ದೇಶದಲ್ಲಿ ರೊಬೋಟ್‌ ಬಾಂಬ್‌ ಸ್ಫೋಟಕ್ಕೆ ಐಸಿಸ್‌ ಉಗ್ರ ಸಂಚು? ರೋಬೋಟಿಕ್‌ ಕೋರ್ಸ್‌ ಸೇರಲು ವಿದೇಶಿ ಬಾಸ್‌ಗಳ ಸೂಚನೆ

By Kannadaprabha NewsFirst Published Jul 2, 2023, 8:06 AM IST
Highlights

9 ಮಂದಿಯಲ್ಲಿ ಐವರಿಗೆ ತಾಂತ್ರಿಕ ಹಿನ್ನೆಲೆ ಇದ್ದು, ಭವಿಷ್ಯದಲ್ಲಿ ತಾಂತ್ರಿಕ ಕೌಶಲ್ಯ ಹೊಂದಿದ ಭಯೋತ್ಪಾದಕ ದಾಳಿ ನಡೆಸಲು ರೋಬೋಟಿಕ್ಸ್‌ ಕೋರ್ಸ್‌ಗೆ ಸೇರುವಂತೆ ಐಸಿಸ್‌ ಸಂಘಟನೆಯ ವಿದೇಶಿ ನಿಯಂತ್ರಕರು ಐವರಿಗೂ ಸೂಚನೆ ನೀಡಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ನವದೆಹಲಿ (ಜುಲೈ 02, 2023): ಭಾರತದಲ್ಲಿ ಭಯೋತ್ಪಾದನೆ ನಡೆಸಲು ನಾನಾ ತಂತ್ರಗಳನ್ನು ಅನ್ವೇಷಿಸುತ್ತಿರುವ ಜಗತ್ತಿನ ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಐಸಿಸ್‌, ರೊಬೋಟ್‌ ಬಾಂಬ್‌ ಬಳಸಿ ದೇಶಾದ್ಯಂತ ದಾಳಿಗೆ ಸಂಚು ರೂಪಿಸಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಐಸಿಸ್‌ ರೂಪಿಸಿದ್ದ ಸಂಚಿನಲ್ಲಿ ಭಾಗಿಯಾದ ಆರೋಪದ ಮೇರೆಗೆ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದವನೂ ಸೇರಿದಂತೆ ಕರ್ನಾಟಕದ 9 ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸಲ್ಲಿಸಿರುವ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಈ ಮಾಹಿತಿ ಇದೆ.

ಈ 9 ಮಂದಿಯಲ್ಲಿ ಐವರಿಗೆ ತಾಂತ್ರಿಕ ಹಿನ್ನೆಲೆ ಇದ್ದು, ಭವಿಷ್ಯದಲ್ಲಿ ತಾಂತ್ರಿಕ ಕೌಶಲ್ಯ ಹೊಂದಿದ ಭಯೋತ್ಪಾದಕ ದಾಳಿ ನಡೆಸಲು ರೋಬೋಟಿಕ್ಸ್‌ ಕೋರ್ಸ್‌ಗೆ ಸೇರುವಂತೆ ಐಸಿಸ್‌ ಸಂಘಟನೆಯ ವಿದೇಶಿ ನಿಯಂತ್ರಕರು ಐವರಿಗೂ ಸೂಚನೆ ನೀಡಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಭಾರತದಲ್ಲಿ ಶಾಂತಿ ಹಾಳುಗೆಡವಲು ಐಸಿಸ್‌ನ ವಿದೇಶಿ ನಿಯಂತ್ರಕರು ಆರೋಪಿಗಳಿಗೆ ಕ್ರಿಪ್ಟೋಕರೆನ್ಸಿ ಮೂಲಕ ನೆರವು ನೀಡುತ್ತಿದ್ದರು ಎಂದೂ ಉಲ್ಲೇಖಿಸಲಾಗಿದೆ.

ಇದನ್ನು ಓದಿ: Breaking: ನಾಲ್ವರು ಐಸಿಸ್‌ ಸಹಚರರ ಬಂಧಿಸಿದ ಗುಜರಾತ್‌ ಎಟಿಎಸ್‌ : ಮತ್ತೊಬ್ಬ ಆತಂಕವಾದಿಗಾಗಿ ಶೋಧ

