
ನವದೆಹಲಿ (ಮೇ.18): ಸುಪಾರಿ ಕಿಲ್ಲರ್ಗಳ ಮೂಲಕ ವಿಚ್ಛೇದನಕ್ಕಾಗಿ ಭಾರಿ ಮೊತ್ತದ ಬೇಡಿಕೆಯಿಟ್ಟಿದ್ದ ಪತ್ನಿಯ ಹತ್ಯೆಯನ್ನು ಮಾಡಿದ್ದಕ್ಕಾಗಿ 71 ವರ್ಷದ ವೃದ್ಧನನ್ನು ಗುರುವಾರ ಬಂಧಿಸಲಾಗಿದೆ. ಬುಧವಾರ ಮಹಿಳೆಯನ್ನು ಕೊಂದ ಕೆಲವೇ ಗಂಟೆಗಳ ನಂತರ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿಯು ಎಸ್ಕೆ ಗುಪ್ತಾ ಎಂದು ಗುರುತಿಸಲಾಗಿದ್ದು, ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ತನ್ನ ಮಗ ಅಮಿತ್ನನ್ನು ನೋಡಿಕೊಳ್ಳುತ್ತೇನೆ ಎನ್ನುವ ಭರವಸೆ ನೀಡಿದ್ದ ಮಹಿಳೆಯನ್ನು ಮದುವೆಯಾಗಿದ್ದ ಎಂದು ಹೇಳಿದ್ದಾರೆ. ಆದರೆ, ವ್ಯಕ್ತಿ ಅಂದುಕೊಂಡ ಹಾಗೆ ಯಾವುದೂ ನಡೆಯಲಿಲ್ಲ. ಈ ವೇಳೆ ಮದುವೆಯನ್ನು ಅಂತ್ಯ ಮಾಡಿಕೊಳ್ಳುವ ಮಾತನ್ನೂ ಎಸ್ಕೆ ಗುಪ್ತಾ ಆಡಿದ್ದ. ಆದರೆ, ವಿಚ್ಛೇದನಕ್ಕಾಗಿ ಆತನ ಪತ್ನಿ 1 ಕೋಟಿ ರೂಪಾಯಿ ಮೊತ್ತವನ್ನು ಕೇಳಿದ್ದಳು. ದಿನ ಕಳೆದಂತೆ ಇವರಿಬ್ಬರ ಸಂಬಂಧದಲ್ಲಿ ಪ್ರೀತಿಗಿಂತ ದ್ವೇಷವೇ ಹೆಚ್ಚಾಗಿ ಕಂಡಿದ್ದರಿಂದ ಗುಪ್ತಾ ಪತ್ನಿಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದ ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಎಸ್ಕೆ ಗುಪ್ತಾ ತನ್ನ ಅನಾರೋಗ್ಯ ಪೀಡಿತ ಮಗನ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ. ಈ ಕೊಲೆಯನ್ನು ಕಾರ್ಯಗತಗೊಳಿಸಲು ಇಬ್ಬರು ಸುಪಾರಿ ಕಿಲ್ಲರ್ಗೆ ಡೀಲ್ ನೀಡಿದ್ದರು.
