
ಬೆಂಗಳೂರು(ನ.23): ಸಹಕಾರಿ ಬ್ಯಾಂಕ್ಗಳಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 2.5 ಕೋಟಿಗೂ ಅಧಿಕ ಹಣ ಪಡೆದು ತನಗೆ ವಂಚಿಸಿದ್ದ ಸ್ನೇಹಿತನನ್ನು ಹತ್ಯೆಗೈದು ಬಳಿಕ ಮೃತದೇಹ ಸಮೇತ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಬಂದು ಹಂತಕನೊಬ್ಬ ಶರಣಾಗಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಹೇಶಪ್ಪ (45) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿದ ಬಳಿಕ ರಾಮಮೂರ್ತಿ ನಗರ ವ್ಯಾಪ್ತಿಯ ಜಯಂತಿ ನಗರದ ರಾಜಶೇಖರ್ (32) ಪೊಲೀಸರಿಗೆ ಶರಣಾಗಿ ದ್ದಾನೆ. ಆರ್ಥಿಕ ವಿವಾದದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ನಂಜನಗೂಡಿಗೆ ತೆರಳಿ ಮಹೇಶಪ್ಪನನ್ನು ಕಾರಿನಲ್ಲಿ ಕರೆತಂದ ಆರೋಪಿ, ಸುತ್ತಾಡಿಸಿ ಕಾರಿನಲ್ಲೇ ಸ್ನೇಹಿತನ ಮೇಲೆ ಮನಸೋ ಇಚ್ಛೆ ಥಳಿಸಿದ್ದಾನೆ. ಈ ಹಲ್ಲೆಯಿಂದ ಮೃತಪಟ್ಟಬಳಿಕ ಸೋಮವಾರ ರಾತ್ರಿ 12 ಗಂಟೆಗೆ ಠಾಣೆಗೆ ಬಂದು ರಾಜಶೇಖರ್ ಶರಣಾಗಿದ್ದಾನೆ.
ಪ್ರೇಯಸಿ ಮಗಳನ್ನು ಕೊಂದು ಮೃತದೇಹದೊಂದಿಗೆ ಸಂಭೋಗ ನಡೆಸಿದ ಪಾಪಿ ಅಂದರ್..!
ತಾಯಿ ಸ್ನೇಹಿತೆ ಮೂಲಕ ಪರಿಚಯ
ಮೆಕ್ಯಾನಿಕ್ ಕೆಲಸ ಮಾಡುವ ರಾಜಶೇಖರ್, ತನ್ನ ತಾಯಿ ಜತೆ ಜಯಂತಿ ನಗರದಲ್ಲಿ ನೆಲೆಸಿದ್ದ. ಐದು ವರ್ಷಗಳ ಹಿಂದೆ ತಮ್ಮ ನೆರೆಮನೆಯ ನಿರ್ಮಲ ಎಂಬಾಕೆ ಮೂಲಕ ರಾಜಶೇಖರ್ ಕುಟುಂಬಕ್ಕೆ ನಂಜನಗೂಡಿನ ಮಹೇಶಪ್ಪ ಪರಿಚಯವಾಗುತ್ತದೆ. ಆಗ ತನಗೆ ಸರ್ಕಾರದ ಮಟ್ಟದಲ್ಲಿ ಬಹಳ ಜನರು ಸ್ನೇಹಿತರು. ನಾನು ಹೇಳಿದರೆ ಏನೂ ಬೇಕಾದರೂ ಕೆಲಸ ಮಾಡಿಕೊಡುತ್ತಾರೆ. ನಿಮಗೆ ಬ್ಯುಸಿನೆಸ್ ಮಾಡಲು ಸರ್ಕಾರದ ಮೂಲಕ ಸಹಕಾರಿ ಬ್ಯಾಂಕ್ಗಳಲ್ಲಿ ಸಾಲ ಕೊಡಿಸುವುದಾಗಿ ರಾಜಶೇಖರ್ಗೆ ಮಹೇಶಪ್ಪ ಹೇಳಿದ್ದ.
