ಚಿತ್ರ ವಿಮರ್ಶೆ: ರುಸ್ತುಂ

By Web DeskFirst Published Jun 29, 2019, 3:20 PM IST
Highlights

ಜಬರ್‌ದಸ್ತ ಸಾಹಸಗಳು. ಅದ್ಭುತ ಮೇಕಿಂಗ್‌. ಚಿತ್ರದ ನಾಯಕನನ್ನು ಮಿಂಚಿಸುವ ಹಿನ್ನೆಲೆ ಸಂಗೀತ. ಕ್ಯಾಮೆರಾ ಕಣ್ಣಲ್ಲಿ ಮತ್ತೊಮ್ಮೆ ಟಗರಿನ ಪೊಗರು ಮತ್ತು ಜೋರು. ಸಂಕಲನಕಾರನ ಕೈ ಚಳಕ... ಹೀಗೆ ತಾಂತ್ರಿಕವಾಗಿ ಮೆಚ್ಚಿಸುವ ಚಿತ್ರಕ್ಕೆ ಶಿವಣ್ಣನೇ ದಿಕ್ಕು ಎನ್ನುವಂತೆ ಸಾಗುವ ಚಿತ್ರ ‘ರುಸ್ತುಂ’. 

ತೀರಾ ಹೊಸದಲ್ಲದ ಒಂದು ಕತೆಯ ಸಣ್ಣ ಎಳೆಯನ್ನಿಟ್ಟುಕೊಂಡು ಅಖಾಡಕ್ಕಿಳಿಯುವ ನಿರ್ದೇಶಕ ರವಿವರ್ಮ, ಕೇವಲ ಫೈಟ್‌ಗಳನ್ನು ನಂಬಿಕೊಂಡು ಸಿನಿಮಾ ಸುತ್ತಿದರೂ ಶಿವಣ್ಣ ಅವರ ಕಾರಣಕ್ಕೆ ಚಿತ್ರ ಇಷ್ಟವಾಗುತ್ತದೆ ಎಂದರೆ ಅದು ಸೆಂಚುರಿ ಸ್ಟಾರ್‌ನ ಎನರ್ಜಿ. ಕಳ್ಳ - ಪೊಲೀಸ್‌ ಈ ಆಟದಲ್ಲಿ ಚಿತ್ರದ ನಾಯಕನೇ ರನ್ನರ್‌ ಮತ್ತು ವಿನ್ನರ್‌. ಅಂಡರ್‌ ಕವರ್‌ ಪೊಲೀಸ್‌, ಮುಖವಾಡ ಕಳಚಿದ ಮೇಲೆ ತೆರೆದುಕೊಳ್ಳುವ ಕತೆ, ಬಿಹಾರಕ್ಕೆ ಹೋಗುತ್ತದೆ. ಅಲ್ಲಿ ಕ್ರಿಮಿನಲ್‌ಗಳ ಪಾಲಿನ ರುಸ್ತುಂನ ಆಟ ಜೋರು. ಈ ಆಟಕ್ಕೆ ಬ್ರೇಕ್‌ ಹಾಕುವ ಹಿರಿಯ ಪೊಲೀಸ್‌ ಅಧಿಕಾರಿ. ಇಬ್ಬರು ಸ್ನೇಹಿತರು. ಒಬ್ಬರದ್ದು ದಡಂ ದಶಗುಣಂ ನೀತಿ. ಮತ್ತೊಬ್ಬರದ್ದು ತಪ್ಪಿತಸ್ಥರನ್ನು ಶಿಕ್ಷಿಸಲು ಕಾನೂನು ಇದೆ ಎನ್ನುವ ನಂಬಿಕೆ.

