Mangaluru: ರೂಪದರ್ಶಿ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಆತ್ಮಹತ್ಯೆ!

By Govindaraj SFirst Published May 11, 2023, 12:17 PM IST
Highlights

ರೂಪದರ್ಶಿಯೊಬ್ಬಳ ಆತ್ಮಹತ್ಯೆ ಕೇಸ್ ನಲ್ಲಿ ಪ್ರಚೋದನೆ ಆರೋಪದಡಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿದ್ದ ಯುವಕನೊಬ್ಬ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣಿಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಕುತ್ತಾರು ಎಂಬಲ್ಲಿನ ಮುಂಡೋಳಿ ಎಂಬಲ್ಲಿ ನಡೆದಿದೆ‌.

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಮೇ.11): ರೂಪದರ್ಶಿಯೊಬ್ಬಳ ಆತ್ಮಹತ್ಯೆ ಕೇಸ್ ನಲ್ಲಿ ಪ್ರಚೋದನೆ ಆರೋಪದಡಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿದ್ದ ಯುವಕನೊಬ್ಬ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣಿಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಕುತ್ತಾರು ಎಂಬಲ್ಲಿನ ಮುಂಡೋಳಿ ಎಂಬಲ್ಲಿ ನಡೆದಿದೆ‌. ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ (20) ಆತ್ಮಹತ್ಯೆಗೈದ ಯುವಕ. ಚಿಕ್ಕಮ್ಮನ ಮನೆಯ ಮುಂಭಾಗದ ಕಬ್ಬಿಣದ ಹುಕ್ಸ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

2021ರ ಮಾರ್ಚ್ 10ರಂದು‌ ರೂಪದರ್ಶಿ ಪ್ರೇಕ್ಷ ಆತ್ಮಹತ್ಯೆಗೈದಿದ್ದಳು. ಈ ಆತ್ಮಹತ್ಯೆಗೆ ಪ್ರೇಕ್ಷ ಸ್ನೇಹಿತ ಯತಿರಾಜ್ ಕಾರಣ ಎಂದು ದೂರಲಾಗಿತ್ತು. ಪ್ರೇಕ್ಷ ಪೋಷಕರ ದೂರಿನಡಿ ಉಳ್ಳಾಲ ಪೊಲೀಸರು ಯತಿರಾಜ್ ಬಂಧಿಸಿದ್ದರು‌. ಜಾಮೀನಿನ ಮೇಲೆ ಹೊರಗಿದ್ದ ಯತಿರಾಜ್ ಇಂದು ನೇಣಿಗೆ ಶರಣಾಗಿದ್ದು,ಉದ್ಯೋಗವಿಲ್ಲದೇ ಖಿನ್ನತೆಗೆ ಒಳಗಾಗಿದ್ದ ಯತಿರಾಜ್ ತನ್ನ ಬೈಕ್ ಕೂಡ ಮಾರಿದ್ದ ಎನ್ನಲಾಗಿದೆ.‌ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಾಗಡಿ ಕ್ಷೇತ್ರದ ಜನ ನನ್ನ ಕೈ ಹಿಡಿಯುವ ನಂಬಿಕೆ ಇದೆ: ಬಾಲಕೃಷ್ಣ

ಪ್ರೇಕ್ಷಾ ಸಾವಿನಲ್ಲಿ ಯತಿರಾಜ್ ಹೆಸರು: ಆಕೆಯ ಹೆಸರು ಪ್ರೇಕ್ಷಾ. ಮಂಗಳೂರು ಹೊರವಲಯದ ಕುಂಪಲ ಬಳಿಯ ಆಶ್ರಯ ಕಾಲೋನಿ ನಿವಾಸಿ. ಜಸ್ಟ್ 16 ಕಳೆದ 17 ತುಂಬುತ್ತಿರೋ ಈ ಹುಡುಗಿ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಮಾಡೆಲಿಂಗ್ ಕ್ಷೇತ್ರದಲ್ಲಿ ಆಕೆಗೆ ದೊಡ್ಡದೊಂದು ಆಸಕ್ತಿ ಇತ್ತು. ಮಿಸ್ ಟೀನ್ ತುಳುನಾಡು ಸ್ಪರ್ಧೆಯ ಟಾಪ್ 5 ಫೈನಲಿಸ್ಟ್ ಗಳ ಪೈಕಿ ಪ್ರೇಕ್ಷಾ ಕೂಡ ಒಬ್ಬಳು. 

ಆದ್ರೆ ಹೀಗೆಲ್ಲಾ ಆಸೆಗಳನ್ನ ಇಟ್ಟುಕೊಂಡಿದ್ದವಳು, ಕನಸುಗಳನ್ನ ಕಂಡಿದ್ದವಳು 2021ರ ಮಾರ್ಚ್ 10ರಂದು‌ ಕುಂಪಲದ ತನ್ನ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರೇಕ್ಷಾ ಸಾವಿಗೆ ಪ್ರಚೋದನೆ ಕೇಸ್ ನಲ್ಲಿ ಉಳ್ಳಾಲ ಪೊಲೀಸರು ಮುಂಡೋಳಿ ನಿವಾಸಿ ಯತೀನ್ ರಾಜ್ ನನ್ನ ವಶಕ್ಕೆ ಪಡೆದಿದ್ದರು. ಯತೀನ್ ರಾಜ್  ಪ್ರೇಕ್ಷಾಳ ಗೆಳೆಯನಾಗಿದ್ದವನು. ಅಸೌಖ್ಯದ ಸಂದರ್ಭ ಔಷಧಿಗೂ ಯತೀನ್ ರಾಜ್ ಕರೆದೊಯ್ಯುತ್ತಿದ್ದನು. 

ಕಾಂಗ್ರೆಸ್‌ 141ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಃಸಿದ್ದ: ಡಿಕೆಶಿ

ಯುವತಿ ಮೃತದೇಹ ಪತ್ತೆಯಾಗುವ ಕೆಲ ನಿಮಿಷಗಳ ಮುನ್ನ  ಈತ ಆಕೆಯ ಮನೆ ಎದುರುಗಡೆ ಸುತ್ತಾಡುವುದನ್ನು ಸ್ಥಳೀಯ ವ್ಯಕ್ತಿ ಕಂಡಿದ್ದರು. ಅವರಿಂದ ದೊರೆತ ಮಾಹಿತಿಯನ್ವಯ ಪೊಲೀಸರು ಅತನನ್ನ ವಶಕ್ಕೆ ಪಡೆದುಕೊಂಡಿದ್ದರು. ಇದೇ ಹೊತ್ತಲ್ಲಿ ಯತಿರಾಜ್ ಪ್ರೇಕ್ಷಾಗೆ ಚಿನ್ನದ ಉಂಗುರವನ್ನ ಗಿಫ್ಟ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಇದೀಗ ಆರೋಪ ಹೊತ್ತ ಯತಿರಾಜ್ ಕೂಡ ಇಹಲೋಕ ತ್ಯಜಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

click me!