ಅತ್ಯಾಚಾರ ಪ್ರಕರಣವೊಂದರಲ್ಲಿ ಉತ್ತರಪ್ರದೇಶ ಪೊಲೀಸರು ಆರೋಪಿ ಮಾತ್ರವಲ್ಲದೇ ಕುಟುಂಬದ 90 ವರ್ಷದ ಅಜ್ಜ ಹಾಗೂ 20 ವರ್ಷದ ಹಿಂದೆ ತೀರಿ ಹೋದ, ಮರಿ ಅಜ್ಜ( ಅಜ್ಜನ ಅಪ್ಪ)ನನ್ನೂ ಬಿಡದೇ ಆತನ ಕುಟುಂಬದ ಇಡೀ ನಾಲ್ಕು ತಲೆಮಾರಿನ ಮೇಲೂ ಕೇಸು ದಾಖಲಿಸಿದ್ದಾರೆ.
ಮೀರತ್: ಅತ್ಯಾಚಾರ ಪ್ರಕರಣವೊಂದರಲ್ಲಿ ಉತ್ತರಪ್ರದೇಶ ಪೊಲೀಸರು ಆರೋಪಿ ಮಾತ್ರವಲ್ಲದೇ ಕುಟುಂಬದ 90 ವರ್ಷದ ಅಜ್ಜ ಹಾಗೂ 20 ವರ್ಷದ ಹಿಂದೆ ತೀರಿ ಹೋದ, ಮರಿ ಅಜ್ಜ( ಅಜ್ಜನ ಅಪ್ಪ)ನನ್ನೂ ಬಿಡದೇ ಆತನ ಕುಟುಂಬದ ಇಡೀ ನಾಲ್ಕು ತಲೆಮಾರಿನ ಮೇಲೂ ಕೇಸು ದಾಖಲಿಸಿದ್ದಾರೆ. ಉತ್ತರಪ್ರದೇಶದ ಬುಲಂದಶಹರ್ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಈ ಬಗ್ಗೆ ಈಗ ಆರೋಪಿಯ ಕುಟುಂಬದವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿಯ ತಂದೆ ನೀಡಿದ ದೂರಿನ ಪ್ರಕಾರ 23 ವರ್ಷದ ಯುವಕನೋರ್ವ, ಮದುವೆಯಾಗುವುದಾಗಿ ಹೇಳಿ ಕಳೆದೆರಡು ವರ್ಷಗಳಿಂದ ತನ್ನ 19 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. ಇತ್ತೀಚೆಗೆ ಆರೋಪಿಗೆ ತನ್ನ ಪುತ್ರಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಿದಾಗ ಆರೋಪಿಯೂ ತನ್ನ ಮಗಳನ್ನು ಸಮೀಪದ ತೋಟದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಮೇ. 31 ರಂದು ಮತ್ತೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಆತನ ಇಬ್ಬರು ಸೋದರ ಸಂಬಂಧಿಗಳು ಹೊರಗೆ ಕಾವಲು ನಿಂತಿದ್ದರು. ಅಲ್ಲದೇ ಮದುವೆಗೆ ಒತ್ತಡ ಹೇರಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಇದಾಗಿ ಒಂದು ವಾರದ ಬಳಿಕ ಜೂನ್ 7 ರಂದು ಪುತ್ರಿ ತನಗೆ ಈ ವಿಚಾರ ತಿಳಿಸಿದ್ದು, ಈ ವೇಳೆ ನಾವು ಆರೋಪಿ ಯುವಕನ ಬಳಿ ಈ ವಿಚಾರ ಚರ್ಚಿಸಿದಾಗ ಅವರು ನಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸದಂತೆ ಬೆದರಿಕೆಯೊಡ್ಡಿದ್ದಾರೆ ಎಂದು ಯುವತಿಯ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
9 ವರ್ಷದ ಬಾಲಕಿಯ ರೇಪ್ ಮಾಡಿದ ಆರೋಪಿ, ಬುಲ್ಡೋಜರ್ ಬಳಸಿ ಮನೆ ಕೆಡವಿದ ಪೊಲೀಸ್!
ಇದಾದ ನಂತರ ತಂದೆ ಯುವತಿಯ ತಂದೆ ಆರೋಪಿ (Accused) ಸೇರಿದಂತೆ ಆತನ ಕುಟುಂಬದ 10 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈ 10 ಜನ ಆರೋಪಿಗಳಲ್ಲಿ ಆರೋಪಿ ಯುವಕನ 90 ವರ್ಷದ ಅಜ್ಜ ಹಾಗೂ 20 ವರ್ಷದ ಹಿಂದೆ ತೀರಿ ಹೋದ ಮುತ್ತಜ್ಜನ ಹೆಸರು ಕೂಡ ಸೇರಿ ಈ ಕುಟುಂಬದ 4 ತಲೆಮಾರುಗಳನ್ನು ಆರೋಪಿಗಳಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಕುಟುಂಬ ಈಗ ಬುಲಂದ್ಶಹರ್ನ (Bulandshahar) ಹಿರಿಯ ಸೂಪರಿಟೆಂಟೆಂಟ್ ಆಫ್ ಪೊಲೀಸ್ (SSP) ಶ್ಲೋಕ್ ಕುಮಾರ್ (shlok kumar)ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಅವರು ತಮ್ಮ ಕೆಳಗಿನ ಅಧಿಕಾರಿಗಳಿಗೆ ಈ ಬಗ್ಗೆ ನ್ಯಾಯಯುತವಾಗಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಸೆಕ್ಷನ್147 (ದರೋಡೆ) ಸೆಕ್ಷನ್ 323 (ನೋವಾಗಲು ಕಾರಣವಾದ), ಸೆಕ್ಷನ್ 504 (ಶಾಂತಿ ಕದಡಿದ) ಸೆಕ್ಷನ್ 56 (ಅಪರಾಧ ಬೆದರಿಕೆ) ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಸ್ವೀಕರಿಸಿದ ದೂರಿನ ಪ್ರಕಾರ ಎಫ್ಐಆರ್ನಲ್ಲಿ ಹೆಸರಿರುವ ಎಲ್ಲರೂ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಅವರು ಭಾಗಿಯಾದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ಸತ್ತವರ ಹೆಸರನ್ನು ಸೇರಿಸಲಾಗಿದೆ ಎಂಬ ಆರೋಪದ ಬಗ್ಗೆಯೂ ನಾವು ತನಿಖೆ ನಡೆಸುತ್ತೇವೆ. ಅಲ್ಲದೇ ಅತ್ಯಾಚಾರವೆಸಗಿದ ಆರೋಪಿಯ ಬಂಧನಕ್ಕೆ ಈಗಾಗಲೇ ಬಲೆ ಬೀಸಲಾಗಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಆಹರ್ (Ahar) ಪೊಲೀಸ್ ಠಾಣೆಯ ಮುಖ್ಯಸ್ಥ ನಿಶಾನ್ ಸಿಂಗ್ (Nishan Singh) ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಖುಲಾಸೆ ಮಾಡಿದ್ದ ಛವ್ಲಾ ಗ್ಯಾಂಗ್ರೇಪ್ ಕೇಸ್ ಆರೋಪಿಯಿಂದ ಆಟೋ ಚಾಲಕನ ಕೊಲೆ!