ಮೊಹಮ್ಮದ್‌ ಶಾರೀಕ್‌ (25), ಮಾಜ್‌ ಮುನೀರ್‌ ಅಹಮದ್‌ (23), ಸೈಯದ್‌ ಯಾಸೀನ್‌ (22), ರೀಶನ್‌ ತಾಜುದ್ದೀನ್‌ ಶೇಖ್‌ (22), ಹುಜೇರ್‌ ಫರ್ಹಾನ್‌ ಬೇಗ್‌ (22), ಮಜಿನ್‌ ಅಬ್ದುಲ್‌ ರಹಮಾನ್‌ (22), ನದೀಮ್‌ ಅಹಮದ್‌ ಕೆ.ಎ. (22), ಜಬೀವುಲ್ಲಾ (32) ಹಾಗೂ ನದೀಮ್‌ ಫೈಜಲ್‌ ಎನ್‌. (27) ಹೆಸರು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಈ ಪೈಕಿ ಮೊಹಮ್ಮದ್‌ ಶಾರೀಕ್‌ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾನೆ. ಶಾರೀಕ್‌, ಮಾಜ್‌ ಮುನೀರ್‌, ಯಾಸೀನ್‌ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಟ್ರಯಲ್‌ ಬಾಂಬ್‌ ಸ್ಫೋಟ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ಆರೋಪ ಪಟ್ಟಿಯಲ್ಲೇನಿದೆ?:
ಈ ಎಲ್ಲ ಆರೋಪಿಗಳು ಕರ್ನಾಟಕದವರಾಗಿದ್ದು, ಅಕ್ರಮ ಚಟುವಟಿಕೆ (ನಿಯಂತ್ರಣ) ಕಾಯ್ದೆ, ಐಪಿಸಿ, ವಿಧ್ವಂಸಕ ಹಾಗೂ ಆಸ್ತಿ ನಷ್ಟ ತಡೆ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದೆ ಎಂದು ಎನ್‌ಐಎ ವಿವರಿಸಿದೆ.

ಇದನ್ನೂ ಓದಿ: ಸಿರಿಯಾದಲ್ಲಿ ಮತ್ತೆ ಐಸಿಸ್‌ ಅಟ್ಟಹಾಸ: ಕುರಿಗಾಹಿಗಳು ಸೇರಿ ಕನಿಷ್ಠ 31 ಜನರ ಹತ್ಯೆ

ಮಾಜ್‌ ಅಹಮದ್‌ ಹಾಗೂ ಸೈಯದ್‌ ಯಾಸೀನ್‌ ವಿರುದ್ಧ ಮಾರ್ಚ್‌ನಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಅವರ ವಿರುದ್ಧ ಇನ್ನಿತರೆ ಅಪರಾಧಗಳಡಿ ಆರೋಪಗಳನ್ನು ಮಾಡಲಾಗಿದೆ. ರೀಶನ್‌ ತಾಜುದ್ದೀನ್‌ ಶೇಖ್‌, ಮಜಿನ್‌ ಅಬ್ದುಲ್‌ ರೆಹಮಾನ್‌, ನದೀಮ್‌ ಅಹಮದ್‌ ಅವರು ಮೆಕ್ಯಾನಿಕಲ್‌ ಹಾಗೂ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಓದಿದವರಾಗಿದ್ದಾರೆ. ಈ ಐದೂ ಮಂದಿಗೆ ರೋಬೋಟಿಕ್ಸ್‌ ಕೋರ್ಸ್‌ಗೆ ಸೇರಿ ಕೌಶಲ್ಯ ಕಲಿತುಕೊಳ್ಳುವಂತೆ ಐಸಿಸ್‌ ನಿಯಂತ್ರಕರಿಂದ ಸೂಚನೆ ಇತ್ತು. ಭವಿಷ್ಯದಲ್ಲಿ ಭಯೋತ್ಪಾದಕ ದಾಳಿ ನಡೆಸಿ ಐಸಿಸ್‌ ಅಜೆಂಡಾ ಸಾರುವ ಸಂಚು ಇದಾಗಿತ್ತು ಎಂದು ಎನ್‌ಐಎ ವಿವರಿಸಿದೆ.