ಗುಪ್ತಾ ಆರೋಪಿಗಳಲ್ಲಿ ಒಬ್ಬನಾದ ವಿಪಿನ್ ಸೇಥಿಯನ್ನು ಸಂಪರ್ಕಿಸಿ ತನ್ನ ಪತ್ನಿಯನ್ನು ಕೊಲ್ಲಲು 10 ಲಕ್ಷ ರೂಪಾಯಿಗೆ ಡೀಲ್ ಮಾಡಿದ್ದ. ಸೇಥಿ ನಂತರ 2.50 ಲಕ್ಷ ರೂಪಾಯಿಯನ್ನು ಮುಂಗಡವಾಗಿ ಸ್ವೀಕರಿಸಿದ್ದ. ಬಳಿಕ ವಿಪಿನ್ ಸೇಥಿ ತನ್ನ ಸಹಾಯಕ ಹಿಮಾಂಶು ಜೊತೆ ಸೇರಿ ಎಸ್ಕೆ ಗುಪ್ತಾನ ಪತ್ನಿಯನ್ನು ಕೊಲೆ ಮಾಡಿದ್ದ ಎಂದು ಪಶ್ಚಿಮ ದೆಹಲಿಯ ಸುಭಾಷ್ ನಗರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಮೃತಳನ್ನು ಪೂಜಾ ವಾಧ್ವಾ ಎಂದು ಗುರುತಿಸಲಾಗಿದ್ದು, ಕಳೆದ ನವೆಂಬರ್ಲ್ಲಿ ಎಸ್ಕೆ ಗುಪ್ತಾನನ್ನು ವಿವಾಹವಾಗಿದ್ದಳು. ಇಬ್ಬರು ಸುಪಾರಿ ಹಂತಕರು ವಾಧ್ವಾ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ ಮತ್ತು ದರೋಡೆ ಎಂದು ತೋರಿಸಲು ಮನೆಗೆ ನುಗ್ಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ನಡುವೆ, ಮಹಿಳೆ ಕೊಲೆಯಾದಾಗ ಅಮಿತ್ ಮನೆಯಲ್ಲಿದ್ದರು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಖಚಿತಪಡಿಸಿದ್ದಾರೆ. ಎಲ್ಲಾ ನಾಲ್ವರು ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಪ್ರಸ್ತುತ ಪೊಲೀಸ್ ವಶದಲ್ಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳು ಇನ್ನೂ ಮೊಬೈಲ್ ಫೋನ್ ಮತ್ತು ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಬೇಕಾಗಿದೆ. ಸದ್ಯ ಪ್ರಕರಣದಲ್ಲಿ ಕೂಲಂಕುಷವಾಗಿ ತನಿಖೆ ನಡೆಯುತ್ತಿದೆ.
ಬೆಂಗಳೂರು: ಹಳೆ ದ್ವೇಷದ ಹಿನ್ನಲೆ, ಉದ್ಯಮಿ ಮೇಲೆ ಲೇಡಿ ಡಾನ್ ಹಲ್ಲೆ
ಪ್ರಧಾನ ಆರೋಪಿಯಾಗಿರುವ ಸುರೇಂದ್ರ ಕೆ ಗುಪ್ತಾ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್. ಕಳೆದ ಫೆಬ್ರವರಿಯಲ್ಲಿ ಈತನ ಮೊದಲ ಪತ್ನಿ ಸಾವು ಕಂಡಿದ್ದರೆ, ನಾಲ್ಕೈದು ವರ್ಷದ ಹಿಂದೆ ಹಿರಿಯ ಮಗ ಕೂಡ ಸಾವು ಕಂಡಿದ್ದ. ಇದ್ದೊಬ್ಬ ಮಗಳಿಗೆ ವಿವಾಹವಾಗಿದೆ. 45 ವರ್ಷದ ಅಮಿತ್ ಗುಪ್ತಾ, ಸೆರ್ರಬಲ್ ಪಾಲ್ಸಿಯಿಂದ ಬಳಲುತ್ತಿದ್ದ. ಈತನನ್ನು ನೋಡಿಕೊಳ್ಳುವ ಸಲುವಾಗಿಯೇ ಎಸ್ಕೆ ಗುಪ್ತಾ, ಪೂಜಾ ವಾಧ್ವಾಳನ್ನು ವಿವಾಹವಾಗಿದ್ದ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿಯೇ ಪೂಜಾ ಈತನಿಗೆ ಹಿಂಸೆ ನೀಡಳು ಆರಂಭಿಸಿದ್ದಳು. ವಿಚ್ಛೇದನಕ್ಕಾಗಿ 1 ಕೋಟಿ ನೀಡಲೇಬೇಕು ಎಂದು ಹಠ ಹಿಡಿದಿದ್ದಳು.
ದರೋಡೆ ಪ್ರಕರಣ: ಸ್ಯಾಂಟ್ರೋ ರವಿ ಪತ್ನಿಗೆ ಕ್ಲೀನ್ಚಿಟ್?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