
ಬೆಂಗಳೂರು (ಆ.7): ಸ್ಯಾಂಡಲ್ವುಡ್ಗೆ ಮತ್ತೊಂದು ಹೃದಯಾಘಾತದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ನಟ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಹಠಾತ್ ನಿಧನ ಚಿತ್ರರಂಗಕ್ಕೆ ಶಾಕ್ ನೀಡಿದೆ. ಮೃತದೇಹವನ್ನು ಥಾಯ್ಲೆಂಡ್ನಿಂದ ತರುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು, ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಸ್ಪಂದನಾ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸ್ಪಂದನಾ ಅವರ ನಿಧನಕ್ಕೆ ಅವರ ತೂಕ ಇಳಿಕೆಯ ಪ್ರಯತ್ನ ಕಾರಣವಾಯ್ತಾ ಎನ್ನುವ ಅನುಮಾನ ಕಾಡಿದೆ. ಇತ್ತೀಚಿನ ದಿನಗಳಲ್ಲಿ ಸ್ಪಂದನಾ ಬರೋಬ್ಬರಿ 16 ಕೆಜಿ ತೂಕ ಇಳಿಸಿಕೊಂಡಿದ್ದರು ಎಂದು ವರದಿಯಾಗಿದೆ. 'ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
'ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್ ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಯಿತು. ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳು' ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ದಂಪತಿಯ ಜೊತೆಗಿರುವ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ.
ನಟ ವಿಜಯ ರಾಘವೇಂದ್ರರವರ ಧರ್ಮಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅತಿ ಸಣ್ಣ ವಯಸ್ಸಿಗೆ ಆಗುವ ಹೃದಯಾಘಾತದ ದುರ್ಘಟನೆಗಳು ನನ್ನ ಮನಸ್ಸನ್ನು ವಿಚಲಿತಗೊಳಿಸಿವೆ. ಸ್ಪಂದನಾರವರ ಸಾವು ಅನಿರೀಕ್ಷಿತ. ವಿಜಯ್ ರಾಘವೇಂದ್ರ ಕುಟುಂಬದ ಶೋಕದಲ್ಲಿ ನಾನೂ ಭಾಗಿ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರನಟ ವಿಜಯ ರಾಘವೇಂದ್ರ ಅವರ ಪತ್ನಿ ಶ್ರೀಮತಿ ಸ್ಪಂದನಾ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿದೆ. ದೇವರು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಮೃತರ ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡಲಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತದೇಹ ತರಲು ಸರ್ಕಾರದ ನೆರವು ಕೇಳಿದ್ದಾರೆಯೇ ಎನ್ನುವ ಪ್ರಶ್ನೆಗೆ ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿದ್ದು, ಈ ಬಗ್ಗೆ ಮಾಹಿತಿ ಇಲ್ಲ. ಈಗ ಸಿಎಂ ಜೊತೆಗೆ ಸಭೆ ಇದೆ ಸಭೆಯಲ್ಲಿ ಸಿಎಂ ಜೊತೆ ಈ ವಿಚಾರ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಚಿನ್ನಾರಿಮುತ್ತನ ಚಿನ್ನದಂಥ ಕುಟುಂಬಕ್ಕೆ ಬರಸಿಡಿಲು, ಸ್ಪಂದನಾ-ವಿಜಯ್ ಜೋಡಿಯ ಸುಂದರ ಚಿತ್ರಗಳು!
ಥಾಯ್ಲೆಂಡ್ನಲ್ಲಿ ಮರಣೋತ್ತರ ಪರೀಕ್ಷೆ: ಸ್ಪಂದನಾ ಅವರ ಮೃತದೇಹದ ಪರೀಕ್ಷೆ ಥಾಯ್ಲೆಂಡ್ನಲ್ಲಿಯೇ ನಡೆಯಲಿದೆ. ಇಂದು ತಡರಾತ್ರಿ ಅಥವಾ ನಾಳೆ ಬೆಳಗ್ಗೆ ವೇಳೆಗೆ ಪಾರ್ಥಿವ ಶರೀರ ಬೆಂಗಳೂರಿಗೆ ಬರುವ ಸಾಧ್ಯತೆ. ಈ ನಡುವೆ ರಾಘವೇಂದ್ರ ರಾಜ್ ಕುಮಾರ್ ನಿವಾಸ, ಪುನೀತ್ ನಿವಾಸದ ಮುಂದೆ ನೀರವ ಮೌನ ಆವರಿಸಿದೆ. ಸದ್ಯ ಮನೆಯಲ್ಲಿಯೇ ಇರುವ ರಾಘ ವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನಿತ್. ಬ್ಯಾಂಕಾಕ್ ಗೆ ರಾಜ್ ಕುಟುಂಬಸ್ಥರು ಕೂಡ ಬ್ಯಾಂಕಾಂಕ್ಗೆ ತೆರಳುವ ಸಾಧ್ಯತೆ ಇದೆ. ರಾಘವೇಂದ್ರ ರಾಜ್ ಕುಮಾರ್ ನಿವಾಸಕ್ಕೆ ಥಾಯ್ಲೆಂಡ್ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು ಆಗಮಿಸಿದ್ದಾರೆ. ಥಾಯ್ಲೆಂಡ್ ರಾಯಭಾರಿಯ ಜೊತೆ ಮಾತುಕತೆ ಪ್ರಕ್ರಿಯೆಯ ಬಗ್ಗೆ ಚರ್ಚೆ ಸಾಧ್ಯತೆ ಇದೆ.
ನಮ್ದು ಲವ್ ಮ್ಯಾರೇಜ್ ಅಲ್ಲ ಪಕ್ಕಾ ಅರೇಂಜ್ಡ್ ಮ್ಯಾರೇಜ್; ವಿಜಯ್ ರಾಘವೇಂದ್ರ-ಸ್ಪಂದನಾ ಮ್ಯಾರೇಜ್ ಸ್ಟೋರಿ!
ರಾತ್ರಿಯೇ ಥಾಯ್ಲೆಂಡ್ಗೆ ಪ್ರಯಾಣ ಮಾಡಿರುವ ವಿಜಯ್ ರಾಘವೇಂದ್ರ: ಪತ್ನಿಗೆ ಹೃದಯಾಘಾತವಾದ ವಿಷಯ ತಿಳಿದ ಬೆನ್ನಲ್ಲಿಯೇ ವಿಜಯ ರಾಘವೇಂದ್ರ ತಡರಾತ್ರಿಯೇ ಬ್ಯಾಂಕಾಂಕ್ಗೆ ಪ್ರಯಾಣ ಬೆಳೆಸಿದ್ದಾರೆ. ರಾತ್ರಿ 12.10 ಥಾಯ್ ಏರ್ವೇಸ್ ನಲ್ಲಿ ಸ್ನೇಹಿತನ ಜೊತೆ ಬ್ಯಾಂಕಾಕ್ ಪ್ರಯಾಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.