ವಿದೇಶದಲ್ಲಿರುವ ಐಸಿಸ್‌ ಉಗ್ರನ ಜತೆ ಶಾಮೀಲಾಗಿ ಶಾರೀಕ್‌, ಮುನೀರ್‌ ಹಾಗೂ ಯಾಸಿನ್‌ ಕ್ರಿಮಿನಲ್‌ ಸಂಚು ರೂಪಿಸಿದ್ದರು. ಇಸ್ಲಾಮಿಕ್‌ ಸ್ಟೇಟ್‌ ನಿರ್ದೇಶನಕ್ಕೆ ಅನುಗುಣವಾಗಿ ಭಯೋತ್ಪಾದನೆ ಹಾಗೂ ಹಿಂಸಾಚಾರ ನಡೆಸುವ ಸಂಚು ಹೆಣೆದಿದ್ದರು. ಈ ಮೂವರೂ ಸೇರಿ ಸಹ ಆರೋಪಿಗಳ ತಲೆ ಕೆಡಿಸಿ, ಅವರನ್ನು ಸಂಘಟನೆಗೆ ನೇಮಕ ಮಾಡಿಕೊಂಡಿದ್ದರು. ದೇಶದ ಭದ್ರತೆ, ಏಕತೆ ಹಾಗೂ ಸಾರ್ವಭೌಮತೆಯನ್ನು ಹಾಳು ಮಾಡುವ ಉದ್ದೇಶವನ್ನು ಹೊಂದಿದ್ದರು. ಈ ಆರೋಪಿಗಳಿಗೆ ಕ್ರಿಪ್ಟೋಕರೆನ್ಸಿ ಮೂಲಕ ನಿಯಂತ್ರಕರು ನೆರವು ನೀಡುತ್ತಿದ್ದರು ಎಂದು ವಿವರಿಸಿದೆ.

ಇದನ್ನೂ ಓದಿ: ಮಂಗಳೂರು, ಕೊಯಮತ್ತೂರು ಬಾಂಬ್‌ ಸ್ಫೋಟ ಕೇಸ್‌: ಐಸಿಸ್‌ ಕೈವಾಡದ ಬಗ್ಗೆ ತನಿಖೆ

ಕಳೆದ ವರ್ಷ ಸೆಪ್ಟೆಂಬರ್‌ 19ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಟ್ರಯಲ್‌ ಬಾಂಬ್‌ ಸ್ಫೋಟ ಪ್ರಕರಣ ಕುರಿತು ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ನವೆಂಬರ್‌ 15ರಂದು ಎನ್‌ಐಎ ವಹಿಸಿಕೊಂಡಿತ್ತು.

ಏನಿದು ಪ್ರಕರಣ?
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆರೋಪಿಗಳು ಶಿವಮೊಗ್ಗ ಬಳಿ ತುಂಗಾ ನದಿ ತೀರದಲ್ಲಿ ಬಾಂಬ್‌ ಸ್ಫೋಟದ ಪ್ರಯೋಗ ನಡೆಸಿದ್ದರು. ಬಳಿಕ ನವೆಂಬರ್‌ನಲ್ಲಿ ಶಾರೀಖ್‌ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ನಡೆಸಿ ಸಿಕ್ಕಿಬಿದ್ದಿದ್ದ. ಈ ನಡುವೆ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನಿಗೆ ಚೂರಿ ಇರಿತ ನಡೆಸಲಾಗಿತ್ತು. ಮೊದಲಿಗೆ ಈ ಪ್ರಕರಣಗಳ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಿದ್ದರು. ಈ ಕೃತ್ಯಗಳಲ್ಲಿ ಉಗ್ರರ ಕೈವಾಡ ಪತ್ತೆಯಾದ ಬಳಿಕ 2023ರ ನವೆಂಬರ್‌ 15ರಂದು ಎನ್‌ಐಎ ಪ್ರಕರಣವನ್ನು ವಹಿಸಿಕೊಂಡಿತ್ತು. ಅದು ತನಿಖೆ ನಡೆಸಿ, ಕೋರ್ಚ್‌ಗೆ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದೆ.

ಇದನ್ನೂ ಓದಿ: ಬಿಜೆಪಿಯ ಪ್ರಮುಖ ರಾಜಕೀಯ ನಾಯಕನ ಹತ್ಯೆಗೆ ಸ್ಕೆಚ್‌: ರಷ್ಯಾದಲ್ಲಿ ಐಸಿಸ್‌ ಉಗ್ರ ವಶಕ್ಕೆ