ಅಬ್ಬಬ್ಬಾ...! ಶಿವಣ್ಣನ 'ರುಸ್ತುಂ' ಮೇಕಿಂಗ್ ವೀಡಿಯೋ ವೈರಲ್

ಆದರೆ, ಕಾನೂನು ನಂಬಿಕೊಂಡವನು ಬಲಿಯಾಗುತ್ತಾನೆ. ಬಲಿ ತೆಗೆದುಕೊಂಡವರ ಬೇಟೆಗೆ ನಿಲ್ಲುವ ಖಡಕ್‌ ಪೊಲೀಸ್‌ ಮುಂದೆ ಮಕ್ಕಳ ಮಾರಾಟ, ಆರ್ಗನ್‌ ಮಾಫಿಯಾ ತೆರೆದುಕೊಳ್ಳುತ್ತದೆ, ಇಲ್ಲಿಂದ ನಿಮಗೆ ಕತೆ ಹೇಳಿದರೆ ಈಗಾಗಲೇ ಎಲ್ಲೋ ನೋಡಿದ ಸಿನಿಮಾ ಮತ್ತೊಮ್ಮೆ ಬೇರೆ ರೂಪದಲ್ಲಿ ಬಂದಿಯಲ್ಲ!? ಎನ್ನುವ ಗುಮಾನಿ ಕಾಡಬಹುದು. ಈ ಅನುಮಾನಕ್ಕೆ ಕಾರಣ ತಮಿಳಿನ ‘ತೇರಿ’ ಆಗಿರಬಹುದೇ? ಗೊತ್ತಿಲ್ಲ. ಆದರೆ, ಆ ಚಿತ್ರದ ಒಂದಿಷ್ಟುಅಂಶಗಳನ್ನು ಎತ್ತಿಕೊಂಡು ಕನ್ನಡಕ್ಕೆ ಬೇಕದಾಂತೆ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ‘ರುಸ್ತುಂ’ ಸಾಕ್ಷಿ. ಅಂದರೆ ತಮಿಳಿನ ‘ತೇರಿ’ಯ ನೆರಳು ಗಾಢವಾಗಿ ಆವರಿಸಿಕೊಂಡಿದೆ. ಭ್ರೂಣವನ್ನೇ ಆಚೆ ತೆಗೆದು ಮಾರಾಟಕ್ಕಿಡುತ್ತಿದ್ದಾರೆ ಎಂದಿದ್ದು ತೆಲುಗಿನ ನಿತಿನ್‌ ನಟನೆಯ ‘ಕೊರಿಯರ್‌ ಬಾಯ್‌ ಕಲ್ಯಾಣ್‌’ ಸಿನಿಮಾ. ಇದಕ್ಕೂ ಮುನ್ನ ಮಾನವನ ಅಂಗಾಂಗಗಳ ಬ್ಯುಸಿನೆಸ್‌ ಯಾವ ಮಟ್ಟಕ್ಕಿದೆ ಎಂದಿದ್ದು ತಮಿಳಿನ ಜೀವ ನಟನೆಯ ‘ಈ’ ಚಿತ್ರ. ವಯಸ್ಸಾದವರು, ಸಾವಿನಂಚಿನಲ್ಲಿದ್ದವರ ದೇಹಗಳನ್ನೇ ಮಾರಾಟಕ್ಕಿಟ್ಟಕತೆ ಈ ಚಿತ್ರದ್ದು. ತೀರಾ ಇತ್ತೀಚೆಗೆ ಜಯಂ ರವಿ ನಟನೆಯ ತಮಿಳಿನ ‘ತನಿ ಒರುವನ್‌’ ಚಿತ್ರವೂ ಮೆಡಿಕಲ್‌ ಮಾಫಿಯಾದ ಕತ್ತಲಿಗೆ ಬೆಳಕು ಚೆಲ್ಲಿತು.

ಶಿವಣ್ಣ ’ರುಸ್ತುಂ’ ಲುಕ್‌ಗೆ ಪುನೀತ್ ಫುಲ್ ಬೋಲ್ಡ್!

