ಮಾಡುತ್ತೇನೆ. ಆದರೆ, ಈ ವಿಚಾರದಲ್ಲಿ ಕುಟುಂಬದವರ ನಿಲುವಿಗಿಂತ ಅಭಿಮಾನಿಗಳ ಅಭಿಪ್ರಾಯ ಮುಖ್ಯ ಎಂದು ತಮ್ಮನ್ನು ಭೇಟಿ ಮಾಡಿದ್ದ ಅಭಿಮಾನಿಗಳಿಗೆ ಹೇಳಿದ್ದಾರೆ. 

ಡಾ ರಾಜ್‌ಕುಮಾರ್ ಅಭಿನಯದಲ್ಲಿ ಸತ್ಯಹರಿಶ್ಚಂದ್ರ, ಶ್ರೀನಿವಾಸ ಕಲ್ಯಾಣ, ಎರಡು ಕನಸು, ತಾಯಿಗೆ ತಕ್ಕ ಮಗ ಮುಂತಾದವು ಇತ್ತೀಚೆಗೆ ಬಂದ ಹೊಸ ಚಿತ್ರಗಳು. 

 

 

click me!