ಚಾರ್ಜ್‌ಶೀಟ್‌ನಲ್ಲಿ ಏನಿದೆ?
- ವಿದೇಶದಲ್ಲಿರುವ ಐಸಿಸ್‌ ಉಗ್ರನ ಜತೆ ಶಾಮೀಲಾಗಿ ಶಾರೀಕ್‌, ಮುನೀರ್‌, ಯಾಸಿನ್‌ರಿಂದ ದಾಳಿಯ ಸಂಚು
- ಈ ಮೂವರೂ ಸೇರಿ ಸಹ ಆರೋಪಿಗಳ ತಲೆಕೆಡಿಸಿ, ಅವರನ್ನು ಐಸಿಸ್‌ ಸಂಘಟನೆಗೆ ನೇಮಕ ಮಾಡಿಕೊಂಡಿದ್ದರು
- ದೇಶದ ಭದ್ರತೆ, ಏಕತೆ ಹಾಗೂ ಸಾರ್ವಭೌಮತೆಯನ್ನು ಹಾಳು ಮಾಡುವ ಉದ್ದೇಶ ಈ ಎಲ್ಲ ಉಗ್ರರದ್ದಾಗಿತ್ತು
- ರೀಶನ್‌, ತಾಜುದ್ದೀನ್‌, ಮಜಿನ್‌, ನದೀಮ್‌ ಮೆಕ್ಯಾನಿಕಲ್‌ ಹಾಗೂ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವೀಧರರು
- ಈ ಐವರಿಗೆ ರೋಬೋಟಿಕ್ಸ್‌ ಕೋರ್ಸ್‌ಗೆ ಸೇರಿ ಕೌಶಲ್ಯ ಕಲಿತುಕೊಳ್ಳುವಂತೆ ಐಸಿಸ್‌ ನಿಯಂತ್ರಕರು ಸೂಚನೆ ನೀಡಿದ್ದರು
- ಭವಿಷ್ಯದಲ್ಲಿ ಉಗ್ರ ದಾಳಿ ನಡೆಸಿ ಐಸಿಸ್‌ ಅಜೆಂಡಾ ಸಾರುವ ಸಂಚಿನ ಭಾಗವಾಗಿ ಈ ಯೋಜನೆ ರೂಪಿಸಲಾಗಿತ್ತು
- ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಐಸಿಎಸ್‌ ನಾಯಕರಿಂದ ಕ್ರಿಪ್ಟೋಕರೆನ್ಸಿ ಮೂಲಕ ಇವರಿಗೆ ಹಣ ರವಾನೆ
- ಬಂಧಿತರ ವಿರುದ್ಧ ಅಕ್ರಮ ಚಟುವಟಿಕೆ ಕಾಯ್ದೆ, ಐಪಿಸಿ, ವಿಧ್ವಂಸಕ ಹಾಗೂ ಆಸ್ತಿ ನಷ್ಟತಡೆ ಕಾಯ್ದೆಯಡಿ ಆರೋಪಪಟ್ಟಿ

ಬಂಧಿತ 9 ಮಂದಿ ಯಾರು?
- ಎನ್‌ಐಎ ಬಂಧಿಸಿದ ಎಲ್ಲ 9 ಮಂದಿ ಆರೋಪಿಗಳೂ ಕರ್ನಾಟಕ ಮೂಲದವರೇ ಆಗಿದ್ದಾರೆ
- ರೀಶನ್‌ ತಾಜುದ್ದೀನ್‌ ಶೇಖ್‌, ಮಜಿನ್‌ ಅಬ್ದುಲ್‌ ರೆಹಮಾನ್‌, ನದೀಮ್‌ ಅಹಮದ್‌ ಮೆಕ್ಯಾನಿಕಲ್‌ ಹಾಗೂ ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳು
- ಈ ಐದೂ ಮಂದಿಗೆ ರೊಬೋಟಿಕ್ಸ್‌ ಕೋರ್ಸ್‌ಗೆ ಸೇರುವಂತೆ ಐಸಿಸ್‌ ಸಂಘಟನೆಯ ವಿದೇಶಿ ನಿಯಂತ್ರಕರು ಸೂಚನೆ ನೀಡಿದ್ದರು
- ಶಾರೀಕ್‌, ಮುನೀರ್‌ ಹಾಗೂ ಯಾಸಿನ್‌ ವಿದೇಶದಲ್ಲಿರುವ ಐಸಿಸ್‌ ಉಗ್ರನ ಜತೆ ಶಾಮೀಲಾಗಿ ಕ್ರಿಮಿನಲ್‌ ಸಂಚು ರೂಪಿಸಿದ್ದರು
- ಶಾರೀಕ್‌ ಕಳೆದ ವರ್ಷದ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿ ಸಿಕ್ಕಿಬಿದ್ದಿದ್ದ
- ಶಾರೀಕ್‌, ಮಾಜ್‌ ಮುನೀರ್‌, ಯಾಸೀನ್‌ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಟ್ರಯಲ್‌ ಬಾಂಬ್‌ ಸ್ಫೋಟಿಸಿದ ಕೇಸಲ್ಲಿ ಆರೋಪಿಗಳು

ಇದನ್ನೂ ಓದಿ: ಕೇರಳದ ಹಲವು ಪಿಎಫ್‌ಐ ನಾಯಕರಿಗೆ ಐಸಿಸ್‌, ಅಲ್‌ಖೈದಾ ನಂಟು: ಎನ್‌ಐಎ

click me!