
ಜೀ ಕನ್ನಡದ ಅಮೃತಧಾರೆ ಮತ್ತು ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಈಗ ಮದುವೆ ಆತಂಕ! ಮದುವೆ ಸಂಭ್ರಮದ ಬದಲು ಎರಡೂ ಸೀರಿಯಲ್ಗಳಲ್ಲಿ ಆತಂಕದ ಛಾಯೆ. ಆದರೂ ನಡೆದೇ ಬಿಟ್ಟಿದೆ ಮದುವೆ. ಅಮೃತಧಾರೆಯಲ್ಲಿ ಜೈದೇವನ ಮದುವೆ ಮೊದಲ ಪತ್ನಿ ಇರುವಾಗಲೇ ಅವಳ ಇಚ್ಛೆಗೆ ವಿರುದ್ಧವಾಗಿ ದಿಯಾಳ ಜೊತೆ ನಡೆದಿದ್ದರೆ, ಇತ್ತ ಪೂಜಾಳ ಮದುವೆ ಮನೆಯವರ ವಿರೋಧದ ನಡುವೆ ಕಿಶನ್ ಜೊತೆ ನಡೆದಿದೆ. ಎರಡೂ ಸೀರಿಯಲ್ಗಳ ಕಥೆ ವಿಭಿನ್ನವಾಗಿದ್ದರೂ ಈ ಮದುವೆಯ ವಿಷಯ ಮಾತ್ರ ಸರಿಸುಮಾರು ಒಂದೇ ರೀತಿಯದ್ದಾಗಿದೆ. ಇಲ್ಲಿ ಕುತಂತ್ರಿ ಜೈದೇವ ಲವರ್ ಜೊತೆ ಮದುವೆಯಾಗಿದ್ದರೆ, ಅಲ್ಲಿ ಪೂಜಾ-ಕಿಶನ್ ಇಬ್ಬರೂ ಒಳ್ಳೆಯವರಾಗಿದ್ದರೂ ಪರಿಸ್ಥಿತಿಯ ಕೈಗೊಂಬೆಗಳಾಗಿದ್ದಾರೆ ಅಷ್ಟೇ.
ಮೊದಲಿಗೆ ಅಮೃತಧಾರೆಯ ವಿಷಯಕ್ಕೆ ಬರುವುದಾದರೆ, ಜೈದೇವನ ಕುತಂತ್ರ ಎಲ್ಲವೂ ಗೌತಮ್ ಎದುರು ಬಯಲಾಗಿದೆ. ಇದೇ ವೇಳೆ ಜೈದೇವ ಎಲ್ಲರನ್ನೂ ದಿಯಾಳ ಜೊತೆ ಮದುವೆಯಾಗುತ್ತಿರುವುದಾಗಿ ಹೇಳಿ ಕರೆದಿದ್ದಾನೆ. ಸ್ಥಳಕ್ಕೆ ಗೌತಮ್- ಭೂಮಿಕಾ ಎಲ್ಲರೂ ಮನೆಗೆ ಬಂದಿದ್ದಾರೆ. ಮದುವೆಯನ್ನು ನಿಲ್ಲಿಸಲು ಬಂದು ರಂಪಾಟ ಮಾಡುತ್ತಾನೆ ಎಂದು ಜೈದೇವ ಅಂದುಕೊಂಡಿದ್ದ. ಹೀಗೆ ರಂಪಾಟ ಮಾಡುವ ಮಧ್ಯೆಯೇ ತಾನು ತಾಳಿ ಕಟ್ಟಿ ಮೆರೆಯುವ, ಎಲ್ಲರ ಹೊಟ್ಟೆಯನ್ನೂ ಉರಿಸುವ ಎಂದುಕೊಂಡಿದ್ದ. ಆದರೆ ಗೌತಮ್ ತಾಳಿ ಕಟ್ಟಲು ಹೇಳಿ ಎಲ್ಲರನ್ನೂ ಕಕ್ಕಾಬಿಕ್ಕಿ ಮಾಡಿದ್ದಾನೆ. ಅಣ್ಣನೇ ಹೇಳಿದ ಮೇಲೆ ತಾಳಿ ಕಟ್ಟಿದ್ದಾನೆ. ಕೊನೆಗೆ ಆಸ್ತಿಗಾಗಿ ಎಲ್ಲಾ ಮಾಡಿರುವುದಾಗಿ ಜೈದೇವ ಹೇಳಿದ ಹಿನ್ನೆಲೆಯಲ್ಲಿ, ಆತನಿಗೆ ಬ್ಲ್ಯಾಂಕ್ ಪೇಪರ್ ಕೊಟ್ಟು ಆಸ್ತಿಯನ್ನು ರೆಡಿ ಮಾಡು ಸಹಿ ಹಾಕುತ್ತೇನೆ ಎಂದಿದ್ದಾನೆ. ಅದನ್ನು ತೆಗೆದುಕೊಂಡು ಜೈದೇವ ಹೋಗಿದ್ದಾನೆ. ಇದೇ ವೇಳೆ, ಭೂಪತಿಗೆ ಮಲ್ಲಿಯೇ ನಿಮ್ಮ ಮಗಳು ಎನ್ನುವ ವಿಷಯ ತಿಳಿಸಿದ್ದಾನೆ. ಇದನ್ನು ಕೇಳಿ ಭೂಪತಿ ಮತ್ತು ಮಲ್ಲಿ ಇಬ್ಬರೂ ಶಾಕ್ ಆಗಿದ್ದಾರೆ.
ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಸದ್ಯ ಭಾಗ್ಯಳ ತಂಗಿ ಪೂಜಾಳ ಮದುವೆಯಲ್ಲಿ ನೂರೆಂಟು ವಿಘ್ನಗಳು ಬಂದಿವೆ. ಕಿಶನ್ ಜೊತೆ ಎಂಗೇಜ್ಮೆಂಟ್ ಆಗಿದ್ದರೂ, ಭಾಗ್ಯಳ ಲೈಫ್ನಲ್ಲಿ ಎಲ್ಲವೂ ಅಂದುಕೊಂಡಂಗೆ ಆಗುತ್ತಿಲ್ಲ. ಕಿಶನ್ ಅಣ್ಣ ಒಂದುಕಡೆ ಈ ಮದುವೆಗೆ ವಿರೊಧ ವ್ಯಕ್ತಪಡಿಸುತ್ತಿದ್ರೆ, ಅದೇ ಇನ್ನೊಂದೆಡೆ ಅತ್ತೆ ಕೂಡ ಸೇರಿಕೊಂಡಿದ್ದಾಳೆ. ಬಡವರ ಮನೆಯ ಹೆಣ್ಣಾಗಿರುವ ಕಾರಣ, ಇಂಥ ಸಂಬಂಧ ನಮಗೆ ಬೇಡ ಎನ್ನುತ್ತಿದ್ದಾರೆ. ಅದರಲ್ಲಿಯೂ ಭಾಗ್ಯ ಮತ್ತು ಆಕೆಯ ಅತ್ತೆ ಕುಸುಮಾ ಮಾಡಿರುವ ಎಡವಟ್ಟಿನಿಂದ ಕಿಶನ್ ಅಣ್ಣ ಆದಿಗೂ ಅವರ ಮೇಲೆ ಕೋಪ ಇದೆ. ಆದರೆ ಪೂಜಾ ಮಾತ್ರ ನನಗೆ ಅವರು ಎಷ್ಟೇ ಟಾರ್ಚರ್ ಕೊಟ್ಟರೂ ಪರವಾಗಿಲ್ಲ, ಕಿಶನ್ನನ್ನೇ ಮದುವೆಯಾಗೋದು ಅಂತಿದ್ದಾಳೆ.
ಮನೆಯವರೆಲ್ಲರೂ ವಿರೋಧ ಮಾಡಿದ ಬಳಿಕ ಕಿಶನ್, ಪೂಜಾಳಿಗೆ ಗೊತ್ತಿಲ್ಲದಂತೆ ಕರೆದುಕೊಂಡು ಹೋಗಿ ಮದುವೆಗೆ ರೆಡಿಯಾಗಿದ್ದಾನೆ. ದೇವಸ್ಥಾನದಲ್ಲಿ ನಡೆಯುತ್ತಿರುವ ಮದುವೆ ನಿಲ್ಲಿಸಲು ಎರಡೂ ಕಡೆಯವರು ಬಂದಿದ್ದಾರೆ. ಆದರೆ ತನ್ನ ಕುಟುಂಬದವರ ಅನುಮತಿ ಇಲ್ಲದೇ ನಾನು ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಪೂಜಾ ಹೇಳಿದ್ದಾಳೆ. ಆದರೆ ಕಿಶನ್ ತಾತಾನಿಗೆ ಭಾಗ್ಯಳ ಮನೆಯವರ ಒಳ್ಳೆಯತನ ಗೊತ್ತಿರೋ ಕಾರಣ, ಮದುವೆ ಮಾಡಿಸಿದ್ದಾನೆ. ಈಗ ಇಲ್ಲೇನು ಆಗುತ್ತದೆ ಎನ್ನುವ ಕುತೂಹಲವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.