ಈ ಮಾತು ನಂಬಿದ ತಾಯಿ-ಮಗ, ಸಾಲ ಪಡೆಯಲು ಸ್ಪಲ್ಪ ಹಣ ಖರ್ಚು ಮಾಡಬೇಕಾಗುತ್ತದೆ ಎಂದ ಮಹೇಶಪ್ಪನಿಗೆ ಕೇಳಿದಾಗಲೆಲ್ಲ ಸುಮಾರು .2.5 ಕೋಟಿಗೂ ಅಧಿಕ ಹಣ ಕೊಟ್ಟಿದ್ದರು. ಆದರೆ ಬಿಡಿಗಾಸು ಸಾಲ ಕೂಡ ಆತ ಕೊಡಿಸಲಿಲ್ಲ. ಇದರಿಂದ ಕೆರಳಿದ ರಾಜಶೇಖರ್, ಮಹೇಶಪ್ಪನ ಮೇಲೆ ಗಲಾಟೆ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂತೆಯೇ ಎರಡು ದಿನಗಳ ಹಿಂದೆ ಹಣಕಾಸು ವಿಚಾರವಾಗಿ ಮಾತನಾಡಲು ನಂಜನಗೂಡಿನಲ್ಲಿದ್ದ ಮಹೇಶಪ್ಪನ ಮನೆಗೆ ರಾಜಶೇಖರ ತೆರಳಿದ್ದ. ಆಗ ಮಾತುಕತೆ ನೆಪದಲ್ಲಿ ಕಾರಿಗೆ ಆತನನ್ನು ಹತ್ತಿಸಿಕೊಂಡ ರಾಜಶೇಖರ, ಬಳಿಕ ಮನಬಂದ ಕಡೆಗೆ ಸುತ್ತಾಡಿಸಿದ್ದಾನೆ. ಆಗ ಸಾಲ ಬೇಡ ನಮ್ಮ ಹಣವಾದರೂ ಕೊಡು ಎಂದು ಮಹೇಶಪ್ಪನಿಗೆ ಆರೋಪಿ ಒತ್ತಾಯಿಸಿದ್ದಾನೆ. ಆಗ ನನ್ನ ಬಳಿ ಹಣ ಇಲ್ಲ ಎಂದಾಗ ಸಿಟ್ಟಿಗೆದ್ದ ರಾಜಶೇಖರ್, ರಾಡು ದೊಣ್ಣೆಗಳಿಂದ ಕಾರಿನಲ್ಲೇ ಮಹೇಶಪ್ಪನಿಗೆ ಹೊಡೆದಿದ್ದಾನೆ. ಸೋಮವಾರ ರಾತ್ರಿ ರಾಮಮೂರ್ತಿ ನಗರದ ಬಳಿಕ ರಸ್ತೆ ಬದಿ ಕಾರು ನಿಲ್ಲಿಸಿದ್ದಾನೆ. ಆಗ ಊಟ ಪಾರ್ಸೆಲ್ ತೆಗೆದುಕೊಂಡು ಮರಳುವಾಗ ವೇಳೆಗೆ ಹಲ್ಲೆಯಿಂದ ಜರ್ಝ ರಿತನಾಗಿದ್ದ ಮಹೇಶಪ್ಪ ಮೃತಪಟ್ಟಿದ್ದಾನೆ. ಬಳಿಕ ರಾತ್ರಿ 12 ಗಂಟೆಗೆ ಸೀದಾ ಕಾರಿನಲ್ಲಿ ರಾಮಮೂರ್ತಿ ನಗರ ಠಾಣೆಗೆ ಮೃತದೇಹ ಸಮೇತ ಬಂದು ಪೊಲೀಸರಿಗೆ ರಾಜಶೇಖರ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Hassan: ಜಮೀನು ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ
200-300 ಜನರಿಗೆ ಟೋಪಿ
ಜನರಿಗೆ ಮರಳು ಮಾಡಿ ವಂಚಿಸಿ ಹಣ ಸಂಪಾದಿಸುವುದೇ ಮೃತ ಮಹೇಶಪ್ಪನ ವೃತ್ತಿಯಾಗಿತ್ತು. ಸಾಲ ಕೊಡಿಸುವುದಾಗಿ ಹೇಳಿ 200-300 ಜನರಿಗೆ ಆತ ವಂಚಿಸಿದ್ದಾನೆ ಎಂದು ವಿಚಾರಣೆ ವೇಳೆ ಆರೋಪಿ ರಾಜಶೇಖರ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಮ್ಮ ನೆರೆಮನೆಯವರಿಂದ ಮಹೇಶಪ್ಪನ ಪರಿಚಯವಾಯಿತು. ಸಹಕಾರಿ ಬ್ಯಾಂಕ್ಗಳಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇನೆ ಎಂದು ಆತನ ಮಾತು ನಂಬಿದೆ. ಕೊನೆಗೆ ಸ್ವಂತ ಮನೆ ಮಾರಾಟ ಮಾಡಿ ಬೀದಿಗೆ ಬಿದ್ದೀವಿ. ಸಾಲ ಮಂಜೂರಾತಿಗೆ ಹಣ ಕೊಡಬೇಕು ಎಂದು ಹೇಳಿ ನಮ್ಮಿಂದ ಹಣ ವಸೂಲಿ ಮಾಡಿ ವಂಚಿಸಿದ್ದ ಎಂದು ರಾಜಶೇಖರ ಹೇಳಿದ್ದಾನೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