
ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ಮತ್ತೊಮ್ಮೆ ಸಿಎಂ ಆಗುತ್ತಿದ್ದಾರೆ. ‘ಭೂಮಿಪುತ್ರ' ಚಿತ್ರದಲ್ಲಿ ಎಚ್ ಡಿ ಕುಮಾರಸ್ವಾಮಿ ಪಾತ್ರ ಸಿಗುವುದಕ್ಕೆ ಹಳೆಯದೊಂದು ಸಿಎಂ ಪಾತ್ರ ಕಾರಣವಂತೆ. ಹಳೆಯದು ಯಾವುದು ಅಂದರೆ ಅರ್ಜುನ್ ಸರ್ಜಾ ಅವರು ತಮಿಳಿನ ‘ಮೊದಲ್ವನ್' ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅವರು ಒಂದು ದಿನದ ಮುಖ್ಯಮಂತ್ರಿ ಆಗುವ ಅವಕಾಶ ಪಡೆದು, ಆ ಒಂದು ದಿನದಲ್ಲಿ ಏನೆಲ್ಲ ಬದಲಾವಣೆಗಳನ್ನು ತರುತ್ತಾರೆ ಎಂಬುದೇ ಚಿತ್ರದ ಕತೆ.ಇದೀಗ ಎಸ್ ನಾರಾಯಣ್ ಆ್ಯಂಡ್ ಟೀಮ್, ಸರ್ಜಾ ಅವರನ್ನು 20 ದಿನಗಳ ಕಾಲ ಸಿಎಂ ಪಟ್ಟಕ್ಕೇರಿಸುವ ಸಾಹಸಕ್ಕೆ ಮುಂದಾಗಿದೆ.
‘ಮೊದಲ್ವನ್' ಮಾತ್ರವಲ್ಲ, ‘ಜೈಹಿಂದ್', ‘ಅಭಿಮನ್ಯು' ಥರದ ಸಿನಿಮಾಗಳು ಅರ್ಜುನ್ ಸರ್ಜಾ ಅವರಿಗೆ ಲೀಡರ್ ಇಮೇಜ್ ತಂದುಕೊಟ್ಟಿವೆ. ಆ್ಯಕ್ಷನ್ ಕಿಂಗ್, ‘ಜನನಾಯಕ' ಇಮೇಜೂ ಇದೆ. ರಾಜಕಾರಣಿ ಎಚ್ ಡಿ ಕುಮಾರಸ್ವಾಮಿ ಅವರ ಜೀವನ ಚರಿತ್ರೆಯನ್ನು ಆಧರಿಸಿ ಶುರುವಾಗಿರುವ ‘ಭೂಮಿಪುತ್ರ' ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರು ಎಚ್ಡಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಾರಣವಾಗಿದ್ದು ಇದೇ ಜನನಾಯಕನ ಇಮೇಜ್. ‘ನಾನು ಎಲ್ಲ ರೀತಿಯ ಸಿನಿಮಾಗಳನ್ನೂ ಮಾಡಿದ್ದೇನೆ. ಆದರೆ, ಅದೇಕೋ ಗೊತ್ತಿಲ್ಲ, ಈ ಲೀಡರ್ಶಿಪ್ ಇರುವ ಕತೆ ಪಾತ್ರಗಳಿಗೆ ನಾನು ತುಂಬಾ ಸೂಕ್ತ ಎನ್ನುವವರೇ ಹೆಚ್ಚು.
ಈ ಕಾರಣಕ್ಕೆ ಒಂದು ದಿನ ಮುಖ್ಯಮಂತ್ರಿ ಆಗುವ ಅವಕಾಶ ಕೊಟ್ಟಿದ್ದು ಕೂಡ ಇದೇ ಸಿನಿಮಾ ಜಗತ್ತು. ಮೊದಲ್ವನ್ ಸಿನಿಮಾ ನನ್ನ ಕೆರಿಯರ್ನಲ್ಲಿ ದೊಡ್ಡ ಹಿಟ್ ಸಿನಿಮಾ. ಈ ಕಾರಣಕ್ಕೆ ಅಂಥ ಪಾತ್ರಗಳು ಇರುವ ಸಿನಿಮಾಗಳು ಸಾಕಷ್ಟುಬಂದರೂ ಒಪ್ಪಿ ಮಾಡಿದ್ದು ಕಡಿಮೆ ಚಿತ್ರಗಳನ್ನು. ಈಗ ಅದೇ ಇಮೇಜ್ನ ಕಾರಣಕ್ಕೆ ಎಸ್ ನಾರಾಯಣ್ ಅವರ ಭೂಮಿಪುತ್ರಕ್ಕೆ ನಾಯಕನಾಗಿದ್ದೇನೆ. ನನಗೆ ನಾರಾಯಣ್ ಅವರು ಮಾಡಿ ಕೊಂಡಿರುವ ಕತೆ ಜತೆಗೆ ಅವರು ಒಬ್ಬ ರಾಜಕಾರಣಿಯನ್ನು ತೋರಿಸುವುದಕ್ಕೆ ಹೊರಟಿರುವ ರೀತಿ ಕೂಡ ಚೆನ್ನಾಗಿದೆ. ಕುಮಾರಸ್ವಾಮಿ ಅವರನ್ನು ಹತ್ತಿರದಿಂದ ಬಲ್ಲ ನನಗೆ ಅವರ ಪಾತ್ರ ಮಾಡುವುದು ಕೂಡ ಸುಲಭ. ಆಗ ವನ್ಡೇ ಸಿಎಂ ಆಗಿದ್ದವನು, ಈಗ 20 ತಿಂಗಳು ಸಿಎಂ ಆಗುತ್ತಿದ್ದೇನೆ' ಎನ್ನುತ್ತಾರೆ ಅರ್ಜುನ್ ಸರ್ಜಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.