
ಬೆಂಗಳೂರು (ಜೂ.18): ಇಬ್ಬರೂ ಒಂದೇ ಗ್ರಾಮ, ಒಂದೇ ಜಾತಿ ಆದರೂ ಮನೆಯವರು ಮದುವೆ ಮಾಡಿಕೊಳ್ಳಲು ಬಿಡುವುದಿಲ್ಲವೆಂದು ಕೂಲಿ ಕೆಲಸ ಮಾಡುತ್ತಿದ್ದ ಪ್ರೇಮಿಗಳು ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಒಂದೇ ಗ್ರಾಮದಲ್ಲಿ ವಾಸವಿದ್ದರೂ ತಮ್ಮ ಪ್ರೀತಿಗೆ ಪೋಷಕರು ಅಡ್ಡಿಪಡಿಸುವರೆಂದು ಬೆಂಗಳೂರಿಗೆ ಕೆಲವನ್ನರಸಿ ಬಂದು ಕೆಲಸ ಮಾಡಿಕೊಂಡಿದ್ದರು. ಇಲ್ಲಿ ಪ್ರೀತಿಗೆ ಯಾರ ಅಡ್ಡಿಯೂ ಇರುವುದಿಲ್ಲ ಎಂದು ಕಷ್ಟದ ಕೆಲಸದ ನಡುವೆ, ಕಡುಬಡತನದ ನಡುವೆಯೂ ಪ್ರೀತಿಗೆ ಬಡತನವಿಲ್ಲದಂತೆ ಪ್ರೇಮಿಗಳು ಸಂತಸದಿಂದಿದ್ದರು. ಆದರೆ, ಯುವತಿಯ ಪೋಷಕರು ಕೂಡ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದು, ಯುವತಿಯನ್ನು ಅವರೊಂದಿಗೆ ಕರೆದೊಯ್ದಿದ್ದಾರೆ. ಇದರಿಂದ ತನ್ನ ಪ್ರೇಯಸಿ ದೂರವಾದಳೆಂದು ಯುವಕ ತಾನು ವಾಸವಿದ್ದ ಶೆಡ್ನಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಇದರಿಂದ ತೀವ್ರ ಕುಪಿತಳಾಗಿದ್ದ ಪ್ರೇಯಸಿ ಯುವತಿ ಕೂಡ ಎರಡು ದಿನ ಅನ್ನ ನೀರಿಲ್ಲದೇ ಕೊರಗಿದ್ದಾಳೆ. ಕೊನೆಗೆ, ತನ್ನ ಪ್ರೇಮಿಯಿಲ್ಲದ ಜೀವನ ನನಗೂ ಬೇಡವೆಂದು ತೀರ್ಮಾನಿಸಿ 8 ಮಹಡಿಯ ನಿರ್ಮಾಣ ಹಂತದ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರ ಪ್ರೀತಿ ಅರಳುವ ಮುನ್ನವೇ ಸಾವಿನ ಮೂಲಕ ಕಮರಿ ಹೋಗಿದೆ. ಬದುಕಿರುವಾಗ ಒಂದಾಗಲು ಬಿಡಲಿಲ್ಲವೆಂದು ಪ್ರೇಮಿಗಳು ಸಾವಿನಲ್ಲಿ ಒಂದಾಗಿದ್ದಾರೆ.