ವೈದ್ಯಕೀಯ ವ್ಯವಸ್ಥೆಯಲ್ಲಿ ಕಾನೂನು ಬಾಹಿರ ಪ್ರಯೋಗಗಳು, ಮಾನವನ ಅಂಗಾಂಗಗಳ ಮಾರಾಟದ ಮಾಫಿಯಾ ನಡೆಯುತ್ತಿದೆ ಎಂಬುದು ಬಹು ವರ್ಷಗಳಿಂದಲೂ ಕೇಳಿ ಬರುತ್ತಿರುವ ಓಪನ್‌ ಸೀಕ್ರೆಟ್‌ ಆರೋಪ. ಈ ಆರೋಪವನ್ನು ಪುಷ್ಟೀಕರಿಸುವಂತೆ ಇಂಥದ್ದೇ ಕತೆಗಳನ್ನು ಹೇಳುವ ಸಿನಿಮಾಗಳು ಬಹುತೇಕ ಎಲ್ಲ ಭಾಷೆಗಳಲ್ಲೂ ಬಂದಿವೆ. ಅವುಗಳ ಒಂದಿಷ್ಟುಉದಾಹರಣೆಗಳು ಮಾತ್ರ ಇಲ್ಲಿವೆ. ಇದೇ ಸಾಲಿಗೆ ಸೇರುವ ಸಿನಿಮಾ ‘ರುಸ್ತುಂ’. ಹೀಗಾಗಿ ತೀರಾ ಹೊಸ ಕತೆಯಂತೂ ಅಲ್ಲ. ಅತ್ಯಂತ ಸಪ್ಪೆ ಎನಿಸುವ ಈ ಚಿತ್ರದಲ್ಲಿ ಫೈಟ್‌ಗಳದ್ದೇ ಅಬ್ಬರ. ಇಂಥ ಸಾಹಸಮಯ ಚಿತ್ರಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದ್ದ ಕತೆ ಬೆನ್ನು ಮೂಳೆ ಮುರಿದುಕೊಂಡಂತೆ ಕಾಣುತ್ತದೆ. ಯಾಕೆಂದರೆ ನಿರ್ದೇಶಕರು ಆಯ್ದುಕೊಂಡಿರುವ ಕತೆ ಕೂಡ ಆಪ್ತವಾಗಿ ಮನ ಮುಟ್ಟುವಂತೆ ಹೇಳುವಲ್ಲಿ ಸೋತಿದ್ದಾರೆ. ಆದರೆ, ಶಿವಣ್ಣ ಅವರಿಗಾಗಿ ಇಡೀ ಸಿನಿಮಾ ನೋಡಬೇಕು. ಹೊಸ ರೀತಿಯ ಕತೆ, ರವಿವರ್ಮ ನಿರ್ದೇಶನ ಎಂದೆಲ್ಲ ಲೆಕ್ಕಾಚಾರದಲ್ಲಿ ಹೋದರೆ ಬೇಸರ ಕಟ್ಟಿಟ್ಟಬುತ್ತಿ. ಅಲ್ಲದೆ ಖಳ ನಟನ ದೃಶ್ಯಗಳ ಜತೆಗೆ ಬಿಹಾರದ ಕತೆ ಬಂದಾಗ ಕನ್ನಡ ಸಿನಿಮಾ ಎನ್ನುವುದಕ್ಕಿಂತ ಪರಭಾಷೆಯ ಡಬ್ಬಿಂಗ್‌ ಚಿತ್ರ ನೋಡುತ್ತಿದ್ದೇವೆಂಬ ಗೊಂದಲ ಮೂಡುತ್ತದೆ.

ಚಿತ್ರ ವಿಮರ್ಶೆ: ಸಮಯದ ಹಿಂದೆ ಸವಾರಿ

ಇನ್ನೂ ಅನೂಪ್‌ ಸೀಳಿನ್‌ ಅವರ ಹಿನ್ನೆಲೆ ಸಂಗೀತ ಶಿವಣ್ಣನ ಆಕ್ಷನ್‌ ದೃಶ್ಯಗಳಿಗೆ ಖದರ್‌ ಕೊಡುವ ಜತೆಗೆ ಸಂಗೀತದಲ್ಲೂ ಸೈ ಎನಿಸಿಕೊಳ್ಳುತ್ತಾರೆ. ದೀಪು ಎಸ್‌ ಕುಮಾರ್‌ ಅವರ ಎಡಿಟಿಂಗ್‌ ಕಮಾಲ್‌, ಶಿವಣ್ಣನ ಎನರ್ಜಿ ಜತೆಗೆ ಸ್ಪರ್ಧೆಗಿಳಿಯುತ್ತದೆ. ಆ ಮಟ್ಟಿಗೆ ದೀಪು ಅವರ ಕತ್ತರಿ ಶಾಪ್‌ರ್‍. ಮಹೇನ್‌ ಸಿಂಹ ಕ್ಯಾಮೆರಾದಲ್ಲಿ ‘ಟಗರು ಶಿವ’ನ ದರ್ಶನ ಸೂಪರ್‌. ತಾರಾಗಣ ವಿಭಾಗದಲ್ಲಿ ಎಂದಿನಂತೆ ರುಸ್ತುಂ ಪಾತ್ರದಲ್ಲಿ ಶಿವಣ್ಣ ಸೈ ಎನಿಸಿಕೊಂಡಿದ್ದಾರೆ. ವಿವೇಕ್‌ ಒಬೆರಾಯ್‌ ಹಾಗೂ ರಚಿತಾ ರಾಮ್‌ ಜೋಡಿ ಚೆನ್ನಾಗಿದೆ.

click me!