Latest Videos

ಕೋಪದ ಕೈಗೆ ಬುದ್ದಿ ಕೊಟ್ಟು ಕರುಳ ಕುಡಿಯ ಕೊಂದ ತಾಯಿ: ಗಂಡನೊಂದಿಗೆ ಫೈಟ್, ಮಗುವಿನ ಕತೆ ಫಿನೀಷ್

By Anusha KbFirst Published May 22, 2024, 4:45 PM IST
Highlights

ಗಂಡ ಹೆಂಡತಿ ಜಗಳ ಮಗುವಿನ ಕೊಲೆಯಲ್ಲಿ ಅಂತ್ಯವಾಗಿದೆ. ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು. ಆದರೆ ಕೆಟ್ಟ ತಾಯಿ ಇರಲಾರಳು ಎಂಬ ಮಾತಿದೆ. ಆದರೆ ಈ ಪಾಪಿ ತಾಯಿ ಆ ಮಾತನ್ನು ಸುಳ್ಳು ಮಾಡಿದ್ದಾಳೆ. 

ಮುಂಬೈ: ಗಂಡ ಹೆಂಡತಿ ಜಗಳ ಮಗುವಿನ ಕೊಲೆಯಲ್ಲಿ ಅಂತ್ಯವಾಗಿದೆ. ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು. ಆದರೆ ಕೆಟ್ಟ ತಾಯಿ ಇರಲಾರಳು ಎಂಬ ಮಾತಿದೆ. ಆದರೆ ಈ ಪಾಪಿ ತಾಯಿ ಆ ಮಾತನ್ನು ಸುಳ್ಳು ಮಾಡಿದ್ದಾಳೆ. ಗಂಡನೊಂದಿಗೆ ಜಗಳವಾಡಿದ ಹೆಂಡತಿ ಅದೇ ಸಿಟ್ಟಿನಲ್ಲಿ ಮೂರು ವರ್ಷದ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಮಹಾರಾಷ್ಟ್ರದ ನಾಗಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕೊಲೆ ಮಾಡಿದ ನಂತರ ಆಕೆ ಮಗುವಿನ ಮೃತದೇಹದೊಂದಿಗೆ 4 ಕಿಲೋ ಮೀಟರ್ ಅಲೆದಾಡಿದ್ದಾಳೆ. 

ಪೊಲೀಸರು ಹೇಳುವ ಪ್ರಕಾರ, ಈ ಘಟನೆ ಸೋಮವಾರ ನಡೆದಿದೆ. ಸೋಮವಾರ (ಮೇ.20ರ) ಸಂಜೆ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಕೊಲೆ ಮಾಡಿದ ತಾಯಿಯನ್ನು 23 ವರ್ಷದ ಟ್ವಿಂಕಲ್ ರಾವತ್ ಎಂದು ಗುರುತಿಸಲಾಗಿದೆ. 4 ವರ್ಷಗಳ ಹಿಂದೆ ಈಕೆ ತನ್ನ ಪತಿ 24 ವರ್ಷ ರಾಮ್ ಲಕ್ಷ್ಮಣ್ ರಾವತ್ ಜೊತೆ ಉದ್ಯೋಗ ಅರಸಿ ನಾಗಪುರಕ್ಕೆ ಬಂದಿದ್ದಳು. 

ಈ ಜೋಡಿ ಎಂಐಡಿಸಿಯ ಹಿಂಗಾ ರಸ್ತೆಯಲ್ಲಿರುವ ಪೇಪರ್ ಉತ್ಪಾದನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಯ ಆವರಣದಲ್ಲೇ ರೂಮೊಂದರಲ್ಲಿ ವಾಸವಿದ್ದರು. ಆದರೆ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ದಂಪತಿ ದಿನವೂ ಕಿತ್ತಾಡುತ್ತಿದ್ದರು.  ಘಟನೆ ನಡೆದ ದಿನವೂ ದಂಪತಿ ಜಗಳವಾಡಿದ್ದು, ಈ ವೇಳೆ ಮೂರು ವರ್ಷದ ಮಗು ಅಳಲು ಆರಂಭಿಸಿದೆ. ಆದರೆ ಗಂಡನ ಮೇಲಿನ ಕೋಪದ ಭರದಲ್ಲಿ ಮಹಿಳೆ ಮಗುವನ್ನುಹೊರಗೆ ಕರೆದುಕೊಂಡು ಬಂದು ಮರದ ಕೆಳಗೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. 

ಇದಾದ ನಂತರ ಮಗುವಿನ ಶವವನ್ನು ಕೈಯಲ್ಲಿ ಹಿಡಿದು ಬೀದಿಯಲ್ಲಿ 4 ಮೀಟರ್‌ನಷ್ಟು ದೂರ ಅಲೆದಾಡಿದ್ದಾಳೆ. ರಾತ್ರಿ 8 ಗಂಟೆ ಸುಮಾರಿಗೆ ಈಕೆ ಪೊಲೀಸ್ ಗಸ್ತು ವಾಹನವನ್ನು ನೋಡಿದ್ದು, ನಡೆದ ಘಟನೆಯನ್ನು ಪೊಲೀಸರಿಗೆ ಹೇಳಿದ್ದಾಳೆ. ಕೂಡಲೇ ಪೊಲೀಸರು ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಘೋಷಿಸಿದ್ದಾರೆ. ಇದಾದ ನಂತರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆಕೆಯನ್ನು ಮೇ. 24ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. 

ಒಟ್ಟಿನಲ್ಲಿ ಸಿಟ್ಟಿನ ಕೈಗೆ ಬುದ್ದಿ ಕೊಟ್ಟ ಪಾಪಿ ತಾಯಿ ಕರುಳ ಕುಡಿಯನ್ನೇ ಇನ್ನಿಲ್ಲವಾಗಿಸಿ ತಾಯಿ ಪದಕ್ಕೆ ಕಳಂಕ ತಂದಿದ್ದಾಳೆ. 
 

click me!