ಹೆಂಡ್ತಿ ಕೊಲ್ಲೋಕೆ ಕಂಟ್ರಿ ಪಿಸ್ತೂಲ್ ಖರೀದಿಸಿದ ಪತಿ: ಗನ್ ಇಟ್ಕೊಳೋಕೆ ಗೊತ್ತಾಗದೇ ಜೈಲು ಸೇರಿದ
ಪ್ರೇಯಸಿ ಬಿಟ್ಟಿರಲಾರದೇ ನೇಣಿಗೆ ಶರಣಾದ ಯುವಕ: ಮೃತ ಪ್ರೇಮಿಗಳನ್ನು ಧಾರ ಸಂಶುಕಾ ಹಾಗೂ ದಿಪೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಪ್ರೇಮಿಗಳು. ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಇಬ್ಬರು ಕೂಡ ಪಶ್ಚಿಮ ಬಂಗಾಳ ಮೂಲದವರು. ಇಬ್ಬರ ಪ್ರೀತಿ ಎಲ್ಲ ಗೆಳೆಯರಿಗೂ ತಿಳಿದಿತ್ತು. ಆದರೆ, ಕಳೆದ 5 ದಿನಗಳ ಹಿಂದೆ ಗೆಳೆಯರಿಗೆ ಗುಡ್ ಬೈ ಎಂದು ಮೆಸೇಜ್ ಮಾಡಿ ದಿಪೇಂದ್ರ ಕುಮಾರ್ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಪ್ರೇಯಸಿಯನ್ನು ಆಕೆಯ ಮನೆಯವರು ಕರೆದೊಯ್ದಿದ್ದಾರೆ. ನಾವಿಬ್ಬರೂ ಇನ್ನುಮುಂದೆ ಒಂದಾಗಲು ಸಾಧ್ಯವಿಲ್ಲವೆಂದು ಭಾವಿಸಿ ಪ್ರೇಮ ವೈಫಲ್ಯದಿಂದ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿತ್ತು. ಯುವಕನ ಕುಟುಂಬದ ಮಾಹಿತಿ ಅನ್ವಯ ಮಾರತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರೇಮಿಯ ಸಾವಿನ ಸುದ್ದಿ ಕೇಳಿ ಕಟ್ಟಡದಿಂದ ಹಾರಿದ ಯುವತಿ: ಯುವಕ ದೀಪೇಂದ್ರ ಕುಮಾರ್ ಸಾವಿನ ಬೆನ್ನಲ್ಲೇ ತೀವ್ರ ಮನನೊಂದಿದ್ದ ಯುವತಿ ಕಳೆದ 2 ದಿನಗಳ ಹಿಂದೆ ಕಟ್ಟಡದ ಮೇಲಿಂದ ಹಾರಿ ಧಾರ ಸಂಶುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿದಾಗ ಆಕೆಯು ಸಹ ಪ್ರೇಮವೈಫಲ್ಯಕ್ಕೆ ಆತ್ಮಹತ್ಯೆ ಎಂಬುದು ತಿಳಿದುಬಂದಿದೆ. ಯುವತಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ದೀಪೇಂದ್ರ ಕುಮಾರ್ನ ಜೊತೆಗಿನ ಫೋಟೋಗಳು ಲಭ್ಯವಾಗಿದೆ. ಆಗ ಇಬ್ಬರು ಪ್ರೇಮ ವೈಫಲ್ಯದಿಂದ ಮೃತಪಟ್ಟಿರುವುದು ಪೊಲೀಸರಿಗೆ ಖಚಿತವಾಗಿದೆ.
ಮಹಿಳೆಯರ 'ಶಕ್ತಿ'ಗೆ ಮುರಿದುಬಿದ್ದ ಬಸ್ ಡೋರ್: ಕಂಡಕ್ಟರ್ ಪರದಾಟ
ತಪ್ಪು ಗ್ರಹಿಕೆಯಿಂದ ದುಡುಕಿನ ನಿರ್ಧಾರ: ಒಂದೇ ಕಡೆ ಕೆಲಸ ಮಾಡುತ್ತಿದ್ದಾಗ ತಮ್ಮ ಪ್ರೀತಿಯನ್ನು ವಿರೋಧಿಸಿ ಯುವತಿಯನ್ನು ಆಕೆಯ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. ಆದ್ದರಿಂದ ಪ್ರೇಯಸಿ ನನ್ನಿಂದ ದೂರವಾಗಿದ್ದಾಳೆ ಎಂದು ತಪ್ಪಾಗಿ ತಿಳಿದುಕೊಂಡು ಯುವಕ ಸಾವಿಗೀಡಾಗಿದ್ದನು. ಆದರೆ, ಯುವತಿ ಮನೆಯವರು ಬೇರೊಂದು ಕಡೆ ಕೆಲಸ ಮಾಡುವುದಕ್ಕಾಗಿ ಅಲ್ಲಿಂದ ಹೊರಟು ಹೋಗಿದ್ದರು. ಇನ್ನು ತನ್ನ ಪ್ರೇಮಿಯ ಸಾವಿನಿಂದ ತೀವ್ರ ದುಃಖಿತಳಾದ ಪ್ರೇಯಸಿ ಕೂಡ ಮನನೊಂದು ಸಾವಿನ ಹಾದಿ ಹಿಡಿದಿದ್ದಾಳೆ. ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಆದರೆ ತಮ್ಮ ತಪ್ಪುಗ್ರಹಿಕೆಯಿಂದ ಪ್ರೇಮಿಗಳಿಬ್ಬರ ದುರಂತ ಅಂತ್ಯವಾಗಿದೆ. ಸ್ವಲ್ಪ ತಾಳ್ಮೆ ವಹಿಸಿದ್ದರೆ ಇಬ್ಬರೂ ಮನೆಯವರನ್ನು ಒಪ್ಪಿಸಿ ನೆಮ್ಮದಿಯ ಜೀವನ ಮಾಡಬಹುದಿತ್ತು. ಪ್ರೀತಿ ಅರಳುವ ಮುನ್ನವೇ ಕಮರಿ ಹೋದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